ಯಡಿಯೂರಪ್ಪ ಇಂದಿಗೂ ಆತ್ಮೀಯರು : ಆರ್.ಎಂ.ಮಂಜುನಾಥ ಗೌಡ ಸಂದರ್ಶನ
ಶಿವಮೊಗ್ಗ, ಫೆಬ್ರವರಿ 13 : ತೀರ್ಥಹಳ್ಳಿ ಕ್ಷೇತ್ರದ ಚುನಾವಣಾ ಕಣ ಕುತೂಹಲ ಕೆರಳಿಸಿದೆ. ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಜೆಡಿಎಸ್ ಸೇರಿದ್ದಾರೆ. ಕ್ಷೇತ್ರದಲ್ಲಿ ಸೋಮವಾರ ಬೃಹತ್ ಸಮಾವೇಶ ನಡೆಸಿ ಎದುರಾಳಿಗಳಲ್ಲಿ ನಡುಕ ಹುಟ್ಟಿಸಿದ್ದಾರೆ.
ತೀರ್ಥಹಳ್ಳಿಯಲ್ಲಿ ಸೋಮವಾರ ಐತಿಹಾಸಿಕ ಸಮಾವೇಶ ನಡೆದಿದೆ. ಕಾಂಗ್ರೆಸ್ನ ಸಾಧನಾ ಸಮಾವೇಶ, ಬಿಜೆಪಿಯ ಪರಿವರ್ತನಾ ಯಾತ್ರೆಗೆ ಸೆಡ್ಡು ಹೊಡೆಯುವಂತೆ ಜೆಡಿಎಸ್ ಬೃಹತ್ ಸಮಾವೇಶ ನಡೆಸಿದೆ. ಸುಮಾರು 30 ಸಾವಿರ ಜನರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.
ಜೆಡಿಎಸ್ ಸೇರಿದ ಆರ್.ಎಂ.ಮಂಜುನಾಥ ಗೌಡ
ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಮುಂತಾದ ನಾಯಕರು ಸಮಾವೇಶದಲ್ಲಿ ಪಾಲ್ಗೊಂಡು ಪ್ರಾದೇಶಿಕ ಪಕ್ಷಕ್ಕೆ ಬೆಂಬಲ ನೀಡುವಂತೆ ಜನರಿಗೆ ಮನವಿ ಮಾಡಿದ್ದಾರೆ. ಕ್ಷೇತ್ರದಲ್ಲಿ ಆರ್.ಎಂ.ಮಂಜುನಾಥ ಗೌಡ ಅವರಿಗೆ ಸಿಕ್ಕಿರುವ ಜನ ಬೆಂಬಲ ಕಾಂಗ್ರೆಸ್ ಮತ್ತು ಬಿಜೆಪಿ ಚುನಾವಣಾ ತಂತ್ರ ಬದಲಿಸುವಂತೆ ಮಾಡಿದೆ.
ಜೆಡಿಎಸ್ ಸೇರಿದ ಯಡಿಯೂರಪ್ಪ ಆಪ್ತ ಹೇಳಿದ್ದೇನು?
ಜನವರಿ 23ರಂದು ಬೆಂಗಳೂರಿನಲ್ಲಿ ಆರ್.ಎಂ.ಮಂಜುನಾಥ ಗೌಡ ಅವರು ಜೆಡಿಎಸ್ ಸೇರಿದ್ದರು. ಫೆ.12ರಂದು ಕ್ಷೇತ್ರದಲ್ಲಿ ಬೃಹತ್ ಸಮಾವೇಶ ನಡೆಸುವ ಮೂಲಕ ಚುನಾವಣಾ ರಣ ಕಹಳೆ ಊದಿದ್ದಾರೆ. ಚುನಾವಣಾ ಸಿದ್ಧತೆ ಬಗ್ಗೆ ಅವರು ಒನ್ ಇಂಡಿಯಾ ಕನ್ನಡದ ಜೊತೆ ಮಾತನಾಡಿದ್ದಾರೆ. ಸಂದರ್ಶನದ ವಿವರಗಳು ಇಲ್ಲಿವೆ......
ಚುನಾವಣಾ ಸಿದ್ಧತೆಗಳು ಹೇಗೆ ನಡೆಯುತ್ತಿವೆ?
ಜನವರಿಯಲ್ಲಿ ನಾನು ಪಕ್ಷಕ್ಕೆ ಸೇರ್ಪಡೆಗೊಂಡೆ. ಸೋಮವಾರ ಸಮಾವೇಶ ನಡೆಸಿ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿದ್ದೇವೆ. ಕ್ಷೇತ್ರದ ತುಂಬಾ ಪ್ರಚಾರ ನಡೆಸಲು ಯೋಜನೆ ಸಿದ್ಧವಾಗಿದೆ. ಇಂದಿನಿಂದಲೇ ಪ್ರಚಾರ ಕಾರ್ಯ ಆರಂಭವಾಗಿದೆ. ನೂರಾರು ಕಾರ್ಯಕರ್ತರು ನನ್ನ ಜೊತೆ ಮನೆ-ಮನೆಗೆ ತೆರಳಿ ಪ್ರಚಾರ ನಡೆಸಲಿದ್ದಾರೆ.
ತೀರ್ಥಹಳ್ಳಿಯಲ್ಲಿ ನಿಮ್ಮ ಎದುರಾಳಿ ಯಾರು?
ಕಾಂಗ್ರೆಸ್ ಮತ್ತು ಬಿಜೆಪಿ ಇಬ್ಬರೂ ಎದುರಾಳಿಗಳು. ಇದರಲ್ಲಿ ಅಂತಹ ವಿಶೇಷವೇನಿಲ್ಲ. ಇವರೇ ನಮ್ಮ ಪ್ರತಿಸ್ಪರ್ಧಿ ಎಂದು ಹೇಳುವುದು ಕಷ್ಟ. ಸದ್ಯದ ಪರಿಸ್ಥಿತಿ ನೋಡಿದರೆ ಬಿಜೆಪಿಯವರು ನಮಗೆ ನೇರ ಎದುರಾಳಿ ಎಂದು ಹೇಳಬಹುದಾಗಿದೆ.
ಯಡಿಯೂರಪ್ಪ ವಿರುದ್ಧ ಅಸಮಾಧಾನವಿದೆಯೇ?
ಯಡಿಯೂರಪ್ಪ ಅವರ ಬಗ್ಗೆ ಯಾವುದೇ ಅಸಮಾಧಾನವಿಲ್ಲ. ಇಂದಿಗೂ ನಾವು ಆತ್ಮೀಯರಾಗಿದ್ದೇವೆ. ಕೆಜೆಪಿ ಪಕ್ಷವನ್ನು ಕಟ್ಟುವುದು ಬೇಡ ಎಂದು ಸಲಹೆ ನೀಡಿದ್ದೆ. ಪಕ್ಷ ಕಟ್ಟಿದ ಮೇಲೆ ನಾನು ರಾಜ್ಯ ಉಪಾಧ್ಯಕ್ಷನಾಗಿದ್ದೆ.
ಪಕ್ಷವನ್ನು ಬಿಜೆಪಿ ಜೊತೆ ವಿಲೀನ ಮಾಡುವುದು ಬೇಡ ಎಂದು ಪಕ್ಷದ ವೇದಿಯಲ್ಲೇ ಸ್ಪಷ್ಟಪಡಿಸಿದ್ದೆ. ಪ್ರಾದೇಶಿಕ ಪಕ್ಷವಾಗಿರಲಿ ಎಂದು ಸಲಹೆ ಕೊಟ್ಟಿದೆ. ಹಿರಿಯ ನಾಯಕರಾದ ಅವರು ವಿಲೀನದ ನಿರ್ಧಾರ ಕೈಗೊಂಡರು. ನಾನು ಬಿಜೆಪಿಗೆ ವಾಪಸ್ ಬರುವುದಿಲ್ಲ ಎಂದು ಹೇಳಿದ್ದೆ.
ಜೆಡಿಎಸ್ ಸೇರುವುದು ಕಾರ್ಯಕರ್ತರ ತೀರ್ಮಾನ
2013ರ ಚುನಾವಣೆಯಲ್ಲಿ ಕೆಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೆ. ನಂತರ ಕಾಂಗ್ರೆಸ್ ಸೇರಿದ್ದೆ. ನನ್ನ ಕಾರ್ಯಕರ್ತರು, ಬೆಂಬಲಿಗರ ಜೊತೆ ಸಮಾಲೋಚನೆ ನಡೆಸಿದಾಗ ಜೆಡಿಎಸ್ ಸೇರುವ ಸಲಹೆ ಕೊಟ್ಟರು. ಅವರ ಅಭಿಪ್ರಾಯದಂತೆ ಪಕ್ಷಕ್ಕೆ ಸೇರ್ಪಡೆಗೊಂಡಿದ್ದೇನೆ.
ಪ್ರಾದೇಶಿಕ ಪಕ್ಷಕ್ಕೆ ಏಕೆ ಬೆಂಬಲ ನೀಡಬೇಕು?
ನಮ್ಮ ಅಕ್ಕ-ಪಕ್ಕದ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷದ ಪರಂಪರೆ ನಡೆಯುತ್ತಿದೆ. ತಮಿಳುನಾಡು, ಆಂಧ್ರಪ್ರದೇಶದಲ್ಲಿ ಪ್ರಾದೇಶಿಕ ಪಕ್ಷಗಳು ಬಲಿಷ್ಠವಾಗಿವೆ. ನೆಲ, ಜಲದ ವಿಚಾರಗಳು ಬಂದಾಗ ಪ್ರಾದೇಶಿಕ ಪಕ್ಷಗಳ ಅಗತ್ಯ ಹೆಚ್ಚಿದೆ.
ರಾಜ್ಯಗಳ ಅಭಿವೃದ್ಧಿಗೆ ಪ್ರಾದೇಶಿಕ ಪಕ್ಷಗಳೇ ಬೇಕು. ಕಾವೇರಿ, ಮಹದಾಯಿ ವಿಚಾರದಲ್ಲಿ ಕೇಂದ್ರ ಸರ್ಕಾರ ಹೇಗೆ ನಡೆದುಕೊಳ್ಳುತ್ತಿದೆ? ಎಂದು ನಿಮಗೆ ಗೊತ್ತಿದೆ. ಪ್ರಾದೇಶಿಕ ಪಕ್ಷ ಅಧಿಕಾರಕ್ಕೆ ಬಂದರೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ಜನರ ಹಿತ ಕಾಪಾಡಲು ಸಹಾಯಕವಾಗುತ್ತದೆ.
ಸಮೀಕ್ಷೆಗಳ ಬಗ್ಗೆ ಏನು ಹೇಳುವಿರಿ?
ಸಮೀಕ್ಷೆಗಳ ವರದಿಗಳು ತುಂಬಾ ಮುಂಚಿತವಾಗಿದೆ. ಈಗ ಪ್ರತಿಕ್ರಿಯೆ ನೀಡುವುದು ಕಷ್ಟ. ಏಪ್ರಿಲ್ ಮೊದಲನೇ ವಾರದಲ್ಲಿ ಬರುವ ಸಮೀಕ್ಷೆಗಳು ಚುನಾವಣೆ ದಿಕ್ಸೂಚಿಯಾಗಲಿವೆ. ರಾಜ್ಯದಲ್ಲಿ ಹಲವಾರು ರಾಜಕೀಯ ಬದಲಾವಣೆಗಳು ಆಗಲಿವೆ.