ಕೊರೊನಾ ಉಪಕರಣದಲ್ಲಿ ಅಕ್ರಮ: ಸಿದ್ದರಾಮಯ್ಯಗೆ 'ಇದು ರಾಜಕೀಯ ಮಾಡುವ ಸಮಯವಲ್ಲ' ಎಂದ ಎಚ್ಡಿಕೆ
ಬೆಂಗಳೂರು, ಜುಲೈ 9: ಕೊರೊನಾ ಉಪಕರಣದಲ್ಲಿ ಸರಕಾರ ಅಕ್ರಮ ಎಸಗಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾಡಿದ ಆರೋಪದ ಬಗ್ಗೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.
Recommended Video
ಸರಕಾರಕ್ಕೂ ಸಲಹೆಯನ್ನು ನೀಡಿರುವ ಕುಮಾರಸ್ವಾಮಿ,"ವಿರೋಧ ಪಕ್ಷದ ನಾಯಕರು ಮತ್ತು ಹಲವು ಕಾಂಗ್ರೆಸ್ ಮುಖಂಡರು ಸರಕಾರದ ವಿರುದ್ದ ಆರೋಪ ಮಾಡುತ್ತಿದ್ದಾರೆ. ಆದರೆ, ಇದು ರಾಜಕೀಯ ಮಾಡುವ ಸಮಯವಲ್ಲ. ಜನರ ಜೀವ ಮುಖ್ಯ"ಎಂದು ಹೇಳಿದರು.
'ಕೋವಿಡ್-19: ಮೂರು ತಿಂಗಳುಗಳ ಸುವರ್ಣಾವಕಾಶ ಹಾಳು ಮಾಡಿದ ಸರ್ಕಾರ'
"ರಾಜಕೀಯ ಮಾಡುವುದಕ್ಕೆ ನಮಗೆ ಮುಂದೆಯೂ ಸಮಯ ಸಿಗುತ್ತದೆ. ಆಗ ಮಾಡೋಣ. ಈಗ ಸರಕಾರಕ್ಕೆ ಉಪಯುಕ್ತ ಸಲಹೆಯನ್ನು ನೀಡಬೇಕೇ ಹೊರತು ಆರೋಪ ಮಾಡಿಕೊಂಡು ಇರುವುದಲ್ಲ"ಎಂದು ಕುಮಾರಸ್ವಾಮಿ ಹೇಳಿದರು.
"ಮೊದಲು ಯಡಿಯೂರಪ್ಪನವರ ಸರಕಾರದ ಮಂತ್ರಿಗಳು ಹುಡುಗಾಟ ಆಡುವುದನ್ನು ಬಿಡಬೇಕು. ಬರೀ ಸಭೆಯ ಮೇಲೆ ಸಭೆ ನಡೆಸಿದರೆ ಆಗುವುದಿಲ್ಲ. ಅದರಿಂದಾಗುವ ಪ್ರಯೋಜನವೇನು ಎನ್ನುವುದು ಮುಖ್ಯಮಂತ್ರಿಗಳು ಅರ್ಥ ಮಾಡಿಕೊಳ್ಲಬೇಕು"ಎನ್ನುವ ಸಲಹೆಯನ್ನು ಕುಮಾರಸ್ವಾಮಿ ನೀಡಿದರು.
"ಬೆಂಗಳೂರು ನಗರದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ, ಎಂಟು ವಲಯಗಳನ್ನಾಗಿ ಮಾಡಿ, ಅದಕ್ಕೆ ಎಂಟು ಸಚಿವರನ್ನು ನೇಮಿಸುವುದಾಗಿ ಹೇಳಿದ್ದಾರೆ. ಮೊದಲೇ ಒಬ್ಬರೊಬ್ಬರ ನಡುವೆ ಸಮನ್ವಯವಿಲ್ಲ. ಸಚಿವರಿಗೆ ನೀವು ಕೊಟ್ಟಿರುವ ಜವಾಬ್ದಾರಿ ಏನು"ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
ಕೋವಿಡ್: ಸರ್ಕಾರದ ವೈಫಲ್ಯ, ಜನರಿಗೆ ಮಾಜಿ ಸಿಎಂ ಎಚ್ಡಿಕೆ ಮನವಿ
"ದೇಶದಲ್ಲೇ ದೊಡ್ಡ ಕೋವಿಡ್ ಸೆಂಟರ್ ಅನ್ನು ಉದ್ಘಾಟಿಸಲು ಹೊರಟಿದ್ದೀರಿ. ಅದಕ್ಕೆ ಎಂಬತ್ತು ಲಕ್ಷ ಬಾಡಿಗೆ. ಅಷ್ಟು ದೊಡ್ಡ ಸೆಂಟರ್ ಗೆ ವೈದ್ಯಕೀಯ ಸಿಬ್ಬಂದಿಗಳನ್ನು ಎಲ್ಲಿಂದ ಕರೆದುಕೊಂಡು ಬರುತ್ತೀರಿ. ಮೂರು ತಿಂಗಳು ಸಮಯ ವ್ಯರ್ಥ ಮಾಡಿದ್ದಾಗಿದೆ, ಇನ್ನಾದರೂ ಸೀರಿಯಸ್ಸಾಗಿ ಕೆಲಸ ಮಾಡಿ"ಎಂದು ಕುಮಾರಸ್ವಾಮಿ ಹೇಳಿದರು.