ಕಾಂಗ್ರೆಸ್ ಮಾತಿಗೂ ಹಾಗೂ ಕೃತಿಗೂ ವ್ಯತ್ಯಾಸವಿದೆ: ಬಸವರಾಜ ಬೊಮ್ಮಾಯಿ
ಕಾಂಗ್ರೆಸ್ನವರು ಬಹಳ ಹತಾಶರಾಗಿದ್ದಾರೆ. ಹೀಗಾಗಿ ಏನೇನೋ ಆಶ್ವಾಸನೆ, ಭರವಸೆಗಳನ್ನು ನೀಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಬೆಂಗಳೂರು,ಜನವರಿ 30: ಮಾತುಗಳಿಗೆ ಹಾಗೂ ಕೃತಿಗೆ ವ್ಯತ್ಯಾಸವಿದೆ. ಬರೀ ಸುಳ್ಳನ್ನು ಹೇಳಿಕೊಂಡು, ಸುಳ್ಳಿನ ಮೇಲೆ ತಮ್ಮ ಪಕ್ಷವನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತರಬೇಕೆನ್ನುವ ಚಿಂತನೆಯಲ್ಲಿದ್ದಾರೆ ಎಂದು ಕಾಂಗ್ರೆಸ್ ವಿರುದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಿಡಿಕಾರಿದರು.
ಸೋಮವಾರ ಬಿಜೆಪಿ ಕಚೇರಿಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ವಿವಿಧ ಪಕ್ಷಗಳ ಮುಖಂಡರು ಹಮ್ಮಿಕೊಂಡಿದ್ದ ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಹಳ ದಿನಗಳಿಂದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳು ಭದ್ರಕೋಟೆ ಎಂದು ತಿಳಿದಿದ್ದವು. ಆದರೆ ಈ ಬಾರಿ ಬದಲಾವಣೆಯಾಗುತ್ತಿದೆ. ವಿಶೇಷವಾಗಿ ಯುವಕರಲ್ಲಿ ಬಹಳ ದೊಡ್ಡ ಬದಲಾವಣೆಯಾಗುತ್ತಿದೆ ಎಂದು ಹೇಳಿದರು.
ಬೊಮ್ಮಾಯಿ ಎಂದರೆ ಖಾಲಿ ಕುರ್ಚಿಗಳಿಗೆ ಭಾಷಣ ಮಾಡುವ ಸಿಎಂ!
ನರೇಂದ್ರ ಮೋದಿಯವರ ನೇತೃತ್ವವನ್ನು ಇಡೀ ವಿಶ್ವವೇ ಮೆಚ್ಚಿಕೊಂಡಿದ್ದು, ಕರ್ನಾಟಕದಲ್ಲಿ ಮತ್ತೆ ಅವರ ಆಶೀರ್ವಾದದಿಂದ ನೂರಕ್ಕೆ ನೂರರಷ್ಟು ಸ್ಪಷ್ಟ ಬಹುಮತದಿಂದ ಬಿಜೆಪಿ ಗೆಲ್ಲಲಿದೆ. ಕಾಂಗ್ರೆಸ್ನವರು ಬಹಳ ಹತಾಶರಾಗಿದ್ದಾರೆ. ಹೀಗಾಗಿ ಏನೇನೋ ಆಶ್ವಾಸನೆ, ಭರವಸೆಗಳನ್ನು ನೀಡುತ್ತಿದ್ದಾರೆ. ಅನ್ನ ಮಾಡುವಾಗ ಒಂದು ಅಗಳು ಮುಟ್ಟಿನೋಡಿದರೆ ಬೆಂದಿದೆಯೋ ಇಲ್ಲವೋ ಎಂದು ತಿಳಿಯುವಂತೆ, ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದು ಅವರ ಆಡಳಿತವನ್ನು ನೋಡಿಯಾಗಿದೆ. ಅವರ ಮಾತುಗಳಿಗೆ ಹಾಗೂ ಕೃತಿಗೆ ವ್ಯತ್ಯಾಸವಿದೆ. ಬರೀ ಸುಳ್ಳನ್ನು ಹೇಳಿಕೊಂಡು, ಸುಳ್ಳಿನ ಮೇಲೆ ತಮ್ಮ ಪಕ್ಷವನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತರಬೇಕೆನ್ನುವ ಚಿಂತನೆಯಲ್ಲಿದ್ದಾರೆ .ಆದರೆ ಜನ ಬುದ್ದಿವಂತರಿದ್ದಾರೆ. ಅವರಿಗೆ ಕಾಂಗ್ರೆಸ್ಸಿನ ದುರಾಡಳಿತದ ದೌರ್ಭಾಗ್ಯಗಳ ನೆನಪಿದೆ. ಹಾಗಾಗಿ ಯಾವುದೇ ಕಾರಣಕ್ಕೂ ಅವರಿಗೆ ಬೆಂಬಲ ನೀಡುವುದಿಲ್ಲ ಎಂದರು.
ಭಾರತೀಯ ಜನತಾ ಪಕ್ಷದ ಜಿಲ್ಲಾ, ಮಂಡಲ, ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಈ ಬಾರಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳು ದೊಡ್ಡ ಬದಲಾವಣೆ ಆಗಲಿದೆ. ಚಿಂತಾಮಣಿ ಕ್ಷೇತ್ರದ ಪ್ರಮುಖರು ಸಚಿವ ಕೆ.ಸುಧಾಕರ್, ಸಂಸದ ಮುನಿಸ್ವಾಮಿ ಅವರ ನೇತೃತ್ವದಲ್ಲಿ ದೊಡ್ಡ ಸಂಖ್ಯೆಯಲ್ಲಿ ಬಿಜೆಪಿಗೆ ಸೇರಿರುವುದು ಸಂತಸದ ಸಂಗತಿ. ಅವರಿಗೆಲ್ಲಾ ಹೃದಯತುಂಬಿದ ಸ್ವಾಗತಿಸುತ್ತೇನೆ ಎಂದರು.
ಬಿಜೆಪಿ ಇಡೀ ವಿಶ್ವದಲಿಯೇ ಅತಿ ದೊಡ್ಡ ಪಕ್ಷ. ಏಳು ಕೋಟಿಗಿಂತ ಹೆಚ್ಚು ಕಾರ್ಯಕರ್ತರಿರುವ ಪಕ್ಷ. ಭಾರತ ದೇಶದಲ್ಲಿ ಎಲ್ಲಾ ರಾಜ್ಯಗಳಲ್ಲಿ ಸದೃಢ ಹಾಗೂ ಭವಿಷ್ಯವಿರುವ ಪಕ್ಷವಾಗಿದೆ. ನಾವೆಲ್ಲಾ ಉತ್ತಮ ಭವಿಷ್ಯವಿರುವ ರಾಜಕೀಯ ಪಕ್ಷದ ಹಡಗಿನಲ್ಲಿ ನಾವೆಲ್ಲರೂ ಕುಳಿತಿದ್ದೇವೆ. ನಿಮ್ಮಾ ಪ್ರಯಾಣ ಅತ್ಯಂತ ಯಶಸ್ವಿಯಾಗುತ್ತದೆ. ಕ್ಷೇತ್ರದ ಅಭಿವೃದ್ಧಿಯಾಗುವುದಲ್ಲದೇ ಬರುವ ದಿನಗಳಲ್ಲಿ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳು ಸಂಪೂರ್ಣವಾಗಿ ಅಭಿವೃದ್ಧಿಯಾಗಲಿದೆ ಎಂದರು.
ಕೃಷ್ಣಾರೆಡ್ಡಿಯವರು ಈ ಕ್ಷೇತ್ರವನ್ನು ನಿರಂತರವಾಗಿ ಪ್ರತಿನಿಧಿಸಿ ಇಲ್ಲಿಯ ಜನರ ಆಗುಹೋಗುಗಳನ್ನು ಒಬ್ಬ ತಂದೆಯಂತೆ ನೋಡಿಕೊಂಡಿರುವುದು, ಸುಸಂಸ್ಕೃತ ರಾಜಕಾರಣವನನ್ನು ಚಿಂತಾಮಣಿಯಲ್ಲಿ ಕಟ್ಟಿರುವುದನ್ನು ಕಣ್ಣಾರೆ ಕಂಡಿದ್ದೇನೆ. ನಮ್ಮ ತಂದೆಯವರ ಜೊತೆಗೆ ಅವರು ಅತ್ಯಂತ ನಿಕಟ ಸ್ನೇಹ ಹಾಗೂ ಉತ್ತಮ ಸಂಬಂಧವಿತ್ತು. ನಮ್ಮ ತಂದೆಯವರ ಸಂಪುಟದಲ್ಲಿ ಗೃಹಸಚಿವರಾಗಿಯೋ ಅವರು ಕಾರ್ಯನಿರ್ವಹಿಸಿದ್ದರು. ಅವರು ರಾಜಕಾರಣದ ಜಿತೆಗೆ ಸಾಮಾಜಿಕ ಸೇವೆಯನ್ನು ಎಂದೂ ಕೈಬಿಟ್ಟಿರಲಿಲ್ಲ.ಸಂಘಸಂಸ್ಥೆಗಳ ಮುಖಾಂತರ, ಎಲ್ಲಾ ಸಾಮಾಜಿಕ ಕ್ಷೇತ್ರಗಳಲ್ಲಿ ಸೇವೆ ಮಾಡಿರುವ ಸುಸಂಸ್ಕೃತ ಮನೆತನಕ್ಕೆ ಸೇರಿರುವವರು. ಅವರ ಮಗಳು ವಾಣಿ, ಸಹೋದರ ಶೇಖರ ರೆಡ್ಡಿಯವರೂ ಸೇರಿರುವುದು ಸಂತೋಷ. ವೇಣುಗೋಪಾಲ್ ಅವರ ನೇತೃತ್ವದಲ್ಲಿ ಇಡೀ ಜಿಲ್ಲೆಯಲ್ಲಿ ಹಲವಾರು ಜನ ಬಿಜೆಪಿ ಗೆ ಸೇರ್ಪಡೆಯಾಗಿದ್ದೀರಿ. ಬಿಜೆಪಿ ಕುಟುಂಬದ ಸದಸ್ಯರಾಗಿರುವವರನ್ನು ಕುಟುಂಬದವರಂತೆ ನೋಡಿಕೊಳ್ಳಲಾಗುವುದು ಎಂದರು.