ರಾಜ್ಯ ವಿಧಾನ ಮಂಡಲ ಅಧಿವೇಶನಕ್ಕೂ ಕಾಡಿದ ಕೊರೋನಾ ಭೀತಿ!
ಬೆಂಗಳೂರು, ಮಾ. 03: ಈಗಾಗಲೇ ಜಗತ್ತನ್ನು ತಲ್ಲಣ ಗೊಳಿಸಿರುವ ಕೊರೋನಾ ವೈರಸ್, ರಾಜ್ಯ ವಿಧಾನಮಂಡಲ ಅಧಿವೇಶನಕ್ಕೂ ಭೀತಿ ಹರಡಿದೆ. ಬೆಳಗ್ಗೆ ವಿಧಾನಸಭೆ ಕಲಾಪ ಆರಂಭವಾಗಲು ತಡವಾದಾಗ, ವಿಧಾನಸಭೆಯ ಆಡಳಿತ ಪಕ್ಷದ ಮೊಗಸಾಲೆಯಲ್ಲಿ ಮಾತನಾಡಿಕೊಳ್ಳುತ್ತಿದ್ದ ಶಾಸಕರು, ರಾಜ್ಯದಲ್ಲಿ ಕರೋನಾ ವೈರಸ್ ಹಾಗೂ ಹೆಚ್ 1 ಎನ್ 1 ಸೋಂಕು ಹರಡುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ವಿಧಾನಸಭೆಯ ಆಡಳಿತ ಪಕ್ಷದ ಮೊಗಸಾಲೆ (ಲಾಂಜ್)ಯಲ್ಲಿ ಕೊರೋನಾ ವೈರಸ್ ಹಾಗೂ ಎಚ್1ಎನ್1 ಸೋಂಕು ಹರಡುತ್ತಿರುವ ಬಗ್ಗೆ, ತಮ್ಮ ಕ್ಷೇತ್ರಗಳಲ್ಲಿ ಎಚ್ಚರಿಕೆ ವಹಿಸುವ ಬಗ್ಗೆ ಮಾತನಾಡಿಕೊಂಡರು.
ಪರಿಸ್ಥಿತಿ ಹೀಗೇ ಮುಂದುವರಿದರೆ ಶಾಸಕರು, ಮಾಧ್ಯಮದವರು ಹಾಗೂ ಸಚಿವಾಲಯದ ಸಿಬ್ಬಂದಿ ಕೂಡ ಮಾಸ್ಕ್ ಹಾಕಿಕೊಂಡು ಬರಬೇಕಾಗುತ್ತದೆ ಎಂದು ಶಾಸಕರು ಚರ್ಚಿಸಿದ್ರು.
ಸದನದಲ್ಲಿ ಮಾಧ್ಯಮ ನಿರ್ಬಂಧ: ಕರಗದ ಕಾಗೇರಿ ಮನ, ನಾಡಿನ ನಾಡಿ ಚಂದನ!
ಜೊತೆಗೆ ತುರ್ತು ಕ್ರಮಗಳನ್ನು ಘೋಷಿಸುವಂತೆ ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವಥ್ ನಾರಾಯಣ, ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಅವರಿಗೆ ಮೊಗಸಾಲೆಯಲ್ಲಿಯೆ ಒತ್ತಾಯ ಮಾಡಿದ್ದಾರೆ. ಜೊತೆಗೆ ಸರ್ಕಾರ ಕೈಗೊಂಡಿರುವ ತುರ್ತುಕ್ರಮಗಳನ್ನು ಡಿಸಿಎಂ ಡಾ. ಅಶ್ವಥ್ ನಾರಾಯಣ ಅವರು ಶಾಸಕರಿಗೆ ತಿಳಿಸಿದ್ರು.
ಮೊಗಸಾಲೆಯಲ್ಲಿ ಮಾಹಿತಿ ಕೊಟ್ಟ ಡಿಸಿಎಂ ಡಾ. ಅಶ್ವಥ್ ನಾರಾಯಣ್
ಆಡಳಿತ ಪಕ್ಷದ ಮೊಗಸಾಲೆಯಲ್ಲಿ ಶಾಸಕರಿಗೆ ಸರ್ಕಾರ ಕೈಗೊಂಡಿರುವ ಕ್ರಮಗಳ ಮಾಹಿತಿ ಕೊಟ್ಟ ಡಿಸಿಎಂ ಡಾ. ಅಶ್ವಥ್ ನಾರಾಯಣ ಅವರು, ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ಇದನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಸಿಎಂ ಸೂಚನೆ ಕಾರಣದಿಂದಲೇ ಮಗಳ ಮದುವೆ ಸಿದ್ದತೆಯನ್ನು ಬಿಟ್ಟು ಆರೋಗ್ಯ ಸಚಿವ ಶ್ರೀರಾಮುಲು ವಿಧಾನಸೌಧಕ್ಕೆ ಧಾವಿಸಿದ್ದಾರೆ. ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳ ತುರ್ತುಸಭೆ ನಡೆಸುತ್ತಿದ್ದಾರೆ ಎಂದು ಆತಂಕಿತರಾಗಿದ್ದ ಶಾಸಕರಿಗೆ ಮಾಹಿತಿ ನೀಡಿದ್ರು.
ಟೆಕ್ಕಿಗೆ ಕೊರೊನಾ; ಮಹತ್ವದ ಸಭೆ ಕರೆದ ಆರೋಗ್ಯ ಸಚಿವ ಶ್ರೀರಾಮುಲು
ವಿಧಾನಸಭೆ ಸಭಾಂಗಣದಲ್ಲಿ ಶ್ರೀರಾಮುಲು ಕರೆದು ಮಾತನಾಡಿದ ಸಿಎಂ
ರಾಜ್ಯಕ್ಕೂ ಕೊರೋನಾ ವೈರಸ್ ಭೀತಿ ಕಾಡುತ್ತಿದ್ದಂತೆಯೆ ಆರೋಗ್ಯ ಸಚಿವ ಶ್ರೀರಾಮುಲು ಅವರನ್ನು ಕರೆದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾತನಾಡಿದ್ರು. ವಿಧಾನಸಭೆಯ ಸಭಾಂಗಣದಲ್ಲಿ ಆರೋಗ್ಯ ಸಚಿವರನ್ನು ಕರೆದು ಮಾಹಿತಿ ಪಡೆದುಕೊಂಡ ಸಿಎಂ ಯಡಿಯೂರಪ್ಪ ಅವರು, ಸೂಕ್ತ ನಿಗಾ ವಹಿಸುವಂತೆ ಶ್ರೀರಾಮುಲು ಅವರಿಗೆ ಸೂಚಿಸಿದ್ರು. ವಿಧಾನಸಭೆ ಕಲಾಪ ಆರಂಭವಾಗುವುದಕ್ಕು ಮೊದಲು ಸಿಎಂ, ಸಚಿವರು, ಸೇರಿದಂತೆ ಸದಸ್ಯರು ವಿಧಾನಸಭೆ ಸಭಾಂಗಣದಲ್ಲಿ ಕುಳಿತಿದ್ದಾಗ ಸಿಎಂ ಮಾಹಿತಿ ಪಡೆದುಕೊಂಡರು.
ವಿಧಾನಸೌಧದಲ್ಲಿ ತುರ್ತು ಸಭೆ ನಡೆಸಿದ ಆರೋಗ್ಯ ಸಚಿವರು
ಕೊರೋನಾ ವೈರಸ್ ಭೀತಿ ರಾಜ್ಯಕ್ಕೆ ಕಾಲಿಟ್ಟ ತಕ್ಷಣ ಆರೋಗ್ಯ ಸಚಿವ ಶ್ರೀರಾಮುಲು ಅವರು ವಿಧಾನಸೌಧದಲ್ಲಿ ತುರ್ತು ಸಭೆ ನಡೆಸಿದರು. ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು, ಸರ್ಕಾರದ ಉನ್ನತಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಕೊರೋನಾ ವೈರಸ್ ಪತ್ತೆಯಾಗಿರುವ ತೆಲಂಗಾಣದ ಟೆಕ್ಕಿ ಬೆಂಗಳೂರಿನಲ್ಲಿದ್ದರು ಎಂಬುದು ಆತಂಕಕ್ಕೆ ಕಾರಣವಾಗಿದೆ. ಇದೇ ಹಿನ್ನೆಲೆಯಲ್ಲಿ ತುರ್ತು ಸಭೆಯನ್ನು ಶ್ರೀರಾಮುಲು ಕರೆದಿದ್ದರು.
ಆತಂಕ ಬೇಡ ಎಂದ ಆರೋಗ್ಯ ಸಚಿವ ಶ್ರೀರಾಮುಲು
ಆರಂಭದಲ್ಲಿ ಕೊರೋನಾ ವೈರಸ್ ಬಗ್ಗೆ ನಮಗೂ ಆತಂಕವಿತ್ತು. ಆದರೆ ಈಗಾಗಲೇ ಎಲ್ಲ ಮುಂಜಾಗೃತ ಕ್ರಮ ತೆಗೆದುಕೊಂಡಿದ್ದೇವೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಅವರು ಹೇಳಿಕೆ ಕೊಟ್ಟಿದ್ದಾರೆ. ಕರಾವಳಿ ಬಂದರು ಹಾಗೂ ಏರ್ಪೋರ್ಟ್ಗಳಲ್ಲಿ ರಕ್ತಪರೀಕ್ಷೆ ಮಾಡಲಾಗುತ್ತಿದೆ. ಸುಮಾರು 300 ಜನ ವಿದೇಶಿ ಪ್ರವಾಸಿಗರ ರಕ್ತಪರಿಕ್ಷೆಯಲ್ಲಿ ನೆಗೆಟೀವ್ ಬಂದಿತ್ತು. ರಾಜ್ಯದ ಎಲ್ಲಾ ಖಾಸಗಿ ಸರ್ಕಾರಿ ಆಸ್ಪತ್ರೆಗಳಲ್ಲಿ 10 ಬೆಡ್ಗಳನ್ನು ಕೊರೋನೋ ವೈರಸ್ ಚಿಕಿತ್ಸೆಗೆ ಮೀಸಲಿಡಲಾಗಿದೆ. ತೆಲಂಗಾಣದ ವ್ಯಕ್ತಿ 3 ದಿನಗಳ ಕಾಲ ಬೆಂಗಳೂರಿನಲ್ಲಿ ಇದ್ದರು ಅನ್ನೋ ಮಾಹಿತಿ ಇದೆ. ಈ ಹಿಂದೆ ಸಾಕಷ್ಟು ಸುರಕ್ಷಾ ಕ್ರಮ ಕೈಗೊಳ್ಳಲಾಗಿತ್ತು. ಹೈದರಾಬಾದ್ನಲ್ಲಿರುವ ಅವರು ಯಾರು ಎಂದು ನಮಗೆ ಗೊತ್ತಿಲ್ಲ. ದುಬೈನಲ್ಲಿ ಕೆಲಸ ಮಾಡುತ್ತಿದ್ದರು. ಅವರಿಗೆ ಸ್ನೇಹಿತರಿದ್ದರು, ಅಲ್ಲಿಂದ ಬಂದಿದ್ದಾರೆ ಅನ್ನೋ ಮಾಹಿತಿ ಮಾತ್ರ ಇದೆ. ರಾಜ್ಯದಲ್ಲೂ ಈಗಾಗಲೆ ಸಾಕಷ್ಟು ಮುಂಜಾಗೃತ ಕ್ರಮ ಕೈಗೊಳ್ಳಲಾಗಿದೆ. ಎಲ್ಲೂ ಹರಡದಂತೆ ನಿಗವಹಿಸುತ್ತೀವೆ. ರಾಜ್ಯದ ಜನ ಕೊರೋನೋ ವೈರಸ್ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಸಚಿವ ಶ್ರೀರಾಮುಲು ಭರವಸೆ ಕೊಟ್ಟಿದ್ದಾರೆ.