ನವೆಂಬರ್ನಲ್ಲಿ ಪದವಿ ಕಾಲೇಜ್ ಆರಂಭ: ಡಿಸಿಎಂ ಡಾ. ಅಶ್ವಥ್ ನಾರಾಯಣ್
ಬೆಂಗಳೂರು, ಅ. 19: ಇದೇ ನವೆಂಬರ್ ತಿಂಗಳಿನಲ್ಲಿ ಪದವಿ ಕಾಲೇಜ್ಗಳನ್ನು ಆರಂಭಿಸಲು ಸರ್ಕಾರ ತಯಾರಿ ಮಾಡಿಕೊಳ್ಳುತ್ತಿದೆ. ಈ ಕುರಿತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸೇರಿದಂತೆ ಸಂಬಂಧಪಟ್ಟ ಇಲಾಖೆ, ಅಧಿಕಾರಿಗಳೊಂದಿಗೆ ಜತೆ ಚರ್ಚಿಸಿ ಅಂತಿಮ ತೀರ್ಮಾನ ಮಾಡಲಾಗುವುದು ಎಂದು ಉನ್ನತ ಶಿಕ್ಷಣ ಸಚಿವರೂ ಆಗಿರುವ ಡಿಸಿಎಂ ಡಾ. ಅಶ್ವಥ್ ನಾರಾಯಣ ಅವರು ಹೇಳಿದ್ದಾರೆ.
ಮೈಸೂರಿನಲ್ಲಿ ಸೋಮವಾರ ಮೈಸೂರು ವಿಶ್ವವಿದ್ಯಾನಿಲಯದ 100ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೋವಿಡ್ ಸಂಕಷ್ಟ ಕಾಲದಲ್ಲಿ ಶಾಲಾ- ಕಾಲೇಜುಗಳನ್ನು ಆರಂಭಿಸುವುದಕ್ಕೂ, ಸಿನಿಮಾ ಟಾಕೀಸ್ಗಳನ್ನು ತೆರೆಯುವುದಕ್ಕೂ ಪರಸ್ಪರ ಹೋಲಿಸುವುದು ಸರಿಯಲ್ಲ. ಪದವಿ ಕಾಲೇಜುಗಳ ಬಗ್ಗೆ ಹೇಳುವುದಾದರೆ, ತರಗತಿ ನಡೆಯುವ ಕೋಣೆಗಳನ್ನು ನಿರಂತರವಾಗಿ ಸ್ಯಾನಿಟೈಸ್ ಮಾಡುತ್ತಿರಬೇಕು ಎಂದು ವಿವರಿಸಿದರು.
ಎಚ್ಚರ ತಪ್ಪುವಂತಿಲ್ಲ!
ವಿದ್ಯಾರ್ಥಿಗಳ ಥರ್ಮಲ್ ಸ್ಕ್ರೀನಿಂಗ್ ಮಾಡುತ್ತಲೇ ಇರಬೇಕು. ಪ್ರತಿಕ್ಷಣವೂ ಎಚ್ಚರ ತಪ್ಪುವಂತಿಲ್ಲ. ವಿದ್ಯಾರ್ಥಿಗಳು ಮತ್ತು ಬೋಧಕರು, ಮತ್ತಿತರೆ ಸಿಬ್ಬಂದಿಯ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಸುಲಭವಲ್ಲ. ಮುಖ್ಯವಾಗಿ ವೈರಸ್ ನಮ್ಮ ನಡುವೆಯೇ ಜೀವಂತವಾಗಿ ಓಡಾಡಿಕೊಂಡಿದೆ. ಹೀಗಾಗಿ ಪರಿಸ್ಥಿತಿ ನೋಡಿಕೊಂಡು ಕಾಲೇಜು ಆರಂಭಿಸುತ್ತೇವೆ. ಈ ವಿಷಯದಲ್ಲಿ ಆತುರ ಸಲ್ಲ ಎಂದರು.
ಶೀಘ್ರವೇ ದಿನಾಂಕ ಪ್ರಕಟ
ಈಗಾಗಲೇ ಎಲ್ಲ ಕಾಲೇಜುಗಳಲ್ಲಿ ಆನ್ಲೈನ್ ತರಗತಿಗಳು ಉತ್ತಮವಾಗಿ ನಡೆಯುತ್ತಿವೆ. ಡಿಜಿಟಲ್ ಕಲಿಕೆ ಮತ್ತು ಬೋಧನೆ ನಿರೀಕ್ಷೆಗೂ ಮೀರಿ ಉತ್ತಮವಾಗಿ ನಡೆಯುತ್ತಿದೆ. ವಿದ್ಯಾರ್ಥಿಗಳು ಇದೇ ಅವಕಾಶವನ್ನು ಸದ್ಭಳಕೆ ಮಾಡಿಕೊಂಡು ತಯಾರಿ ಮಾಡಿಕೊಳ್ಳಬೇಕು.
ಈಗಾಗಲೇ ಯುಜಿಸಿಯಿಂದ ಕಾಲೇಜು ಆರಂಭಕ್ಕೆ ಸೂಕ್ತ ಮಾಹಿತಿ, ಮಾರ್ಗಸೂಚಿ ಬಂದಿದೆ. ಅದರನ್ವಯ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಶೀಘ್ರವೇ ಈ ಬಗ್ಗೆ ಮುಖ್ಯಮಂತ್ರಿಗಳ ಜತೆ ಚರ್ಚಿಸಿ ಕಾಲೇಜು ಆರಂಭದ ದಿನವನ್ನು ಪ್ರಕಟಿಸಲಾಗುವುದು ಎಂದು ಡಾ. ಅಶ್ವಥ್ ನಾರಾಯಣ್ ಹೇಳಿದರು.
ನೂತನ ಶಿಕ್ಷಣ ನೀತಿ ಜಾರಿಗೆ ಕ್ರಮ
ಕೇಂದ್ರ ಸರಕಾರ ರೂಪಿಸಿರುವ ನೂತನ ಶಿಕ್ಷಣ ನೀತಿ ಜಾರಿಗೆ ಸರಕಾರ ಎಲ್ಲ ತಯಾರಿ ಮಾಡಿಕೊಳ್ಳುತ್ತಿದೆ. ಈಗಾಗಲೇ ನೀತಿಯ ಅನುಷ್ಟಾನಕ್ಕಾಗಿ ರೂಪಿಸಲಾಗಿರುವ ಕಾರ್ಯಪಡೆ ಮೊದಲ ವರದಿಯನ್ನು ನೀಡಿದೆ. ಈ ವರ್ಷ ಎಲ್ಲ ಸಿದ್ಧತೆಗಳನ್ನು ಪರಿಣಾಮಕಾರಿಯಾಗಿ ಮಾಡಿಕೊಂಡು 2021ನೇ ಸಾಲಿನಿಂದ ನೂತನ ಶಿಕ್ಷಣ ನೀತಿಯನ್ನು ಹಂತಹಂತವಾಗಿ ಜಾರಿ ಮಾಡಲಾಗುವುದು ಎಂದು ಡಿಸಿಎಂ ಡಾ. ಅಶ್ವಥ್ ನಾರಾಯಣ್ ಅವರು ಇದೇ ಸಂದರ್ಭದಲ್ಲಿ ಹೇಳಿದರು.
ಘಟಿಕೋತ್ಸವ ಕಾರ್ಯಕ್ರಮದಲ್ಲಿ ದೆಹಲಿಯಿಂದಲೇ ಆನ್ಲೈನ್ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಶಿಕ್ಷಣ ನೀತಿಯ ಮಹತ್ವದ ಬಗ್ಗೆ ಮಾತನಾಡಿದರು. ಹೀಗಾಗಿ, ಕಳೆದ ಎಂಟು ತಿಂಗಳಿಂದಲೇ ರಾಜ್ಯ ಸರಕಾರ ಈ ನಿಟ್ಟಿನಲ್ಲಿ ತಯಾರಿ ಮಾಡಿಕೊಂಡಿದೆ ಎಂದರು.
Recommended Video
ಪರಿಹಾರದಲ್ಲಿ ತಾರತಮ್ಯವಿಲ್ಲ
ರಾಷ್ಟ್ರೀಯ ವಿಪತ್ತಿನ ನಿರ್ವಹಣಾ ನಿಧಿಯ ಮಾರ್ಗಸೂಚಿಯಂತೆಯೇ ಸರಕಾರ ಉತ್ತರ ಕರ್ನಾಟಕ ಭಾಗದ ನೆರೆ ಪರಿಹಾರ ವಿತರಿಸಲಾಗುತ್ತಿದೆ. ಕೇಂದ್ರ ಸಕಾಲಕ್ಕೆ ಎಲ್ಲ ನೆರವನ್ನೂ ನೀಡುತ್ತಿದೆ. ಯಾವುದೇ ವಿಳಂಬ ಆಗಿಲ್ಲ. ಹಿಂದಿನ ಯುಪಿಎ ಸರಕಾರಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಎನ್ಡಿಎ ಸರಕಾರವೂ ರಾಜ್ಯಕ್ಕೆ ನೆರವು ನೀಡಿದೆ ಎಂದು ಅವರು ಮಾಹಿತಿ ನೀಡಿದರು.
ನೆರೆಯಂಥ ಸೂಕ್ಷ್ಮ ವಿಚಾರದಲ್ಲಿ ರಾಜಕೀಯ ಮಾಡೋದು ಬೇಡ ಎಂದು ನಾನು ಪ್ರತಿಪಕ್ಷಗಳನ್ನು ಮತ್ತೊಮ್ಮೆ ವಿನಂತಿ ಮಾಡಿಕೊಳ್ಳುತ್ತೇನೆ. ಈ ವರ್ಷ ಎಲ್ಲ ರೀತಿಯಲ್ಲೂ ಸರಕಾರ ಗಂಭೀರ ಸವಾಲುಗಳನ್ನೇ ಎದುರಿಸಿದೆ. ನಮ್ಮ ಸರಕಾರ ಬಂದ ಕೂಡಲೇ ಪ್ರವಾಹ ಬಂತು. ಅದು ಹತೋಟಿಗೆ ಬಂದ ಕೂಡಲೇ ಕೋವಿಡ್ ಬಂತು. ಮತ್ತೆ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ನೆರೆ ಬಂತು. ಈಗ ಮತ್ತೆ ಉತ್ತರ ಕರ್ನಾಟಕದಲ್ಲಿ ನೆರೆ ಬಂದಿದೆ. ಬಿಕ್ಕಟ್ಟು ಬಂದಾಗ ಎಲ್ಲರೂ ಒಟ್ಟಾಗಿ ನೊಂದ ಜನರ ನೆರವಿಗೆ ಧಾವಿಸಬೇಕು. ರಾಜಕೀಯ ಮಾತನಾಡುವುದು ಅಕ್ಷಮ್ಯ ಎಂದು ಡಿಸಿಎಂ ಹೇಳಿದರು.