ಭ್ರಷ್ಟರ ಸಂಪತ್ತು ಬಚ್ಚಿಡಲು ಎಸಿಬಿ ಬಳಿ ಲಾಕರ್ ಇಲ್ಲ !
ಬೆಂಗಳೂರು, ಫೆಬ್ರವರಿ 03: ಎಸಿಬಿ ಅಧಿಕಾರಿಗಳ ಬಯಲಿಗೆ ಎಳೆದಿರುವ ಭ್ರಷ್ಟರ ಅಕ್ರಮ ಸಂಪತ್ತು ಇಟ್ಟು ಕೊಳ್ಳೋಕೆ ಭ್ರಷ್ಟಾಚಾರ ನಿಗ್ರಹ ದಳದಲ್ಲಿ ಜಾಗವೇ ಇಲ್ಲ ! ಹಾಗಂತ ಅದೂ ಕೋರ್ಟ ಗೂ ನೀಡಿಲ್ಲ. ಭ್ರಷ್ಟರ ಸಂಪತ್ತು ಭ್ರಷ್ಟರ ಬಳಿಯೇ ಇದೆ !
ಹೌದು. ಎಸಿಬಿ ದಾಳಿಯಲ್ಲಿ ಸಿಗುವ ಭ್ರಷ್ಟರ ಸಂಪತ್ತನ್ನು ಎಸಿಬಿ ಪೊಲೀಸ್ ಅಧಿಕಾರಿಗಳು ವಶಪಡಿಸಿಕೊಳ್ಳುತ್ತಾರೆ. ಅದರೆ ಅದನ್ನು ಎಸಿಬಿ ಕಚೇರಿಗೆ ತರುವುದಿಲ್ಲ. ಯಾಕೆಂದರೆ ಭ್ರಷ್ಟರ ಆಸ್ತಿಯನ್ನು ಇಟ್ಟುಕೊಳ್ಳೋಕೆ ಎಸಿಬಿ ಬಳಿ ಲಾಕರ್ ವ್ಯವಸ್ಥೆಯೇ ಇಲ್ಲ. ಹೀಗಾಗಿ ಭ್ರಷ್ಡರ ಸಂಪತ್ತು ಬಯಲಿಗೆ ಬಂದರೂ,ಅದನ್ನು ಲೆಕ್ಕ ತೆಗೆದು ಕೊಂಡು ವಾಪಸು ಅವರಿಗೆ ನೀಡುತ್ತಿದ್ದಾರೆ.
ಲೋಕ ಖಜಾನೆ ತುಂಬಿತ್ತು
ಲೋಕಾಯುಕ್ತ ಸಂಸ್ಥೆ ಭಾಗವಾಗಿ ಭ್ರಷ್ಟಾಚಾರ ನಿಗ್ರಹ ದಳ ಕಾರ್ಯ ನಿರ್ವಹಿಸುವಾಗ ಪೊಲೀಸರು ಭ್ರಷ್ಟರ ಚಿನ್ನಾಭರಣ, ನಗದು ಜಪ್ತಿ ಮಾಡುತ್ತಿದ್ದರು. ಲೋಕಾಯುಕ್ತದಲ್ಲಿದ್ದ ಖಜಾನೆಯಲ್ಲಿ ಭ್ರಷ್ಟರ ಸಂಪತ್ತು ಇಟ್ಟು ಬೀಗ ಹಾಕುತ್ತಿದ್ದರು. ಹೀಗಾಗಿ ಲೋಕಾ ದಾಳಿ ಎಂದರೆ ಭ್ರಷ್ಟರಿಗಿಂತಲೂ ಅವರ ಪತ್ನಿಯರು ಗೋಳಾಡುತ್ತಿದ್ದರು. ಇದ್ದ ಒಡವೆ ಹೋಯಿತಲ್ಲಾ ಹಾಕಿಕೊಳ್ಳೋದು ಏನು ಅಂತ ಲೋಕಾ ಪೊಲೀಸರ ಕಾಲಿಗೆ ಬಿದ್ದಿದ್ದ ಪ್ರಸಂಗಗಳು ನಡೆದಿತ್ತು.
ಇನ್ನು ಲೋಕಾ ಖಜಾನೆಯಲ್ಲಿ ಅಕ್ರಮ ಸಂಪತ್ತು ಮೂವರು ಐಪಿಎಸ್ ಅಧಿಕಾರಿಗಳ ಜವಾಬ್ಧಾರಿಯಲ್ಲಿ ಭದ್ರಪಡಿಸಲಾಗುತ್ತಿತ್ತು. ಭ್ರಷ್ಟರ ಸಂಪತ್ತು ಇಡಲೆಂದೇ ಬೃಹತ್ ಲಾಕರ್ ವ್ಯವಸ್ಥೆ ಮಾಡಲಾಗಿದೆ. ಪ್ರಕರಣ ನ್ಯಾಯಾಲಯದಲ್ಲಿ ಇತ್ಯರ್ಥವಾದ ಬಳಿಕವಷ್ಟೇ ತೀರ್ಪನ್ನು ಆಧರಿಸಿ ಅರೋಪಿತ ಭ್ರಷ್ಟರಿಗೆ ಕಾನೂನು ಬದ್ಧವಾಗಿ ವಿಲೇವಾರಿ ಮಾಡುತ್ತಿದ್ದರು. ಹೀಗಾಗಿ ಲೋಕ ದಾಳಿಗೆ ಭ್ರಷ್ಟರು ಮತ್ತು ಕುಟುಂಬ ನಡುಗುವರು. ಸೊರ್ಸ್ ವರದಿ ಆಧರಿಸಿ ದಾಳಿ ಮಾಡಿದ ಮೇಲೆ ದಾಖಲೆಗಳು ಸಿಗುತ್ತವೆ. ಮಹತ್ವದ ದಾಖಲೆಗಳನ್ನು ಭದ್ರಪಡಿಸಲು ಲಾಕರ್ ವ್ಯವಸ್ಥೆ ಅತ್ಯಗತ್ಯ ಎಂದು ಲಿಒಕಾಯುಕ್ತ ಪೊಲೀಸ್ ನಿವೃತ್ತ ಅಧಿಕಾರಿ ತಿಳಿಸಿದ್ದಾರೆ. ಆದರೆ ಎಸಿಬಿ ಸಂಗತಿ ಬೇರೆ.
ಎಸಿಬಿ ಖಜಾನೆ ಇಲ್ಲ
ಭ್ರಷ್ಟಾಚಾರ ನಿಗ್ರಹ ದಳ ಲೋಕಾಯುಕ್ತ ಸಂಸ್ಥೆಯಿಂದ 2016 ರಲ್ಲಿ ಪ್ರತ್ಯೇಕವಾಗಿತ್ತು. ಅಂದಿನಿಂದ ಖನಿಜ. ಭವನದಲ್ಲಿ ಎಸಿಬಿಗೆ ಸುಸಜ್ಜಿತ ಕಚೇರಿ ನೀಡಲಾಗಿದೆ. ಆದರೆ ಭ್ರಷ್ಟರ ಅಕ್ರಮ ಸಂಪತ್ತು ಇಡಲಿಕ್ಕೆ ಖಜಾನೆ ವ್ಯವಸ್ಥೆ ಇಲ್ಲ. ಮಹತ್ವದ ದಾಖಲೆಗಳನ್ನು ಇಟ್ಟುಕೊಳ್ಳಲು ಸಹ ಖಜಾನೆ ವ್ಯವಸ್ಥೆಯನ್ನು ಸರ್ಕಾರ ಕಲ್ಪಿಸಿಲ್ಲ. ಹೀಗಾಗಿ ಎಸಿಬಿ ಅಧಿಕಾರಿಗಳು ತಿಂಗಳು ಕಾಲ ಕಷ್ಟಪಟ್ಟು ಅಕ್ರಮ ಸಂಪತ್ತು ಬಯಲಿಗೆ ಎಳೆದರೂ ಅದರ ಬಿಸಿ ಭ್ರಷ್ಟರಿಗೆ ತಾಗುತ್ತಿಲ್ಲ. ಲಂಚ ಸ್ವೀಕಾರ ಪ್ರಕರಣಗಳಲ್ಲಿ ಸ್ವೀಕರಿಸುವ ಲಂಚದ ಹಣವನ್ನಷ್ಟೇ ಎಸಿಬಿ ಅಧಿಕಾರಿಗಳು ಜಪ್ತಿ ಮಾಡುತ್ತಾರೆ. ಅದನ್ನು ನ್ಯಾಯಾಲಯಕ್ಕೆ ಸಲ್ಲಿಸುತ್ತಾರೆ. ಆದರೆ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಪತ್ತೆಯಾಗುವ ಚಿನ್ನ, ವಜ್ರ ವೈಡೂರ್ಯ, ನಗದು ಹಣ ಎಸಿಬಿ ಪೊಲೀಸರು ಲೆಕ್ಕ ತೆಗೆದುಕೊಳ್ಳುತ್ತಾರೆ. ಆದರೆ ವಾಪಸು ಭ್ರಷ್ಟಾಚಾರ ಆರೋಪಿತರ ಕೈಗೆ ನೀಡುತ್ತಾರೆ. ಹೀಗಾಗಿ ಚಿನ್ನದ ಒಡವೆಗಳನ್ನು ಅವರು ಸ್ವಂತಕ್ಕೆ ಬಳಸಿಕೊಳ್ಳಬಹುದು. ಹೀಗಾಗಿ ಎಸಿಬಿ ದಾಳಿಗೆ ತುತ್ತಾದರೂ ಅದರ ಬಿಸಿ ತಟ್ಟುತ್ತಿಲ್ಲ.
ಕಾಯ್ದೆ ಏನು ಹೇಳುತ್ತೆ
ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಆರೋಪಿತರ ಆಸ್ತಿಯನ್ನು ಭ್ರಷ್ಟಾಚಾರ ನಿಗ್ರಹ ದಳ ತನ್ನ ವಶದಲ್ಲಿ ಇಟ್ಟುಕೊಳ್ಳಬಹುದು. ಇಲ್ಲವೇ ಆರೋಪಿತ ಅಧಿಕಾರಿ ಕೈಗೂ ನೀಡಬಹುದು. ಎಸಿಬಿ ಅಧಿಕಾರಿಗಳ ವಶದಲ್ಲಿ ಇದ್ದರೆ ಅವನ್ನು ಅಡವಿಡಲು ಅವಕಾಶ ಇರಲ್ಲ, ಬಳಕೆ ಮಾಡಲಿಕ್ಕೂ ಕೊಡಲ್ಲ. ಹೀಗಾಗಿ ಭ್ರಷ್ಟಾಚಾರ ಆರೋಪಿತರು ಕಂಗಾಲಾಗುತ್ತಾರೆ. ಒಂದು ರೀತಿಯ ಪರೋಕ್ಷ ಶಿಕ್ಷೆ ಅನುಭವಿಸುವಂತಾಗುತ್ತದೆ. ಆದರೆ ಎಸಿಬಿಯಲ್ಲಿ ಲಾಕರ್ ಇಲ್ಲದ ಕಾರಣ ಅಕ್ರಮ ಆಸ್ತಿ ಗಳಿಕೆ ಪ್ರಕರಣಗಳಲ್ಲಿ ಕೋಟಿ ಕೋಟಿ ಅಕ್ರಮ ಸಂಪತ್ತು ಪತ್ತೆಯಾದರೂ ಅದು ಭ್ರಷ್ಟಾಚಾರ ಆರೋಪಿತರ ಕೈಗೆ ವಾಪಸು ನೀಡಲಾಗುತ್ತದೆ. ಅವನ್ನು ಅವರು ಮಾರುವಂತಿಲ್ಲ. ಆದರೆ ಧರಿಸಲು ಅವಕಾಶ ವಿರುತ್ತದೆ.
ಆರೋಪಿತರ ಬ್ಯಾಂಕ್ ಹಣ ಕಥೆ ?
ಇನ್ನು ಭ್ರಷ್ಟಾಚಾರ ಆರೋಪಿತ ಅಧಿಕಾರಿಗಳ ಸಂಪತ್ತು ಪತ್ತೆಯಾದರೂ ಅದನ್ನು ಅದೇ ಖಾತೆಯಲ್ಲಿ ಇಡಲಾಗುತ್ತದೆ. ಹಣ ಬಳಕೆಗೆ ಅವಕಾಶ ನೀಡದಿದ್ದರು, ಬಡ್ಡಿ ಸಮೇತ ಎಲ್ಕವೂ ಅರೋಪಿತ ಅಧಿಕಾರಿಯ ಖಾತೆಯಲ್ಲಿಯೇ ಇರುತ್ತದೆ. ಪ್ರಕರಣ ಇತ್ಯರ್ಥ ಆಗುವ ವರೆಗೆ ಫಿಕ್ಸಡ್ ಡೆಪಾಸಿಟ್ ಮಾದರಿ ಭದ್ರವಾಗಿರುತ್ತದೆ. ಹೀಗಾಗಿ ಸದ್ಯ ಎಸಿಬಿ ದಾಳಿ ಎಂದರೆ ಕಳೆದುಕೊಳ್ಳುವುದು ಏನೂ ಇಲ್ಲ. ಕೋರ್ಟ್ ಇದೆ. ಮುಂದೆ ನೋಡೋಣ ಎಂದು ಭ್ರಷ್ಡಾಚಾರ ಆರೋಪಿತರು ನಿರಾಳರಾಗಿದ್ದಾರೆ.
ಎಸಿಬಿಗೆ ಲಾಕರ್ ತುರ್ತು ಅಗತ್ಯ
ಎಸಿಬಿ ಅಧಿಕಾರಿಗಳು ನಿರಂತರ ದಾಳಿ ನಡೆಸುವ ಮೂಲಕ ಭ್ರಷ್ಡರ ಅಕ್ರಮ ಸಂಪತ್ತು ಬಯಲಿಗೆ ಎಳೆಯುತ್ತಲೇ ಇದ್ದಾರೆ. ನಿನ್ನೆ ಕೂಡ ಏಳು ಭ್ರಷ್ಟರ ಮನೆಗಳ ಮೇಲೆ ದಾಳಿ ನಡೆಸಿ ಕೋಟಿ ಕೋಟಿ ಅಕ್ರಮ ಸಂಪತ್ತು ಬಯಲಿಗೆ ಎಳೆದಿದ್ದರು. ಎಲ್ಲಾ ಲೆಕ್ಕ ಬರೆದುಕೊಂಡು ವಾಪಸು ಬಂದಿದ್ದಾರೆ. ಇನ್ನು ಎಸಿಬಿ ದಾಖಲಿಸಲಿರುವ ಅಕ್ರಮ ಆಸ್ತಿ ಗಳಿಕೆ ಪ್ರಕರಣ ತನಿಖೆಯಾಗಿ ದೋಷಾರೋಪ ಪಟ್ಟಿ ಸಲ್ಲಿಸಿದರೂ ವಿಚಾರಣೆ ಮುಗಿದು ತೀರ್ಪು ಬರುವುದಕ್ಕೆ ವರ್ಷಗಳೇ ಬೇಕು. ಇನ್ನು ತಡೆಯಾಜ್ಣೆ, ಎಫ್ ಐಅರ್ ರದ್ದು ಇನ್ನೂ ನಾನಾ ಮಾರ್ಗ ಗಳು ಇವೆ. ಇವಲ್ಲಿ ಒಂದು ಹಾದಿಯಲ್ಲಿ ಭ್ರಷ್ಟಾಚಾರ ಆರೋಪಿತರು ಜಯ ಗಳಿಸಿದರೂ ಮುಗೀತು. ಎಲ್ಲಾ ಅಕ್ರಮ ಅಸ್ತಿಗಳು ಸಕ್ರಮ ಆದಂತೆ.. ಅಷ್ಟರೊಳಗೆ ನಿವೃತ್ತಿಯೂ ಆಗಿ ಅರಾಮಾಗಿ ಕಾಲ ಕಳೆಯಬಹುದು ಎಂಬಂತಾಗಿದೆ.
ಕಾನೂನು ಅಭಿಪ್ರಾಯ
ಎಲ್ಲಾ ಪ್ರಕರಣಗಳಲ್ಲಿ ಚಿನ್ನ, ನಗದು ಭ್ರಷ್ಟಾಚಾರ ನಿಗ್ರಹ ದಳ ವಶಪಡಿಸಿಕೊಳ್ಳುವ ಅಗತ್ಯವಿಲ್ಲ. ಕೆಲವು ಪ್ರಕರಣಗಳಲ್ಲಿ ವಶಕ್ಕೆ ತೆಗೆದುಕೊಳ್ಳುವುದು ತನಿಖೆ ದೃಷ್ಡಿಯಿಂದ ಸೂಕ್ತ. ಹೀಗಾಗಿ ಒಂದು ಭ್ರಷ್ಟಾಚಾರ ನಿಗ್ರಹ ದಳ ಅಂದ್ರೆ ಲಾಕರ್ ಅಥವಾ ಸ್ಟಾಂಗ್ ರೂಂ ಇರಲೇ ಬೇಕು. ಇನ್ನು ಭ್ರಷ್ಟಾಚಾರ ನಿಗ್ರಹ ದಳ ಪೊಲೀಸರು ವಶಪಡಿಸಿಕೊಳ್ಳುವ ಆಸ್ತಿ, ಚಿನ್ನವನ್ನು ನ್ಯಾಯಾಲಯದ ಆದೇಶ ಪಡೆದು ವಾಪಸು ಪಡೆಯಬಹುದು. ಪ್ರಕರಣ ಇತ್ಯರ್ಥ ಆಗುವ ವರೆಗೂ ಅದನ್ನು ಭದ್ರಪಡಿಸುವ ಜವಾಬ್ಧಾರಿ ತನಿಖಾ ಸಂಸ್ಥೆಗಳ ಮೇಲಿರುತ್ತದೆ. ಭದ್ರತಾ ದೃಷ್ಟಿಯಿಂದ ಲಾಕರ್ ಬೇಕು ಎಂದು ಹಿರಿಯ ವಕೀಲ ಪ್ರಮೋದ್ ಚಂದ್ರ ಸ್ಪಷ್ಟಪಡಿಸಿದ್ದಾರೆ.
Recommended Video
ಎಸಿಬಿ ಎಸ್ಪಿ ಸ್ಪಷ್ಟನೆ
ಎಸಿಬಿ ಕೆಲವು ಪ್ರಕರಣಗಳಲ್ಲಿ ಚಿನ್ನ ನಗದು ಜಪ್ತಿ ಮಾಡಿ ಎಸಿಬಿ ವಶಕ್ಕೆ ಪಡೆಯುತ್ತೇವೆ. ಎಲ್ಲಾ ಪ್ರಕರಣಗಳಲ್ಲಿ ನಾವು ವಿವರ ಪಡೆದು ಆರೋಪಿತರ ವಶಕ್ಕೆ ನೀಡುತ್ತೇವೆ . ಎಸಿಬಿ ಈಗ ಬೆಳೆಯುತ್ತಿರುವ ಸಂಸ್ಥೆ, ಶೀಘ್ರದಲ್ಲಿ ಅದೂ ವ್ವವಸ್ಥೆ ಆಗಲಿದೆ ಎಂದು ಎಸಿಬಿ ಬೆಂಗಳೂರು ನಗರ ಘಟಕದ ಎಸ್ಪಿ ಕುಲದೀಪ್ ಕುಮಾರ್ ಆರ್. ಜೈನ್ ತಿಳಿಸಿದ್ದಾರೆ.