ಸೋಷಿಯಲ್ ಮೀಡಿಯಾದಲ್ಲಿ ವೈರಲ್: ಬಿಜೆಪಿಯಲ್ಲಿ "ಜನತಾ ಪರಿವಾರದ ದರ್ಬಾರ್"!
ಬೆಂಗಳೂರು, ಆ. 01: ಸೋಷಿಯಲ್ ಮೀಡಿಯಾ ಹಾಗೆನೇ. ಅಲ್ಲಿ ಪ್ರತಿಯೊಂದಕ್ಕೂ ಜನರು ತಮ್ಮದೇ ಆದಂತಹ ಅಭಿಪ್ರಾಯ ಹೊಂದಿರುತ್ತಾರೆ. ಮತ್ತು ತಮ್ಮ ಅಭಿಪ್ರಾಯವನ್ನು ಬರೆದು ಹಾಕುತ್ತಾರೆ. ಹೀಗಾಗಿ ಒಂದು ಅರ್ಥದಲ್ಲಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವ ಸಂದೇಶ ಜನರ ಒಟ್ಟಾರೆ ಅಭಿಪ್ರಾಯವೇ ಆಗಿರುತ್ತದೆ. ಹೀಗಾಗಿ ಅದು ತಮಾಷೆ ಏನಿಸಿದರೂ ಗಂಭೀರವಾಗಿ ತೆಗೆದುಕೊಳ್ಳಲೇ ಬೇಕು.
ಅದು ಕೊರೊನಾ ಸಂಕಷ್ಟ ಇರಬಹುದು, ರಾಮ ಮಂದಿರ ನಿರ್ಮಾಣ ಇರಬಹುದು, ಯಾವುದೇ ಚುನಾವಣೆ ಇರಬಹುದು ಅಥವಾ ಇನ್ಯಾವುದೆ ದಿನನಿತ್ಯದ ಆಗುಹೋಗುಗಳಿರಬಹುದು. ಪ್ರತಿಯೊಂದನ್ನು ತಮ್ಮದೇ ಆದಂತಹ ದೃಷ್ಟಿಕೋನದಿಂದ ಜನರು ನೋಡುವುದನ್ನು ನಾವು ಸಾಮಾಜಿಕ ಜಾಲತಾಣದಲ್ಲಿ ಆಗಾಗ ನೋಡುತ್ತಿರುತ್ತೇವೆ. ಇದೀಗ ಅಂಥದ್ದೆ ಒಂದು ಚರ್ಚೆ ಅಲ್ಲಿ ನಡೆದು ಎಲ್ಲವನ್ನೂ ಸೇರಿಸಿ ಒಂದು ಮೆಸೇಜ್ ಮಾಡಿ ಹರಿಬಿಡಲಾಗಿದೆ. ಆ ಮೆಸೇಜ್ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಏನದು ಮೆಸೇಜ್?
ಹೌದು ನಿಮ್ಮ ಊಹೆ ನಿಜವಾಗಿದೆ. ಅದು ಸದ್ಯ ರಾಜ್ಯ ರಾಜಕೀಯದಲ್ಲಿ ಅದರಲ್ಲಿಯೂ ಬಿಜೆಪಿಯಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚೆಯ ಸಾರಾಂಶದ ಮೆಸೇಜ್. ಆ ಮೆಸೇಜ್ನ್ನು ಇದ್ದಂತೆಯೆ ನಿಮ್ಮದುರಿಗೆ 'ಒನ್ಇಂಡಿಯಾ ಕನ್ನಡ' ಇಡುತ್ತಿದೆ. ಅದರಲ್ಲಿ ನಮ್ಮ ಯಾವುದೆ ಶಬ್ದಗಳಿಲ್ಲ. ಅದನ್ನು ನೀವು ತಮಾಷೆಯಾಗಿಯೂ ತಗೆದುಕೊಳ್ಳಬಹುದು, ಗಂಭೀರ ಚರ್ಚೆಯನ್ನು ಮಾಡಬಹುದು ಅಥವಾ ನಿಮ್ಮದೆ ಆದ ರೀತಿಯಲ್ಲಿ ಅರ್ಥೈಸಿಕೊಳ್ಳಲೂಬಹುದು. ಅಥವಾ ಸದ್ಯದ ರಾಜಕೀಯದ ಕುರಿತು ಮಾಡಿರುವ ವಿಶ್ಲೇಷಣೆ ಎಂದೂ ಪರಿಗಣಿಸಬಹುದು. ಮತ್ತೊಮ್ಮೆ ಇಲ್ಲಿ ಹೇಳುವುದೇನೆಂದರೆ ಅದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಮೆಸೇಜ್. ಯಥಾವತ್ತಾಗಿ ನಿಮ್ಮದುರಿಗೆ ಆ ಸಂದೇಶ!
ಬಿಜೆಪಿಯಲ್ಲಿ 'ಜನತಾ ಪರಿವಾರದ ದರ್ಬಾರ್
ನಂಬುವುದಕ್ಕೆ ಅಚ್ಚರಿಯಾದರೂ ಇದು ಸತ್ಯ! ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಕೇವಲ ಹೆಸರಿಗೆ ಮಾತ್ರ ಎಂಬುವಂತಾಗಿದೆ. (ಅಂದರೆ ಅಟಕ್ಕುಂಟು ಲೆಕ್ಕಕ್ಕಿಲ್ಲ) ಏಕೆಂದರೆ ಮುಖ್ಯಮಂತ್ರಿ ಗಾದಿಯಿಂದ ಹಿಡಿದು ಉಪ ಮುಖ್ಯಮಂತ್ರಿಯಾಗಲು ಹೊರಟವರು ಕೂಡ ಜನತಾದಳದ ಪರಿವಾರದವರು!
ಬಸವರಾಜ್ ಬೊಮ್ಮಾಯಿ ಮೂಲತಃ ಜನತಾ ಪರಿವಾರದವರು
ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಚುಕ್ಕಾಣಿ ಹಿಡಿದಿರುವ ಬಸವರಾಜ್ ಬೊಮ್ಮಾಯಿ ಮೂಲತಃ ಜನತಾ ಪರಿವಾದವರು. ಅವರ ರಾಜಕೀಯ ಜೀವನ ಆರಂಭವಾಗಿದ್ದೇ ಅಲ್ಲಿಂದ. ಕಳೆದ ಎರಡು ವರ್ಷಗಳ ಅವಧಿಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಅವರ ಅಧಿಕಾರದ ವೇಳೆ ಉಪಮುಖ್ಯಮಂತ್ರಿಯಾಗಿದ್ದ ಗೋವಿಂದ ಕಾರಜೋಳ ಹಾಗೂ ಲಕ್ಷ್ಮಣ್ ಸವದಿ ಅವರೂ ಕೂಡ ಜನತಾ ಪರಿವಾರದಿಂದ ಬಿಜೆಪಿಗೆ ವಲಸೆ ಬಂದವರು. ಪರಿಣಾಮ ಪಕ್ಷ ನಿಷ್ಟರ ಮೂಲೆಗುಂಪು!.
ಆಡಳಿತ ಮತ್ತು ಪ್ರತಿಪಕ್ಷದಲ್ಲೂ ಪರಿವಾರ ದರ್ಬಾರ್!
ಒಂದು ಕಡೆ ಮುಖ್ಯಮಂತ್ರಿ ಜನತಾ ಪರಿವಾರದವರೇ ಆಗಿರುವಾಗಲೇ ಮತ್ತೊಂದು ಕಡೆ ಪ್ರತಿಪಕ್ಷದಲ್ಲೂ ಪರಿವಾರದವರೇ ಇದ್ದಾರೆ. ಈಗಿನ ವಿಧಾನಸಭೆಯ ಪ್ರತಿಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯ ಅವರು ಎಲ್ಲಿಂದ ರಾಜಕೀಯ ಜೀವನ ಆರಂಭಿಸಿದರು ಎಂದು ಬಿಡಿಸಿ ಹೇಳಬೇಕಾದ ಅಗತ್ಯವೇ ಇಲ್ಲ!
ಬಿಜೆಪಿ ಕಾರ್ಯಕರ್ತರ ಕಡೆಗಣನೆ!
ನಮ್ಮದು ಬೇರೆ ಪಕ್ಷಗಳಿಗಿಂತ 'ವಿಭಿನ್ನ' ಎಂದು ಹೇಳಿಕೊಳ್ಳುವ ಬಿಜೆಪಿ ನಾಯಕರಿಗೆ ತನ್ನದೇ ಪಕ್ಷ ಅಧಿಕಾರದಲ್ಲಿದ್ದರೂ ಸರಕಾರ ಮುನ್ನಡೆಸುವ ಒಬ್ಬೇ ಒಬ್ಬ ಸಮರ್ಥ ನಾಯಕ ಇಲ್ಲವೇ ಎಂಬ ಪ್ರಶ್ನೆ ಪಕ್ಷಕ್ಕೆ ದುಡಿದ ನಿಷ್ಠಾವಂತ ಕಾರ್ಯಕರ್ತರನ್ನು ಕಾಡುತ್ತಿದೆ. ಎಲ್ಲರೂ ಕೇಳುವ ಒಂದೇ ಒಂದು ಪ್ರಶ್ನೆ ಎಂದರೆ ಮೂಲ ಬಿಜೆಪಿಯವರನ್ನು ಕಡೆಗಣಿಸಿ " ವಲಸಿಗರಿಗೆ" ಮಣೆಹಾಕುವ ಅಗತ್ಯವಾದರೂ ಏನಿದೆ?
ನಂಬಿದ ಸಿದ್ದಾಂತಕ್ಕೂ ತಿಲಾಂಜಲಿ!
ಜಾತ್ಯತೀತತೆಯ ಬಗ್ಗೆ ಏನೇ ಹೇಳಿದರೂ ಬಿಜೆಪಿ ಅಸ್ತಿತ್ವ ಇರುವುದೇ ಹಿಂದೂ ಧರ್ಮದ ಮತಗಳ ಮೇಲೆ. ಧರ್ಮ ರಕ್ಷಣೆ, ಹಿಂದೂ ರಾಷ್ಟ್ರ,ಭಾರತೀಯತೆ, ಏಕನಾಗರೀಕತೆ ಎಂದು ಹೇಳುವ ವಿಶ್ವದಲ್ಲೇ ಅತೀ ಹೆಚ್ಚಿನ ಕಾರ್ಯಕರ್ತರನ್ನು ಹೊಂದಿರುವ ರಾಷ್ಟ್ರೀಯ ಪಕ್ಷಕ್ಕೆ "ಅನ್ಯ' ಪಕ್ಷಗಳಿಂದ ವಲಸೆ ಬಂದವರಿಗೆ
'ರತ್ನ ಗಂಬಳಿ' ಹಾಕಿದ್ದು ಸರಿ. ಇದರಿಂದಾಗಿ ಪಕ್ಷದ ಮೂಲ ಸಿದ್ದಾಂತಕ ಕೊಡಲಿ ಪೆಟ್ಟು ಬಿದ್ದಂತಾಗಿದೆ ಎಂಬುದು ಪಕ್ಷವನ್ನು ನಂಬಿದವರ ಆಳಲು.
ಅಧಿಕಾರವನ್ನು ಒಬ್ಬರೇ ಅನುಭವಿಸಬೇಕೇ?
ಈ ಮೊದಲು ಜನತಾದಳದಿಂದ ಬಂದ ಗೋವಿಂದ ಕಾರಜೋಳ್ ಅವರನ್ನು ಸಹ ಹಿಂದಿನ ಯಡಿಯೂರಪ್ಪನವರ ಅವಧಿಯಲ್ಲಿ ಉಪ ಮುಖ್ಯಮಂತ್ರಿ ಮಾಡಿದ್ದೀರಿ. ಜೊತೆಗೆ 2018 ರ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದರೂ ಸಹ ಲಕ್ಷ್ಮಣ್ ಸವದಿ ಅವರನ್ನು ಸಹ ಉಪಮುಖ್ಯಮಂತ್ರಿ ಮಾಡಿದ್ದೀರಿ. ಈಗ ಪುನಃ ಅವರನ್ನೇ ಅಧಿಕಾರದಲ್ಲಿ "ಪ್ರತಿಷ್ಟಾಪಿಸಲು' ಹೊರಟಿರುವುದು ಎಷ್ಟರ ಮಟ್ಟಿಗೆ ಸರಿ? ಅಧಿಕಾರ ಅನುಭವಿಸಿದವರಿಗೆ ಮತ್ತೆ ಮತ್ತೆ ಮಣೆಹಾಕಿದರೆ ಬೇರೆಯವರ ಗತಿ ಏನು?
Recommended Video
ತಕ್ಷಣವೇ ಎಚ್ಚೆತ್ತುಕೊಳ್ಳಬೇಕು!
ಪಕ್ಷ ನಿಷ್ಠರು ಹಾಗೂ ಆರೆಸ್ಸೆಸ್ ನಲ್ಲಿ ಪಳಗಿದ ಅನೇಕ ಗಣ್ಯ ನಾಯಕರಿದ್ದು ಅವರುಗಳನ್ನು ಪಕ್ಷವು ಮುಂಬರುವ ದಿನಗಳಲ್ಲಿ ಉಪಮುಖ್ಯಮಂತ್ರಿ ಸ್ಥಾನಕ್ಕೆ ಪರಿಗಣಿಸಬೇಕು. ಇಲ್ಲದಿದ್ದರೆ ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಮತ್ತು ನಾಯಕರುಗಳಿಂದ ಮುಂಬರುವ ದಿನಗಳಲ್ಲಿ ಪಕ್ಷವು ಹೀನಾಯ ಸೋಲು ಅನುಭವಿಸಬೇಕಾಗುತ್ತದೆ ಎಂಬುದು ನೊಂದ ಕಾರ್ಯಕರ್ತರ ಆಳಲಾಗಿದೆ.
ಈ ಮೇಲಿನ ಸಂದೇಶ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನಿಜಕ್ಕೂ ಕೂಡ ಇದು ಪ್ರಖರ ರಾಜಕೀಯ ವಿಶ್ಲೇಷಣೆಯಂತೆಯೂ ಇದೆ. ಮೂಲ-ವಲಸೆ ಬಿಜೆಪಿಗರ ಮಧ್ಯದ ಕಂದಕವನ್ನು ಇಲ್ಲಿ ರಸವತ್ತಾಗಿ ಹಿಡಿದಿಡಲಾಗಿದೆ. ಒಟ್ಟಾರೆ ಸಾಮಾಜಿಕ ಜಾಲತಾಣ ಒಂದರ್ಥದಲ್ಲಿ ಸಮಾಜದ ಪ್ರತಿಬಿಂಬ ಎಂದರೂ ತಪ್ಪಾಗಲಿಕ್ಕಿಲ್ಲ!