ಬಿಪಿಎಲ್ ಕಾರ್ಡ್ ರದ್ದು: ಯುಟರ್ನ್ ಹೊಡೆದ ಆಹಾರ ಸಚಿವ ಉಮೇಶ್ ಕತ್ತಿ!
ಬೆಂಗಳೂರು, ಫೆ. 15: ಸದಾ ಒಂದಿಲ್ಲೊಂದು ವಿವಾದವನ್ನು ಮೈಮೇಲೆ ಎಳೆದುಕೊಳ್ಳುವ ಆಹಾರ ಸಚಿವ ಈಗ ಮತ್ತೊಂದು ವಿವಾದದವನ್ನು ಮೈಮೇಲೆ ಎಳೆದು ಕೊಂಡಿದ್ದಾರೆ. ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಬೇಕು ಎಂದು ಹೇಳಿಕೆ ನೀಡುವ ಮೂಲಕ, ಉಮೇಶ್ ಕತ್ತಿ ಅವರು ಇಡೀ ರಾಜ್ಯ ಹಾಗೂ ಬಿಜೆಪಿ ನಾಯಕರ ಕಂಗೆಣ್ಣಿಗೆ ಗುರಿಯಾಗಿದ್ದರು. ಮುಂದುವರೆದು ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾದಲ್ಲಿ ನನ್ನ ಮಗ ಸಿಎಂ ಆಗ್ತಾರೆ ಎಂದೂ ಕತ್ತಿ ಹೇಳಿಕೆ ನೀಡಿದ್ದರು. ಈ ಎಲ್ಲ ಹೇಳಿಕೆಗಳು ತೀವ್ರ ವಿವಾದಕ್ಕೆ ಗುರಿಯಾಗಿದ್ದವು.
ಅದಾದ ಬಳಿಕ ಸಚಿವ ಸ್ಥಾನ ಸಿಗದೇ ಇದ್ದುದರಿಂದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ಉಮೇಶ್ ಕತ್ತಿ ಮುನಿಸಿಕೊಂಡಿದ್ದರು. ಜೊತೆಗೆ ಸಹೋದರ ರಮೇಶ್ ಕತ್ತಿ ಅವರಿಗೆ ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಲು ಬಿಜೆಪಿ ಟಿಕೆಟ್ ಸಿಗದಿದ್ದರಿಂದ ಹೈಕಮಾಂಡ್ ಮೇಲೂ ಕೂಡ ಗರಂ ಆಗಿದ್ದರು. ತೀವ್ರ ಒತ್ತಡದ ಬಳಿಕ ಉಮೇಶ್ ಕತ್ತಿ ಅವರನ್ನು ಸಿಎಂ ಯಡಿಯೂರಪ್ಪ ತಮ್ಮ ಸಂಪುಟಕ್ಕೆ ಸೇರಿಸಿಕೊಂಡಿದ್ದರು.
ಬಿಪಿಎಲ್ ಕಾರ್ಡುದಾರರಿಗೆ ಆಘಾತ ನೀಡಿದ ರಾಜ್ಯ ಸರ್ಕಾರ
ಸಂಪುಟಕ್ಕೆ ಸೇರಿದ ಒಂದು ತಿಂಗಳೊಳಗೆ ಆಹಾರ ಸಚಿವ ಉಮೇಶ್ ಕತ್ತಿ ಅವರು ಮತ್ತೊಂದು ಯಡವಟ್ಟು ಮಾಡಿಕೊಂಡಿದ್ದಾರೆ. ಆ ಮೂಲಕ ಸಿಎಂ ಯಡಿಯೂರಪ್ಪ ಹಾಗೂ ಬಿಜೆಪಿ ನಾಯಕರ ಕಂಗೆಣ್ಣಿಗೆ ಗುರಿಯಾಗಿದ್ದಾರೆ.
ಉಮೇಶ್ ಕತ್ತಿ ಬಿಪಿಎಲ್ ವಿವಾದ
ಬಿಪಿಎಲ್ ಕಾರ್ಡ್ ವಿಚಾರಕ್ಕೆ ಸಂಬಂಧಿಸಿದಂತೆ ಆಹಾರ ಸಚಿವ ಉಮೇಶ್ ಕತ್ತಿ ಅವರು ಯುಟರ್ನ್ ಹೊಡೆದಿದ್ದಾರೆ. ಐದು ಎಕರೆಗಿಂತ ಹೆಚ್ಚು ಭೂಮಿ ಹೊಂದಿದವರು ಸೇರಿದಂತೆ ಬೈಕ್, ಟಿವಿ, ಪ್ರಿಡ್ಜ್ ಹೊಂದಿದವರು ತಮ್ಮ ಬಿಪಿಎಲ್ ಕಾರ್ಡ್ಗಳನ್ನು ತಕ್ಷಣ ಹಿಂದಿರುಗಿಸಬೇಕು ಎಂದು ನಿನ್ನೆ (ಫೆ.15) ರಂದು ಬೆಳಗಾವಿಯಲ್ಲಿ ಸಚಿವ ಕತ್ತಿ ಹೇಳಿಕೆ ನೀಡಿದ್ದರು.
ಉಮೇಶ್ ಕತ್ತಿ ಅವರು ಹೇಳಿಕೆ ಕೊಡುತ್ತಿದ್ದಂತಯೇ ಇಡೀ ರಾಜ್ಯಾದ್ಯಂತ ತೀವ್ರ ವಿರೋಧ ವ್ಯಕ್ತವಾಗಿತ್ತು. ಬೈಕ್, ಟಿವಿ ಇಂದಿನ ಅಗತ್ಯಗಳು. ಅವು ಮೂಲಭೂತ ಸಾಧನೆಗಳು. ಟಿವಿ ಹೊಂದುವುದು ಶ್ರೀಮಂತಿಕೆಯಾ? ಎಂದು ಪ್ರಶ್ನೆ ಮಾಡಿದ್ದರು. ಕತ್ತಿ ಅವರ ಹೇಳಿಕೆಯಿಂದ ಸಿಎಂ ಯಡಿಯೂರಪ್ಪ ಸೇರಿದಂತೆ ಬಿಜೆಪಿ ಸರ್ಕಾರ ಇಕ್ಕಟ್ಟಿಗೆ ಸಿಲುಕಿತ್ತು.
ತರಾಟೆಗೆ ತೆಗೆದುಕೊಂಡ ಯಡಿಯೂರಪ್ಪ
ಕೊರೊನಾ ವೈರಸ್ ಸಂಕಷ್ಟದ ಕಾಲದಲ್ಲಿ ಬಿಪಿಎಲ್ ಕಾರ್ಡ್ ರದ್ದು ಮಾಡುವ ಕುರಿತು ಅನಗತ್ಯ ಹೇಳಿಕೆ ನೀಡಿದ್ಯಾಕೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಆಹಾರ ಸಚಿವ ಉಮೇಶ್ ಕತ್ತಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಹಿಂದೆ ಅನೇಕ ಬಾರಿ ವಿವಾದಕ್ಕೀಡು ಮಾಡುವಂತಹ ಹೇಳಿಕೆಗಳನ್ನು ನೀಡಿದ್ದಿರಿ. ಈಗ ಸರ್ಕಾರದಲ್ಲಿ ಜವಾಬ್ದಾರಿಯುವ ಸ್ಥಾನದಲ್ಲಿದ್ದೀರಿ. ಆದರೂ ಮುಂದಿನ ಪರಿಣಾಮದ ಕುರಿತು ಅರಿವಿರದೆ ಹೀಗೆ ಹೇಳಿಕೆ ಕೊಡುವುದು ಸರಿಯಲ್ಲ. ಇಂತಹ ತೀರ್ಮಾನ ಕೈಗೊಳ್ಳುವ ಹಾಗೂ ಹೇಳಿಕೆ ಕೊಡುವ ಮೊದಲು ನನ್ನೊಂದಿಗೆ ಚರ್ಚಿಸಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
ಯುಟರ್ನ್ ಹೊಡೆದ ಕತ್ತಿ
ಬಿಪಿಎಲ್ ಕಾರ್ಡ್ ರದ್ದು ಕುರಿತು ನೀಡಿದ್ದ ಹೇಳಿಕೆಗೆ ಇದೀಗ ಯುಟರ್ನ್ ಹೊಡೆದಿರುವ ಸಚಿವ ಉಮೇಶ್ ಕತ್ತಿ ಅವರು, ಬಿ.ಪಿ.ಎಲ್. ಕಾರ್ಡ್ ಹೊಂದಿರುವವರ ಮಾನದಂಡಗಳಲ್ಲಿ ಯಾವುದೇ ಬದಲಾವಣೆ ಇಲ್ಲ. ಈ ಹಿಂದೆ ಇದ್ದ ಮಾನದಂಡಗಳನ್ನೇ ಮುಂದುವರಿಸಲಾಗುತ್ತದೆ. ನಾನು ಆಹಾರ ಸಚಿವನಾದ ಬಳಿಕ ಯಾವುದೇ ತಿದ್ದುಪಡಿಯನ್ನು ಮಾಡಿಲ್ಲ ಎಂದು ಮಾದ್ಯಮ ಪ್ರಕಟಣೆ ಮೂಲಕ ಉಮೇಶ್ ಕತ್ತಿ ಅವರು ತಿಳಿಸಿದ್ದಾರೆ.
ಬಿಪಿಎಲ್ ಕಾರ್ಡ್ ಹಿಂದಿರುಗಿಸಿ
ಆದರೆ ಸರ್ಕಾರದ ಮಾನದಂಡಗಳನ್ನು ಉಲ್ಲಂಘಿಸಿ ಹೆಚ್ಚಿನ ಸಂಖ್ಯೆಯ ಕುಟುಂಬಗಳು ಅನಧಿಕೃತವಾಗಿ ಬಿಪಿಎಲ್ ಕಾರ್ಡ್ ಪಡೆದಿವೆ. ಇದು ಸರ್ಕಾರದ ಗಮನಕ್ಕೆ ಬಂದಿದೆ. ಅಂತಹ ಕುಟುಂಬಗಳು ಒಂದು ವೇಳೆ ಸರ್ಕಾರದ ಆದೇಶಗಳನ್ನು ಉಲ್ಲಂಘಿಸಿ ಅನಧಿಕೃತವಾಗಿ ಬಿಪಿಎಲ್ ಕಾರ್ಡ್ ಪಡೆದಿದ್ದರೆ ಅಂತಹವರು ದಿನಾಂಕ 31.3.2021ರ ಒಳಗಾಗಿ ಸ್ವಯಂ ಪ್ರೇರಿತವಾಗಿ ಸರ್ಕಾರಕ್ಕೆ ಹಿಂದುರಿಗಿಸುವಂತೆ ಮಾಧ್ಯಮಗಳ ಮೂಲಕ ಮನವಿ ಮಾಡಿರುತ್ತೇನೆ. ಒಂದು ವೇಳೆ ಕಾಲಾವಧಿಯೊಳಗೆ ಕಾರ್ಡ್ಗಳನ್ನು ಹಿಂದುರಿಗಿಸದಿದ್ದರೆ ಅಂತಹವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿರುತ್ತೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.