'ರಾಜೀನಾಮೆ ಅಗತ್ಯವಿಲ್ಲ, ಸಿಬಿಐ ಮೇಲೆ ಜಾರ್ಜ್ ಪ್ರಭಾವ ಬೀರಲು ಅಸಾಧ್ಯ'
ಬೆಂಗಳೂರು, ಅಕ್ಟೋಬರ್ 27: ಮಾಜಿ ಗೃಹ ಸಚಿವ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ ಜಾರ್ಜ್ ತನಿಖಾ ಸಂಸ್ಥೆಯ ಮೇಲೆ ಪ್ರಭಾವ ಬೀರಲು ಸಾಧ್ಯವೇ ಇಲ್ಲ. ಹೀಗಾಗಿ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಖಡಾಖಂಡಿತವಾಗಿ ಹೇಳಿದರು.
ಕೆ.ಜೆ.ಜಾರ್ಜ್ ವಿರುದ್ಧ ಸಿಬಿಐ ಎಫ್ಐಆರ್ : ಯಾರು, ಏನು ಹೇಳಿದರು?
ಡಿವೈಎಸ್ಪಿ ಎಂಕೆ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಸಿಬಿಐ ಎಫ್ಐಆರ್ ದಾಖಲಿಸಿರುವ ಹಿನ್ನಲೆಯಲ್ಲಿ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಿರಿಯ ಕಾಂಗ್ರೆಸ್ ನಾಯಕರು ಮತ್ತು ಸಚಿವರ ಸಭೆ ನಡೆಸಿದರು. ನಂತರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.
"ಈ ಹಿಂದೆ ಕುಶಾಲನಗರದಲ್ಲಿ ಎಫ್ಐಆರ್ ದಾಖಲಾಗಿತ್ತು. ನಂತರ ಸಿಐಡಿಗೆ ಪ್ರಕರಣ ಹಸ್ತಾಂತರವಾಗಿತ್ತು. ಆಗ ಜಾರ್ಜ್ ಗೃಹ ಸಚಿವರಾಗಿದ್ದರು. ನಂತರ ರಾಜೀನಾಮೆ ನೀಡಿದ್ದರು. ಇವತ್ತು ತನಿಖೆ ನಡೆಸುತ್ತಿರುವುದು ಸಿಬಿಐ. ಇವತ್ತವರು ಗೃಹ ಸಚಿವರಾಗಿಯೂ ಇಲ್ಲ. ಜತೆಗೆ ಸಿಬಿಐ ಕೇಂದ್ರದ ಅಧೀನದಲ್ಲಿ ಬರುತ್ತದೆ. ಹೀಗಿರುವಾಗ ಪ್ರಭಾವ ಬೀರಲು ಹೇಗೆ ಸಾಧ್ಯ?" ಎಂದು ಮುಖ್ಯಮಂತ್ರಿ ಪ್ರಶ್ನಿಸಿದರು.
ಹೀಗಾಗಿ ರಾಜೀನಾಮೆ ನೀಡಬೇಕು ಎಂಬ ಬಿಜೆಪಿಯವರ ಬೇಡಿಕೆ ಜಾರ್ಜ್ ಮತ್ತು ಸರಕಾರ ಜನಪ್ರಿಯತೆಗೆ ಕುತ್ತು ತರುವ ರಾಜಕೀಯ ತಂತ್ರವಷ್ಟೇ ಎಂದು ಅವರು ಕಿಡಿಕಾರಿದರು.
ಡಿವೈಎಸ್ಪಿ ಗಣಪತಿ ಸಾವಿನ ಪ್ರಕರಣದ Timeline
ರಾಜಕೀಯ ಉದ್ದೇಶದಿಂದ, ಚುನಾವಣೆಯೂ ಹತ್ತಿರದಲ್ಲಿ ಇರುವುದರಿಂದ ಬಿಜೆಪಿಯವರು ಇದನ್ನು ರಾಜಕೀಯ ವಿಷಯ ಮಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದರು.
ಕೇಂದ್ರ ಸಚಿವ ಸಂಪುಟದಲ್ಲಿ ಗಂಭೀರ ಅಪರಾಧ ಪ್ರಕರಣಗಳಲ್ಲಿ ಎಫ್ ಐ ಆರ್ ಆಗಿರುವ ಹಲವರು ಇದ್ದಾರೆ. ಅವರ ರಾಜೀನಾಮೆಯನ್ನೂ ಬಿಜೆಪಿ ಕೇಳಬೇಕು
— Siddaramaiah (@siddaramaiah) October 27, 2017
"ಇವತ್ತು ಬಿಜೆಪಿಯವರು ಜಾರ್ಜ್ ರಾಜೀನಾಮೆ ಕೇಳುತ್ತಿದ್ದಾರೆ. ಆದರೆ, ಕೇಂದ್ರ ಸಚಿವರ ಮೇಲೆಯೂ ಎಫ್ಐಆರ್ ಇದೆ. 64ರಲ್ಲಿ 20 ಸಚಿವರು, ಅದರಲ್ಲೂ 8 ಕ್ಯಾಬಿನೆಟ್ ಸಚಿವರು ತಮ್ಮ ಮೇಲೆ ಕ್ರಿಮಿನಲ್ ಪ್ರಕರಣ ಇದೆ ಎಂದು ಹೇಳಿಕೊಂಡಿದ್ದಾರೆ. ಹೀಗಿರುವಾಗ 8 ಕ್ಯಾಬಿನೆಟ್ ಸಚಿವರು ಮತ್ತ 12 ಇತರ ಸಚಿವರೂ ರಾಜೀನಾಮೆ ನೀಡಬೇಕಲ್ವಾ?" ಎಂದು ಅವರು ಪ್ರಶ್ನಿಸಿದ್ದಾರೆ.
"ಕೆಲವರ ಮೇಲೆ ಹತ್ಯಾ ಯತ್ನಾ, ಕೋಮು ಗಲಭೆಗೆ ಪ್ರಚೋದನೆ ಸೇರಿದಂತೆ ಐಪಿಸಿ ಸೆಕ್ಷನ್ 420, 326, 307 ಗಳ ಅಡಿಯಲ್ಲಿ ಸಚಿವರ ಮೇಲೆ ಪ್ರಕರಣಗಳು ದಾಖಲಾಗಿವೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮೇಲೆಯೇ ಹತ್ಯೆಗೆ ಯತ್ನ, ಗಲಭೆಗೆ ಕಾರಣವಾದ ಕೇಸ್ ಗಳಿವೆ. ಯಡಿಯೂರಪ್ಪ ಮೇಲೆಯೂ ಹೈಕೋರ್ಟ್ ದಾಖಲೆಗಳನ್ನು ಪೋರ್ಜರಿ ಮಾಡಿದ ಪ್ರಕರಣಗಳಿವೆ. ಇವರೆಲ್ಲಾ ರಾಜೀನಾಮೆ ನೀಡಬೇಕು ಎಂದು ಕೇಳುತ್ತಾರೆ. ಇದಕ್ಕೆ ಏನೆನ್ನಬೇಕು?" ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.