ಮನೆ ಕಳೆದುಕೊಂಡು ಗೋವಾ ಬೀದಿಗಳಲ್ಲಿ ಅಲೆದಾಡುತ್ತಿರುವ ಕನ್ನಡಿಗರು
ಕಾರವಾರ, ಸೆಪ್ಟೆಂಬರ್ 28: ಗೋವಾದ ಬೈನಾ ಕಡಲತೀರದಲ್ಲಿದ್ದ 55 ಮನೆಗಳು ಹಾಗೂ 2 ದೇವಸ್ಥಾನಗಳನ್ನು ತೆರವುಗೊಳಿಸಿದ ಬಳಿಕ ಆ ಜಾಗವನ್ನು ಮುರಗಾಂವ್ ನಗರ ಪಾಲಿಕೆ ಸ್ವಚ್ಛಗೊಳಿಸಿದೆ.
ತೆರವಿನ ಬಳಿಕ ಆ ಜಾಗದಲ್ಲಿ ಮನೆಗಳ ಅವಶೇಷಗಳು, ಛಾವಣಿಗಳು, ಕೆಲ ಸಾಮಗ್ರಗಿಗಳು ದಿಕ್ಕಪಾಲಾಗಿ ಬಿದ್ದು, ಹರಡಿಕೊಂಡಿದ್ದವು. ಅದನ್ನು ಜೆಸಿಬಿಗಳ ಮೂಲಕ ಟಿಪ್ಪರ್ ಗೆ ತುಂಬಿ, ಬೇರೆಡೆ ಸ್ಥಳಾಂತರ ಮಾಡಲಾಯಿತು.
ಬೈನಾ ಕಡಲ ತಡಿಯಲ್ಲಿ ಕನ್ನಡಿಗರ ಕಣ್ಣೀರು
ಮನೆ ಕಳೆದುಕೊಂಡ ಕೆಲ ಕುಟುಂಬದವರು ಅವರ ಸಂಬಂಧಿಕರು, ಪರಿಚಿತರ ಮನೆಯಲ್ಲಿ ಆಶ್ರಯ ಪಡೆದರೆ, ಇನ್ನು ಕೆಲವರು ಆಶ್ರಯಕ್ಕಾಗಿ ಇನ್ನು ಅಲೆದಾಡುತ್ತಿದ್ದಾರೆ. ಮಕ್ಕಳು, ಬಟ್ಟೆ, ಪಾತ್ರೆಗಳನ್ನು ಕೈಯಲ್ಲಿ ಹಿಡಿದು ಗೋವಾದ ಬೀದಿ-ಬೀದಿಗಳಲ್ಲಿ ಆಶ್ರಯಕ್ಕಾಗಿ ಸ್ಥಳಗಳನ್ನು ಹುಡುಕುತ್ತಿದ್ದಾರೆ.
ಸಚಿವ ಆರ್.ವಿ.ಡಿ.ಖಂಡನೆ: ಗೋವಾದಲ್ಲಿ ಕನ್ನಡಿಗರ ಮನೆಗಳನ್ನು ಧ್ವಂಸ ಮಾಡಿರುವ ಗೋವಾ ಸರ್ಕಾರದ ಕ್ರಮ ಖಂಡನೀಯ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಿಂದೆಯೂ ಕನ್ನಡಿಗರ ಮನೆಗಳನ್ನು ತೆರವುಗೊಳಿಸುವಾಗ ನಮ್ಮ ಸರ್ಕಾರ ಪ್ರತಿರೋಧ ವ್ಯಕ್ತಪಡಿಸಿತ್ತು. ಗೋವಾಕ್ಕೆ ತೆರಳಿ ಅಲ್ಲಿನ ಮುಖ್ಯಮಂತ್ರಿ ಹಾಗೂ ಸಚಿವರನ್ನು ಭೇಟಿ ಮಾಡಿತ್ತು.
ಕನ್ನಡಿಗರನ್ನು ರಕ್ಷಿಸಬೇಕು ಎಂದು ಒತ್ತಾಯಿಸಿತ್ತು. ಆದರೆ ಈಗ ಆ ಭರವಸೆಯನ್ನು ಈಡೇರಿಸದೆ, ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸದೆ ಮನೆಗಳ ತೆರವು ಮಾಡಿರುವುದಕ್ಕೆ ವಿಷಾದ ವ್ಯಕ್ತಪಡಿಸಿದ್ದಾರೆ.
ಮನೆಗಳನ್ನು ಕಳೆದುಕೊಂಡು ಬೀದಿ ಪಾಲಾಗಿರುವ ಅನೇಕ ಬಡ ಕನ್ನಡಿಗರ ರಕ್ಷಣೆಗೆ ಗೋವಾ ಸರ್ಕಾರ ಮುಂದಾಗಬೇಕು. ಅವರಿಗೆ ತಕ್ಷಣ ಗಂಜಿ ಕೇಂದ್ರ ಹಾಗೂ ಪುನರ್ವಸತಿ ಕೇಂದ್ರಗಳನ್ನು ಕಲ್ಪಿಸಿಕೊಡಬೇಕು. ಅಲ್ಲದೇ ಅವರಿಗೆ ಸೂಕ್ತ ಪರಿಹಾರ ನೀಡಬೇಕು. ಆ ಮೂಲಕ ಗೋವಾ ಸರ್ಕಾರ ಮಾನವೀಯತೆ ತೋರಬೇಕು ಎಂದೂ ಆಗ್ರಹಿಸಿದ್ದಾರೆ