ಕೋವಿಡ್ ರೂಪಾಂತರ: ನೈಟ್ ಕರ್ಫ್ಯೂ ಹಾಕುವ ಬಗ್ಗೆ ಯಡಿಯೂರಪ್ಪ ಮಹತ್ವದ ಹೇಳಿಕೆ!
ಬೆಂಗಳೂರು, ಡಿ. 22: ಇಂಗ್ಲೆಂಡ್ನಲ್ಲಿ ಪತ್ತೆ ಆಗಿರುವ ಕೊರೊನಾ ವೈರಸ್ನ ಹೊಸ ಪ್ರಬೇಧ ಇಡೀ ಜಗತ್ತನ್ನು ಮತ್ತೆ ಆತಂಕಕ್ಕೆ ನೂಕಿದೆ. ಯು.ಕೆ. ಡೆನ್ಮಾರ್ಕ್, ನೆದರ್ ಲ್ಯಾಂಡ್ ಮೊದಲಾದ ಐರೋಪ್ಯ ರಾಷ್ಟ್ರಗಳಲ್ಲಿ ಹೊಸ ಬಗೆಯ ವೈರಾಣು ಹರಡಿರುವುದು ಪತ್ತೆಯಾಗಿದೆ. ಹೀಗಾಗಿ ಖೇಂದ್ರ ಸರ್ಕಾರ ಮುನ್ನಚ್ಚರಿಕೆ ಕ್ರಮವಾಗಿ ಇಂದು (ಡಿ.22) ರಾತ್ರಿಯಿಂದ ಇಂಗ್ಲೆಂಟ್ನಿಂದ ಬರುವ ಎಲ್ಲ ವಿಮಾನಗಳನ್ನು ನಿರ್ಬಂಧಿಸಲಾಗಿದೆ. ಇಂಗ್ಲೆಂಡ್ನಿಂದ ನಿನ್ನೆ ರಾಜ್ಯಕ್ಕೆ ಒಟ್ಟು 537 ಜನರು ರಾಜ್ಯಕ್ಕೆ ಬಂದಿದ್ದರು. ಅವರಲ್ಲಿ 138 ಜನರು ಕೋವಿಡ್ ನೆಗೆಟಿವ್ ವರದಿ ತಂದಿರಲಿಲ್ಲ.
Recommended Video
ರಾಜ್ಯ ಸರ್ಕಾರವೂ ಹೊಸ ಬಗೆಯ ಕೋರೊನಾ ವೈರಸ್ ಕುರಿತು ಕ್ರಮಕೈಗೊಂಡಿದೆ. ಹೀಗಾಗಿ ಮತ್ತೊಮ್ಮೆ ರಾಜ್ಯದಲ್ಲಿ ನೈಟ್ ಕರ್ಫ್ಯೂ ಹೇರುವ ಬಗ್ಗೆಯೂ ಚರ್ಚೆಗಳು ನಡೆದಿವೆ. ಕೊರೋನಾ ರೂಪಾಂತರ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಮಾತನಾಡಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮಹತ್ವದ ಹೇಳಿಕೆ ಕೊಟ್ಟಿದ್ದಾರೆ.
ಹೊಸ ವೈರಾಣು ಬಗ್ಗೆ ಆತಂಕ ಬೇಕಿಲ್ಲ: ಸಚಿವ ಸುಧಾಕರ್ ಅಭಯ
ಈ ಬೆಳವಣಿಗೆ ಇಡೀ ರಾಜ್ಯ ಮತ್ತು ದೇಶದ ಜನರನ್ನು ಆತಂಕಕ್ಕೀಡು ಮಾಡಿದೆ ಎಂದು ಯಡಿಯೂರಪ್ಪ ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಚೆನ್ನೈಗೆ ಬಂದಿರುವ ವ್ಯಕ್ತಿಯಲ್ಲಿ ಈ ವೈರಾಣು ಕಾಣಿಸಿಕೊಂಡಿದೆ. ನಾವು ಎಷ್ಟು ಕಟ್ಟೆಚ್ಚರ ವಹಿಸಿದರೂ ಕಡಿಮೆಯೇ. ಯಾರೇ ಹೊರಗಡೆಯಿಂದ ಬಂದರೂ ವಿಮಾನ ನಿಲ್ದಾಣದಲ್ಲಿ ನೋಡಿ ಪರಿಶೀಲಿಸಿ ತಪಾಸಣೆ ಮಾಡುತ್ತೇವೆ. ದೇಶಾದ್ಯಂತ ಈಗಾಗಲೇ ಹೈಅಲರ್ಟ್ ಇದೆ. ಪ್ರಧಾನಿ ಮೋದಿ ಅವರು ಕೂಡಾ ಆತಂಕಕ್ಕೊಳಗಾಗದೆ ಎಚ್ಚರಿಕೆಯಿಂದ ಇರುವಂತೆ ತಿಳಿಸಿದ್ದಾರೆ. ಕರ್ನಾಟಕದಲ್ಲಿ ಯಾವುದೇ ಕಾರಣಕ್ಕೂ ವೈರಸ್ ಹರಡದಂತೆ ಎಚ್ಚರಿಕೆ ವಹಿಸುತ್ತೇವೆ ಎಂದು ವಿವರಿಸಿದ್ದಾರೆ.
ಇನ್ನು ಹೊಸವರ್ಷಾಚರಣೆ ಹಾಗೂ ನೈಟ್ ಕರ್ಫ್ಯೂ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಿಎಂ ಯಡಿಯೂರಪ್ಪ ಅವರು, ಈ ವರ್ಷ ಹೊಸ ವರ್ಷ ಆಚರಣೆಯೇ ಇಲ್ಲ. ಹೊಸ ವರ್ಷ ದೊಡ್ಡ ಪ್ರಮಾಣದಲ್ಲಿ ಆಚರಣೆ ಮಾಡಲು ಅವಕಾಶವಿಲ್ಲ. ಆದರೆ ಹೊಸ ವೈರಾಣುವಿನ ಹಿನ್ನೆಲೆಯಲ್ಲಿ ನಮ್ಮ ರಾಜ್ಯದಲ್ಲಿ ಸದ್ಯಕ್ಕೆ ನೈಟ್ ಕರ್ಫ್ಯೂ ಹೇರುವ ಅಗತ್ಯವಿಲ್ಲ. ಹೀಗಾಗಿ ನೈಟ್ ಕರ್ಫ್ಯೂ ಹಾಕುವುದಿಲ್ಲ ಎಂದು ಯಡಿಯೂರಪ್ಪ ಅವರು ಸ್ಪಷ್ಟಪಡಿಸಿದ್ದಾರೆ.