ಸರ್ಟಿಫಿಕೇಟ್ ಕೊಡಿಸುವುದರಲ್ಲಿ ಅಶ್ವತ್ಥ ನಾರಾಯಣ ಎತ್ತಿದ ಕೈ ಎಂದ ಕುಮಾರಸ್ವಾಮಿ
ಬೆಂಗಳೂರು, ಮೇ 5: "ಕರ್ನಾಟಕದಲ್ಲಿ ಸರ್ಟಿಫಿಕೇಟ್ ಕೊಡಿಸುವುದರಲ್ಲಿ ಉನ್ನತ ಶಿಕ್ಷಣ ಸಚಿವ ಡಾ. ಸಿ. ಎನ್. ಅಶ್ವಥ್ ನಾರಾಯಣರದ್ದು ಎತ್ತಿದ ಕೈ" ಎಂದು ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಟೀಕಿಸಿದರು.
ಗುರುವಾರ ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "ಅಶ್ವಥ್ ನಾರಾಯಣ ಬಗ್ಗೆ ನನಗೆ ಯಾವುದೇ ರೀತಿ ಸಾಫ್ಟ್ ಕಾರ್ನರ್ ಇಲ್ಲ. ಕೆಲವರು ನಾನು ಅವರ ಬಗ್ಗೆ ಮೃಧು ಧೋರಣೆ ಹೊಂದಿರುವ ಬಗ್ಗೆ ಹೇಳಿದ್ದಾರೆ. ಅಂತಹ ಯಾವ ಮೃಧು ನಿಲುವು ನನಗಿಲ್ಲ. ಅದರ ಬದಲಿಗೆ ದಾಖಲೆ ಇಟ್ಟು ಮಾತನಾಡಿ ಎಂದು ಹೇಳಿದ್ದೇನೆ. ಇದರಲ್ಲಿ ತಪ್ಪೇನಿದೆ?" ಎಂದು ಪ್ರಶ್ನೆ ಮಾಡಿದರು.
"ಸರ್ಟಿಫಿಕೇಟ್ ಕೊಡಿಸುವುದರಲ್ಲಿ ಅಶ್ವಥ್ ನಾರಾಯಣರದ್ದು ಎತ್ತಿದ ಕೈ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿಯಾಗಿದೆ. ಈ ಹಿಂದೆಯೇ ಅವರು ನರ್ಸುಗಳಿಗೆ ಸರ್ಟಿಫಿಕೇಟ್ ಕೊಡಿಸಿ ಹೆಸರುವಾಸಿ ಆಗಿದ್ದರು. ಪರೀಕ್ಷೆ ಬರೆಯದೇ ಇದ್ದವರಿಗೂ ಸರ್ಟಿಫಿಕೇಟ್ ಕೊಟ್ಟಿದ್ದರು. ಕಾಂಗ್ರೆಸ್ಸಿನವರು ಅದನ್ನಾದರೂ ಹೇಳಲಿ. ಅದಕ್ಕೆ ದಾಖಲೆ ಇಟ್ಟುಕೊಂಡು ಮಾತನಾಡಿ ಎಂದು ನಾನು ಹೇಳಿದ್ದು" ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು.
ರಾಜ್ಯ ಸರ್ಕಾರದಿಂದ ಮೌನಂ ಸಮ್ಮತಿ ಲಕ್ಷಣಂ ನಿಲುವು
"ಈ ಸರ್ಕಾರ ಎಲ್ಲಕ್ಕೂ ಮೌನ ವಹಿಸುತ್ತದೆ. ಪ್ರತಿ ಹಗರಣದ ಬಗ್ಗೆ ಮೌನವಾಗಿದೆ. ಕಳೆದ ಎರಡು ತಿಂಗಳಿಂದ ನಡೆದ ಗಲಾಟೆ, ಗಲಭೆಗಳು ನಡೆದಾಗಲೂ ಸರ್ಕಾರ ಸುಮ್ಮನಿತ್ತು. ಎಲ್ಲದಕ್ಕೂ ಮೌನಂ ಸಮ್ಮತಿ ಲಕ್ಷಣಂ ಅನ್ನುವಂತ ಪರಿಸ್ಥಿತಿಯಿದೆ. ಇದು ರಾಜ್ಯದ ಹಣೆಬರಹ ಎಂದು ಎಚ್. ಡಿ. ಕುಮಾರಸ್ವಾಮಿ ಕಿಡಿಕಾರಿದರು. ಎರಡೂ ರಾಷ್ಟ್ರೀಯ ಪಕ್ಷಗಳ ನಡವಳಿಕೆಯನ್ನು ಜನರು ನೋಡುತ್ತಿದ್ದಾರೆ. ರಾಜ್ಯದಲ್ಲಿ ಉತ್ತಮ ಸರ್ಕಾರ ಆಡಳಿತಕ್ಕೆ ಬರಬೇಕಿದೆ. ಎರಡೂ ಪಕ್ಷಗಳ ನಾಯಕರು ನಾಡಿನ ಜನತೆಯ ಜೊತೆ ಚೆಲ್ಲಾಟ ಆಡುತ್ತಿದ್ದಾರೆ" ಎಂದು ಕುಮಾರಸ್ವಾಮಿ ಆರೋಪಿಸಿದರು.
ಕಾಂಗ್ರೆಸ್ ನಾಯಕರ ನೈತಿಕತೆ ಬಗ್ಗೆ ಕುಮಾರಸ್ವಾಮಿ ಪ್ರಶ್ನೆ
"ಒಂದು ಸಣ್ಣ ಪ್ರಕರಣದ ಬಗ್ಗೆ ಯಾರೋ ಕೆಲವರು ಮಾತನಾಡುತ್ತಿದ್ದಾರೆ. 20 ಲಕ್ಷ ರೂಪಾಯಿ ಬಗ್ಗೆ ಈಗ ಮಾತನಾಡುತ್ತಿದ್ದಾರೆ. ಕಳೆದ ಬಾರಿಯ ಕಾಂಗ್ರೆಸ್ ಸರ್ಕಾರದಲ್ಲಿ ಕೆಪಿಎಸ್ಸಿ ಅನ್ನು ಶುದ್ಧ ಮಾಡುತ್ತೇವೆ ಎಂದು ಹೊರಟರು. ಆದರೆ, ಶ್ಯಾಮ್ ಭಟ್ಟರನ್ನು ತಂದು ಅಲ್ಲಿ ಕೂರಿಸಿದ ಮೇಲೆ ಅಲ್ಲಿ ಉದ್ಯೋಗದ ಮುಕ್ತ ಮಾರುಕಟ್ಟೆ ಶುರುವಾಯಿತು. ಎಸಿ ಹುದ್ದೆಗೆ ಇಷ್ಟು, ಡಿವೈಎಸ್ ಪಿ ಹುದ್ದೆಗೆ ಇಷ್ಟು ಅಂತ ವ್ಯಾಪಾರ ನಡೆಯಿತು" ಎಂದು ಕುಮಾರಸ್ವಾಮಿ ದೂರಿದರು.
"ರಾಜ್ಯದಲ್ಲಿ ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಕಾಂಗ್ರೆಸ್ ನಾಯಕರಿಗೆ ಯಾವ ನೈತಿಕತೆ ಇದೆ?, ಭ್ರಷ್ಟಾಚಾರ ಮತ್ತು ಕಮಿಷನ್ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿ ಅಥವಾ ಕಾಂಗ್ರೆಸ್ ಪಕ್ಷಕ್ಕೆ ಇಲ್ಲ. ತಮಗೆ ಬೇಕಾದವರನ್ನು ಕೆಪಿಎಸ್ಸಿ ಸದಸ್ಯರನ್ನಾಗಿ ಮಾಡಿಕೊಂಡು ಅಮಾಯಕರ ಬಳಿ ಹಣ ಪೀಕಿಸುತ್ತಿದ್ದರು. ವಂಚನೆಗೆ ಒಳಗಾದ ಎಷ್ಟೋ ಜನರು ನನ್ನ ಬಳಿಗೆ ಬಂದಿದ್ದಾರೆ. ಕಾಂಗ್ರೆಸ್ ಸರ್ಕಾರ ಮಾಡಿದ್ದನ್ನೇ ಬಿಜೆಪಿ ಸರ್ಕಾರವು ಮುಂದುವರೆಸಿಕೊಂಡು ಹೋಗುತ್ತಿದೆ" ಎಂದರು.
ಕೆಪಿಎಸ್ಸಿಗೆ ನೇಮಿಕಕ್ಕೆ ಸಿದ್ದರಾಮಯ್ಯ ಶಿಫಾರಸ್ಸು
"ನಾನು ಮುಖ್ಯಮಂತ್ರಿ ಆಗಿದ್ದಾಗ ಕಾಂಗ್ರೆಸ್ಸಿನವರ ಆಟಕ್ಕೆ ಅವಕಾಶ ಇರಲಿಲ್ಲ. ತಮಗೆ ಬೇಕಾದವರನ್ನು ಕೆಪಿಎಸ್ಸಿ ಸದಸ್ಯರನ್ನಾಗಿ ನೇಮಕ ಮಾಡುವ ಬಗ್ಗೆ ನನ್ನ ಮೇಲೂ ಸಿದ್ದರಾಮಯ್ಯ ಒತ್ತಡ ಹಾಕಿದ್ದರು. ಆದರೆ ಸಿದ್ದರಾಮಯ್ಯ ಶಿಫಾರಸು ಮಾಡಿದ ವ್ಯಕ್ತಿಯ ಬಗ್ಗೆ ನನಗೆ ಮಾಹಿತಿಯಿದ್ದ ಕಾರಣ, ನಾನು ಆ ವ್ಯಕ್ತಿಯನ್ನು ನೇಮಕ ಮಾಡಲಿಲ್ಲ" ಎಂದು ಕುಮಾರಸ್ವಾಮಿ ಹೇಳಿದರು.
"ಅಲ್ಲದೇ ಹೀಗೆ ಹಣ ಕೊಟ್ಟು ಬಂದವರು ಸರಿಯಾಗಿ ಕೆಲಸ ಮಾಡುವುದಿಲ್ಲ. ಅವರೆಲ್ಲ ನ್ಯಾಯಯುತವಾಗಿ ಜನರ ಸೇವೆ ಮಾಡಲ್ಲ. ಬಡವರ ಹೊಟ್ಟೆ ಮೇಲೆ ಹೊಡೆಯುತ್ತಾರೆ. ಇದನ್ನು ಜನ ಅರಿತುಕೊಳ್ಳಬೇಕು" ಎಂದರು.
ರಾಷ್ಟ್ರೀಯ ಪಕ್ಷಗಳನ್ನು ಹೊರಗಟ್ಟುವಂತೆ ಕುಮಾರಸ್ವಾಮಿ ಮನವಿ
"ಕರ್ನಾಟಕದಲ್ಲಿ ಈ ಹಿಂದೆಯೂ ಹಲವಾರು ಹಗರಣಗಳು ಹೊರ ಬಂದವು. ಅವೆಲ್ಲ ಈಗ ಏನಾಗಿವೆ?. ನಾನೇ ಹಲವಾರು ಹಗರಣಗಳನ್ನು ದಾಖಲೆ ಸಮೇತ ಜನರ ಮುಂದೆ ಇಟ್ಟಿದ್ದೆ. ಆದರ ಪ್ರತಿಫಲ ಏನಾಯಿತು?, ಈ ನಾಡಿನಿಂದ ಎರಡು ರಾಷ್ಟ್ರೀಯ ಪಕ್ಷಗಳನ್ನು ಹೊರಗಿಡಬೇಕಿದೆ" ಎಂದು ಕುಮಾರಸ್ವಾಮಿ ಕೋರಿದರು.
"ರಾಜ್ಯದಲ್ಲಿ ಡ್ರಗ್ಸ್ ಕೇಸ್ ನಡೆದಾಗ ಮಾಜಿ ಸಿಎಂ ಇದ್ದಾರೆ ಅಂತ ತೇಲಿಬಿಟ್ಟರು. ಆ ಮಾಜಿ ಸಿಎಂ ಯಾರು ಎಂದು ನಾನು ಕೇಳಿದೆ. ಅವರು ಯಾರೆಂದು ಹೇಳಲೇ ಇಲ್ಲ. ಆ ಪ್ರಕರಣವೂ ಹಳ್ಳ ಹಿಡಿಯಿತು. ಆಮೇಲೆ ಲಾಟರಿ ಕೇಸ್ ಏನು ಆಯಿತು? ಎನ್ನುವುದು ರಾಜ್ಯದ ಜನರಿಗೆ ಗೊತ್ತಿದೆ. ಯಾವ ಪ್ರಕರಣಗಳಿಗೂ ತಾರ್ಕಿಕ ಅಂತ್ಯ ಕಾಣಿಸುತ್ತಿಲ್ಲ. ಪಿಎಸ್ಐ ಕೇಸ್ ಅನ್ನು ಕೂಡ ಹಾಗೆಯೇ ಮುಚ್ಚಿ ಹಾಕುತ್ತಾರೆ" ಎಂದು ಕುಮಾರಸ್ವಾಮಿ ಗುಡುಗಿದರು.
"ಹದಿನೈದು ದಿನ ಪಿಎಸ್ಐ ಹಗರಣ ಭಾರೀ ಪ್ರಚಾರದಲ್ಲಿ ಇರುತ್ತದೆ. ಆಮೇಲೆ ಗುಂಡಿ ತೋಡಿ ಮುಚ್ಚಿ ಹಾಕುತ್ತಾರೆ. ಉದಾಹರಣೆಗೆ, ಕಾಂಗ್ರೆಸ್ ಅವಧಿಯಲ್ಲಿ ಪಿಯುಸಿ ಪ್ರಶ್ನೆ ಪತ್ರಿಕೆ ಲೀಕ್ ಆಗಿತ್ತು. ಅಗ ಶಿವಕುಮಾರ್ ಅನ್ನುವ ವ್ಯಕ್ತಿಯನ್ನು ಬಂಧಿಸಲಾಯಿತು. ಆಮೇಲೆ ಆ ಪ್ರಕರಣ ಏನಾಯಿತು ಎನ್ನುವುದು ರಾಜ್ಯಕ್ಕೆ ಗೊತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಹಾಕಿಕೊಟ್ಟ ಭ್ರಷ್ಟಾಚಾರದ ಅಡಿಪಾಯ ಇಂದು ಬೃಹತ್ ಆಗಿ ಬೆಳೆದು ನಿಂತಿದ್ದು, ಅದನ್ನು ಬಿಜೆಪಿ ಮುಂದುವರಿಸಿಕೊಂಡು ಹೋಗುತ್ತಿದೆ" ಎಂದು ಕುಮಾರಸ್ವಾಮಿ ಟೀಕಿಸಿದರು.