ನೈಟ್ ಕರ್ಫ್ಯೂ ಹಾಕುವ ಬಗ್ಗೆ ಸರ್ಕಾರದಲ್ಲಿ ಭಿನ್ನಾಭಿಪ್ರಾಯಗಳಿಲ್ಲ!
ಬೆಂಗಳೂರು, ಡಿ. 25: ಮಳೆ ನಿಂತರೂ ಮಳೆ ಹನಿ ನಿಲ್ಲುವುದಿಲ್ಲ ಎಂಬಂತೆ ನೈಟ್ ಕರ್ಫ್ಯೂವನ್ನು ಸರ್ಕಾರ ಹಿಂದಕ್ಕೆ ಪಡೆದಿದ್ದರೂ, ಆ ವಿಚಾರವಾಗಿ ಚರ್ಚೆ ಮುಂದುವರೆದಿದೆ. ರೂಪಾಂತರಿ ಕೊರೊನಾ ವೈರಸ್ ಹರಡದಂತೆ ತಡೆಯಲು ವಿಚಿತ್ರ ನಿಲುವನ್ನು ರಾಜ್ಯ ಸರ್ಕಾರ ತಾಳಿದ್ದು, ಆಮೇಲೆ ಅದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ಇದೀಗ ನೈಟ್ ಕರ್ಫ್ಯೂ ಹೇರಿದ್ಯಾಕೆ? ಎಂಬ ಚರ್ಚೆ ಸರ್ಕಾರದ ಮಟ್ಟದಲ್ಲಿಯೆ ಶುರುವಾಗಿದೆ. ಜೊತೆಗೆ ಆಡಳಿತ-ವಿರೋಧ ಪಕ್ಷಗಳ ಮಧ್ಯೆ ಪರ-ವಿರೋಧ ಚರ್ಚೆಗಳು ಶುರುವಾಗಿವೆ.
ರಾತ್ರಿ ಕರ್ಪ್ಯೂ ಜಾರಿ ವಿಚಾರಕ್ಕೆ ಸಂಬಂಧಿಸಿದಂತೆ ಡಿಸಿಎಂ ಡಾ. ಅಶ್ವಥ್ ನಾರಾಯಣ ಅವರು ಮಾತನಾಡಿದ್ದು, ಜನರ ಒತ್ತಾಯದ ಮೇರೆಗೆ ನೈಟ್ ಕರ್ಪ್ಯೂ ವಾಪಸ್ ತೆಗೆದುಕೊಂಡಿದ್ದೇವೆ ಎಂದಿದ್ದಾರೆ. ಮುಂಜಾಗ್ರತೆ ಕ್ರಮವಾಗಿ ನೈಟ್ ಕರ್ಫ್ಯೂ ಹಾಕಲಾಗಿತ್ತು. ಸರ್ಕಾರದಲ್ಲಿ ಈ ಬಗ್ಗೆ ಯಾವುದೇ ವಿವಾದಗಳಿಲ್ಲ. ಕೇವಲ ಮುಂಜಾಗ್ರತೆಗಾಗಿ ಮಾತ್ರ ನೈಟ್ ಕರ್ಫ್ಯೂ ಹಾಕಲಾಗಿತ್ತು.
ಜನರ ಹಿತವನ್ನು ಗಮನದಲ್ಲಿಟ್ಟುಕೊಂಡು ಅದನ್ನು ಜಾರಿ ಮಾಡಿದ್ದು. ಜನರ ಓಡಾಟ, ಸಭೆ ಸಮಾರಂಭದಲ್ಲಿ ಹೆಚ್ಚಾಗ ಬಹುದು ಎಂಬ ಭಯದಿಂದ ಹಾಗೆ ಮಾಡಲಾಗಿತ್ತು ಎಂದು ಡಾ. ಅಶ್ವಥ್ ನಾರಾಯಣ್ ಅವರು ಹೇಳಿದ್ದಾರೆ.
ಜನರ ಜೀವನೋಪಾಯಕ್ಕೆ ಸಮಸ್ಯೆ ಆಗುತ್ತದೆ ಎಂಬ ಒತ್ತಡ ಬಂತು, ಹೀಗಾಗಿ ನಾಗರೀಕ ಸಮಾಜದ ವಿರೋಧದಿಂದಾಗಿ ನೈಟ್ ಕರ್ಫ್ಯೂ ವಾಪಸ್ ಪಡೆದಿದ್ದೇವೆ ಎಂದು ಡಿಸಿಎಂ ಅಶ್ವಥ್ ನಾರಾಯಣ್ ಅವರು ಬೆಂಗಳೂರಿನಲ್ಲಿ ಹೇಳಿಕೆ ನೀಡಿದ್ದಾರೆ.
Recommended Video