'ಬೇರೆ ದೇಶಗಳಲ್ಲಿ ಎರಡ್ಮೂರು ಜಾತಿ, ಆದ್ರೆ ಭಾರತದಲ್ಲಿ 12,798 ಜಾತಿ'
ಬೆಂಗಳೂರು, ಜುಲೈ 24: ಪರಿಶಿಷ್ಟ ಜಾತಿ, ಪಂಗಡ ಹಾಗೂ ಶೋಷಿತ ಸಮುದಾಯಗಳ ಮೀಸಲಾತಿಗೆ ಸಂಬಂಧಿಸಿದಂತೆ ನೇಮಕಾತಿ ಹಾಗೂ ಬಡ್ತಿಯಲ್ಲಿ ಇರುವ ಸಮಸ್ಯೆಗಳನ್ನು ಬಗೆಹರಿಸಲು ಕರ್ನಾಟಕ ಸರಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಹೇಳಿದರು.
ಇಲ್ಲಿ ಅಂಬೇಡ್ಕರ್ ಕುರಿತ ಅಂತರರಾಷ್ಟ್ರೀಯ ಸಮಾವೇಶದಲ್ಲಿ 'ಬೆಂಗಳೂರು ಘೋಷಣೆ' ಬಿಡುಗಡೆ ಮಾಡಿ, ಮಾತನಾಡಿ, ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾಯಮೂರ್ತಿಗಳಾದ ಠಾಕೂರ್ ಹಾಗೂ ಗೋಪಾಲ್ ಗೌಡ ನೇತೃತ್ವದದಲ್ಲಿ ಸರಕಾರ ಸಮಿತಿ ರಚಿಸಿದೆ. ಅವರು ನೀಡುವ ವರದಿಯನ್ನು ಸಂಪುಟದಲ್ಲಿ ಚರ್ಚಿಸಲಾಗುವುದು ಎಂದರು.
ಇನ್ಮುಂದೆ SC/ST ಗುತ್ತಿಗೆದಾರರಿಗೆ ಟೆಂಡರ್ ನಲ್ಲೂ ಮೀಸಲಾತಿ
ಅಂಬೇಡ್ಕರ್ ಅವರ ಕನಸಿನ ಸಾಕಾರಕ್ಕಾಗಿ ಶೀಘ್ರದಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು. ಅಲ್ಪಸಂಖ್ಯಾತ ಸಮುದಾಯದ ಏಳ್ಗೆಗೆ ಕರ್ನಾಟಕ ಸರಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಪೌರಕಾರ್ಮಿಕರನ್ನು ಕಾಯಂ ಮಾಡಲಾಗಿದೆ. ಈ ನಿರ್ಧಾರದಿಂದ ಹನ್ನೊಂದು ಸಾವಿರಕ್ಕೂ ಹೆಚ್ಚು ಕಾರ್ಮಿಕರಿಗೆ ಅನುಕೂಲವಾಗಿದೆ ಎಂದು ಅವರು ಹೇಳಿದರು.
ಬೆಂಗಳೂರು ಘೋಷಣೆ ಎಂಬುದು ಆರಂಭಿಕ ಹೆಜ್ಜೆ. ಈ ಮೂಲಕ ಎಲ್ಲರಿಗೂ ಅಭಿವೃದ್ಧಿ, ಸಾಮಾಜಿಕ ಹಾಗೂ ಆರ್ಥಿಕ ನ್ಯಾಯದಲ್ಲಿ ಸಮಾನವಾದ ಪಾಲು ದೊರೆಯಲಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಈ ಸಮಾವೇಶದಲ್ಲಿ ಭಾಗವಹಿಸಿದ್ದ ಪ್ರಮುಖರು ಏನು ಹೇಳಿದರು ಎಂಬುದನ್ನು ತಿಳಿಯುವುದಕ್ಕೆ ಮುಂದೆ ಓದಿ.
ಶಶಿ ತರೂರ್, ಸಂಸದ
ನಮ್ಮ ಸಂವಿಧಾನವು ತುಂಬ ಸ್ಪಷ್ಟವಾಗಿ ಹೇಳಿದೆ: ವೈಯಕ್ತಿಕ ಸ್ವಾತಂತ್ರ್ಯವು ಸಮುದಾಯದ ಆಸಕ್ತಿಯ ಜತೆಗೆ ಸಮತೋಲನ ಕಾಯ್ದುಕೊಳ್ಳಬೇಕು. ಗಾಂಧಿ ಹಾಗೂ ಅಂಬೇಡ್ಕರ್ ರಂಥವರಿಂದ ನಮಗೆ ಸ್ಫೂರ್ತಿ ದೊರೆತಿದೆ.
ಜೈರಾಮ್ ರಮೇಶ್, ಸಂಸದ
ನಿಧಾನಗತಿಯ ಆರ್ಥಿಕಾಭಿವೃದ್ಧಿ ಸಾಮಾಜಿಕ ಉದ್ದೇಶಗಳನ್ನು ಅರ್ಥಪೂರ್ಣವಾಗಿ ತಲುಪಲು ಸಹಾಯ ಮಾಡುವುದಿಲ್ಲ. ಈ ಹಿಂದೆ ಯುಪಿಎ ಸರಕಾರ ಅಧಿಕಾರದಲ್ಲಿದ್ದಾಗ ಸಮಾಜದಲ್ಲಿನ ಎಲ್ಲರನ್ನೂ ಒಳಗೊಂಡಂತೆ ಜಾರಿಗೆ ತಂದಂಥ ನೀತಿಗಳಿಂದ ಮಾತ್ರ ಅದು ಸಾಧ್ಯ.
ಕುಂ.ವೀರಭದ್ರಪ್ಪ, ಸಾಹಿತಿ
ಎಲ್ಲ ದೇಶಗಳಲ್ಲೂ ಎರಡು ಅಥವಾ ಮೂರು ಜಾತಿಗಳಿವೆ. ಆದರೆ ನಮ್ಮ ದೇಶದಲ್ಲಿ 12,798 ಜಾತಿಗಳಿವೆ.
ದಿನೇಶ್ ಅಮಿನ್ ಮಟ್ಟು, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ
ಸರಕಾರಗಳು ಜಾರಿಗೆ ತಂದಿರುವ ಮೀಸಲಾತಿ ಮಾತ್ರ ಚರ್ಚೆಯಾಗಬೇಕು ಮತ್ತು ನ್ಯಾಯ ಒದಗಿಸಲು ಏಕೆ ಸಾಧ್ಯವಾಗುತ್ತಿಲ್ಲ ಎಂಬುದರ ವಿಮರ್ಶೆಯಾಗಬೇಕು. ಧರ್ಮ, ರಾಷ್ಟ್ರೀಯತೆ, ಬಹುಸಂಖ್ಯೆ ಇವೆಲ್ಲ ಭಾವನಾತ್ಮಕ ಸಂಗತಿಗಳು. ಮೀಸಲಾತಿಯ ತರ್ಕ ಯಾವಾಗಲೂ ಚರ್ಚೆಯ ವಿಷಯ ಆಗಬಾರದು.