ಸಂವಿಧಾನ ಮೊದಲು ರಚನೆ ಮಾಡಿದ್ದು ಎಂ.ಎನ್. ರಾಯ್: ಬಿಜೆಪಿ ಶಾಸಕ
ಬೆಂಗಳೂರು, ಮಾ. 04: ಭಾರತದ ಸಂವಿಧಾನ ಮೊದಲು ರಚಿಸಿದ್ದು ಎಂ.ಎನ್. ರಾಯ್ ಎಂದು ಬಿಜೆಪಿ ಸದಸ್ಯ, ಚಿಕ್ಕೋಡಿ ಶಾಸಕ ಪಿ. ರಾಜೀವ್ ವಿಧಾನಸಭೆಯಲ್ಲಿ ಹೇಳಿದ್ದಾರೆ. ಆ ಮೂಲಕ ಸಂವಿಧಾನದ ಕುರಿತು ಮತ್ತೊಂದು ಚರ್ಚೆಯನ್ನು ಶಾಸಕ ರಾಜೀವ್ ಹುಟ್ಟುಹಾಕಿದ್ದಾರೆ. ವಿಧಾನಸಭೆಯಲ್ಲಿ ಭಾರತದ ಸಂವಿಧಾನದ ಮೇಲೆ ನಡೆಯುತ್ತಿರುವ ವಿಶೇಷ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ್ದಾರೆ.
ಸೈಮನ್ ಕಮೀಷನ್ ಭಾರತಕ್ಕೆ ಬಂದು ಭಾರತೀಯರನ್ನು ನಾಯಿಗಳು ಎಂದು ಮೂದಲಿಸಿ ಭಾರತೀಯರಿಗೆ ತಮ್ಮದೇ ಆದ ಸಂವಿಧಾನ ಸಿದ್ದಪಡಿಸುವ ಸಾಮರ್ಥ್ಯವಿಲ್ಲ ಎಂದು ಟೀಕಿಸಿತ್ತು. ಅದನ್ನು ಸವಾಲಾಗಿ ಸ್ವೀಕರಿಸಿದ ಎಂ.ಎನ್. ರಾಯ್ ಅವರು 1931ರಲ್ಲಿಯೆ 'ಕಾನ್ಸ್ಟ್ಯುಟಿಂಗ್ ನ್ಯೂ ಇಂಡಿಯಾ' ಎಂಬ ಗ್ರಂಥ ರಚನೆ ಮಾಡಿದ್ದರು.
ಆದರೆ ಎಂ.ಎನ್. ರಾಯ್ ಅವರು ಕಮ್ಯುನಿಷ್ಟ್ ಪಾರ್ಟಿಯವರು ಎಂಬ ಕಾರಣಕ್ಕೆ ಕಾಂಗ್ರೆಸ್ ಅದನ್ನು ಒಪ್ಪದೆ ಪ್ರತ್ಯೇಕ ಸಂವಿಧಾನ ರಚನೆಯ ಕಾರ್ಯಕ್ಕೆ ಮುಂದಾಯ್ತು ಎಂದು ಪಿ. ರಾಜೀವ್ ಚರ್ಚೆ ಮಾಡಿದ್ದಾರೆ.
ಮಾಜಿ ಸಚಿವ ಎಚ್.ಕೆ. ಪಾಟೀಲ್ ಆಕ್ಷೇಪ
ಇದಕ್ಕೂ ಮೊದಲೇ ಸಂವಿಧಾನ ಕರಡು ರಚನಾ ಸಮಿತಿಯ ಸದಸ್ಯರಾಗಿದ್ದ ಎಂ.ಎನ್. ರಾವ್ ಹೆಸರನ್ನು ಸ್ಪೀಕರ್ ವಿಶ್ವೇಶ್ವರ ಹೆಗಡೆ ಪ್ರಾಸ್ತಾವಿಕ ಭಾಷಣದಲ್ಲಿ ಸೇರ್ಪಡೆ ಮಾಡಿಕೊಂಡಿದ್ದಕ್ಕೆ ಮಾಜಿ ಸಚಿವ, ಕಾಂಗ್ರೆಸ್ ಸದಸ್ಯ ಹೆಚ್.ಕೆ. ಪಾಟೀಲ್ ಆಕ್ಷೇಪ ವ್ಯಪ್ತಪಡಿಸಿದ್ದರು. ಆಗ ಮಧ್ಯ ಪ್ರವೇಶ ಮಾಡಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು, ಸಂವಿಧಾನ ರಚನೆಯ ವಿಚಾರದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಬಗ್ಗೆ ಅಪಾರವಾದ ಗೌರವವಿದೆ. ಕರಡು ಸಮಿತಿಯಲ್ಲಿದ್ದ ಎಂಟು ಜನರು ಹಿಂದೆ ಸರಿದ ನಂತರವೂ ಡಾ.ಬಿ.ಆರ್. ಅಂಬೇಡ್ಕರ್ ಒಬ್ಬರೇ ಸಂವಿಧಾನ ಕರಡು ಸಿದ್ದಪಡಿಸಿದ್ರು. ದಮನಿತರು ತುಳಿತಕ್ಕೆ ಒಳಗಾದವರಿಗೆ ನೆರವಾಗಬೇಕು, ಅವರನ್ನು ಮೇಲೆತ್ತಬೇಕು ಎಂಬುದು ಅವರ ಉದ್ದೇಶವಾಗಿತ್ತು. ಸಂವಿಧಾನ ರಚನೆಯ ಸಕಲ ಗೌರವವೂ ಡಾ.ಬಿಆರ್. ಅಂಬೇಡ್ಕರ್ ಅವರೊಬ್ಬರಿಗೇ ಸಲ್ಲಬೇಕು ಎನ್ನುವ ಮೂಲಕ ಆಕ್ಷೇಪಕ್ಕೆ ತೆರೆ ಹಾಡಿದ್ರು.
ಸಮಿತಿ ರಚನೆಗೆ ಮೊದಲೇ ಕರಡು ಸಿದ್ಧಪಡಿಸಿದ್ದರು
ಸಂವಿಧಾನ ರಚನಾ ಸಮಿತಿ ರಚನೆಗೆ ಮೊದಲೇ ಎಂ.ಎನ್. ರಾವ್ ಭಾರತ ಸಂವಿಧಾನ ಪ್ರತಿ ಸಿದ್ದಪಡಿಸಿದ್ದರು ಎಂದು ಹೇಳಲಾಗುತ್ತಿದೆ. ಹಾಗಾಗಿಯೇ ಸಂವಿಧಾನ ರಚನಾ ಕರಡು ಸಮಿತಿಗೆ ಎಂ.ಎನ್. ರಾವ್ ಕೂಡ ಸದಸ್ಯರಾಗಿದ್ದರು ಎಂದು ಬಿಜೆಪಿ ಸದಸ್ಯ ಪಿ. ರಾಜೀವ್ ಅವರು ಚರ್ಚೆ ಸಂದರ್ಭ ಹೇಳಿದ್ರು.
ಡಾ. ಅಂಬೇಡ್ಕರ್ ಅವರಿಗೆ ಭಾಷಾಂತಕಾರರ ಅಗತ್ಯವಿರಲಿಲ್ಲ!
ಕಾಂಗ್ರೆಸ್ ಸದಸ್ಯ, ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಮಧ್ಯ ಪ್ರವೇಶ ಮಾಡಿ, ಸಂದರ್ಶನವೊಂದರಲ್ಲಿ ಎಂ.ಎನ್. ರಾವ್ ಅವರು ಇಂಗ್ಲೀಷ್ ಭಾಷೆಯ ಮೇಲೆ ಪ್ರಭುತ್ವಹೊಂದಿದ್ದರು. ಹಾಗಾಗಿ ಅವರು ಡಾ.ಬಿ.ಆರ್. ಅಂಬೇಡ್ಕರ್ ಅವರಿಗೆ ಭಾಷಾಂತರಕಾರಾಗಿ ಕೆಲಸ ಮಾಡಿದ್ರು ಎಂದು ಹೇಳಲಾಗಿದೆ. ಆದರೆ ಅಂಬೇಡ್ಕರ್ ಸ್ವತಃ ಆಕ್ಸಫರ್ಡ್ನಲ್ಲಿ ಕಲಿತು ಬಂದವರು. ಇಂಗ್ಲೀಷ್ ಭಾಷೆಯಲ್ಲಿ ಪ್ರಭುತ್ವ ಸಾಧಿಸಿದ್ದವರು. ಅವರಿಗೆ ಭಾಷಾಂತರಕಾರರ ಅಗತ್ಯವೇ ಇರಲಿಲ್ಲ. ಹೀಗಾಗಿ ಸಂವಿಧಾನ ರಚನೆಯ ಸಂಪೂರ್ಣ ಗೌರವ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ ಎಂದರು.
ವಿಧಾನಸಭೆಯಲ್ಲಿ ಸಂವಿಧಾನದ ಮೇಲೆ ವಿಶೇಷ ಚರ್ಚೆ
ನಿನ್ನೆಯಿಂದ ಎರಡು ದಿನಗಳ ಕಾಲ ಸಂವಿಧಾನದ ಮೇಲೆ ವಿಧಾನಸಭೆಯಲ್ಲಿ ವಿಶೇಷ ಚರ್ಚೆ ನಡೆಯುತ್ತಿದೆ. ಭಾರತ ಸಂವಿಧಾನ ಅಂಗೀಕರಿಸಿ 70 ವರ್ಷಗಳಾದ ಹಿನ್ನೆಲೆಯಲ್ಲಿ ವಿಶೇಷ ಚರ್ಚೆಗೆ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವಕಾಶ ಮಾಡಿಕೊಟ್ಟಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರ ಎಚ್ ಎಸ್ ದೊರೆಸ್ವಾಮಿ ಅವರ ಮೇಲೆ ಅವಹೇಳನಕಾರಿ ಹೇಳಿಕೆ ಖಂಡಿಸಿ ನಿನ್ನೆ ಕಾಂಗ್ರೆಸ್ ಧರಣಿ ಮಾಡಿತ್ತು. ರಾಜ್ಯಪಾಲರಿಗೆ ದೂರು ಕೊಟ್ಟು, ಕಾಂಗ್ರೆಸ್ ಸದಸ್ಯರು ಇವತ್ತು ಚರ್ಚೆಯಲ್ಲಿ ಭಾಗವಹಿಸಿದ್ದಾರೆ.