ಬಿ ವೈ ವಿಜಯೇಂದ್ರ ರಾಜಕೀಯ ಮುಖ್ಯವಾಹಿನಿಗೆ ತರಲು ಸಿದ್ಧವಾಗಿದೆ ವೇದಿಕೆ!
ಬೆಂಗಳೂರು, ಫೆ. 07: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ಬಿ.ವೈ. ವಿಜಯೇಂದ್ರ ಅವರನ್ನು ರಾಜಕೀಯ ಮುಖ್ಯವಾಹಿನಿಗೆ ತರಬೇಕು ಎಂಬುದು ಅಂತಿಮ ಹಂತಕ್ಕೆ ಬಂದಿದೆಯಾ? ಹೌದು ಎನ್ನುತ್ತಿವೆ ಇತ್ತಿಚಿನ ಬೆಳವಣಿಗೆಗಳು. ಕಳೆದ ವಿಧಾನಸಭೆ ಚುನಾವಣೆಯಿಂದ ಸಧ್ಯ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುವವರೆಗೆ ವಿಜಯೇಂದ್ರ ಅವರ ನಡೆ, ಮಾಡಿದ ಕೆಲಸಗಳನ್ನು ನೋಡಿದರೆ ಬಹುತೇಕ ಬಿಜೆಪಿ ಹೈಕಮಾಂಡ್ ಕೂಡ ವಿಜಯೇಂದ್ರ ಅವರ ರಾಜಕೀಯ ಬೆಳವಣಿಗೆಗೆ ಅಡ್ಡಿಯಾಗಿಲ್ಲ ಎಂಬುದು ಸ್ಪಷ್ಟವಾಗಿದೆ.
ಇದೀಗ ಸಂಪುಟ ವಿಸ್ತರಣೆ ಬಳಿಕ ರಾಜಕೀಯದಿಂದ ಧಾರ್ಮಿಕ ವಲಯದಲ್ಲಿ ಮನ್ನಣೆ ಗಳಿಸಲು ವಿಜಯೇಂದ್ರ ಅವರು ಗಮನ ಕೊಟ್ಟಿರುವುದು ಕಂಡು ಬರುತ್ತಿದೆ. ಇದಕ್ಕೆ ಇಂಬು ಕೊಡುವಂತೆ ಸಿಎಂ ಯಡಿಯೂರಪ್ಪ ಆಪ್ತ ವಲಯದಲ್ಲಿರುವ ಬಿಜೆಪಿ ನಾಯಕರ ಹೇಳಿಕೆಗಳು ಇವೆ. ಜೊತೆಗೆ ಇದೇ ತಿಂಗಳಲ್ಲಿ ನಡೆಯಲಿರುವ ಮಹತ್ವದ ಧಾರ್ಮಿಕ ಕಾರ್ಯಕ್ರಮವೊಂದರ ಜವಾಬ್ದಾರಿಯನ್ನೂ ಕೂಡ ವಿಜಯೇಂದ್ರ ತೆಗೆದುಕೊಂಡಿದ್ದಾರೆ ಎಂಬ ಮಾಹಿತಿಯಿದೆ.
ಈ ಎಲ್ಲವನ್ನೂ ನೋಡುತ್ತಿದ್ದರೆ, ಮುಂದಿನ ಮೂರು ವರ್ಷಗಳಲ್ಲಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಸಕ್ರೀಯ ರಾಜಕಾರಣದಿಂದ ದೂರು ಸರಿಯುತ್ತಾರೆ ಎಂಬ ಚರ್ಚೆಗಳು ನಡೆದಿರುವುದು ನಿಜ ಎನಿಸುತ್ತಿದೆ. ಹಾಗೊಮ್ಮೆ ಆದಲ್ಲಿ ವಿಜಯೇಂದ್ರ ಅವರನ್ನು ಯಡಿಯೂರಪ್ಪ ಅವರ ಸ್ಥಾನದಲ್ಲಿ ಪಟ್ಟಾಭಿಷೇಕ ಮಾಡಲು ಸಿದ್ಧತೆಗಳು ನಡೆದಿರುವುದು ಈಗ ಗೌಪ್ಯವಾಗಿ ಏನೂ ಉಳಿದಿಲ್ಲ.
ವಿಜಯೇಂದ್ರ ಬೆಳೆಯಬೇಕು ಎಂಬುದು ಮಠಗಳ ಬಯಕೆ
ರಾಜ್ಯ ಬಿಜೆಪಿ ಉವ ಮೊರ್ಚಾ ಪ್ರಧಾನ ಕಾರ್ಯದರ್ಶಿ ಬಿ.ವೈ. ವಿಜಯೇಂದ್ರ ಅವರು ನಮ್ಮ ಪಕ್ಷದಲ್ಲಿ ಬೆಳೆಯುತ್ತಿರುವ ಪ್ರತಿಭೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ, ಯಡಿಯೂರಪ್ಪ ಅವರ ಕಾರ್ಯದರ್ಶಿ, ಹೊನ್ನಾಳಿ ಶಾಸಕ ರೇಣುಕಾಚಾರ್ಯ ಹೇಳಿದ್ದಾರೆ. ಜೊತೆಗೆ ವಿಜಯೇಂದ್ರ ಅವರು ಬೆಳೆಯಬೇಕು ಎಂದು ಮಠಗಳು, ಜನರು ಬಯಸಿದ್ದಾರೆ ಎನ್ನುವ ಮೂಲಕ ರೇಣುಕಾಚಾರ್ಯ ಅವರು ಯಡಿಯೂರಪ್ಪ ಅವರ ಮುಂದಿನ ನಡೆಯನ್ನು ಸ್ಪಷ್ಟಪಡಿಸಿದ್ದಾರೆ ಎನ್ನಬಹುದು.
ಬಿ.ವೈ. ವಿಜಯೇಂದ್ರ ಅವರನ್ನು ಯಡಿಯೂರಪ್ಪ ಅವರ ಪುತ್ರ ಎಂದು ಕೆಲವು ನಾಯಕರು ಭೇಟಿ ಮಾಡಿಲ್ಲ, ಅವರು ನಮ್ಮ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಎಂದು ಭೇಟಿಯಾಗಿ ಮಾತನಾಡಿದ್ದಾರೆ, ಅದರಲ್ಲಿ ತಪ್ಪಿಲ್ಲ ಎಂದು ರೇಣುಕಾಚಾರ್ಯ ಹೇಳಿರುವುದರ ಹಿಂದೆ ವಿಜಯೇಂದ್ರ ಅವರ ರಾಜಕೀಯ ಭವಿಷ್ಯ ಗುರುತಿಸಬಹುದಾಗಿದೆ.
ಸರ್ವ ಶರಣರ ಸಮ್ಮೇಳನದ ಹೊಣೆ ಹೊತ್ತುಕೊಂಡ ವಿಜಯೇಂದ್ರ
ಇದೇ ಫೆಬ್ರುವರಿ 16ರಂದು ಶಿವಯೋಗ ಸಂಭ್ರಮ ಹಾಗೂ ಅಸಂಖ್ಯ ಪ್ರಮಥರ ಗಣಮೇಳ ಬೆಂಗಳೂರಿನಲ್ಲಿ ನಡೆಯಲಿದೆ. ಗಣಮೇಳ ಸಮ್ಮೇಳನದ ಸಂಪೂರ್ಣ ಉಸ್ತುವಾರಿಯನ್ನು ವಿಜಯೇಂದ್ರ ಅವರೆ ಪರೋಕ್ಷವಾಗಿ ವಹಿಸಿಕೊಂಡಿದ್ದಾರೆ ಎಂಬ ಮಾಹಿತಿಯಿದೆ. ಹೀಗಾಗಿ ಮುರುಘಾ ಶರಣರೊಂದಿಗೆ ಬೆಂಗಳೂರಿನಲ್ಲಿ ಜಂಟಿ ಸುದ್ದಿಗೋಷ್ಠಿಯನ್ನು ವಿಜಯೇಂದ್ರ ಅವರು ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಬಿಡುಗಡೆ ಮಾಡಿರುವ ಬಿ.ವೈ. ವಿಜಯೇಂದ್ರ ಅವರು, ಶ್ರೀ ಮುರುಘಾಮಠ, ಬಸವ ಸಂಘಟನೆಗಳು, ವಿವಿಧ ಧಾರ್ಮಿಕ ಕೇಂದ್ರಗಳು ಮತ್ತು ಸರ್ವಜನಾಂಗದ ಮಠಾಧೀಶರ ಶಿವಯೋಗ ಸಂಭ್ರಮ ಅಸಂಖ್ಯ ಪ್ರಮಥ ಗಣಮೇಳ ಹಾಗೂ ಸರ್ವಶರಣರ ಸಮ್ಮೇಳನವನ್ನು ಬೆಂಗಳೂರಿನ ನಂದಿ ಮೈದಾನದಲ್ಲಿ ಆಯೋಜನೆ ಮಾಡಲಾಗಿದೆ ಎಂದು ಹೇಳಿದ್ದಾರೆ. ಇದು ತಂದೆ ಯಡಿಯೂರಪ್ಪ ಅವರಂತೆ ಮಠಗಳ ವಿಶ್ವಾಸ ಗಳಿಸುವ ಪ್ರಯತ್ನವೆಂದೆ ಹೇಳಲಾಗುತ್ತಿದೆ.
ಅಮಿತ್ ಶಾ ಭೇಟಿ ಮಾಡಿದ್ದ ವಿಜಯೇಂದ್ರ
ಜೆಡಿಎಸ್ ಭದ್ರಕೋಟೆಯಾಗಿದ್ದ ಕೃಷ್ಣರಾಜಪೇಟೆ ಕ್ಷೇತ್ರದಲ್ಲಿ ನಾರಾಯಣಗೌಡರ ಗೆಲವು ಕಷ್ಟವೆಂದೆ ಹೇಳಲಾಗಿತ್ತು. ತಂದೆಯ ಹುಟ್ಟೂರು ಎಂಬುದನ್ನೇ ವಿಷಯ ಮಾಡಿಕೊಂಡು ಸ್ಥಳೀಯ ಮತದಾರರ ಒಲವು ಗಳಿಸಿದ ವಿಜಯೇಂದ್ರ ಅವರು, ಕೆ.ಆರ್. ಪೇಟೆಯಲ್ಲಿ ಕಮಲ ಅರಳಿಸುವಲ್ಲಿ ಸಫಲರಾದರು. ಬಿಜೆಪಿ ಹೈಕಮಾಂಡ್ ನಡೆಸಿದ್ದ ಚುನಾವಣಾ ಪೂರ್ವ ಸಮೀಕ್ಷೆಯಲ್ಲೂ ಕೂಡ ಕೆ.ಆರ್. ಪೇಟೆಯಲ್ಲಿ ಬಿಜೆಪಿ ಗೆಲ್ಲಲ್ಲ ಎಂಬ ವರದಿ ಬಂದಿತ್ತಂತೆ.
ಹೀಗಾಗಿ ಕೆಆರ್ ಪೇಟೆ ಗೆಲುವಿನಿಂದ ಸ್ವತಃ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಚರ್ಚಿಸಲು ವಿಜಯೇಂದ್ರ ಅವರಿಗೆ ಅವಕಾಶ ಸಿಕ್ಕಿತ್ತು. ಸಿಕ್ಕಿದ್ದ ಅವಕಾಶವನ್ನು ಸರಿಯಾಗಿಯೇ ಸದುಪಯೋಗ ಪಡಿಸಿಕೊಂಡಿದ್ದಾರೆ ಎಂಬ ಮಾಹಿತಿಯಿದೆ. ಜೊತೆಗೆ ಬಿಜೆಪಿ ನೂತನ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನೂ ಭೇಟಿಯಾಗಿ ಶುಭಹಾರೈಸಿದ್ದಾರೆ.
ಕುಟುಂಬ ರಾಜಕಾರಣಕ್ಕೆ ಒಪ್ಪುತ್ತಾ ಬಿಜೆಪಿ ಹೈಕಮಾಂಡ್?
ಬಿಜೆಪಿ ಮೊದಲಿನಿಂದಲೂ ಕುಟುಂಬ ರಾಜಕಾರಣವನ್ನು ವಿರೋಧಿಸಿಕೊಂಡು ಬಂದಿದೆ. ಹೀಗಾಗಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಸಿಎಂ ಸಿದ್ದರಾಮ್ಯ ವಿರುದ್ಧ ಪ್ರಬಲ ಅಭ್ಯರ್ಥಿ ಎಂದೆ ವಿಜಯೇಂದ್ರ ಅವರನ್ನು ಪರಿಗಣಿಸಲಾಗಿತ್ತು. ಕೇವಲ ಒಂದೆರಡು ತಿಂಗಳಲ್ಲಿ ವರುಣಾ ಕ್ಷೇತ್ರದಲ್ಲಿ ವಿಜಯೇಂದ್ರ ಮಾಡಿದ್ದ ಸಂಘಟನ ಗಮನ ಸೆಳೆದಿತ್ತು. ಆದರೂ ಬಿ.ವೈ. ವಿಜಯೇಂದ್ರ ಅವರಿಗೆ ವರುಣಾ ಕ್ಷೇತ್ರದ ಟಿಕೆಟ್ ನಿರಾಕರಣೆ ಮಾಡಲಾಗಿತ್ತು. ಕುಟುಂಬ ರಾಜಕಾರಣವನ್ನು ಬಿಜೆಪಿ ಬೆಂಬಲಿಸುವುದಿಲ್ಲ ಎಂಬುದನ್ನು ಸೂಚ್ಯವಾಗಿ ಬಿಜೆಪಿ ಹೈಕಮಾಂಡ್ ಯಡಿಯೂರಪ್ಪ ಅವರಿಗೆ ತಲುಪಿಸಿತ್ತು.
ಈಗ ಕಾಲ ಬದಲಾಗಿದೆ. ಬಿ.ವೈ. ವಿಜಯೇಂದ್ರ ಅವರು ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ಎಂಬುದನ್ನು ಬಿಟ್ಟು ಬೆಳೆಯುಯಿತ್ತಿದ್ದಾರೆ. ಹೈಕಮಾಂಡ್ ಕೂಡ ಒಂದು ಹಂತದಲ್ಲಿ ವಿಜಯೇಂದ್ರ ಅವರನ್ನು ಹತ್ತಿರಕ್ಕೆ ಬಿಟ್ಟುಕೊಂಡಿದೆ. ಆದರೆ ಬಿಜೆಪಿಯಲ್ಲಿರುವ ಸಿಎಂ ಯಡಿಯೂರಪ್ಪ ಅವರ ರಾಜಕೀಯ ವಿರೋಧಿಗಳು ಸುಮ್ಮನೆ ಇರುತ್ತಾರೆಯೇ ಎಂಬುದು ಈಗಿನ ಪ್ರಶ್ನೆ!