ಗೋ ಹತ್ಯೆ ನಿಷೇಧ: ಕಲಾಪ ಬಹಿಷ್ಕರಿಸಲು ಕಾಂಗ್ರೆಸ್ ನಿರ್ಧಾರ!
ಬೆಂಗಳೂರು, ಡಿ. 09: ವಿಧಾನಸಭೆಯಲ್ಲಿ ಏಕಾಏಕಿ ಗೋ ಹತ್ಯೆ ನಿಷೇಧ ವಿಧೇಯಕ ಮಂಡಿಸಿ ಅಂಗೀಕಾರ ಪಡೆದುಕೊಂಡ ರೀತಿಯನ್ನು ಖಂಡಿಸಿ ಕಲಾಪ ಬಹಿಷ್ಕರಿಸಲು ಪ್ರಮುಖ ವಿರೋಧ ಪಕ್ಷ ಕಾಂಗ್ರೆಸ್ ನಿರ್ಧಾರ ಮಾಡಿದೆ. ಕಲಾಪ ಸಲಹಾ ಸಮಿತಿಯಲ್ಲಿ ಈ ಅಧಿವೇಶನದಲ್ಲಿ ಗೋ ಹತ್ಯೆ ನಿಷೇಧ ವಿಧೇಯಕ ಜಾರಿಗೆ ತರುವುದಿಲ್ಲ ಎಂದು ಸರ್ಕಾರ ಹೇಳಿತ್ತು. ಆದರೆ ಅದಕ್ಕೆ ವಿರುದ್ಧವಾಗಿ ಅಜೆಂಡಾದಲ್ಲಿಯೂ ಇರದ ವಿಧೇಯಕವನ್ನು ಮಂಡಿಸಿ ಅಂಗೀಕಾರ ಪಡೆದುಕೊಳ್ಳುವಲ್ಲಿಯೂ ಸರ್ಕಾರ ಸಫಲವಾಗಿದೆ.
ಆದರೆ ಇದು ಪ್ರಜಾಪ್ರಭುತ್ವ ವಿರೋಧಿ ನಡೆ ಎಂದು ಆರೋಪಿಸಿರುವ ಕಾಂಗ್ರೆಸ್ ನಾಯಕರು ಕೊನೆಯ ದಿನದ ಕಲಾಪವನ್ನು ಬಹಿಷ್ಕರಿಸಲು ನಿರ್ಧಾರ ಮಾಡಿದ್ದಾರೆ. ಹೀಗಾಗಿ ನಾಳೆ (ಡಿ. 10) ರಂದು ವಿಧಾನಸಭೆ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯರು ಭಾಗವಹಿಸುತ್ತಿಲ್ಲ. ಗ್ರಾಮ ಪಂಚಾಯತ್ ಚುನಾವಣೆ ಹಿನ್ನೆಲೆಯಲ್ಲಿ ತರಾತುರಿಯಲ್ಲಿ ಈ ವಿಧೇಯಕ ತರಲಾಗಿದೆ ಎಂದು ವಿರೋಧ ಪಕ್ಷಗಳ ಸದಸ್ಯರು ಆರೋಪಿಸಿದರು.
ಇತಿಹಾಸದಲ್ಲಿ ಹೀಗಾಗಿರಲಿಲ್ಲ
ವಿಧಾನಸಭೆಯಲ್ಲಿ ಕೇಸರಿ ಶಾಲು ಹಾಕಿಕೊಂಡು ಗೋ ಹತ್ಯೆ ನಿಷೇಧ ವಿಧೇಯಕಕ್ಕೆ ಅಂಗೀಕಾರ ಪಡೆದಿರುವುದು ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ಸದಸ್ಯರನ್ನು ಕೆರಳಿಸಿದೆ. ಹೀಗಾಗಿ ವಿಧಾನಸಭೆಯಲ್ಲಿ ವಿಧೇಯಕ ಅಂಗೀಕಾರವಾಗುತ್ತಿದ್ದಂತೆಯೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು, ವಿಧಾನಸಭೆ ಇತಿಹಾಸದಲ್ಲಿ ಹೀಗೆ ಆಗಿರಲಿಲ್ಲ. ನೀವು ಆಡಳಿತ ಪಕ್ಷ ಹೇಳಿದ ಹಾಗೆ ಕೇಳುತ್ತಿದ್ದೀರಿ. ನೀವೂ ಐದಾರು ಬಾರಿ ಶಾಸಕರಾಗಿದ್ದೀರಿ. ನಿಮಗೆ ಇದೆಲ್ಲ ಗೊತ್ತಿಲ್ಲವಾ?
ಗೋಮಾತೆ ಮೇಲೆ ಪ್ರಮಾಣ ಮಾಡಿ: ಯಡಿಯೂರಪ್ಪಗೆ ಸಿದ್ದರಾಮಯ್ಯ ಸವಾಲು!
ಇದು ಪ್ರಜಾಪ್ರಭುತ್ವ ವಿರೋಧಿ ನಡೆ ಎಂದು ಸ್ಪೀಕರ್ ವಿಶ್ವೇಶ್ವರ್ ಹೆಗಡೆ ಕಾಗೇರಿ ಅವರ ಮೇಲೆ ಆರೋಪ ಮಾಡಿದರು.
ಬಿಜೆಪಿ ಕಚೇರಿ ಆಗಿದೆ
ಹೀಗೆಯೇ ಮುಂದುವರೆಸಿದರೆ ನಾವು ಇನ್ನು ಮುಂದೆ ಸದನಕ್ಕೆ ಬರುವುದಿಲ್ಲ. ನಾವು ಜನರ ಬಳಿ ಹೋಗುತ್ತೇವೆ. ಸ್ಪೀಕರ್ ಕಚೇರಿಯನ್ನು ನಿಮ್ಮ ಪಕ್ಷದ ಕಚೇರಿ ಮಾಡಿಕೊಂಡಿದ್ದೀರಿ. ನಾವು ನಾಳೆ (ಡಿ.10)ಯೂ ವಿಧಾನಸಭೆಗೆ ಬರುವುದಿಲ್ಲ, ಮುಂದೆಯೂ ಈ ವಿಧಾನಸಭೆಗೆ ಬರುವುದಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸ್ಪೀಕರ್ ಕಾಗೇರಿ ಅವರ ಮೇಲೆ ಆರೋಪ ಮಾಡಿದರು. ನಂತರ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರು ಸಭಾತ್ಯಾಗ ಮಾಡಿದರು.
ಇಲ್ಲಿಗೆ ರಾಜಕೀಯ ಮುಗಿದಿಲ್ಲ
ಇನ್ನು ವಿಧಾನಸಭೆಗೆ ಸಿಎಂ, ಸಚಿವರು ಹಾಗೂ ಬಿಜೆಪಿ ಶಾಸಕರು ಕೇಸರಿ ಶಾಲು ಹಾಕಿಕೊಂಡು ಬಂದಿದ್ದನ್ನು ಟೀಕಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು, ಇವತ್ತೇ ರಾಜಕೀಯ ಮುಗಿದೋಯ್ತು ಅಂದ್ಕೊಂಡು ಬಿಟ್ಟಿದ್ದೀರಾ? ಜಗತ್ತು ಇನ್ನು ಇರುತ್ತದೆ. ಜಗತ್ತು ಪ್ರಳಯ ಆಗಲ್ಲ. ಕೇಸರಿ ಶಾಲು ಹಾಕಿಕೊಂಡು ಬಂದರೆ ಜಗತ್ತು ಪ್ರಳಯ ಆಗುವುದಿಲ್ಲ ಎಂದು ಸಿದ್ದರಾಮಯ್ಯ ಟೀಕೆ ಮಾಡಿದರು.
ಗೋ ಹತ್ಯೆ ನಿಷೇಧ: ಪ್ರಸ್ತಾವಿತ ಕಾಯ್ದೆಯಲ್ಲಿ ಏನೇನಿದೆ?
ಸ್ಪೀಕರ್ ಕಾಗೇರಿ ಮನವಿ
ಗೋ ಹತ್ಯೆ ನಿಷೇಧ ವಿಧೇಯಕಕ್ಕೆ ಅಂಗೀಕಾರ ಪಡೆದುಕೊಂಡ ರೀತಿಯನ್ನು ವಿರೋಧಿಸಿ ಜೆಡಿಎಸ್ ಮತ್ತು ಕಾಂಗ್ರೆಸ್ ಸದಸ್ಯರ ಸಭಾತ್ಯಾಗದಿಂದ ಸ್ಪೀಕರ್ ವಿಶ್ವೇಶ್ವರ್ ಹೆಗಡೆ ಕಾಗೇರಿ ಅವರು ಎಚ್ಚೆತ್ತುಕೊಂಡರು. ಸದನಕ್ಕೆ ಬಹಿಷ್ಕಾರ ಹಾಕಬಾರದು, ಅಭಿಪ್ರಾಯಗಳಲ್ಲಿ ಭಿನ್ನತೆ ಇರಬಹುದು. ಆದರೆ ಸದನ ಬಹಿಷ್ಕಾರ ಸರಿಯಾದ ಕ್ರಮ ಅಲ್ಲ ದಯಮಾಡಿ ಕಲಾಪದಲ್ಲಿ ಭಾಗವಹಿಸಿ ಎಂದು ಸ್ಪೀಕರ್ ಕಾಗೇರಿ ಅವರು ವಿರೋಧ ಪಕ್ಷಗಳ ಸದಸ್ಯರಲ್ಲಿ ಮನವಿ ಮಾಡಿದರು.
Recommended Video