ಹುಡುಗಾಟಿಕೆಗೆ ಈ ಮಾತು ಹೇಳುತ್ತಿಲ್ಲ: ವರ್ಗಾವಣೆ ದಂಧೆಯ ಕರಾಳತೆ ಬಿಚ್ಚಿಟ್ಟ ಎಚ್ಡಿಕೆ
ಹಾಸನ, ಆ 12: 'ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಹಿನ್ನೆಲೆ ಕೇಂದ್ರ ಸಚಿವರಾದ ನಿರ್ಮಲಾ ಸೀತರಾಮನ್, ಅಮಿತ್ ಶಾ ವೈಮಾನಿಕ ಸಮೀಕ್ಷೆ ಮಾಡಿದ್ದಾರೆ. ಆಶ್ಚರ್ಯ ಎಂದರೆ ಗೃಹ ಸಚಿವರು ಕೇಂದ್ರದ ನಿಲುವನ್ನು ಪ್ರಕಟ ಮಾಡಲಿಲ್ಲ. ಯಾವುದೇ ಭರವಸೆ ಕೊಡದೆ ಹಾಗೆಯೇ ನಿರ್ಗಮಿಸಿದ್ದಾರೆ' ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅಸಮಾಧಾನ ಹೊರ ಹಾಕಿದರು.
ಹಾಸನದಲ್ಲಿ ಇಂದು ಮಾತನಾಡಿದ ಕುಮಾರಸ್ವಾಮಿ, 'ಕೇಂದ್ರ ಸಚಿವರು ವೈಮಾನಿಕ ಸಮೀಕ್ಷೆ ನಡೆಸಿದ ನಂತರ ಭರವಸೆ ನೀಡಿದ್ದರೆ ನಾಡಿನ ಜನರಲ್ಲಿ ಆತ್ಮಸ್ಥೈರ್ಯ ತುಂಬ ಬಹುದಿತ್ತು. ಆದರೆ ಅವರು ನಷ್ಟದ ಮಾಹಿತಿ ಸಿಕ್ಕರೂ, ಯಾವುದೇ ಭರವಸೆ ಕೊಡದೆ ನಿರ್ಗಮಿಸಿದ್ದಾರೆ' ಎಂದು ಎಚ್ಡಿಕೆ ಕಿಡಿಕಾರಿದರು.
'ಇವತ್ತು ಸರಕಾರದಲ್ಲಿ ಅಧಿಕಾರಿಗಳ ಪಾತ್ರ ದೊಡ್ಡದಿದೆ. ಸಂಪುಟ ರಚನೆಯಾಗಿಲ್ಲ, ಶಾಸಕರ ಮಾತನ್ನು ಎಷ್ಟರ ಮಟ್ಟಿಗೆ ಕೇಳುತ್ತಾರೋ ಗೊತ್ತಿಲ್ಲ. ನಷ್ಟ ಅಂದಾಜು ಮಾಡಲು ಒಂದೂವರೆ ತಿಂಗಳು ಬೇಕಾಗಬಹುದು. ಅಧಿಕಾರಿಗಳಿಗೆ ಸ್ಥಳ ನಿಯೋಜನೆ ಮಾಡಲು ಬಿಡ್ಡಿಂಗ್ ನಡೆಯುತ್ತಿದೆ. ಇದನ್ನು ಜನರ ಹಿತ ದೃಷ್ಟಿಯಿಂದ ಮುಂದೂಡಿ. ನಾನು ಇದನ್ನು ಹುಡುಗಾಟಿಕೆಗೆ ಹೇಳುತ್ತಿಲ್ಲ' ಎಂದು ಕುಮಾರಸ್ವಾಮಿ ಹೇಳಿದರು.
ಮತ್ತೆ ಕುಮಾರಣ್ಣನ ಔದಾರ್ಯ: ಸಂತ್ರಸ್ತರಿಗೆ ಮಧುರೈಯಿಂದ 10 ಸಾವಿರ ಬೆಡ್
'ಮಾರ್ಕೆಟ್ ರೀತಿ ಅಧಿಕಾರಿಗಳ ಬಿಡ್ಡಿಂಗ್ ಮಾಡಿದರೆ, ಅಧಿಕಾರಿಗಳನ್ನು ವಿಶ್ವಾಸಕ್ಕೆ ಪಡೆಯೋದು ಹೇಗೆ. ಇದು ರಾಜಕೀಯ ಆರೋಪ ಅಲ್ಲ, ವಿಪಕ್ಷ ನಾಯಕನಾಗಿ ಸಲಹೆ ನೀಡುತ್ತಿದ್ದೇನೆ' ಎಂದು ಕುಮಾರಸ್ವಾಮಿ ತಿಳಿಸಿದರು.
ಯುದ್ದೋಪಾದಿಯಲ್ಲಿ ಕೆಲಸ ಆಗಬೇಕಿದೆ
'ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಯುದ್ದೋಪಾದಿಯಲ್ಲಿ ಕೆಲಸ ಆಗಬೇಕಿದೆ. ಕೇಂದ್ರದಲ್ಲಿ ಅವರದೇ ಸರಕಾರ ಇದೆ, ಹೆಚ್ಚಿನ ಅನುದಾನ ಪಡೆಯುವಂತೆ ಮನವಿ ಮಾಡಬೇಕು. ಜನರ ಬದುಕು ಕಟ್ಟಿ ಕೊಡುವುದಕ್ಕಾಗಿಯಾದರೂ ಮಂತ್ರಿ ಮಂಡಲ ರಚನೆಯಾಗಲಿ ' ಎಂದು ಕುಮಾರಸ್ವಾಮಿ ಹೇಳಿದರು.
ಈ ಬಾರಿಯ ಪರಿಸ್ಥಿತಿ ಎಲ್ಲರ ಕೈ ಮೀರಿ ಹೋಗಿದೆ
'ರಾಜ್ಯದಲ್ಲಿ ಇದು ದೊಡ್ಡಮಟ್ಟದ ಮಳೆಯ ಅನಾಹುತ. ಹಿಂದೆ ಕೆಲವೇ ಜಿಲ್ಲೆಗಳಲ್ಲಿ ಇಂಥ ಅನಾಹುತವಾಗಿತ್ತು. ಆದರೆ ಈ ಬಾರಿಯ ಪರಿಸ್ಥಿತಿ ಎಲ್ಲರ ಕೈ ಮೀರಿ ಹೋಗಿದೆ. ಬೆಳಗಾವಿ ಜನರ ಬದುಕು ಶೋಚನೀಯವಾಗಿದೆ. ಚಿಕ್ಕಮಗಳೂರು, ಹಾಸನದಲ್ಲೂ ಹಾನಿಯಾಗಿದೆ. ಹೀಗಾಗಿ ಆಗಸ್ಟ್ 16ರ ನಂತರ ನಾನು ಈ ಭಾಗದಲ್ಲಿ ಪ್ರವಾಸ ಮಾಡುವೆ. ಇದರಲ್ಲಿ ರಾಜಕೀಯ ಬೆರೆಸುವುದರ ಬದಲು ಬೀದಿಗೆ ಬಿದ್ದಿರುವ ಜನರಲ್ಲಿ ಸ್ಥೈರ್ಯ ತುಂಬಬೇಕಿದೆ' - ಕುಮಾರಸ್ವಾಮಿ.
ಪ್ರವಾಹ ಸಂತ್ರಸ್ತರಿಗೆ ಮಾನವೀಯತೆ ತೋರಿದ ಕುಮಾರಸ್ವಾಮಿ
ನಾಲ್ಕೈದು ಲಕ್ಷ ಮಂದಿ ಉಟ್ಟ ಬಟ್ಟೆಯಲ್ಲೇ ಊರು ಬಿಟ್ಟಿದ್ದಾರೆ
'ಇದು ಪ್ರತಿಯೊಬ್ಬ ರಾಜಕೀಯ ನಾಯಕರ ಆದ್ಯ ಕರ್ತವ್ಯ ನಾವೆಲ್ಲರೂ ಒಂದಾಗಬೇಕಿದೆ.
ರಾಜ್ಯದಲ್ಲಿ ನಾಲ್ಕೈದು ಲಕ್ಷ ಮಂದಿ ಉಟ್ಟ ಬಟ್ಟೆಯಲ್ಲೇ ಊರು ಬಿಟ್ಟಿದ್ದಾರೆ. ಕಳೆದ ವರ್ಷ ಕೇಂದ್ರ ಸರಕಾರ ಕೊಟ್ಟ ನೆರವು ಏನೆಂಬುದು ಜನರ ಕಣ್ಮುಂದೆ ಇದೆ. ಮುಖ್ಯ ಕಾರ್ಯದರ್ಶಿ ಸೇರಿ ಕೆಲ ಅಧಿಕಾರಿಗಳ ವಿಶ್ವಾಸಕ್ಕೆ ಪಡೆಯಿರಿ, ಅವರಿಗೆ ಮುಕ್ತ ಅವಕಾಶ ನೀಡಿ. ಜನರ ತೆರಿಗೆ ಹಣದಿಂದ ಖಜಾನೆ ಸುಭದ್ರವಾಗಿದೆ, ಅದನ್ನು ನಿರ್ವಹಿಸಲು ದೇವರು ಬುದ್ಧಿ ಕೊಡಲಿ' ಎಂದು ಕುಮಾರಸ್ವಾಮಿ ಬಿಜೆಪಿ ಸರ್ಕಾರಕ್ಕೆ ಚಾಟಿ ಬೀಸಿದರು.
ನಾನು 14 ತಿಂಗಳಿಂದ ನನ್ನ ಕಚೇರಿಯನ್ನು ಮಾರ್ಕೆಟ್ ಮಾಡಿರಲಿಲ್ಲ
'ನಾನು 14 ತಿಂಗಳಿಂದ ನನ್ನ ಕಚೇರಿಯನ್ನು ಮಾರ್ಕೆಟ್ ಮಾಡಿರಲಿಲ್ಲ. ಆ ವಿಶ್ವಾಸದಿಂದಲೇ ಅತಿವೃಷ್ಟಿ ವೇಳೆ ಅಧಿಕಾರಿಗಳು ಉತ್ತಮ ಕೆಲಸ ಮಾಡಿದ್ದಾರೆ. ಇನ್ನೂ ಮಳೆಹಾನಿ ಪರಿಹಾರ ಕಾರ್ಯ ಆರಂಭವಾಗಿಯೇ ಇಲ್ಲ. ನಿರಾಶ್ರಿತರ ಕೇಂದ್ರದಲ್ಲಿರುವ ಕುಟುಂಬಗಳಿಗೆ ತಕ್ಷಣ ಪರಿಹಾರ ನೀಡಬೇಕಿದೆ. ಈ ಪರಿಸ್ಥಿತಿಯಲ್ಲಿ ಕೇಂದ್ರದಿಂದ ನಾಲ್ಕೈದು ಸಾವಿರ ಕೋಟಿ ಕೊಡಬೇಕು' ಎಂದು ಕುಮಾರಸ್ವಾಮಿ ಆಗ್ರಹಿಸಿದರು.
ರೈತರ ಸಾಲಮನ್ನಾ ಹಣವನ್ನೇ ಡೈವೋರ್ಟ್ ಮಾಡಬಹುದು
'ಹಾಗೆಯೇ ಕೂಡಲೇ ವಿಪಕ್ಷ ನಾಯಕರು, ನಿಮ್ಮ ಪಕ್ಷದ ಮುಖಂಡರ ಸಭೆ ಕರೆಯಿರಿ. ಜನರಿಗೆ ಹೊಸ ಜೀವನ ಕೊಡಲು ನಾವೆಲ್ಲರೂ ಒಂದಾಗಿ ಹೋಗೋಣ. ರಾಜ್ಯ ಸರಕಾರದಲ್ಲಿ ಹಣ ಇದೆ, ರೈತರ ಸಾಲಮನ್ನಾ ಹಣವನ್ನೇ ಡೈವೋರ್ಟ್ ಮಾಡಬಹುದು. ರಾಜ್ಯದ ಬೊಕ್ಕಸ ದೇವರು ಕಾಪಾಡಬೇಕಿಲ್ಲ, ಯಡಿಯೂರಪ್ಪ ಅವರನ್ನು ಕಾಪಾಡಬೇಕು' ಎಂದು ಸಿಎಂ ಯಡಿಯೂರಪ್ಪಗೆ ಕುಮಾರಸ್ವಾಮಿ ತಿರುಗೇಟು ನೀಡಿದರು.