ವಿದ್ಯುತ್ ಉತ್ಪಾದನೆಗೆ ಕಲ್ಲಿದ್ದಲು ಕೊರತೆ ಹಿಂದಿದೆಯಾ ಇಲಾಖೆ ಖಾಸಗೀಕರಣದ ಹುನ್ನಾರ?
ದೇಶದಲ್ಲಿ ಕೃತಕ ಕಲ್ಲಿದ್ದಲು ಅಭಾವ ಸೃಷ್ಟಿಸಿರುವ ಆರೋಪ ಎದುರಾಗಿದೆ. ಹೀಗೆ ಕೃತಕ ಅಭಾವ ಸೃಷ್ಟಿಸಿರುವುದರ ಹಿಂದೆ ದೊಡ್ಡ ಷಡ್ಯಂತ್ರವಿದೆ ಎಂಬ ಮಾತುಗಳು ಕೇಳಿ ಬಂದಿವೆ. ಅಷ್ಟಕ್ಕೂ ಕಲ್ಲಿದ್ದಲು ಅಭಾವ ನಿಜವಾಗಿಯೂ ಇದೆಯಾ? ಅಥವಾ ಅದನ್ನು ಸೃಷ್ಟಿಸಲಾಗಿದೆಯಾ? ಎಂಬ ಚರ್ಚೆಗಳು ನಡೆಯುತ್ತಿವೆ. ಕಲ್ಲಿದ್ದಿಲಿನ ಅಭಾವದಿಂದ ರಾಯಚೂರು ಉಷ್ಣ ವಿದ್ಯುತ್ ಸ್ಥಾವರನ್ನು (ಆರ್ಟಿಪಿಎಸ್) ಬಂದ್ ಮಾಡಲಾಗಿತ್ತು. ಇದೀಗ ಮತ್ತೆ ಕೇಂದ್ರದಿಂದ ಕಲ್ಲಿದ್ದಲು ಬರುತ್ತಿರುವುದರಿಂದ ಆರಂಭಿಸಲಾಗುತ್ತಿದೆ ಎಂದು ಇಂಧನ ಸಚಿವ ವಿ. ಸುನಿಲ್ ಕುಮಾರ್ ಮಾಹಿತಿ ಕೊಟ್ಟಿದ್ದಾರೆ. ಅಷ್ಟಕ್ಕೂ ಕಲ್ಲಿದ್ದಲು ಕುರಿತು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಚಿವರು ಹೇಳುತ್ತಿರುವುದು ಏನು? ಅದಕ್ಕೆ ವಿರೋಧ ಪಕ್ಷಗಳ ಅಭಿಪ್ರಾಯ ಏನು? ಮುಂದಿದೆ ಸಂಪೂರ್ಣ ಮಾಹಿತಿ.
ಕಲ್ಲಿದ್ದಲು ಅಭಾವದ ಕುರಿತು ವಿರೋಧ ಪಕ್ಷಗಳು ಸಂಶಯ ವ್ಯಕ್ತಪಡಿಸಿವೆ. ಅದಕ್ಕೆ ಕಾರಣವನ್ನೂ ಕೊಟ್ಟಿವೆ. ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕಲ್ಲಿದ್ದಲು ಇದೆ, ಆದರೆ ಕೃತಕ ಅಭಾವ ಸೃಷ್ಟಿಸಲಾಗಿದೆ ಎಂದು ಆರೋಪಿಸಿದ್ದಾರೆ. ಅದಕ್ಕೆ ಕಾರಣವನ್ನೂ ಕೊಟ್ಟಿದ್ದಾರೆ.
ಕಲ್ಲಿದ್ದಲು ಕೊರತೆ ಕೃತಕವೋ? ಅಥವಾ ಸ್ವಾಭಾವಿಕವೋ?
ಕಲ್ಲಿದ್ದಲು ಕೊರತೆ ಕೃತಕವೋ? ಅಥವಾ ಸ್ವಾಭಾವಿಕವೋ? ಎಂಬ ಬಗ್ಗೆ ಮೊದಲು ಗೊತ್ತಾಗಬೇಕು, ಕರ್ನಾಟಕದಲ್ಲಿ ಈ ವರೆಗೆ ವಿದ್ಯುತ್ ಅಭಾವ ಇರಲಿಲ್ಲ, ಯಾವಾಗಲೂ ವಿದ್ಯುತ್ ಉತ್ಪಾದನೆ ಅಗತ್ಯ ಪ್ರಮಾಣಕ್ಕಿಂತ ಹೆಚ್ಚಿತ್ತು. ನಮ್ಮಲ್ಲಿ ಉಷ್ಣ ವಿದ್ಯುತ್ ಸ್ಥಾವರಗಳು ಸ್ಥಗಿತವಾಗಿರುವುದರಿಂದ ನಮ್ಮ ರಾಜ್ಯಕ್ಕೆ ಕಲ್ಲಿದ್ದಲಿನ ಅಗತ್ಯ ಹೆಚ್ಚಿಲ್ಲ. ಸರ್ಕಾರ ವಿದ್ಯುತ್ ಉತ್ಪಾದಕಾ ಘಟಕಗಳನ್ನು ಖಾಸಗಿಯವರಿಗೆ ನೀಡುವ ಉದ್ದೇಶದಿಂದ ಕೃತಕ ಅಭಾವ ಸೃಷ್ಟಿ ಮಾಡಬಾರದು. ಹಾಗೇನಾದರೂ ಸರ್ಕಾರ ಮಾಡಿದರೆ ನಾನು ಅದನ್ನು ಖಂಡಿಸುತ್ತೇನೆ ಎಂದು ಹೇಳಿದ್ದಾರೆ. ಜೊತೆಗೆ ಕೃತಕ ಅಭಾವ ಸೃಷ್ಟಿಸಿರುವುದರ ಹಿಂದಿನ ಕಾರಣವನ್ನೂ ಸಿದ್ದರಾಮಯ್ಯ ವಿವರಿಸಿದ್ದಾರೆ.
ಕೊರತೆ ಹಿಂದೆ ಖಾಸಗೀಕರಣದ ಹುನ್ನಾರ?
ರಾಜ್ಯದಲ್ಲಿ ಅಗತ್ಯಗಿಂತ ಹೆಚ್ಚು ವಿದ್ಯುತ್ ಉತ್ಪಾದನೆಯಾಗುತ್ತಿದೆ. ಜೊತೆಗೆ ರಾಜ್ಯದಲ್ಲಿ ಕಲ್ಲಿದ್ದಲಿನ ಕೊರತೆಯೂ ಇಲ್ಲ. ಕಲ್ಲಿದ್ದಲು ಕೃತಕ ಅಭಾವ ಸೃಷ್ಟಿಸಲು ಪ್ರಯತ್ನ ನಡೆಸಿರಬಹುದು ಎಂದು ಸಂಶಯಿಸಿದ್ದಾರೆ. ಅದಕ್ಕೆ ಕಾರಣ ಖಾಸಗೀಕರಣ ಎಂಬ ಕಾರಣವನ್ನು ಸಿದ್ದರಾಮಯ್ಯ ಕೊಟ್ಟಿದ್ದಾರೆ. ಕಲ್ಲಿದ್ದಲು ಕೊರತೆ ಎಂಬುದನ್ನು ಸರ್ಕಾರ ಹೇಳುತ್ತಿರಬಹುದು. ವಿದ್ಯುತ್ ಇಲಾಖೆಯನ್ನು ಖಾಸಗೀಕರಣ ಮಾಡಲು ಹೊರಟಿದ್ದಾರೆ. ಹೀಗಾಗಿಯೇ ಕೃತಕ ಅಭಾವ ಸೃಷ್ಠಿಸುವ ಪ್ರಯತ್ನ ಮಾಡಿರಲೂ ಬಹುದು. ವಿದ್ಯುತ್ ಇಲಾಖೆಯನ್ನು ಖಾಸಗೀಕರಣ ಮಾಡುವುದಕ್ಕೆ ನಮ್ಮ ವಿರೋಧವಿದೆ. ಈಗ ರೈತರ ಪಂಪ್ ಸೆಟ್ಗಳಿಗೆ ರಿಯಾಯಿತಿಯಲ್ಲಿ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ. ಇಲಾಖೆಯನ್ನು ಖಾಸಗೀಕರಣ ಮಾಡಿದಲ್ಲಿ ಆ ಸಬ್ಸಿಡಿ ಹೋಗಲಿದೆ ಎಂದು ಗಂಭೀರ ಆರೋಪವನ್ನು ಸಿದ್ದರಾಮಯ್ಯ ಸರ್ಕಾರದ ಮೇಲೆ ಮಾಡಿದ್ದಾರೆ.
ಕಲ್ಲಿದ್ದಲು ಕೊರತೆ ವಿಚಾರ ಕೇಳಿ ಆತಂಕ!
ಕಲ್ಲಿದ್ದಲು ಕೊರತೆಯ ಬಗ್ಗೆ ರಾಜ್ಯ ಇಂಧನ ಸಚಿವ ವಿ. ಸುನಿಲ್ ಕುಮಾರ್ ಬೆಂಗಳೂರಿನಲ್ಲಿ ಸ್ಪಷ್ಟನೆ ಕೊಟ್ಟಿದ್ದಾರೆ. ಇಡೀ ದೇಶದಲ್ಲಿ ಕಲ್ಲಿದ್ದಲಿನ ಉತ್ಪಾದನೆಯಲ್ಲಿ ಕೊರತೆ ಆಗಿರೋದು ಗಮನಕ್ಕೆ ಬಂದಿದೆ. ರಾಜ್ಯಕ್ಕೆ ಬರಬೇಕಾದ ಕಲ್ಲಿದ್ದಲು ಬರುವುದು ತಡವಾದ ಹಿನ್ನಲೆಯಲ್ಲಿ, ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಕೇಂದ್ರ ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಷಿ ಅವರನ್ನು ಭೇಟಿ ಮಾಡಿದ್ದೇವೆ. ಕೂಡಲೇ ಕ್ರಮ ತೆಗೆದುಕೊಳ್ಳುವಂತೆ ಅವರಿಗೆ ಮನವಿ ಮಾಡಿದ್ದೇವೆ. ಕಲ್ಲಿದ್ದಲು ಕೊರತೆ ವಿಚಾರ ಕೇಳಿ ಆತಂಕದಿಂದ ದೆಹಲಿಗೆ ದೌಡಾಯಿಸಿದ್ದೆವು. ಆದರೆ ಕೇಂದ್ರ ಸಚಿವರ ಸಕಾಲಿಕ ಕ್ರಮಗಳಿಂದ ಕಲ್ಲಿದ್ದಲು ಕೊರತೆ ಆತಂಕ ದೂರವಾಗಿದೆ ಎಂದು ಇಂಧನ ಸಚಿವ ಸುನಿಲ್ ಕುಮಾರ್ ತಿಳಿಸಿದ್ದಾರೆ.
ವಿದ್ಯುತ್ ಕೊರತೆ ಆಗುವುದಿಲ್ಲ!
ಕಲ್ಲಿದ್ದಲು ಕೊರತೆ ಆಗಬಹುದು ಎಂಬ ಆತಂಕ ದಿಂದ ರಾಯಚೂರಿನ ಆರ್ಟಿಪಿಎಸ್ನಲ್ಲಿ ವಿದ್ಯುತ್ ಉತ್ಪಾದನೆಯನ್ನು ತಾತ್ಕಾಲಿಕವಾಗಿ ಸ್ಥಗಿತ ಮಾಡಿದ್ದೆವು. ಆದರೆ ತಕ್ಷಣಕ್ಕೆ ಎರಡು ರೇಖುಗಳನ್ನು ಕಳಿಸಿಕೊಡಲು ಕೇಂದ್ರಕ್ಕೆ ಮನವಿ ಮಾಡಿದ್ದೇವು. ಅದರಂತೆ ಈಗಾಗಲೇ ಎರಡು ರೇಖು ಕಲ್ಲಿದ್ದಲು ರಾಜ್ಯಕ್ಕೆ ಬರುತ್ತಿದೆ. ಅದು ನಾಳೆ ಸಂಜೆ ಅಥವಾ ನಾಡಿದ್ದು ಬೆಳಗಿನ ವೇಳೆಗೆ ರಾಜ್ಯವನ್ನು ತಲುಪುವ ನಿರೀಕ್ಷೆ ಇದೆ. ಹೀಗಾಗಿ ಈಗ ಮತ್ತೆ ಆರ್ಟಿಪಿಎಸ್ನಲ್ಲಿ ವಿದ್ಯುತ್ ಉತ್ಪಾದನೆ ಆರಂಭ ಮಾಡಿದ್ದೇವೆ. ಯಾವುದೇ ರೀತಿಯ ವಿದ್ಯುತ್ ಸ್ಥಗಿತ ಆಗುವ ಆತಂಕ ಸದ್ಯಕ್ಕೆ ಇಲ್ಲ. ನವೆಂಬರ್ ಹೊತ್ತಿಗೆ ಇನ್ನೂ ಎರಡು ಕಲ್ಲಿದ್ದಲು ರೇಖುಗಳು ಸಿಗಲಿವೆ ಎಂದು ಇಂಧನ ಸಚಿವ ಸುನಿಲ್ ಕುಮಾರ್ ಭರವಸೆ ಕೊಟ್ಟಿದ್ದಾರೆ.