ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಬಿಜೆಪಿ ಶಾಸಕ ಯತ್ನಾಳ್!
ಬೆಂಗಳೂರು, ಸೆ. 24: ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಯಾಗಿದೆ. ವಿಧಾನಸಭೆಯಲ್ಲಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಮಾಡಿರುವ ಪ್ರತಿಪಕ್ಷ ಕಾಂಗ್ರೆಸ್, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ರಾಜೀನಾಮೆಗೆ ಒತ್ತಾಯ ಮಾಡಿದೆ. ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿರುವ ಹಿನ್ನೆಲೆಯಲ್ಲಿ ಅವಿಶ್ವಾಸ ನಿರ್ಣಯ ಮಂಡನೆ ಮಾಡಿರೋದಾಗಿ ಕಾಂಗ್ರೆಸ್ ಹೇಳಿದೆ. ಇನ್ನೊಂದೆಡೆ ನಿನ್ನೆ ನಿಧನರಾದ ಕೇಂದ್ರ ಸಚಿವ ಸುರೇಶ್ ಅಂಗಡಿ ಮತ್ತು ಇಂದು ನಿಧನರಾದ ಶಾಸಕ ನಾರಾಯಣರಾವ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವುದಕ್ಕೂ ಇಂದಿನ ಕಲಾಪ ಸಾಕ್ಷಿಯಾಯ್ತು.
ಕಳೆದ 14 ತಿಂಗಳುಗಳ ಹಿಂದೆ ಅಧಿಕಾರಕ್ಕೆ ಬಂದಿರುವ ಬಿ.ಎಸ್. ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಯಾಗಿದೆ. ಪ್ರತಿಪಕ್ಷವಾಗಿರುವ ಕಾಂಗ್ರೆಸ್ ಇಂದು ವಿಧಾನಸಭೆಯಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಿದೆ. ಆಡಳಿತಾರೂಢ ಸರ್ಕಾರ ವ್ಯಾಪಕ ಭ್ರಷ್ಟಾಚಾರದಲ್ಲಿ ನಿರತವಾಗಿದ್ದು, ಈ ಸರ್ಕಾರದಲ್ಲಿ ವಿಶ್ವಾಸವಿಲ್ಲ ಎಂದು ನಿಯಮ 167 ರಡಿ ಅವಿಶ್ವಾಸ ನಿರ್ಣಯ ನಿಲುವಳಿಯನ್ನು ಮಂಡಿಸಲಾಯ್ತು. ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ಮಂಡಿಸಿದ ನಿರ್ಣಯದ ಪರವಾಗಿ ಇಡೀ ಕಾಂಗ್ರೆಸ್ ಪಾಳಯದ ಶಾಸಕರು ಬೆಂಬಲ ವ್ಯಕ್ತಪಡಿಸಿದರು.
ಅವಿಶ್ವಾಸ ರಾಜಕೀಯ ಗಿಮಿಕ್
ಆದರೆ ಪ್ರತಿಪಕ್ಷಗಳು ತಂದಿರುವ ಅವಿಶ್ವಾಸ ನಿರ್ಣಯದ ಮೇಲೆ ಇಂದು ಚರ್ಚೆಗೆ ಸ್ಪೀಕರ್ ಕಾಗೇರಿ ನಿರಾಕರಿಸಿದರು. ಚರ್ಚೆಗೆ ಅವಕಾಶವನ್ನು ಸೂಕ್ತ ದಿನಾಂಕದಂದು ಸಮಯ ನಿಗದಿ ಮಾಡಿ ಕೊಡುವುದಾಗಿ ಹೇಳಿದರು. ಆದರೆ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ರಾಜಕೀಯ ಗಿಮಿಕ್ ಅಂತ ಆಡಳಿತ ಪಕ್ಷದ ಸದಸ್ಯರು ಹೇಳಿದ್ದರಿಂದ, ಸದನದಲ್ಲಿ ಕೆಲ ಕಾಲ ಮಾತಿನ ಚಕಮಕಿ ನಡೆಯಿತು.
ಪೂರಕ ಅಂದಾಜಿಮ ಮೇಲೆ ಚರ್ಚೆ
ನಂತರ ಪೂರಕ ಅಂದಾಜಿನ ಮೇಲೆ ನಡೆದ ಚರ್ಚೆಯ ವೇಳೆ ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ 5 ಸಾವಿರ ರೂಪಾಯಿ ಸಹಾಯಧನ ನೀಡುವಲ್ಲಿ ವಿಳಂಬವಾಗಿದ್ದು ಪ್ರಸ್ತಾಪವಾಯ್ತು. 6 ತಿಂಗಳಾದರೂ ಕೊರೊನಾ ವೈರಸ್ ಪ್ಯಾಕೇಜ್ ನಡಿ ಘೋಷಣೆ ಮಾಡಿದ ಪರಿಹಾರ ಕೊಟ್ಟಿಲ್ಲ ಎಂದು ಪ್ರತಿಪಕ್ಷ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಚಾಲಕರಿಗೆ ಹಾಕಿರುವ ಕೆಲ ಷರತ್ತುಗಳನ್ನು ಸಡಿಲ ಮಾಡಬೇಕು ಅಂತ ಬಿಜೆಪಿ ಶಾಸಕರೇ ಸರ್ಕಾರಕ್ಕೆ ಮನವಿ ಮಾಡಿದರು.
Recommended Video
ಇಬ್ಬರು ನಾಯಕರ ಅಗಲಿಕೆ; ದಿಗ್ಬ್ರಮೆ
ಇದಕ್ಕೂ ಮೊದಲು ಬೆಳಿಗ್ಗೆ ಸದನ ಸೇರಿದಾಗ ನಿನ್ನೆ ನಿಧನರಾದ ಕೇಂದ್ರ ಸಚಿವ ಸುರೇಶ್ ಅಂಗಡಿ ಅವರಿಗೆ ವಿಧಾನಸಭೆಯಲ್ಲಿ ಸಂತಾಪ ಸೂಚಿಸಲಾಯ್ತು. ಸಿಎಂ ಯಡಿಯೂರಪ್ಪ, ಸಿದ್ಧರಾಮಯ್ಯ ಸೇರಿದಂತೆ ಇಡೀ ಸದನದ ಸದಸ್ಯರು ಅಗಲಿದ ನಾಯಕನಿಗೆ ಗೌರವ ಸಲ್ಲಿಸಿದ್ರು.
ಆದ್ರೆ ಸಂಜೆ ಮತ್ತೊರ್ವ ಶಾಸಕ ಬಿ.ನಾರಾಯಣರಾವ್ ಅವರು ಕೋರೋನಾದಿಂದ ಸಾವನ್ನಪ್ಪಿದ್ದು ಸದನಕ್ಕೆ ಶಾಕ್ ಆಗಿತ್ತು. ಹೀಗಾಗಿ ಅಗಲಿದ ಶಾಸಕ ನಾರಾಯಣರಾವ್ ಅವರಿಗೆ ಇಡೀ ಸದನದಲ್ಲಿ ಸಂತಾಪ ವ್ಯಕ್ತವಾಯ್ತು. ಮೃತರ ಗೌರವಾರ್ಥ ಕಲಾಪವನ್ನು ನಾಳೆಗೆ ಮುಂದೂಡಲಾಯ್ತು.
ಬಿಜೆಪಿ ಶಾಸಕರಿಂದಲೇ ಸರ್ಕಾರಕ್ಕೆ ತರಾಟೆ
ಇನ್ನು ಸಂತಾಪ ಸೂಚಕ ನಿಲುವಳಿ ಚರ್ಚೆಯ ವೇಳೆ ಸರ್ಕಾರದ ವಿರುದ್ಧ ಸ್ವ ಪಕ್ಷದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು. ಕೇಂದ್ರ ಸಚಿವ ಸುರೇಶ್ ಅಂಗಡಿ ಅವರಿಗೆ ಸಂತಾಫ ಸೂಚಿಸಿ ಮಾತನಾಡಿದ ಯತ್ನಾಳ್ ಅವರು, ಕೊರೊನಾ ವೈರಸ್ಗೆ ಚಿಕಿತ್ಸೆ ನೆಪದಲ್ಲಿ ಖಾಸಗಿ ಆಸ್ಪತ್ರೆಗಳು ಸುಲಿಗೆ ಮಾಡುತ್ತಿವೆ ಎಂದರು. ಸರ್ಕಾರಕ್ಕೆ ಆಸ್ಪತ್ರೆಗಳ ಮೇಲೆ ಕಂಟ್ರೋಲ್ ಇಲ್ಲ. ನಾನೇ 11 ದಿನಕ್ಕೆ ಲಕ್ಷಾಂತರ ರೂ. ಆಸ್ಪತ್ರೆ ಬಿಲ್ ಕೊಟ್ಟಿದ್ದೇನೆ. ಇದು ಒಬ್ಬ ಶಾಸಕನ ಹಣೆಬರಹ. ಬಿಜಾಪುರದ ಆಸ್ಪತ್ರೆಗಳಲ್ಲಿ ಲಕ್ಷಗಟ್ಟಲೆ ಬಿಲ್ ಮಾಡುತ್ತಾರೆ. ಆಸ್ಪತ್ರೆಗಳ ಮೇಲೆ ನಿಮಗೆ ಕಂಟ್ರೋಲ್ ಇಲ್ಲವಾ ಎಂದು ನಾವೇ ಕೇಳಬೇಕಾಗುತ್ತದೆ ಎಂದು ಶಾಸಕ ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದರು.