ಎರಡು ಲಾಬಿ; ಸರ್ಕಾರಕ್ಕೆ ಮುಜುಗರ ತಂದ ಮಣಿವಣ್ಣನ್ ವರ್ಗಾವಣೆ
ಬೆಂಗಳೂರು, ಮೇ 12: ಕೊರೊನಾ ವೈರಸ್ ಸಂಕಷ್ಟದ ಸಂದರ್ಭದಲ್ಲಿ ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಹಿರಿಯ ಐಎಎಸ್ ಅಧಿಕಾರಿ ಪಿ. ಮಣಿವಣ್ಣನ್ ಅವರನ್ನು ದಿಢೀರ್ ವರ್ಗಾವಣೆ ಮಾಡಲಾಗಿದೆ. ಕಾರ್ಮಿಕ ಇಲಾಖೆ ಹಾಗೂ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಈ ಎರಡೂ ಇಲಾಖೆಗಳ ಪ್ರಧಾನ ಕಾರ್ಯದರ್ಶಿಯಾಗಿ ಅವರು ಕರ್ತವ್ಯ ನಿರ್ವಹಿಸುತ್ತಿದ್ದರು. ಲಾಕ್ಡೌನ್ ಸಂದರ್ಭದಲ್ಲಿ ಕಾರ್ಮಿಕರ ಹಿತ ಕಾಪಾಡುವಲ್ಲಿ ಕಾರ್ಮಿಕ ಇಲಾಖೆ ಪ್ರಧಾನ ಕಾರ್ಯದರ್ಶಿಯಾಗಿ ಮಣಿವಣ್ಣನ್ ಅವರು ಪ್ರಮುಖ ಪಾತ್ರ ವಹಿಸಿದ್ದರು.
ಮಣಿವಣ್ಣನ್ ಅವರನ್ನು ವರ್ಗಾವಣೆ ಮಾಡಲಾಗಿದ್ದು, ಎರಡೂ ಇಲಾಖೆಗಳ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಮತ್ತೊಬ್ಬ ಹಿರಿಯ ಐಎಎಸ್ ಅಧಿಕಾರಿ ಎಂ. ಮಹೇಶ್ವರ್ ರಾವ್ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಮಾಡಿದೆ. ಮಣಿವಣ್ಣನ್ ಅವರ ವರ್ಗಾವಣೆ ಹಿಂದೆ ಕೈಗಾರಿಕಾ ಲಾಬಿ ಬಹಳಷ್ಟು ಕೆಲಸ ಮಾಡಿದ್ದು, ಕೈಗಾರಿಕಾ ಇಲಾಖೆಯ ಪ್ರಧಾನಿ ಕಾರ್ಯದರ್ಶಿ ಅವರನ್ನು ಕಾರ್ಮಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ವರ್ಗಾವಣೆ ಮಾಡಿರುವುದು ಪರಿಸ್ಥಿತಿಯ ವ್ಯಂಗ್ಯವಾಗಿದೆ ಎಂದು ಸಾರ್ವಜನಿಕರು ವರ್ಗಾವಣೆ ವಿರೋಧಿಸಿದ್ದಾರೆ.
#ಬ್ರಿಂಗ್ ಬ್ಯಾಕ್ ಕ್ಯಾಪ್ಟನ್!
ಕಾರ್ಮಿಕ ಇಲಾಖೆಯಿಂದ ಪಿ. ಮಣಿವಣ್ಣನ್ ಅವರನ್ನು ಎತ್ತಂಗಡಿ ಮಾಡುತ್ತಿದ್ದಂತೆಯೆ ಬಹಳಷ್ಟು ವಿರೋಧ ವ್ಯಕ್ತವಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಪಿ. ಮಣಿವಣ್ಣನ್ ಅವರ ಪರವಾಗಿ ಅಭಿಯಾನಗಳೆ ನಡೆದಿವೆ. #BringBackCaptain ಹ್ಯಾಶ್ಟ್ಯಾಗ್ನಡಿ ಟ್ವಿಟರ್ ಅಭಿಯಾನ ಶುರುವಾಗಿದೆ. ಕಾರ್ಮಿಕ ಇಲಾಖೆಗೆ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರನ್ನು ವರ್ಗಾವಣೆ ಮಾಡಿರುವುದು ಸಧ್ಯದ ಪರಿಸ್ಥಿತಿಯ ವ್ಯಂಗ್ಯವಾಗಿದೆ ಎಂದು ಟ್ವಿಟರ್ನಲ್ಲಿ ಸಾರ್ವಜನಿಕರು ಕಿಡಿ ಕಾರಿದ್ದಾರೆ. ಜೊತೆಗೆ We want Captain Manivannan back!!! ಎಂದು ಪಿಟಿಶನ್ ಅಭಿಯಾನವೂ ಆರಂಭವಾಗಿದ್ದು, ಕಲವೇ ಗಂಟೆಗಳಲ್ಲಿ ಸುಮಾರು ಎರಡೂವರೆ ಸಾವಿರ ಜನರು ಪಿಟಿಶನ್ಗೆ ಬೆಂಬಲ ಕೊಟ್ಟಿದ್ದಾರೆ.
ಕಾರ್ಮಿಕರ ಜೀವ ಕಾಪಾಡಿದ್ದ ಮಣಿವಣ್ಣನ್
ದೇಶಾದ್ಯಂತ ಏಕಾಏಕಿ ಲಾಕ್ಡೌನ್ ಜಾರಿಯಾದಾಗ ಸಂಕಷ್ಟಕ್ಕೆ ಸಿಲುಕಿದ್ದು ವಲಸೆ ಕಾರ್ಮಿಕರು. ತಕ್ಷಣ ರಾಜ್ಯದಲ್ಲಿನ ಅದರಲ್ಲೂ ಬೆಂಗಳೂರಿನ ವಲಸೆ ಕಾರ್ಮಿಕರ ಸಹಾಯಕ್ಕೆ ಬಂದಿದ್ದು ಕಾರ್ಮಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ಪಿ. ಮಣಿವಣ್ಣನ್ ಅವರು. ಅತಂತ್ರರಾಗಿದ್ದ ಲಕ್ಷಾಂತರ ವಲಸೆ ಕಾರ್ಮಿಕರಿಗೆ ಆಹಾರದ ವ್ಯವಸ್ಥೆಯನ್ನು ಇಲಾಖೆಯ ಮೂಲಕ ಮಾಡಿದ್ದರು. ವಲಸೆ ಕಾರ್ಮಿಕರು ತಮ್ಮೂರಿಗೆ ತೆರಳಲು ಅನುಕೂಲ ಮಾಡಿಕೊಟ್ಟಿದ್ದರು.
ಎರಡು ಲಾಬಿ, ಒಂದು ವರ್ಗಾವಣೆ!
ಇಷ್ಟೆ ಆಗಿದ್ದರೆ ಬಹುಶಃ ಮಣೀವಣ್ಣನ್ ಅವರ ವರ್ಗಾವಣೆ ಆಗುತ್ತಿರಲಿಲ್ಲ, ಆದರೆ ಲಾಕ್ಡೌನ್ ನೆಪದಲ್ಲಿ ಕಾರ್ಮಿಕರನ್ನು ಕೆಲಸದಿಂದ ತೆಗೆದುಹಾಕಿದ್ದ ಕೈಗಾರಿಕಾ ಕಂಪನಿಗಳಿಗೆ ನೊಟೀಸ್ ಕೊಟ್ಟಿದ್ದರು. ಲಾಕ್ಡೌನ್ ನೆಪದಲ್ಲಿ ಕಾರ್ಮಿಕರಿಗೆ ತೊಂದರೆ ಕೊಡಬಾರದು ಎಂದು ಇಲಾಖೆಯಿಂದ ಸುತ್ತೋಲೆ ಹೊರಡಿಸಿದ್ದರು. ಜೊತೆಗೆ ಕೈಗಾರಿಕಾ ಕಂಪನಿಗಳ ವಿರುದ್ಧ ದೂರು ದಾಖಲಿಸಲು ವೆಬ್ಸೈಟ್ ತೆರೆದಿದ್ದರು. ಆಗ ಹೊತ್ತಾಗಿದ್ದು ಆತಂಕಕಾರಿ ವಿಚಾರ. ಬೆಂಗಳೂರಿನಲ್ಲಿ ಲಾಕ್ಡೌನ್ ಜಾರಿಯಾಗಿ ಕೆಲವೇ ದಿನಗಳಲ್ಲಿ ಸುಮಾರು 5 ಲಕ್ಷ ಕಾರ್ಮಿಕರನ್ನು ವಿವಿಧ ಕೈಗಾರಿಕಾ ಕಂಪನಿಗಳು ಕೆಲಸದಿಂದ ಕಿತ್ತು ಹಾಕಿದ್ದವು. ಅಂತಹ ಕಂಪನಿಗಳಿಗೆ ಮಣಿವಣ್ಣನ್ ಅವರು ನೋಟಿಸ್ ಕೊಟ್ಟಿದ್ದು ಕೈಗಾರಿಕಾ ಲಾಬಿಯ ಕಣ್ಣು ಕೆಂಪಾಗಿಸಿತ್ತು.
ವಲಸೆ ಕಾರ್ಮಿಕರು ಬಯಸಿದಂತೆ ತಮ್ಮೂರಿಗೆ ತೆರಳಲು ಅವಕಾಶ ಮಾಡಿಕೊಟ್ಟಿದ್ದು ಬಿಲ್ಡರ್ಸ್ ಲಾಬಿಯ ಕಣ್ಣು ಕೆಂಪಾಗಿಸಿತ್ತು. ಕಾರ್ಮಿಕರ ವಿಚಾರದಲ್ಲಿ ಕಂಪನಿಗಳಿಗೆ ನೊಟೀಸ್ ಕೊಟ್ಟಿದ್ದು ಕೈಗಾರಿಕಾ ಲಾಬಿಯನ್ನು ಕಂಗೆಡಿಸಿತ್ತು. ಎರಡೂ ಲಾಬಿಗಳು ಸೇರಿ ಮಣಿವಣ್ಣನ್ ಅವರ ವರ್ಗಾವಣೆ ಮಾಡುವಲ್ಲಿ ಸಫಲವಾಗಿವೆ.
ಗಂಭೀರವಾಗಿ ಪರಿಗಣಿಸಿದ್ದೇವೆ ಎಂದಿದ್ದ ಶೆಟ್ಟರ್
ಕಾರ್ಮಿಕರಿಗೆ ವೇತನ ನೀಡದ ಕೈಗಾರಿಕಾ ಮಾಲೀಕರಿಗೆ ಕಾರ್ಮಿಕ ಇಲಾಖೆ ಪ್ರಧಾನ ಕಾರ್ಯದರ್ಶಿ ಪಿ. ಮಣಿವಣ್ಣನ್ ಅವರು ನೋಟಿಸ್ ನೀಡಿರುವ ಕುರಿತು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಅವರು ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು.
ಕಾರ್ಮಿಕರಿಗೆ ವೇತನ ನೀಡದ ಕೈಗಾರಿಕಾ ಮಾಲೀಕರಿಗೆ ನೋಟಿಸ್ ನೀಡಿರುವ ಕುರಿತು ಟ್ವೀಟ್ ಮಾಡಿರುವ ಕಾರ್ಮಿಕ ಇಲಾಖೆ ಪ್ರಧಾನ ಕಾರ್ಯದರ್ಶಿ ಅವರ ನಡೆಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಗಂಭೀರವಾಗಿ ಪರಿಗಣಿಸಿದ್ದು, ಅವರ ಟ್ವೀಟ್ ಡಿಲೀಟ್ ಮಾಡಿಸಲಾಗಿದೆ. ಕಾರ್ಖಾನೆ ಮಾಲೀಕರಿಗೆ ನೋಟಿಸ್ ನೀಡುವ ಪ್ರಕ್ರಿಯೆ ಸರಿಯಲ್ಲ. ಮಣಿವಣ್ಣನ್ ಅವರು ಆಕ್ಟಿವಿಸಂ ಪ್ರದರ್ಶನ ಮಾಡಲು ಇದು ಸಕಾಲವಲ್ಲ. ಉದ್ದಿಮೆದಾರರು-ಕಾರ್ಮಿಕರು ಪರಸ್ಪರ ಕೈಜೋಡಿ ಕೆಲಸವಾಗುವ ಸಂಕಷ್ಟ ಸಮಯ ಇದಾಗಿದೆ ಎಂದರು.
ಸವಾಲುಗಳಿಗೆ ಸಿದ್ಧ ಎಂದ ಮಣಿವಣ್ಣನ್!
ನಿನ್ನೆ ರಾತ್ರಿ 9 ಗಂಟೆಗೆ, ನಾನು ಎರಡೂ ಇಲಾಖೆಗಳ (ಲೇಬರ್ ಮತ್ತು ಡಿಐಪಿಆರ್) ಉಸ್ತುವಾರಿಯನ್ನು ಹಸ್ತಾಂತರಿಸಿದ್ದೇನೆ. ನಿಮ್ಮೆಲ್ಲರ ಮಾರ್ಗದರ್ಶನ ಮತ್ತು ಬೆಂಬಲಕ್ಕಾಗಿ ಧನ್ಯವಾದಗಳು. ಹಾಲಿ ಪ್ರಧಾನ ಕಾರ್ಯದರ್ಶಿ ಅವರಿಗೂ ಬೆಂಬಲವನ್ನು ಕೊಡಿ. ನಾನು ಹೊಸ ಸವಾಲುಗಳನ್ನು ಎದುರು ನೋಡುತ್ತಿದ್ದೇನೆ. ಟೆಲಿಗ್ರಾಮ್ ಮೆಸೆಂಜರ್ ಮೂಲಕ ನನ್ನನ್ನು ಸಂಪರ್ಕಿಸಬಹುದು ಎಂದು ಟ್ವೀಟ್ ಮಾಡಿದ್ದಾರೆ.
ಕಲಬುರಗಿ ಡಿಸಿ ವರ್ಗಾವಣೆ
ಕೊರೊನಾ ತಡೆಗಟ್ಟುವಲ್ಲಿ ಪ್ರಮುಖಪಾತ್ರ ವಹಿಸಿ ಕೆಲಸ ಮಾಡುತ್ತಿದ್ದ ಕಲಬುರಗಿ ಜಿಲ್ಲಾಧಿಕಾರಿ ಬಿ. ಶರತ್ ಅವರನ್ನು ದಿಢೀರ್ ವರ್ಗಾವಣೆ ಮಾಡಿ ಸರ್ಕಾರ ಮುಜುಗುರಕ್ಕೆ ಈಡಾಗಿತ್ತು. ಸಾರ್ವಜನಿಕ ವಿರೋಧದ ಬಳಿಕ ಮತ್ತೆ ವರ್ಗಾವಣೆ ರದ್ದು ಮಾಡಲಾಗಿತ್ತು ಅದು ಸರ್ಕಾರಕ್ಕೆ ಮುಜುಗರವನ್ನು ತಂದಿತ್ತು. ಇದೀಗ ಪ್ರಾಮಾಣಿಕ ಅಧಿಕಾರಿ ಮಣಿವಣ್ಣನ್ ಅವರ ವರ್ಗಾವಣೆಗೂ ಸಾರ್ವಜನಿಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.