ದಲಿತರ ಅಭಿವೃದ್ಧಿ: ಪರಸ್ಪರ ಕಾಲೆಳೆದುಕೊಂಡ ಬಿಜೆಪಿ-ಕಾಂಗ್ರೆಸ್
ಬೆಂಗಳೂರು, ಮೇ 20: ಆಗಾಗ್ಗೆ 'ದಲಿತ ಸಿಎಂ' ಕೂಗು ರಾಜ್ಯ ರಾಜಕಾರಣದಲ್ಲಿ ಕೇಳಿ ಬರುತ್ತಿದೆ. ಕಾಂಗ್ರೆಸ್, ಬಿಜೆಪಿ ಪಕ್ಷದಲ್ಲಿ ದಲಿತ ನಾಯಕರೊಬ್ಬರನ್ನು ಸಿಎಂ ಮಾಡುವ ಕೂಗುವ ಮೊದಲಿನಿಂದ ಕೇಳಿ ಬಂದರೂ, ಇಲ್ಲಿಯವರೆಗೂ ಅದು ಸಾಧ್ಯವಾಗಿಲ್ಲ. ದಲಿತರ ಅಭಿವೃದ್ಧಿ ಮಾಡ್ತೇವೆ ಅಂತ ಎರಡೂ ಪಕ್ಷಗಳು ಹೇಳುತ್ತಲೇ ಬಂದಿವೆ.
ಈಗ ಸಿದ್ಧರಾಮಯ್ಯ ದಲಿತರ ಬಗ್ಗೆ ನೀಡಿದ್ದ ಹೇಳಿಕೆಯನ್ನು ಉಲ್ಲೇಖಿಸಿ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು 'ದಲಿತ ವಿರೋಧಿ' ಎಂದು ಟೀಕಿಸಿದೆ.
ಸಿದ್ದರಾಮಯ್ಯನವರೇ, ನೀವು ಯಾರ ಹೆಗಲ ಮೇಲೆ ಬಂದೂಕಿಟ್ಟು, ಯಾರತ್ತ ಗುಂಡು ಹಾರಿಸುತ್ತಿದ್ದೀರಿ?
— BJP Karnataka (@BJP4Karnataka) May 19, 2022
ದಲಿತರ ಸಾಲಮನ್ನಾ ನೆವದಲ್ಲಿ ಮತ್ತೆ ಸಿಎಂ ಆಗುವ ಆಸೆ ವ್ಯಕ್ತಪಡಿಸಿದ್ದೀರಿ.
ಇದರರ್ಥ @DKShivakumar ಅವರನ್ನು ಕಪಾಲಿ ಬೆಟ್ಟಕ್ಕೆ ಪ್ರಾರ್ಥನೆಗೆ ಕಳುಹಿಸುವುದೇ?#SiddaramaiahAgainstDalits
ಸಿದ್ದರಾಮಯ್ಯ ಹೇಳಿದ್ದೇನು?: "ನನ್ನ ಅಧಿಕಾರಾವಧಿಯಲ್ಲಿ ದಲಿತರ ಶ್ರೇಯೋಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದ್ದೇನೆ. ಈಗ ಮತ್ತೆ ಮುಖ್ಯಮಂತ್ರಿಯಾಗುವ ಅವಕಾಶ ಸಿಕ್ಕಿದರೆ ದಲಿತರ ಸಾಲ ಮನ್ನಾ ಮಾಡುತ್ತೇನೆ" ಎಂದು ಬೆಂಗಳೂರಿನಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಸಿದ್ದರಾಮಯ್ಯ ಹೇಳಿಕೆ ನೀಡಿದ್ದರು. ಸಿದ್ದರಾಮಯ್ಯ ಹೇಳಿಕೆಗೆ ಬಿಜೆಪಿ ನೀಡಿದ ಪ್ರತಿಕ್ರಿಯೆಯೇನು? ಮುಂದೆ ಓದಿ...
ಸಿದ್ದರಾಮಯ್ಯ ಹೇಳಿಕೆಗೆ ಬಿಜೆಪಿ ಪ್ರತಿಕ್ರಿಯೆ
ಸಿದ್ದರಾಮಯ್ಯ ಹೇಳಿಕೆ ಉಲ್ಲೇಖಿಸಿ ಟ್ವೀಟ್ ಮಾಡಿರುವ ಬಿಜೆಪಿ ಸಿದ್ದರಾಮಯ್ಯ ದಲಿತ ವಿರೋಧಿ ಎಂದು ಹೇಳಿದೆ, "ಆದರೆ, ಹೋದರೆ, ಅರೆರೆ..! ಅಧಿಕಾರದಲ್ಲಿದ್ದಾಗ ದಲಿತ ನಾಯಕರನ್ನು ಮುಗಿಸಿದ ಸಿದ್ದರಾಮಯ್ಯ ಅವರಿಗೆ ಈಗ ಇದೆಂತ ದಲಿತ ಪ್ರೀತಿ!?" ಎಂದು ಪ್ರಶ್ನೆ ಮಾಡಿದೆ.
"ಸಿದ್ದರಾಮಯ್ಯ ಅವರಂತಹ ದಲಿತ ವಿರೋಧಿ ನಾಯಕ ಇನ್ನೊಬ್ಬರಿಲ್ಲ. ಪ್ರತಿಪಕ್ಷ ನಾಯಕ ಸ್ಥಾನಕ್ಕಾಗಿ ಮಲ್ಲಿಕಾರ್ಜುನ ಖರ್ಗೆ, ಸಿಎಂ ಸ್ಥಾನಕ್ಕಾಗಿ ಡಾ.ಜಿ. ಪರಮೇಶ್ವರ್ ಅವರ ನಾಯಕತ್ವವನ್ನೇ ಮುಗಿಸಿದ ಸಿದ್ದರಾಮಯ್ಯ ದಲಿತರ ಸಾಲ ಮನ್ನಾದ ಬಗ್ಗೆ ಮಾತನಾಡುವುದು ಬೂಟಾಟಿಕೆಯಲ್ಲವೇ?" ಎಂದು ಪ್ರಶ್ನೆ ಮಾಡಿದೆ.
ಸಾಲಮನ್ನಾ ಹೆಸರಿನಲ್ಲಿ ಸಿಎಂ ಆಗುವ ಆಸೆಯೇ?
ದಲಿತರ ಸಾಲಮನ್ನಾ ಮಾಡುತ್ತೇನೆ ಎನ್ನುವ ನೆಪದಲ್ಲಿ ಮತ್ತೆ ಸಿಎಂ ಆಗುವ ಆಸೆ ವ್ಯಕ್ತಪಡಿಸಿದ್ದೀರಾ. ಯಾರ ಹೆಗಲ ಮೇಲೆ ಬಂದೂಕಿಟ್ಟು, ಯಾರತ್ತ ಗುಂಡು ಹಾರಿಸುತ್ತಿದ್ದೀರ ಎಂದಿರುವ ಬಿಜೆಪಿ ಸಿದ್ದರಾಮಯ್ಯ ಮಾತಿನ ಅರ್ಥ ಡಿ.ಕೆ.ಶಿವಕುಮಾರ್ ಅವರನ್ನು ಕಪಾಲಿ ಬೆಟ್ಟಕ್ಕೆ ಪ್ರಾರ್ಥನೆಗೆ ಕಳಿಸುವುದೇ? ಎಂದು ವ್ಯಂಗ್ಯವಾಡಿದೆ.
"ರಾಜ್ಯದಲ್ಲಿ ದಲಿತ ಸಿಎಂ ಕೂಗು ಎದ್ದಾಗೆಲಲ್ಲ ಅದನ್ನು ಸಿದ್ದರಾಮಯ್ಯ ಮೀರ್ ಸಾದಿಕ್ ತನದಿಂದ ಸದ್ದಡಗಿಸುತ್ತಿದ್ದರು" ಎಂದು ಬಿಜೆಪಿ ಆರೋಪಿಸಿದೆ. ನನಗಿಂತ ದೊಡ್ಡ ದಲಿತ ಯಾರಿದ್ದಾರೆ ಎಂದು ಹೇಳಿಕೆ ನೀಡುವ ಮೂಲಕ "ದಲಿತರನ್ನೆಂದಿಗೂ ಮುಖ್ಯಮಂತ್ರಿಯಾಗಲು ಬಿಡಲಾರೆ" ಎನ್ನುವ ಸಂದೇಶ ರವಾನಿಸಿದ್ದು ಸುಳ್ಳೇ ಎಂದು ಸವಾಲಾಕಿದೆ.
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ದಲಿತರ ಮೇಲಿನ ದೌರ್ಜನ್ಯದ ವಿವರವನ್ನೂ ಬಿಜೆಪಿ ನೀಡಿದೆ. 258 ದಲಿತರ ಹತ್ಯೆಯಾಗಿದೆ, 801 ದಲಿತ ಮಹಿಳೆಯರ ಮೇಲೆ ಅತ್ಯಾಚಾರ ನಡೆದಿದೆ, 9081 ದಲಿತ ದೌರ್ಜನ್ಯ ಪ್ರಕರಣ ದಾಖಲಾಗಿವೆ ಎಂದು ಆರೋಪ ಮಾಡಿರುವ ಬಿಜೆಪಿ ಸಿದ್ದರಾಮಯ್ಯ ಮತ್ತೆ ಸಿಎಂ ಆದರೆ ದಲಿತರ ಪಾಡೇನು ಎಂದು ಪ್ರಶ್ನೆ ಮಾಡಿದೆ.
|
ಬಿಜೆಪಿ ಟ್ವೀಟ್ಗೆ ಕಾಂಗ್ರೆಸ್ ಉತ್ತರ
ಇನ್ನು ಬಿಜೆಪಿ ಟ್ವೀಟ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್, ಬಿಜೆಪಿ ಪಕ್ಷದ ಆಡಳಿತ ಅವಧಿಯಲ್ಲಿ ದಲಿತರ ಮೇಲಾದ ದೌರ್ಜನ್ಯದ ಮಾಹಿತಿ ಹಂಚಿಕೊಂಡಿದೆ.
ದಲಿತರ ಮೇಲಿನ ದೌರ್ಜನ್ಯದ ಕುರಿತು ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್ "ಏಪ್ರಿಲ್ 1, 2020 ರಿಂದ ಮಾರ್ಚ್ 31, 2021 ರವರೆಗೆ ಬಿಜೆಪಿ ಆಡಳಿತದ 1 ವರ್ಷದ ಅವಧಿಯಲ್ಲಿ ದಲಿತರ ಮೇಲೆ 2327 ಪ್ರಕರಣ ದಾಖಲಾಗಿವೆ. ಇದರಲ್ಲಿ 2775 ಜನ ಅರೆಸ್ಟ್ ಆಗಿ 2945 ಚಾರ್ಜ್ ಶೀಟ್ ದಾಖಲಾಗಿದ್ದರೂ ಶಿಕ್ಷೆ ದೊರೆತಿದ್ದು ಕೇವಲ 50 ಮಂದಿಗೆ. ದಲಿತರಿಗೆ ನ್ಯಾಯ ಒದಗಿಸಲಾಗದವರು ದಲಿತಪರ ಎನ್ನುವುದು ಹಾಸ್ಯಾಸ್ಪದವೇ ಸರಿ" ಎಂದು ಹೇಳಿದೆ.
ಶ್ರೀರಾಮುಲುಗೆ ಮೋಸ ಮಾಡಿದ ಬಿಜೆಪಿ ಎಂದ ಕಾಂಗ್ರೆಸ್
ಪರಿಶಿಷ್ಟ ಪಂಗಡದ ಶ್ರೀರಾಮುಲು ಅವರನ್ನು ಉಪಮುಖ್ಯಮಂತ್ರಿ ಮಾಡ್ತೇವೆ ಎಂದು ಹೇಳಿ ಪರಿಶಿಷ್ಟ ಪಂಗಡದ ವೋಟು ಗಿಟ್ಟಿಸಿಕೊಂಡು ಶ್ರೀರಾಮುಲು ಬಳಿ ಇದ್ದ ಆರೋಗ್ಯ ಇಲಾಖೆಯನ್ನು ಕಿತ್ತುಕೊಂಡ ಕೈ ಎತ್ತಿದವರು ನೀವು ಎಂದು ಬಿಜೆಪಿಗೆ ತಿರುಗೇಟು ನೀಡಿರುವ ಕಾಂಗ್ರೆಸ್ "ಸಂಚುಗಾರ ಸಂಘ ಪರಿವಾರ ಮೋಸಗಾರ ಬಿಜೆಪಿ" ಎಂದು ಹ್ಯಾಶ್ಟ್ಯಾಗ್ ಬಳಸಿ ಟ್ವೀಟ್ ಮಾಡಿದೆ.
ಕೇಂದ್ರ ಸಚಿವ ನಾರಾಯಣಸ್ವಾಮಿ ಹೇಳಿಕೆ ಉಲ್ಲೇಖ
ಬಿಜೆಪಿ ಕೇಂದ್ರ ಸಚಿವ ನಾರಾಯಣಸ್ವಾಮಿ ಹೇಳಿಕೆ ಉಲ್ಲೇಖಿಸಿರುವ ಕಾಂಗ್ರೆಸ್, ನಿಮ್ಮ ಪಕ್ಷದ ಕೇಂದ್ರ ಸಚಿವರು ಮೊನ್ನೆ ತಾನೆ ದಲಿತ ಸಿಎಂ ವಿಚಾರ ಹುಚ್ಚುತನದ ಹೇಳಿಕೆ ಎಂದಿದ್ದಾರೆ. ಬಿಜೆಪಿಯಲ್ಲಿರುವ ಮೀರ್ಸಾದಿಕ್ಗಳು ದಲಿತ ಸಿಎಂ ಮಾಡಲು ಬಿಡುವುದಿಲ್ಲ ಎಂದು ನಿಮ್ಮ ಕೇಂದ್ರ ಸಚಿವರಿಗೆ ಮನವರಿಕೆ ಆದಂತಿದೆ ಎಂದಿದೆ. ನಿಮ್ಮ ಪಕ್ಷದಲ್ಲಿರುವ ದಲಿತ ನಾಯಕರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಿ ಮೊದಲು ಎಂದು ಸಲಹೆ ನೀಡಿದೆ.
Recommended Video