ಶ್ರೀರಾಮುಲು ನಿವೃತ್ತಿ ಹೇಳಿಕೆ ಬಳಿಕ ಡಿಸಿಎಂ ಹುದ್ದೆ ಚರ್ಚೆ ಮತ್ತೆ ಶುರು
Recommended Video
ಬೆಂಗಳೂರು, ಅಕ್ಟೋಬರ್ 14: ಉಪ ಮುಖ್ಯಮಂತ್ರಿ ಹುದ್ದೆ ಬಗ್ಗೆ ಮತ್ತೆ ಚರ್ಚೆ ಆರಂಭವಾಗಿದೆ.
ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಸಚಿವ ಬಿ. ಶ್ರೀರಾಮುಲು ಅವರನ್ನು ಉಪಮುಖ್ಯಮಂತ್ರಿ ಮಾಡಬೇಕೆಂಬ ಚರ್ಚೆ ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ.
ರಾಜಕೀಯ ನಿವೃತ್ತಿಯ ಬಗ್ಗೆ ಮಾತನಾಡಿದ ಆರೋಗ್ಯ ಸಚಿವ ಶ್ರೀರಾಮುಲು
ಸ್ವತಃ ಶ್ರೀರಾಮುಲು ಅವರೇ ಉಪಮುಖ್ಯಮಂತ್ರಿ ಸ್ಥಾನದ ವಿಚಾರವಾಗಿ ತಮ್ಮ ಮನದಾಳದ ಇಂಗಿತವನ್ನು ವ್ಯಕ್ತಪಡಿಸಿದ್ದು, ಇದಕ್ಕೆ ಶಾಸಕ ಜಿ. ಸೋಮಶೇಖರ ರೆಡ್ಡಿ ಅವರಿಂದಲೂ ಬೆಂಬಲ ವ್ಯಕ್ತವಾಗಿದೆ.
ವಾಲ್ಮೀಕಿ ಸಮುದಾಯಕ್ಕೆ ಡಿಸಿಎಂ ಪಟ್ಟ ನೀಬೇಕೆಂದು ಒತ್ತಾಯ
ವಾಲ್ಮೀಕಿ ಸಮುದಾಯಕ್ಕೆ ಉಪಮುಖ್ಯಮಂತ್ರಿ ಹುದ್ದೆ ನೀಡಬೇಕೆಂಬ ವಾಲ್ಮೀಕಿ ಪೀಠದ ಶ್ರೀಗಳ ಒತ್ತಾಯಕ್ಕೆ ಸಂಬಂಧಿಸಿ ಮಾತನಾಡಿದ ಶ್ರೀರಾಮುಲು , ಶ್ರೀಗಳ ಒತ್ತಾಯ ಕುರಿತು ನಾನೇನು ಪ್ರತಿಕ್ರಿಯಿಸುವುದಿಲ್ಲ. ನಾನು ಉಪಮುಖ್ಯಮಂತ್ರಿಯಾಗಬೇಕೆಂಬುದು ವಾಲ್ಮೀಕಿ ಸಮಾಜ ಅಷ್ಟೇ ಅಲ್ಲ, ಎಲ್ಲ ಸಮುದಾಯಗಳ ಬೇಡಿಕೆಯೂ ಆಗಿದೆ.
ಈಗಿರುವ ಉಪಮುಖ್ಯಮಂತ್ರಿ ಯಾರ್ಯಾರು?
ಸದ್ಯ ರಾಜ್ಯದಲ್ಲಿ ಗೋವಿಂದ ಕಾರಜೋಳ, ಅಶ್ವತ್ಥ ನಾರಾಯಣ ಹಾಗೂ ಲಕ್ಷ್ಮಣ ಸವದಿ ಅವರು ಡಿಸಿಎಂ ಆಗಿದ್ದಾರೆ. 2018ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಶ್ರೀರಾಮುಲು ಅವರು ಉಪಮುಖ್ಯಮಂತ್ರಿಯಾಗಲಿದ್ದಾರೆ ಎಂಬ ಹೇಳಿಕೆಗಳು ಕೇಳಿಬಂದಿದ್ದವು. ಆದರೆ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಪತನದ ಬಳಿಕ ಅಸ್ತಿತ್ವಕ್ಕೆ ಬಂದ ಸರ್ಕಾರದಲ್ಲಿ ರಾಮುಲು ಮಂತ್ರಿ ಸ್ಥಾನಕ್ಕಷ್ಟೇ ತೃಪ್ತಿಪಟ್ಟುಕೊಳ್ಳುವಂತಾಗಿತ್ತು.
ನಮಗೆ ಡಿಸಿಎಂ ಸ್ಥಾನ ಬೇಡ ಎಂದ ರಾಜೂಗೌಡ
ಸಚಿವ ಶ್ರೀರಾಮುಲು ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ಹಾಗೂ ಬಳ್ಳಾರಿ ಉಸ್ತುವಾರಿ ನೀಡಬೇಕಿತ್ತು ಎಂದು ಅತ್ತ ಬಳ್ಳಾರಿಯಲ್ಲಿ ಶಾಸಕ ಸೋಮಶೇಖರ್ ರೆಡ್ಡಿ ಹೇಳಿಕೆ ನೀಡಿದ್ದರೆ, ಇತ್ತ ಬೆಂಗಳೂರಿನಲ್ಲಿ ಶಾಸಕ ರಾಜೂಗೌಡ ನಮ್ಮ ಸಮುದಾಯಕ್ಕೆ ಉಪಮುಖ್ಯಮಂತ್ರಿ ಸ್ಥಾನ ಯಾವುದೇ ಬೇಡ, ಪ್ರತ್ಯೇಕ ಸಚಿವಾಲಯ ನೀಡಿ, ಮೀಸಲಾತಿ ಪ್ರಮಾಣ ಹೆಚ್ಚಿಸಿ ಸಾಕು ಎಂದು ಹೇಳಿದ್ದಾರೆ.
ಶ್ರೀರಾಮುಲು ಡಿಸಿಎಂ ಆಗ್ತಾರೆ ಎಂದು ಅಮಿತ್ ಶಾ ಹೇಳಿದ್ದರು
ಶ್ರೀರಾಮುಲು ಉಪಮುಖ್ಯಮಂತ್ರಿ ಆಗಬೇಕೆಂಬ ಕೂಗಿಗೆ ಬಳ್ಳಾರಿ ನಗರ ಶಾಸಕ ಜನಾರ್ಧನ ರೆಡ್ಡಿ ಸಹೋದರ ಜಿ ಸೋಮಶೇಖರ ರೆಡ್ಡಿಯಿಂದಲೂ ಬೆಂಬಲ ವ್ಯಕ್ತವಾಗಿದೆ. ಶ್ರೀರಾಮುಲು ಉಪಮುಖ್ಯಮಂತ್ರಿ ಆಗಬೇಕೆಂಬುದು ನಮ್ಮೆಲ್ಲರ ಒತ್ತಾಸೆಯಾಗಿದೆ ಎಂದು ಅವರು ತಿಳಿಸಿದ್ದಾರೆ.
ಬಿಜೆಪಿ ಅಧ್ಯಕ್ಷ ಅಮಿತ್ ಷಾ ಅವರೇ ಶ್ರೀರಾಮುಲು ಉಪಮುಖ್ಯಮಂತ್ರಿಯಾಗುತ್ತಾರೆ ಎಂದು ಘೋಷಿಸಿದ್ದರು. ಆದರೂ ಕೊನೆಯ ಘಳಿಗೆಯಲ್ಲಿ ಅವರ ಹೆಸರನ್ನು ಯಾಕೆ ತಡೆ ಹಿಡಿಯಲಾಯಿತೋ ಗೊತ್ತಿಲ್ಲ ಅದಕ್ಕೆ ಬೇಸರವಿದೆ ಎಂದು ಹೇಳಿದರು.
ಹಣೆಬರಹದಲ್ಲಿದ್ದರೆ ಉಮೇಶ್ ಕತ್ತಿ ಡಿಸಿಎಂ ಆಗ್ತಾರೆ
ಯಾರಿಗೆ ಯಾವ ಸಂದರ್ಭದಲ್ಲಿ ಯಾವ ಅವಕಾಶ ಸಿಗುತ್ತದೆ ಎಂಬುದನ್ನು ಹೇಳಲು ಸಾಧ್ಯವಿಲ್ಲ.ಮಾಜಿ ಸಚಿವ ಉಮೇಶ್ ಕತ್ತಿ ಅವರ ಹಣೆಬರಹದಲ್ಲಿ ಉಪ ಮುಖ್ಯಮಂತ್ರಿ ಆಗಬೇಕೆಂದಿದ್ದರೆ ಆಗಿಯೇ ಆಗುತ್ತಾರೆ ಎಂದು ಲಕ್ಷ್ಮಣ ಸವದಿ ಹೇಳಿದ್ದಾರೆ.