ಬಿಜೆಪಿಗೆ ಬೆಂಬಲ ವಿಚಾರ: ಜೆಡಿಎಸ್ ಸಂಘಟನಾ ಸಭೆಯಲ್ಲಿ ಅಸಮಾಧಾನ ಸ್ಪೋಟ!
ಬೆಂಗಳೂರು, ಜ. 07: ಪ್ರತಾಪ್ ಚಂದ್ರ ಶೆಟ್ಟಿ ಅವರನ್ನು ವಿಧಾನ ಪರಿಷತ್ ಸಭಾಪತಿ ಸ್ಥಾನದಿಂದ ಪದಚ್ಯುತಿಗೊಳಿಸುವ ವಿಚಾರ ಜೆಡಿಎಸ್ ಪಕ್ಷದಲ್ಲಿ ಅಸಮಧಾನ ಸೃಷ್ಟಿಸಿದೆ. ಕಳೆದ ವಿಧಾನ ಮಂಡಲ ಅಧಿವೇಶನದಲ್ಲಿ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಅವರನ್ನು ಪದಚ್ಯುತಿಗೊಳಿಸಲು ಬಿಜೆಪಿ ಸದಸ್ಯರು ಅವಿಶ್ವಾಸ ಗೊತ್ತುವಳಿ ಕೊಟ್ಟಿದ್ದರು. ಆ ಸಂದರ್ಭದಲ್ಲಿ ನಡೆದ ಘಟನಾವಳಿಗಳಿಂದ ದೇಶದ ಎದುರು, ರಾಜ್ಯದ ಮಾನ ಹರಾಜಾಗುವಂತಾಗಿತ್ತು. ಆ ಬಳಿಕ ನಡೆದ ದುರ್ಘಟನೆಯಂತೂ ರಾಜ್ಯದಲ್ಲಿ ಆತಂಕ ಸೃಷ್ಟಿಸಿತ್ತು. ಡಿಸೆಂಬರ್ 15 ರಂದು ವಿಧಾನ ಪರಿಷತ್ನಲ್ಲಿ ನಡೆದ ಘಟನೆಯಿಂದ ಮನನೊಂದು ಉಪ ಸಭಾಪತಿ ಎಸ್.ಎಲ್. ಧರ್ಮೇಗೌಡ ಅವರು ಆತ್ಮಹತ್ಯೆಗೆ ಶರಣಾಗಿದ್ದರು. ಡಿಸೆಂಬರ್ 29 ರಂದು ಅವರು ಆತ್ಮಹತ್ಯೆಗೆ ಶರಣಾಗಿದ್ದರು.
ವಿಧಾನ ಪರಿಷತ್ನಲ್ಲಿ ಭೂ ಸುಧಾರಣಾ ವಿಧೇಯಕಕ್ಕೆ ಬೆಂಬಲ ಕೊಡುವುದರೊಂದಿಗೆ ಜೆಡಿಎಸ್ ಪಕ್ಷದ ಸದಸ್ಯರು ಸರ್ಕಾರಕ್ಕೆ ಬೆಂಬಲ ಸೂಚಿಸಿದ್ದರು. ಹೀಗಾಗಿ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಅವರನ್ನು ಪೀಠದಿಂದ ಕೆಳಗಿಳಿಸಿ ಜೆಡಿಎಸ್ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳುವುದು ಬಿಜೆಪಿ ಉದ್ದೇಶವಾಗಿತ್ತು. ಅದೇ ಹಿನ್ನೆಲೆಯಲ್ಲಿ ಜೆಡಿಎಸ್ ಸದಸ್ಯರು ಕೂಡ ಡಿಸೆಂಬರ್ 15 ರಂದು ನಡೆದ ವಿಧಾನ ಪರಿಷತ್ ವಿಶೇಷ ಅಧಿವೇಶನದಲ್ಲಿ ಭಾಗವಹಿಸಿದ್ದರು.
ತಾಳ್ಮೆ ಕಳೆದುಕೊಳ್ಳುತ್ತಿರುವ ಕುಮಾರಸ್ವಾಮಿ: ಬಿಜೆಪಿ ವಿರುದ್ದ ತಿರುಗಿ ಬೀಳಲು 4 ಕಾರಣಗಳು
ಆದರೆ ಅವತ್ತು ನಡೆದ ಕಲಾಪ ಇಡೀ ವಿಧಾನ ಪರಿಷತ್ ಇತಿಹಾಸದಲ್ಲಿಯೇ ಕಪ್ಪು ಚುಕ್ಕೆಯಾಗಿದ್ದು ದುರಂತ. ಇದೀಗ ವಿಧಾನ ಪರಿಷತ್ ಸಭಾಪತಿ ವಿಚಾರ ಜೆಡಿಎಸ್ ಪಕ್ಷದಲ್ಲಿ ಅಸಮಾಧಾನ ಸೃಷ್ಟಿಸಿದೆ. ಜೆಡಿಎಸ್ ಶಾಸಕರು ಈ ವಿಚಾರದಲ್ಲಿ ಬಿಜೆಪಿಗೆ ಬೆಂಬಲ ಕೊಡುವುದನ್ನು ತೀವ್ರವಾಗಿ ವಿರೋಧಿಸಿದ್ದಾರೆ. ಇದೇ ವಿಚಾರವೀಗ ಜೆಡಿಎಸ್ ಪಕ್ಷದಲ್ಲಿ ಅಸಮಾಧಾನಕ್ಕೂ ಕಾರಣವಾಗಿದೆ.
ಬಿಜೆಪಿಗೆ ಬೆಂಬಲ, ಜೆಡಿಎಸ್ನಲ್ಲಿ ಅಸಮಾಧಾನ
ರಾಜ್ಯ ವಿಧಾನ ಪರಿಷತ್ನಲ್ಲಿ ಬಿಜೆಪಿಗೆ ಬಹುಮತವಿಲ್ಲ. ಹೀಗಾಗಿ ಅಲ್ಲಿ ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಂಡು, ಪರಿಷತ್ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಅವರನ್ನು ಪದಚ್ಯುತಗೊಳಿಸಲು ಬಿಜೆಪಿ ಮುಂದಾಗಿತ್ತು. ಆ ಹಿನ್ನೆಲೆಯಲ್ಲಿ ಸಭಾಪತಿಗಳ ವಿರುದ್ಧ ಬಿಜೆಪಿ ಸದಸ್ಯರು ಅವಿಶ್ವಾಸ ಗೊತ್ತುವಳಿಯನ್ನೂ ಸಲ್ಲಿಸಿದ್ದರು. ಅದೇ ಸಂದರ್ಭದಲ್ಲಿ ಅವಿಶ್ವಾಸದ ಪರವಾಗಿ ನಿಲ್ಲುವ ಭರವಸೆಯನ್ನು ಜೆಡಿಎಸ್ ಸದಸ್ಯರು ಕೊಟ್ಟಿದ್ದರಿಂದ ಪ್ರತಾಪ್ ಚಂದ್ರ ಶೆಟ್ಟಿ ಅವರನ್ನು ಸಭಾಪತಿ ಸ್ಥಾನದಿಂದ ಕೆಳಗಿಳಿಸಲು ಎಲ್ಲ ಸಿದ್ಧತೆಗಳನ್ನು ಬಿಜೆಪಿ ಮಾಡಿಕೊಂಡಿತ್ತು.
ಬಿಜೆಪಿ ಜೊತೆಗೆ ಹೊಂದಾಣಿಕೆಗೆ ತೀವ್ರ ವಿರೋಧ
ಆಗ ಕೂಡ ಬಿಜೆಪಿಗೆ ಬೆಂಬಲ ಕೊಡುವುದಕ್ಕೆ ಜೆಡಿಎಸ್ ಪಕ್ಷದ ಕೆಲವು ಹಿರಿಯ ಶಾಸಕರು ಅಪಸ್ವರ ಎತ್ತಿದ್ದರು. ಇವತ್ತು (ಜ.07) ಅದೇ ಮತ್ತೆ ಜೆಡಿಎಸ್ ಕಚೇರಿಯಲ್ಲಿ ಪುನರಾವರ್ತನೆ ಆಗಿದೆ. ಜೆಪಿ ಭವನದಲ್ಲಿ ಜೆಡಿಎಸ್ ಸಂಘಟನಾ ಸಭೆಯಲ್ಲಿ ಭಾಗವಹಿಸಿದ್ದ ಜೆಡಿಎಸ್ ಶಾಸಕರು, ಬಿಜೆಪಿ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಾಗಿ ವಿಧಾನ ಪರಿಷತ್ನಲ್ಲಿ ಬಿಜೆಪಿಗೆ ಬೆಂಬಲ ಕೊಡುವ ವಿಚಾರ ಜೆಡಿಎಸ್ನಲ್ಲಿ ಭಿನ್ನಮತವನ್ನುಂಟು ಮಾಡಿದೆ.
ಬಸವರಾಜ್ ಹೊರಟ್ಟಿ ಮೇಲೆ ವಾಗ್ದಾಳಿ
ಜೆಡಿಎಸ್ ಹಿರಿಯ ನಾಯಕ ಬಸವರಾಜ್ ಹೊರಟ್ಟಿ ಅವರು ಸಭಾಪತಿ ಆಗದೇ ಇದ್ದರೆ ಯಾವ ದೇಶ ಮುಳುಗುತ್ತದೆ ಎಂದು ಜೆಡಿಎಸ್ ಶಾಸಕರು ಗರಂ ಆಗಿ ಪ್ರಶ್ನೆ ಮಾಡಿದ್ದಾರೆ. ಜೆಡಿಎಸ್ ಪಕ್ಷ ಸಂಘಟನೆ ಸಭೆಯಲ್ಲಿ ಭಾಗವಹಿಸಿದ್ದ ಅರಸಿಕೆರೆ ಜೆಡಿಎಸ್ ಶಾಸಕ ಶಿವಲಿಂಗೇಗೌಡ ಅವರು, ಯಾರದ್ದೋ ಸ್ವಾರ್ಥಕ್ಕಾಗಿ ಪಕ್ಷವನ್ನು ಬಲಿ ಕೊಡಬಾರದು. ಬಿಜೆಪಿ ಜೊತೆ ಸಂಬಂಧ ಬೆಳೆಸಬಹುದು ಅಂತಾ ಬಸವರಾಜ್ ಹೊರಟ್ಟಿ ಯಾಕೆ ಹೇಳಬೇಕಿತ್ತು? ಎಂದು ಹೊರಟ್ಟಿ ಅವರ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ದ್ವಂದ್ವ ನಿಲುವು ಬೇಡವೇ ಬೇಡ
ನಮ್ಮಲ್ಲಿ ಎರಡು ನಿಲುವು ಬೇಡ. ಯಾವುದಾದರೂ ಒಂದು ನಿಲುವು ಇರಲಿ. ನಮ್ಮಲ್ಲಿ ದ್ವಂದ್ವ ನಿಲುವು ಬೇಡವೇ ಬೇಡ. ನಾವು ಬರುತ್ತೇವೆ ಅಂತಾ ಬಿಜೆಪಿಗೆ ಯಾರು ಅರ್ಜಿ ಹಾಕಿದ್ದರು? ಬಿಜೆಪಿ ಜೊತೆ ಸಖ್ಯ ಅಂತ ಯಾಕೆ? ಹೇಳಿದ್ದರು? ಹಾಗೆ ಹೇಳಲು ಬಸವರಾಜ್ ಹೊರಟ್ಟಿ ಅವರಿಗೆ ಯಾರು ಸ್ವಾತಂತ್ರ್ಯ ಕೊಟ್ಟವರು ಯಾರು? ಮೈತ್ರಿ ಅಂತಾ ಯಾಕೆ ಹೇಳಿದ್ದರು? ಅವರ ಹೇಳಿಕೆಯಿಂದ ಏನೆಲ್ಲಾ ಆಯ್ತು? ಮನನೊಂದು ಇದನ್ನ ಮಾತನಾಡುತ್ತಿದ್ದೇನೆ. ಪಕ್ಷಕ್ಕೆ ಎಷ್ಟು ಡ್ಯಾಮೇಜ್ ಆಯ್ತು? ಈ ನಿಟ್ಟಿನಲ್ಲಿ ನಮ್ಮ ನಾಯಕರು ತಿದ್ದಿಕೊಳ್ಳಬೇಕು ಎಂದು ಜೆಡಿಎಸ್ ಹಿರಿಯ ಶಾಸಕ ಶಿವಲಿಂಗೇಗೌಡರು ಗರಂ ಆಗಿ ಮಾತನಾಡಿದ್ದಾರೆ.