ಉಪ ಚುನಾವಣೆ: ಭರಾಟೆಯ ಪ್ರಚಾರ ಹಮ್ಮಿಕೊಂಡ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ
ಬೆಂಗಳೂರು, ಅ15: ರಾಜ್ಯದಲ್ಲಿ ನಡೆಯುತ್ತಿರುವ ಉಪ ಚುನಾವಣೆಗೆ ಕಾಂಗ್ರೆಸ್ ಮೈ ಕೊಡವಿ ಎದ್ದು ನಿಂತಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮರ್ ಎರಡು ವಾರಗಳ ಕಾಲ ಮತ್ತು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒಂದು ವಾರಗಳ ಕಾಲ ಹಾನಗಲ್ ಮತ್ತು ಸಿಂಧಗಿ ಕ್ಷೇತ್ರಗಳಲ್ಲಿ ಭರಾಟೆಯ ಪ್ರಚಾರ ಹಮ್ಮಿಕೊಂಡಿದ್ದಾರೆ.
ದಸರಾ ಸಂಭ್ರಮ ಕಳೆಯುತ್ತಿದ್ದಂತೆ ಇಬ್ಬರೂ ನಾಯಕರ ಪ್ರವಾಸ ಶನಿವಾರ (ಅ.16)ರಿಂದ ಆರಂಭವಾಗುತ್ತದೆ. ಡಿ.ಕೆ. ಶಿವಕುಮಾರ್ ಸಿಂಧಗಿ ಮೂಲಕ ಪ್ರಚಾರ ಪ್ರಾರಂಭಿಸಿದರೆ, ಸಿದ್ದರಾಮಯ್ಯ ಹಾನಗಲ್ ಮೂಲಕ ರೋಡ್ಶೋಗಳನ್ನು ಆರಂಭಿಸಲಿದ್ದಾರೆ. ಇಬ್ಬರೂ ನಾಯಕರ ಪ್ರವಾಸದ ಪಟ್ಟಿಯನ್ನು ಕಾಂಗ್ರೆಸ್ ಬಿಡುಗಡೆ ಮಾಡಿದೆ.
ಹಾವೇರಿ ಜಿಲ್ಲೆಯ ಹಾನಗಲ್ ವಿಧಾನಸಭಾ ಕ್ಷೇತ್ರದಲ್ಲಿ ಶ್ರೀನಿವಾಸ ವಿ. ಮಾನೆ ಮತ್ತು ವಿಜಯಪುರ ಜಿಲ್ಲೆಯ ಸಿಂಧಗಿ ಕ್ಷೇತ್ರದಲ್ಲಿ ಅಶೋಕ ಮನಗೂಳಿ ಈಗಾಗಲೇ ಕಾಂಗ್ರೆಸ್ ಅಭ್ಯರ್ಥಿಗಳಾಗಿ ಕ್ಷೇತ್ರಗಳಲ್ಲಿ ಪ್ರಚಾರಕ್ಕಿಳಿದಿದ್ದಾರೆ. ಈಗ ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರೂ ಸಹ ಸಾಥ್ ನೀಡಲಿದ್ದಾರೆ. ಈ ಮಧ್ಯೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರೂ ಸಹ ಅ.19ರಂದು ಸಿಂಧಗಿಯಲ್ಲಿ ಮತ್ತು ಅ.20ರಂದು ಹಾನಗಲ್ನಲ್ಲಿ ಪ್ರಚಾರದಲ್ಲಿ ಪಾಲ್ಗೊಳ್ಳಲಿದ್ದಾರೆ.
ಉಪ ಚುನಾವಣೆಯಲ್ಲಿ ಬಿಜೆಪಿಗೆ ಸ್ವಲ್ಪ ಮಟ್ಟಿನ ಹಿನ್ನಡೆ ಇದೆ ಎಂದು ಬಿಜೆಪಿಯ ಆಂತರಿಕ ಸಮೀಕ್ಷೆಯಲ್ಲಿಯೇ ಬಹಿರಂಗವಾಗಿರುವುದು ಕಾಂಗ್ರೆಸ್ ನಾಯಕರ, ಕಾರ್ಯಕರ್ತರ ಉತ್ಸಾಹ ಹಿಮ್ಮಡಿಗೊಳಿಸಿದೆ. ಆದರೆ, ಕಾಂಗ್ರೆಸ್ನ ವಿ.ಎಸ್. ಉಗ್ರಪ್ಪ ಮತ್ತು ಎಂ.ಎ. ಸಲೀಂ (ಈಗ ಉಚ್ಛಾಟಿತ) ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಬಗ್ಗೆ ಲಘುವಾಗಿ ಮಾತನಾಡಿರುವ ವಿಡಿಯೋ ಬಹಿರಂಗವಾದ ಬಳಿಕ ಕಾಂಗ್ರೆಸ್ಗೆ ಸ್ವಲ್ಪ ಮಟ್ಟಿನ ಮುಜುಗರವಾಗಿದೆ. ಬಿಜೆಪಿ ಸಹ ಇದನ್ನು ವ್ಯವಸ್ಥಿತವಾಗಿ ಪ್ರಚಾರ ಮಾಡುತ್ತಿದ್ದು, ಎಷ್ಟು ಪರಿಣಾಮ ಬೀರಲಿದೆ ಎಂಬುದನ್ನು ಮುಂದಿನ ದಿನಗಳಲ್ಲಿ ನೋಡಬೇಕಾಗಿದೆ.
ಕೊನೆ ದಿನದವರೆಗೂ ಪ್ರಚಾರ
ಉಪಚುನಾವಣೆ ಅ.30ರಂದು ನಡೆಯಲಿದ್ದು, ಡಿ.ಕೆ. ಶಿವಕುಮಾರ್ ಅ.28ರವರೆಗೂ ಪ್ರಚಾರ ಕಾರ್ಯ ಹಮ್ಮಿಕೊಂಡಿದ್ದಾರೆ.
ಶಿವಕುಮಾರ್ ಅವರು ಅ.16ರಂದು ಕಲಬುರ್ಗಿ ವಿಮಾನ ನಿಲ್ದಾಣದ ಮೂಲಕ ಬೆಳಿಗ್ಗೆ 11.30ಕ್ಕೆ ಸಿಂಧಗಿ ತಲುಪಲಿದ್ದಾರೆ. ಬಳಿಕ ಜಿಲ್ಲಾ ಕಾಂಗ್ರೆಸ್ ಸಮಿತಿ ಆಯೋಜಿಸಿರುವ ಚುನಾವಣಾ ಪ್ರಚಾರ ಕಾರ್ಯದಲ್ಲಿ ಪಾಲ್ಗೊಳ್ಳುತ್ತಾರೆ. ಅಂದು ರಾತ್ರಿ ವಿಜಯಪುರದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಅ.17ರಂದು ಸ್ಥಳೀಯ ನಾಯಕರು ಹಾಗೂ ವಿವಿಧ ಸಮಿತಿಗಳ ಸದಸ್ಯರೊಂದಿಗೆ ಸಭೆ ನಡೆಸಿ ಚುನಾವಣಾ ಕಾರ್ಯತಂತ್ರ ರೂಪಿಸಲಿದ್ದಾರೆ.
ಅ.18ರಂದು ಶಿವಕುಮಾರ್ ಹಾನಗಲ್ನಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಹಮ್ಮಿಕೊಂಡಿರುವ ವಿವಿಧ ಪ್ರಚಾರ ಕಾರ್ಯಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಅ.19ರಂದು ಸಿಂಧಗಿ ವಿಧಾನಸಭಾ ಕ್ಷೇತ್ರದಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರೊಂದಿಗೆ ಎರಡು ಪ್ರಚಾರ ಸಭೆಗಳಲ್ಲಿ ಪಾಲ್ಗೊಳ್ಳುತ್ತಾರೆ. ಬಳಿಕೆ ಪಕ್ಷದ ಚುನಾವಣಾ ವೀಕ್ಷಕರು ಹಾಗೂ ಹಿರಿಯ ನಾಯಕರೊಂದಿಗೆ ಸಭೆ ನಡೆಯಲಿದೆ. ಅ.20ರಂದು ಹಾನಗಲ್ ವಿಧಾನಸಭಾ ಕ್ಷೇತ್ರದಲ್ಲಿಯೂ ಸಹ ಶ್ರೀನಿವಾಸ ಮಾನೆ ಪರ ಸುರ್ಜೇವಾಲಾ ಅವರ ಪ್ರಚಾರ ಕಾರ್ಯ ನಡೆಯಲಿದೆ. ಬಳಿಕ ಅ.23ರವರೆಗೂ ಶಿವಕುಮಾರ್ ಹಾನಗಲ್ ವಿಧಾನಸಭಾ ಕ್ಷೇತ್ರದ ವಿವಿಧ ಗ್ರಾಮಗಳಿಗೆ ತೆರಳಿ ಪಕ್ಷದ ಅಭ್ಯರ್ಥಿ ಶ್ರೀನಿವಾಸ ಮಾನೆ ಪರ ಮತಯಾಚನೆ ಮಾಡಲಿದ್ದಾರೆ.
ಅ.24 ಮತ್ತು 26 ರಂದು ಸಿಂಧಗಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆಶೋಕ ಮನಗೂಳಿ ಪರ ವಿವಿಧೆಡೆ ಪ್ರಚಾರ ನಡೆಸಲಿದ್ದಾರೆ. ಅ.27ರಂದು ಮರಳಿ ಹಾನಗಲ್ ಗೆ ಬಂದು 28ರ ವರೆಗೂ ವಿವಿಧ ಪ್ರಚಾರ ಕಾರ್ಯಗಳಲ್ಲಿ ಭಾಗವಹಿಸುತ್ತಾರೆ. ಚುನಾವಣಾ ಪ್ರಚಾರಕ್ಕೆ ಅ.28 ಕೊನೆಯ ದಿನವಾಗಿದ್ದು ಅಂದು ಹಾನಗಲ್ ಪ್ರಚಾರ ಮುಗಿಸಿ ಹುಬ್ಬಳ್ಳಿ ವಿಮಾನ ನಿಲ್ದಾಣ ಮೂಲಕ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ.
ಒಂದು ವಾರ ಸಿದ್ದರಾಮಯ್ಯ ಪ್ರವಾಸ:
ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಅ.16ರಂದು ಬೆಳಿಗ್ಗೆ 10.30ಕ್ಕೆ ಹುಬ್ಬಳ್ಳಿ ವಿಮಾನ ನಿಲ್ದಾಣ ಮೂಲಕ ಹಾನಗಲ್ ತಲುಪುತ್ತಾರೆ. ಬಳಿಕ ಸಂಜೆಯವರೆಗೂ ಮಲಗುಂದ, ಹೇರೂರು, ತಿಳುವಳ್ಳಿ, ಗೊಂದಿ ಗ್ರಾಮಗಳಲ್ಲಿ ಚುನಾವಣಾ ಪ್ರಚಾರ ಸಭೆ ನಡೆಸಲಿದ್ದಾರೆ. ಅ.17ರಂದು ಮಾಸನಕಟ್ಟೆ, ಕಂಚಿನಗಳೂರು, ಬೊಮ್ಮನಹಳ್ಲಿ, ಮತಂಗಿಯಲ್ಲಿ ರೋಡ್ ಶೋಗಳನ್ನು ನಡೆಸಲಿದ್ದಾರೆ.
ಅ.18ರಂದು ಬೆಳಿಗ್ಗೆ 11.30ರಿಂದ ಸಿಂಧಗಿ ವಿಧಾನಸಭಾ ಕ್ಷೇತ್ರದ ಮೋರಟಗಿ, ಯಂಕಂಚಿ, ಅಲಮೇಲದಲ್ಲಿ ಕಾರ್ಯಕರ್ತರ ಸಭೆ ಹಾಗೂ ದಲಿತ ಮುಖಂಡರೊಂದಿಗೆ ಸಭೆಗಳನ್ನು ನಡೆಸಲಿದ್ದಾರೆ. ಅ.19ರಂದು ಬಳಗಾನೂರು, ಚಾಂದಕವಠೆ, ತಾಂಬ ಗ್ರಾಮಗಳಲ್ಲಿ ಸಭೆಗಳನ್ನು ನಡೆಸುತ್ತಾರೆ. ಅಂದು ಸಂಜೆ ಗಂಗಮತ, ಹಾಲುಮತ, ಪರಿಶಿಷ್ಟ ಜಾತಿ ಮತ್ತು ಪಂಗಡ, ಬಂಜಾರ ಹಾಗೂ ಮುಸ್ಲಿಂ ಸಮುದಾಯದ ಮುಂಖಡರೊಂದಿಗೆ ಸಭೆಗಳನ್ನು ಮಾಡಲಿದ್ದಾರೆ.
ಅ.22ರಂದು ಹಾನಗಲ್ ವಿಧಾನಸಭಾ ಕ್ಷೇತ್ರದ ನರೇಗಲ್, ಅಡೂರು, ಹಿರಿಯೂರು ರೋಡ್ಶೋಗಳನ್ನು ಮಾಡುತ್ತಾರೆ. ಅ.23ರಂದು ಮಾರನಬೀಡು, ಉಪ್ಪುಣಸಿ, ಕರಗುದರಿಯಲ್ಲಿ ಪ್ರಚಾರ ಸಭೆಗಳಲ್ಲಿ ಭಾಗವಹಿಸುತ್ತಾರೆ ಎಂದು ಸಿದ್ದರಾಮಯ್ಯ ಅವರ ಚುನಾವಣಾ ಪ್ರಚಾರದ ವಿವರಗಳನ್ನು ಬಿಡುಗಡೆ ಮಾಡಲಾಗಿದೆ.
Recommended Video