ಕೊರೊನಾ ವೈರಸ್: ರಾಜ್ಯದಲ್ಲಿ ಲಾಕ್ಡೌನ್ ಸಡಿಲಿಕೆ, ಇಲ್ಲಿದೆ ಸಂಪೂರ್ಣ ಮಾಹಿತಿ
ಬೆಂಗಳೂರು, ಏ. 22: ಕೊರೊನಾ ವೈರಸ್ ಸೋಂಕು ಹರಡುವ ಹಿನ್ನೆಲೆಯಲ್ಲಿ ದೇಶಾದ್ಯಂತ ಜಾರಿಯಲ್ಲಿದ್ದ ಲಾಕ್ಡೌನ್ ಸಡಿಲಗೊಳಿಸಿ ರಾಜ್ಯ ಸರ್ಕಾರ ಆದೇಶ ಮಾಡಿದೆ. ಇವತ್ತು ಮಧ್ಯರಾತ್ರಿಯಿಂದಲೇ ನೂತನ ಲಾಕ್ಡೌನ್ ಮಾರ್ಗಸೂಚಿಗಳು ಜಾರಿಯಲ್ಲಿ ಬರಲಿವೆ. ರೆಡ್ ಜೋನ್, ಕಂಟೇನ್ಮೆಂಟ್ ಜೋನ್ ಹಾಗೂ ಕೊರೊನಾ ವೈರಸ್ ಹಾಟ್ಸ್ಪಾಟ್ ಪ್ರದೇಶಗಳಲ್ಲಿ ಲಾಕ್ಡೌನ್ ಸಡಿಲಿಕೆ ಅನ್ವಯಿಸುವುದಿಲ್ಲ ಎಂದು ಸ್ಪಷ್ಟವಾಗಿ ಸೂಚಿಸಲಾಗಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆಯೆ ರಾಜ್ಯದಲ್ಲಿ ಲಾಕ್ಡೌನ್ ನಿಯಮಗಳು ಸಡಿಲವಾಗಲಿವೆ.
ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ರಾಜ್ಯ ಸರ್ಕಾರ ಹೊರಡಿಸಿರುವ ಹೊಸ ಮಾರ್ಗಸೂಚಿಯ ಪ್ರಕಾರ ರಾಜ್ಯದಲ್ಲಿ ಇವತ್ತು ಮಧ್ಯರಾತ್ರಿಯಿಂದ ಲಾಕ್ಡೌನ್ ಸಡಿಲಿಕೆಯಾಗಲಿದೆ. ಆದರೆ ಲಾಕ್ಡೌನ್ ಸಡಿಲಿಕೆ ಮಾಡುವ ಮುನ್ನ ಬಿಬಿಎಂಪಿ ಹಾಗೂ ಆಯಾ ಜಿಲ್ಲಾಡಳಿತಗಳು ಮುಂಜಾಗ್ರತ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರದ ಮುಖ್ಯಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ ಅವರು ಆದೇಶದಲ್ಲಿ ಸೂಚಿಸಿದ್ದಾರೆ.
ಇಂದು ಮಧ್ಯರಾತ್ರಿಯಿಂದಲೇ ಲಾಕ್ಡೌನ್ ಸಡಿಲಿಸಿ ಹೊಸ ಮಾರ್ಗಸೂಚಿ
ಇವುಗಳಿಗಿದೆ ಲಾಕ್ಡೌನ್ನಿಂದ ವಿನಾಯತಿ
ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಹೊಸ ಲಾಕ್ಡೌನ್ ನಿಯಮಗಳ ಪ್ರಕಾರ ಕೃಷಿ ಮತ್ತು ಮೀನುಗಾರಿಕೆ ವಲಯಕ್ಕೆ ಸಂಪೂರ್ಣ ಸಡಿಲಿಕೆ ಕೊಡಲಾಗಿದೆ. ರಸಗೊಬ್ಬರ, ಬಿತ್ತನೆ ಬೀಜ, ಔಷಧಿ ಪೂರೈಕೆಗೆ ನಿರ್ಬಂಧವಿರುವುದಿಲ್ಲ. ಗ್ರಾಮಾಂತರ ಪ್ರದೇಶದಲ್ಲಿ ಕಟ್ಟಡ ನಿರ್ಮಾಣಕ್ಕೆ ಅನುಮತಿ ಕೊಡಲಾಗಿದ್ದು, ರಸ್ತೆ ನಿರ್ಮಾಣಕ್ಕೆ ಅಗತ್ಯವಸ್ತುಗಳ ಸಾಗಣೆಗೆ ನಿರ್ಬಂಧವನ್ನು ತೆರವು ಮಾಡಲಾಗಿದೆ. ಕಟ್ಟಡ, ರಸ್ತೆ ನಿರ್ಮಾಣ ವಸ್ತುಗಳ ಸಾಗಣೆಗೆ ಅನುಮತಿಯನ್ನು ಕೊಡಲಾಗಿದೆ. ಡಿಟಿಹೆಚ್ ಆಪರೇಟರ್ಗಳು ಎಂದಿನಂತೆ ಕೆಲಸ ಮಾಡಬಹುದಾಗಿದೆ. ಸದ್ಯ ಇರುವಂತೆಯೇ ಈಗಿನಂತೆಯೇ ತುರ್ತುಸ್ಥಿತಿಯಲ್ಲಿ ಬೇರೆ ಜಿಲ್ಲೆಗಳಿಗೆ ಹೋಗಲು ಪಾಸ್ ಅಗತ್ಯವಾಗಿ ಬೇಕಾಗುತ್ತದೆ. ಆರೋಗ್ಯ ಸೇವೆಗಳು, ಇತರೆ ತುರ್ತು ಸೇವೆಗಳು ಯಥಾಸ್ಥಿತಿಯಲ್ಲಿ ಮುಂದುವರೆಯಲಿವೆ.
ಸಿಮೆಂಟ್, ಕಬ್ಬಿಣ ಹಾಗೂ ಹಾರ್ಡವೇರ್ ಅಂಗಡಿಗಳು ತೆರೆಯಲು ಅನುಮತಿ, ರಿಯಲ್ ಎಸ್ಟೇಟ್ ಕಂಪನಿ ಹಾಗೂ ಕಚೇರಿಗಳು, ಮೀನು ಮಾರಾಟ ಮಳಿಗೆ, ಅಗತ್ಯ ವಸ್ತುಗಳ ವಾಹನ ಹಾಗೂ ತುರ್ತು ಸೇವೆ ವಾಹನಗಳಿಗೆ ಅವಕಾಶವಿದೆ.
ಕೆಎಸ್ಆರ್ಟಿಸಿ, ಬಿಎಂಟಿಸಿ, ಮೆಟ್ರೊ ಇಲ್ಲ
ಪ್ರಮುಖವಾಗಿ ದೇಶಿಯ ವಿಮಾನಯಾನ, ರೈಲು, ಕೆಎಸ್ಆರ್ಟಿಸಿ, ಬಿಎಂಟಿಸಿ, ಮೆಟ್ರೋ ಸೇರಿದಂತೆ ಸಾರ್ವಜನಿಕ ಸಂಚಾರಕ್ಕೆ ಅವಕಾಶವಿರುವುದಿಲ್ಲ. ಹೋಟೆಲ್ಗಳಲ್ಲಿ ಕುಳಿತು ಊಟ ಮಾಡಲು ಅವಕಾಶವಿಲ್ಲ, ಹೋಟೆಲ್ಗಳಲ್ಲಿ ಪಾರ್ಸಲ್ ಸೇವೆಗೆ ಮಾತ್ರ ಅನುಮತಿ. ಶಾಲಾ ಕಾಲೇಜುಗಳ ಮೇಲಿನ ನಿರ್ಬಂಧ ಮುಂದುವರಿಯಲಿದೆ. ಎಸ್ಎಸ್ಎಲ್ಸಿ, PUC ಪರೀಕ್ಷೆ ಕುರಿತು ಯಾವುದೇ ತೀರ್ಮಾನವನ್ನು ಮಾಡಲಾಗಿಲ್ಲ.
ಬಹುಮುಖ್ಯವಾಗಿ ಮೇ 3ರವರೆಗೆ ಐಟಿ-ಬಿಟಿ ವಲಯಕ್ಕೆ ಯಾವುದೇ ವಿನಾಯಿತಿ ಇರುವುದಿಲ್ಲ. ನೂತನ ಆದೇಶದಲ್ಲಿ ಐಟಿ-ಬಿಟಿ ವಲಯಕ್ಕೆ ವಿನಾಯಿತಿ ಕೊಟ್ಟಿಲ್ಲ. ಐಟಿ, ಬಿಟಿ ಕಂಪನಿಗಳಲ್ಲಿ ಶೇ.33ರಷ್ಟು ಸಿಬ್ಬಂದಿ ಕಾರ್ಯನಿರ್ವಹಣೆಗೆ ಅವಕಾಶವಿರುವುದಿಲ್ಲ. ಆಟೋ, ಕ್ಯಾಬ್, ಚಿತ್ರಮಂದಿರ, ಮಾಲ್ಗಳು ಇರುವುದಿಲ್ಲ. ಧಾರ್ಮಿಕ ಸಭೆ-ಸಮಾರಂಭಗಳು, ಸಾರ್ವಜನಿಕ ಹಾಗೂ ಖಾಸಗಿ ಪ್ರದೇಶಗಳಲ್ಲಿ ಜನಸಂದಣಿ ಸೇರಲು ಹಿಂದಿನ ನಿಯಮ ಮುಂದುವರೆದಿದೆ.
ಮೇ 3ರ ವರೆಗೆ ಮದ್ಯ ಮಾರಾಟ, ಕಾಲೇಜ್ ಬಂದ್!
ಜೊತೆಗೆ ಮದ್ಯ ಮಾರಾಟವನ್ನು ಮೇ 3ರವರೆಗೆ ಸಂಪೂರ್ಣ ಬಂದ್ ಮಾಡಲು ಸೂಚಿಸಲಾಗಿದೆ. ಎಲ್ಲಾ ಶಾಲಾಕಾಲೇಜುಗಳು ರಜೆ ಮುಂದುವರಿದಿದ್ದು, ಆನ್ಲೈನ್ ಬೋಧನೆಗೆ ಉತ್ತೇಜನ ಕೊಡುವಂತೆ ಸೂಚಿಸಲಾಗಿದೆ. ಶಾಪಿಂಗ್ ಮಾಲ್, ಥಿಯೇಟರ್ ತೆರೆಯುವಂತಿಲ್ಲ. ಟೀ, ಕಾಫೀ ಮಾರಾಟಕ್ಕೆ ಅವಕಾಶವಿಲ್ಲ. ಆಯಾ ಜಿಲ್ಲೆಯಲ್ಲಿ ಮಾತ್ರ ಓಡಾಟಕ್ಕೆ ಅವಕಾಶ ಕೊಟ್ಟಿರುವುದರಿಂದ ಅಂತರ್ ರಾಜ್ಯ, ಅಂತರ್ ಜಿಲ್ಲೆ ಪ್ರವಾಸಕ್ಕೆ ಅನುಮತಿ ಇರುವುದಿಲ್ಲ.
ಬೈಕ್, ಕಾರು ಗ್ಯಾರೇಜ್ ತೆರೆಯಲು ಅನುಮತಿ
ಪ್ಲಂಬರ್ ಗಳಿಗೆಬೈಕ್ನಲ್ಲಿ ಒಬ್ಬರ ಓಡಾಟಕ್ಕೆ ಮಾತ್ರ ಅವಕಾಶ, ಕಾರಿನಲ್ಲಿ ಇಬ್ಬರು ಮಾತ್ರ ಸಂಚಾರಕ್ಕೆ ಅವಕಾಶ, SEBI ಮತ್ತು IRDA ಮತ್ತು ಇನ್ಶುರೆನ್ಸ್ ಕಂಪನಿಗಳಿಗೆ ಅನುಮತಿ ಕೊಡಲಾಗಿದೆ. ಸ್ವಂತ ಉದ್ಯೋಗ ಮಾಡುವವರಿಗೆ ಅವಕಾಶ ಕೊಡಲಾಗಿದೆ. ಬೈಕ್, ಕಾರು ಗ್ಯಾರೇಜ್ ತೆರೆಯಲು ಅವಕಾಶ ನೀಡಲಾಗಿದೆ. ಎಲೆಕ್ಟ್ರೀಷಿಯನ್ಸ್ ಮತ್ತು ಕಂಪ್ಯೂಟರ್ ಸೆಂಟರ್ಗಳು, ಮೋಟಾರ್ ಮೆಕಾನಿಕ್, ಪ್ಲಂಬರ್ ಗಳಿಗೆ ಕೆಲಸ ಮಾಡಲು ಷರತ್ತಿನೊಂದಿಗೆ ಅವಕಾಶ ಕೊಡಲಾಗಿದೆ. ಸ್ಥಳೀಯವಾಗಿ ಬಡಗಿತನಗಳಿಗೂ ಅವಕಾಶ ನೀಡಲಾಗಿದೆ. ಗ್ರಾಮೀಣ ಭಾಗದ ಕೈಗಾರಿಕೆಗಳಿಗೆ ಸರಕಾರ ಗ್ರೀನ್ ಸಿಗ್ನಲ್ ನೀಡಿದ್ದು, ಅಗತ್ಯ ವಸ್ತು, ಔಷಧಿ ಕಂಪನಿಗಳಿಗೆ, ಆಹಾರ ಉತ್ಪನ್ನ ಕೈಗಾರಿಕೆಗಳು, ನಗರ ಪ್ರದೇಶದ ಹೊರಗಿನ ಕೈಗಾರಿಕೆಗಳು, ಗಣಿ ಮತ್ತು ಖನಿಜ ಉತ್ಪನ್ನ ಕೈಗಾರಿಕೆಗಳಿಗೆ ಸರಕಾರ ಲಾಕ್ಡೌನ್ ಸಡಿಲಿಕೆ ನೀಡಿದೆ.
ಕಟ್ಟಡ ಕಾಮಗಾರಿ ನಡೆಸಲು ಅನುಮತಿ
ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಪಾಡಿಕೊಂಡು ಕೊರೊನಾ ವೈರಸ್ ಹರಡದಂತೆ ತಡೆಯಲು ಮುನ್ನೆಚ್ಚರಿಕಾ ಕ್ರಮ ಪಾಲಿಸಿ ಕಟ್ಟಡ ಕಾಮಗಾರಿ ನಡೆಸಲು ಅನುಮತಿ ಕೊಡಲಾಗಿದೆ. ಟೀ-ಕಾಫಿ ಪ್ಲಾಂಟೇಷನ್ನಲ್ಲಿ ಕೆಲಸಕ್ಕೆ ಅವಕಾಶ ನೀಡಲಾಗಿದೆ. ಆದರೆ, ಶೇ.50ರಷ್ಟು ಕಾರ್ಮಿಕರು ಮಾತ್ರ ಕೆಲಸ ಮಾಡಬೇಕೆಂದು ಆದೇಶದಲ್ಲಿದೆ. ಬೇರೆ ಕಡೆಯಿಂದ ಕಾರ್ಮಿಕರನ್ನು ಕರೆತರುವಂತಿಲ್ಲ, ಕಾಮಗಾರಿ ನಡೆಯುವ ಸ್ಥಳದಲ್ಲಿಯೆ ಕಾರ್ಮಿಕರಿದ್ದರೆ ಕಾಮಗಾರಿ ನಡೆಸಬಹುದು. ಅಂತಾರಾಜ್ಯ ಸಿಮೆಂಟ್, ಜಲ್ಲಿ ವಾಹನ ಓಡಾಟಕ್ಕೆ ಅನುಮತಿ ನೀಡಲಾಗಿದ್ದು, ಗ್ರಾಮೀಣ ಭಾಗದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಬಹುದು ಎಂದು ಸರಕಾರ ತಿಳಿಸಿದೆ.
ಉಗುಳಿದರೆ ಫೈನ್, ಹೆದ್ದಾರಿಯಲ್ಲಿ ಡಾಬಾಗಳ ಆರಂಭ
ರಾಜ್ಯಾದ್ಯಂತ ನಿಷೇಧಾಜ್ಞೆ ಮುಂದುವರೆಯಲಿದೆ, 5ಕ್ಕಿಂತ ಹೆಚ್ಚು ಜನರು ಒಂದೆ ಕಡೆಗೆ ಗುಂಪುಗೂಡುವಂತಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಸೇವನೆ, ಉಗುಳುವುದನ್ನು ನಿಷೇಧಿಸಲಾಗಿದ್ದು, ಉಗುಳುವುದು ಶಿಕ್ಷಾರ್ಹ ಅಪರಾಧವಾಗಿದೆ. ರಾಜ್ಯ, ರಾಷ್ಟ್ರೀಯ ಹೆದ್ದಾರಿಗಳಲ್ಲಿ 20 ಕಿ.ಮೀ.ಗಳ ದೂರದಲ್ಲಿ ಡಾಬಾ ತೆರೆಯಲು ಅವಕಾಶ ನೀಡಲಾಗಿದೆ. ಗೂಡ್ಸ್ ಲಾರಿಗಳಿಗೆ, ಟ್ರಕ್ಗಳಿಗೆ ಅನುಕೂಲವಾಗುವಂತೆ ವಾಹನಗಳ ಗ್ಯಾರೇಜ್ ತೆರೆಯಲು ಅವಕಾಶ ನೀಡಲಾಗಿದೆ.
ವಿವಾಹಕ್ಕೆ ಜಿಲ್ಲಾಧಿಕಾರಿಗಳ ಅನುಮತಿ ಅಗತ್ಯ
ವಿವಾಹ ಸಮಾರಂಭಗಳನ್ನು ಮುಂದೂಡುವಂತೆ ಈಗಾಗಲೇ ಸಲಹೆ ನೀಡಲಾಗಿದೆ. ಅನಿವಾರ್ಯವಾಗಿ ವಿವಾಹ ಮಾಡಲೇಬೇಕಾದರೆ ಎಷ್ಟು ಜನರು ಮದುವೆಯಲ್ಲಿ ಭಾಗವಹಿಸುತ್ತಾರೆ ಎಂಬುದನ್ನು ಅರ್ಜಿಯಲ್ಲಿ ನಮೂದಿಸಿ ಅನುಮತಿ ಪಡೆಯಬೇಕು. ಜಿಲ್ಲಾಧಿಕಾರಿಗಳಿಂದ ವಿವಾಹ ಮಾಡಲು ಅನುಮತಿ ಅತ್ಯಗತ್ಯ. ಇನ್ನು ಅಂತ್ಯಕ್ರಿಯೆಯಲ್ಲಿ ಮೊದಲಿನ ನಿಯಮವೇ ಮುಂದುವರೆದಿದ್ದು, 22ಕ್ಕಿಂತ ಹೆಚ್ಚಿನ ಜನರು ಭಾಗವಹಿಸುವಂತಿಲ್ಲ.