ಎಲ್ಲರನ್ನೂ ಕೇಳಿದೆ ಆದರೆ ಮಾಹಿತಿ ಕೊಟ್ಟಿದ್ದು ಶ್ರೀರಾಮುಲು ಮಾತ್ರ: ಸಿದ್ದರಾಮಯ್ಯ!
ಬೆಂಗಳೂರು, ಸೆ. 22: ವಿಧಾನ ಸಭೆ ಕಲಾಪದಲ್ಲಿ ನಿರೀಕ್ಷೆಯಂತೆ ಕೋವಿಡ್ ಕಾಲದ ಖರೀದಿ ಭ್ರಷ್ಟಾಚಾರದ ಪ್ರತಿದ್ವನಿಸುತ್ತಿದೆ. ನಿಯಮ 69ರಡಿ ಚರ್ಚೆಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಅವಕಾಶ ಮಾಡಿಕೊಟ್ಟಿದ್ದು, ಕಾಂಗ್ರೆಸ್ ಸದಸ್ಯರು ಎಳೆ ಎಳೆಯಾಗಿ ವೈದ್ಯಕೀಯ ಸಲಕರಣೆ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಸದನದಲ್ಲಿ ಚರ್ಚೆ ವಿವರಿಸಿದ್ದಾರೆ.
ಇದೇ ಸಂದರ್ಭದಲ್ಲಿ ಮಾತನಾಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು, ಕೋವಿಡ್ ಕಾಲದ ಖರೀದಿ ಹಗರಣದ ಬಗ್ಗೆ ಕೋವಿಡ್ ಬಗ್ಗೆ ಚರ್ಚೆ ನಡೆಸಲು ಸರ್ವಪಕ್ಷ ಸಭೆ ಕರೆಯುವಂತೆ ಹಲವಾರು ಪತ್ರ ಬರೆದಿದ್ದೆವು. ಬಳಿಕ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅತ್ತು ಕರೆದು ಸರ್ವಪಕ್ಷ ಸಭೆ ಮಾಡಿದರು. ನಾವು ಹಲವಾರು ಸಲಹೆಗಳನ್ನು ಕೊಟ್ಟಿದ್ದೇವು. ಸಭೆಯ ನಂತರವೂ ಕೋವಿಡ್ ನಿರ್ವಹಣೆ ಕುರಿತು ಸಲಹೆ ನೀಡಲು ಹಲವು ಪತ್ರಗಳನ್ನು ಬರೆದೆವು. ಆದರೆ ಯಾವುದಕ್ಕೂ ಇಲ್ಲಿಯವರೆಗೆ ಉತ್ತರವಿಲ್ಲ. ಈ ಸರ್ಕಾರವನ್ನು ನಾವು ಪ್ರಜಾಪ್ರಭುತ್ವ ಸರ್ಕಾರ ಅಂತಾ ಕರೆಯ ಬೇಕಾ? ಎಂದು ಪ್ರಶ್ನೆ ಮಾಡಿದ್ದಾರೆ. ಕೊರೊನಾ ವಿಚಾರದಲ್ಲಿ ನಾವು ಸರ್ಕಾರಕ್ಕೆ ಎಲ್ಲಾ ರಿತೀಯ ಸಹಕಾರ ನೀಡಿದ್ದೇವೆ. ಆದರೆ, ಸರ್ಕಾರದ ನಿರ್ಲಕ್ಷ್ಯ ಧೋರಣೆಯಿಂದ ನಾವು ಮಾಧ್ಯಮಗಳ ಮುಂದೆ ಹೋಗಬೇಕಾಯಿತು ಎಂದು ವಿವರಿಸಿದರು.
ರಾಜ್ಯದಲ್ಲಿ ಯಡಿಯೂರಪ್ಪ ಬದಲಾವಣೆ ಕುರಿತು ಬಿಜೆಪಿ ಅಧಿಕೃತ ಹೇಳಿಕೆ!
ಸರ್ಕಾರ ಸುಳ್ಳು ಹೇಳುತ್ತಿದೆ!
ಕೋವಿಡ್-19 ವೈದ್ಯಕೀಯ ಸಲಕರಣೆಗಳ ಖರೀದಿಯಲ್ಲಿ ಅವ್ಯವಹಾರ ನಡೆಯುತ್ತಿದೆ ಎಂಬ ಮಾಹಿತಿ ನಮಗೆ ಬರುತ್ತಿತ್ತು. ಕೊನೆಗೆ ಸರ್ಕಾರದ ನಿರ್ಲಕ್ಷ್ಯ ಧೋರಣೆಯಿಂದ ನಾನು ಮತ್ತು ನಮ್ಮ ಪಕ್ಷದ ಅಧ್ಯಕ್ಷರು ಜಂಟಿ ಸುದ್ಧಿಗೋಷ್ಠಿ ನಡೆಸಿದೆವು. ಕೋವಿಡ್ಗಾಗಿ ವಿವಿಧ ಇಲಾಖೆಗಳು 4 ಸಾವಿರ ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ. ನಾವು ಹೇಳಿದ್ದಕ್ಕೆ ಸ್ಪಷ್ಟನೆ ಕೊಟ್ಟಿರುವ ಸರ್ಕಾರ ತಾನು ಖರ್ಚು ಮಾಡಿರುವುದು ಕೇವಲ 323 ಕೋಟಿ ರೂ. ಮಾತ್ರ ಎಂದಿತು. ಸಿದ್ದರಾಮುಯ್ಯ ಸುಳ್ಳು ಹೇಳುತ್ತಿದ್ದಾರೆ ಎಂದರು.
3 ಪಟ್ಟು ಹೆಚ್ಚು ಹಣ ಕೊಟ್ಟು ಖರೀದಿ
ಆದರೆ, ಕೋವಿಡ್ ನಿರ್ವಹಣೆಯಲ್ಲಿ 2 ಸಾವಿರ ಕೋಟಿ ರೂ. ಅವ್ಯವಹಾರ ನಡೆದಿದೆ. ಎರಡು, ಮೂರು ಪಟ್ಟು ಹೆಚ್ಚಿಗೆ ಹಣ ಕೊಟ್ಟು ಸಾಮಾಗ್ರಿಗಳನ್ನು ಖರೀದಿ ಮಾಡಿದ್ದಾರೆ. 330 ರೂಪಾಯಿಯ ಪಿಪಿಇ ಕಿಟ್ಗಳಿಗೆ 620, 725, 800, 2100 ರೂಪಾಯಿ ಕೊಟ್ಟು ಖರೀದಿಸಿದ್ದಾರೆ. ಸರಿಸುಮಾರು 7 ಪಟ್ಟು ಹೆಚ್ಚು ಹಣ ನೀಡಿದ್ದಾರೆ. ಇನ್ನೂ ಚೀನಾದಿಂದಲೇ 3 ಲಕ್ಷ ಕಿಟ್ಗಳನ್ನು ಆಮದು ಮಾಡಿಕೊಂಡಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದರು.
ಇಷ್ಟೊಂದು ಹಣ ಯಾಕೆ ಕೊಟ್ಟಿದ್ದೀರಿ?
ಚೀನಾದಿಂದ 3 ಲಕ್ಷ ಕಿಟ್ಗಳನ್ನು ಆಮದು ಮಾಡಿಕೊಂಡಿದ್ದಾರೆ. ಜೊತೆಗೆ ಭಾರತದಲ್ಲಿ ಉತ್ಪಾದಿಸಿದ 70 ಸಾವಿರ ಪಿಪಿಇ ಕಿಟ್ಗಳನ್ನು ಪ್ರತಿ ಕಿಟ್ಗೆ 1,444 ರೂಪಾಯಿ ಕೊಟ್ಟು ಖರೀದಿ ಮಾಡಿದ್ದಾರೆ. N95 ಮಾಸ್ಕ್ಗಳಿಗೆ 147 ರೂಪಾಯಿಗಳಿಂದ 156 ರೂಪಾಯಿ ವರೆಗೆ ಬೆಲೆ ಕೊಟ್ಟು ಖರೀದಿಸಿದ್ದಾರೆ. ಸಗಟು ದರದಲ್ಲಿ ಮಾಸ್ಕ್ ಖರೀದಿಸಿದ್ದರೆ 50 ರೂಪಾಯಿಗಳಿಗೆ ಒಂದು ಮಾಸ್ಕ್ ಸಿಗುತ್ತಿತ್ತು. ಆದರೆ ಇಷ್ಟು ಹಣವನ್ನು ಯಾಕೆ ಕೊಟ್ಟಿದ್ದೀರಿ? ಎಂದು ಸಿದ್ದರಾಮಯ್ಯ ಅವರು ಸರ್ಕಾರವನ್ನು ಪ್ರಶ್ನೆ ಮಾಡಿದರು.
ಸರ್ಕಾರಕ್ಕೆ ಸಿದ್ದರಾಮಯ್ಯ ಸವಾಲು!
ಇನ್ನು ವೆಂಟಿಲೇಟರ್ ಖರೀದಿಯಲ್ಲಿ ಒಂದಕ್ಕೆ 18 ಲಕ್ಷ ರೂ., 12 ಲಕ್ಷ ರೂ., ಕೊಟ್ಟು ಖರೀದಿಸಿದ್ದಾರೆ. ಯಾವ ಮಾದರಿಯ ರೋಗಿಗೆ ಯಾವ ವೆಂಟಿಲೇಟರ್ ಬಳಸಲಾಗುತ್ತದೆ? ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಲಿ ಎಂದು ಸದನದಲ್ಲಿ ಸರ್ಕಾರಕ್ಕೆ ಸಿದ್ದರಾಮಯ್ಯ ಅವರು ಸವಾಲು ಹಾಕಿದರು.
Recommended Video
ಮಾಹಿತಿ ಕೊಟ್ಟಿದ್ದು ಆರೋಗ್ಯ ಇಲಾಖೆ ಮಾತ್ರ
ನಾನು ಎಲ್ಲಾ ಇಲಾಖೆಗಳಿಗೆ ಪತ್ರ ಬರಿದಿದ್ದೆ. ಆದರೆ ಉತ್ತರ ಕೊಟ್ಟಿದ್ದು ಶ್ರೀರಾಮುಲು ಅವರ ಆರೋಗ್ಯ ಇಲಾಖೆ ಮಾತ್ರ. ಉಳಿದ ಯಾವುದೇ ಇಲಾಖೆಗಳು ಮಾಹಿತಿಯನ್ನೇ ನೀಡಲಿಲ್ಲ. ಕೊನೆಗೆ ನಾವೇ ಕೆಲವು ಮೂಲಗಳಿಂದ ಮಾಹಿತಿ ಪಡೆದೆವು. ಸರ್ಕಾರ ಪಾರದರ್ಶಕವಾಗಿದ್ರೆ ಲೆಕ್ಕ ಕೊಡಲಿ.
ಕೆಲವು ಸರ್ಕಾರದ ಪ್ರತಿನಿಧಿಗಳು ಹೇಳಿದ್ದರು. ಏನು ಸಿದ್ದರಾಮಯ್ಯ ಲೆಕ್ಕ ಕೇಳಿದ್ರೆ ಕೊಡ್ಬೇಕಾ ಅಂದರು. ಫುಡ್ ಕಿಟ್, ಕಾರ್ಮಿಕರ ಪ್ರಯಾಣದ ವೆಚ್ಚ ಎಲ್ಲವನ್ನೂ ಲೆಕ್ಕ ಕೊಡಿ ಎಂದು ತಮ್ಮ ಮಾತಿನ ಮಧ್ಯೆ ಸಿದ್ಧರಾಮಯ್ಯ ಆಗ್ರಹಿಸಿದರು.