ಸೋಮವಾರದಿಂದ ವಿಧಾನಸಭೆ ಅಧಿವೇಶನ: ಕುತೂಹಲ ಮೂಡಿಸಿದ ಕಾಂಗ್ರೆಸ್ ನಡೆ!
ಬೆಂಗಳೂರು, ಸೆ. 12: ನಾಳೆ ಸೋಮವಾರರಿಂದ ಹತ್ತು ದಿನಗಳ ಕಾಲ ಮಹತ್ವದ ರಾಜ್ಯ ವಿಧಾನ ಮಂಡಲ ಅಧಿವೇಶನ ನಡೆಯಲಿದೆ. ಮಳೆಗಾಲದ ಅಧಿವೇಶನವನ್ನು ವಿಧಾನಸೌಧದಲ್ಲಿ ನಡೆಸಲು ಸರ್ಕಾರ ತೀರ್ಮಾನಿಸಿದ್ದು, ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಈಗಾಗಲೇ ವಿರೋಧ ಪಕ್ಷಗಳು ತಯಾರಿ ಮಾಡಿಕೊಂಡಿವೆ.
ಕೊರೊನಾ ವೈರಸ್, ಲಾಕ್ಡೌನ್, ಬೆಲೆ ಏರಿಕೆ, ಪ್ರವಾಹ ಪರಿಸ್ಥಿತಿ, ಭ್ರಷ್ಟಾಚಾರ ಸೇರಿದಂತೆ ಹಲವು ವಿಚಾರಗಳನ್ನು ಉಭಯ ಸದನಗಳಲ್ಲಿ ಪ್ರಸ್ತಾಪ ಮಾಡಲು ಪ್ರಮುಖ ವಿರೋಧ ಪಕ್ಷ ಕಾಂಗ್ರೆಸ್ ಈಗಾಗಲೇ ತಯಾರಿ ಮಾಡಿಕೊಂಡಿದ್ದು, ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಶಾಸಕಾಂಗ ಪಕ್ಷದ ಸಭೆಯೂ ಆಗಿದೆ. ಜೊತೆಗೆ ಯಾವ್ಯಾವ ವಿಚಾರಗಳ ಬಗ್ಗೆ ಸಮದಸ್ಯರು ಪ್ರಸ್ತಾಪ ಮಾಡಬೇಕು ಎಂಬುದನ್ನು ಈಗಾಗಲೇ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಶಾಸಕರಿಗೆ ಸೂಚಿಸಿದ್ದಾರೆ.
ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಎದುರಿಸುತ್ತಿರುವ ಮೊದಲ ಅಧಿವೇಶನ ಇದಾಗಿದೆ. ಜೊತೆಗೆ ಬಿ.ಎಸ್. ಯಡಿಯೂರಪ್ಪ ಅವರು ಅಧಿಕಾರ ಕಳೆದುಕೊಂಡ ಬಳಿಕ ನಡೆಯುತ್ತಿರುವ ಅಧಿವೇಶನವೂ ಇದಾಗಿದೆ. ಹೀಗಾಗಿ ಸಹಜವಾಗಿಯೇ ಆಡಳಿತ ಹಾಗೂ ವಿಪಕ್ಷಗಳ ಸದಸ್ಯರಲ್ಲಿ ಬಿಜೆಪಿ ನಾಯಕತ್ವ ಬದಲಾವಣೆ ಬಳಿಕ ನಡೆಯುತ್ತಿರುವ ಮೊದಲ ಅಧಿವೇಶನ ಕುತೂಹಲ ಮೂಡಿಸಿದೆ.
ಜೊತೆಗೆ ವಿಧಾನ ಮಂಡಲ ಅಧಿವೇಶನ ಕೊನೆಯ ದಿನ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಭಾಗವಹಿಸಲಿದ್ದು, ಅತ್ಯುತ್ತಮ ಶಾಸಕ ಪ್ರಶಸ್ತಿಯನ್ನು ಪ್ರಕಟಿಸಲಿರುವುದು ಈ ಬಾರಿಯ ಅಧಿವೇಶನ ವಿಶೇಷ.
ಕಾಗದ ರಹಿತ ಕಲಾಪ ನಡೆಸಲು ಪ್ರಯತ್ನ!
ಕರ್ನಾಟಕ 15ನೇ ವಿಧಾನಸಭೆಯ 10ನೇ ಅಧಿವೇಶನದ ಕಾರ್ಯಕಲಾಪಗಳು ಸೆಪ್ಟೆಂಬರ್ 13 ರಿಂದ 24 ರವರೆಗೆ 10 ದಿನಗಳ ಕಾಲ ನಡೆಯಲಿದೆ. ಈ ಅಧಿವೇಶನಲ್ಲಿ ಸರ್ಕಾರದಿಂದ 18ಕ್ಕಿಂತ ಹೆಚ್ಚು ವಿಧೇಯಕಗಳು ಮಂಡನೆಯಾಗಲಿವೆ ಎಂಬ ಮಾಹಿತಿಯಿದೆ. ಜೊತೆಗೆ ಅಧಿವೇಶನದಲ್ಲಿ ಚುಕ್ಕೆ ಗುರುತಿನ ಪ್ರಶ್ನೆಗಳು, ಚುಕ್ಕೆ ಗುರುತಿಲ್ಲದ ಪ್ರಶ್ನೆಗಳು, ಅರ್ಧ ಗಂಟೆ ಕಾಲಾವಧಿಯ ಚರ್ಚೆ, ಶೂನ್ಯವೇಳೆ, ಗಮನ ಸೆಳೆಯುವ ಸೂಚನೆಗಳು, ನಿಲುವಳಿ ಸೂಚನೆಗಳು ಚರ್ಚೆಗೆ ಬರಲಿವೆ.
ಈ ಭಾರಿ ಚುಕ್ಕೆ ಗುರುತಿನ ಪ್ರಶ್ನೆಗಳು ಹಾಗೂ ಚುಕ್ಕೆ ಗುರುತಿಲ್ಲದ ಪ್ರಶ್ನೆಗಳ ಮಾಹಿತಿಗಳು ನಮ್ಮ ವಿಧಾನಮಂಡಲದ ವೆಬ್ಸೈಟ್ನಲ್ಲಿ ಲಭ್ಯವಾಗಲಿವೆ ಎಂದು ಈಗಾಗಲೇ ಸ್ಪೀಕರ್ ವಿಶ್ವೇಶ್ವರ್ ಹೆಗಡೆ ಕಾಗೇರಿ ತಿಳಿಸಿದ್ದಾರೆ.
ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಭಾಗವಹಿಸಲಿದ್ದಾರೆ!
ಅಧಿವೇಶನ ಮುಕ್ತಾಯದ ದಿನ ಅಂದರೆ ಸೆಪ್ಟಂಬರ್ 24ರಂದು ಮಧ್ಯಾಹ್ನದ ಊಟದ ನಂತರ ಅರ್ಧ ದಿನ ಸಂಸದೀಯ ಮೌಲ್ಯಗಳ ಕುರಿತಂತೆ ಜಂಟಿ ಅಧಿವೇಶನ ಉದ್ದೇಶಿಸಿ ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರು ಮಾತನಾಡಲಿರುವುದು ವಿಶೇಷ. ಈ ಬಗ್ಗೆ ಸದನದ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಚರ್ಚಿಸಿ ಅಂತಿಮ ರೂಪುರೇಷೆ ಸಿದ್ದಪಡಿಸಲು ಸ್ಪೀಕರ್ ಕಾಗೇರಿ ತೀರ್ಮಾನಿಸಿದ್ದಾರೆ.
ಸದನದ ಗೌರವ ಹಾಗೂ ಸದಸ್ಯರ ಜವಾಬ್ದಾರಿಗಳನ್ನು ಹೆಚ್ಚಿಸಿಕೊಳ್ಳಲು ಈ ಸಮಾವೇಶ ಅವಕಾಶ ಕಲ್ಪಿಸಿ ಕೊಡಲಿದೆ ಎಂದು ಸ್ಪೀಕರ್ ಕಾಗೇರಿ ತಿಳಿಸಿದ್ದಾರೆ. ಅಧಿವೇಶನದಲ್ಲಿ ಒಬ್ಬರಿಗೆ ಅತ್ಯುತ್ತಮ ಶಾಸಕ ಪ್ರಶಸ್ತಿ ಕೊಡಲು ತೀರ್ಮಾನ ಮಾಡಲಾಗಿದೆ. ಈ ಅತ್ಯುತ್ತಮ ಶಾಸಕರನ್ನು ಆಯ್ಕೆ ಮಾಡಲು ಸಮಿತಿ ರಚಿಸಲಾಗಿದೆ.
ಸಾರ್ವಜನಿಕರಿಗೆ ಕಲಾಪ ವೀಕ್ಷಣೆ ಅವಕಾಶ!
ಕೊರೊನಾ ವೈರಸ್ ಸಂಕಷ್ಟದ ಹಿನ್ನೆಲೆಯಲ್ಲಿ ಕಳೆದ 2020ರ ಮಾರ್ಚ್ನಲ್ಲಿ ನಡೆದಿದ್ದ ಅಧಿವೇಶನದ ಬಳಿ ಸದನದ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ ನೀಡಿರಲಿಲ್ಲ. ಆದರೆ ಈ ಬಾರಿ ಅಧಿವೇಶನದಲ್ಲಿ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ. ಶಾಲಾ ಮಕ್ಕಳಿಗೆ ಪ್ರವಾಸ ಬೇಡ, ಹೀಗಾಗಿ ಶಾಲಾ ಮಕ್ಕಳನ್ನು ಕಲಾಪ ವೀಕ್ಷಣೆಗೆ ಕರೆತರಬೇಡಿ ಎಂದು ಸ್ಪೀಕರ್ ಕಾಗೇರಿ ಸೂಚಿಸಿದ್ದಾರೆ.
ಜೊತೆಗೆ ಕರೋನಾ ಮಾರ್ಗಸೂಚಿ ಪ್ರಕಾರ ಸದಸ್ಯರ ನಡುವೆ ಸಾಮಾಜಿಕ ಅಂತರ ಕಾಪಾಡುವುದು, ಮಾಸ್ಕ್, ಸ್ಯಾನಿಟೈಸರ್ ಬಳಕೆ ಸೇರಿದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಸದನದ ಅಂತಿಮ ದಿನ ಸೆ. 24 ಶುಕ್ರವಾರದಂದು ಪೂರ್ತಿದಿನ ಸದನ ನಡೆಸಲಾಗುತ್ತಿದೆ. ಅಂದು ಮಧ್ಯಾಹ್ನದ ನಂತರ ಜಂಟಿ ಅಧಿವೇಶನ ನಡೆಯಲಿದೆ. ಜೊತೆಗೆ ವಿಧಾನ ಪರಿಷತ್ ಕಲಾಪ ನಡೆಸಲು ಎಲ್ಲ ತಯಾರಿಗಳನ್ನು ಮಾಡಿಕೊಳ್ಳಲಾಗಿದೆ.
Recommended Video
ವಿಧಾನ ಪರಿಷತ್ ಕಲಾಪಕ್ಕೆ ಸಿದ್ಧತೆ!
ವಿಧಾನ ಪರಿಷತ್ ಕಲಾಪದಲ್ಲಿ ಸಚಿವರು ಕಡ್ಡಾಯವಾಗಿ ಪಾಲ್ಗೊಳ್ಳುವಂತೆ ಎಲ್ಲ ಮಂತ್ರಿಗಳಿಗೆ ಸೂಚನೆ ನೀಡುವಂತೆ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಈಗಾಗಲೇ ಸೂಚಿಸಿದ್ದಾರೆ.
ಸಚಿವರ ಅನುಪಸ್ಥಿತಿಯಿಂದ ಆಡಳಿತಾರೂಢ ಸರಕಾರದಿಂದ ಉತ್ತರ ಪಡೆಯುವ ಮಾನ್ಯ ಸದಸ್ಯರ ಹಕ್ಕು ಮತ್ತು ಅವಕಾಶವನ್ನು ವಂಚಿಸಿದಂತಾಗುತ್ತದೆ, ಕಾರಣ ಸಚಿವರು ಸದನದಲ್ಲಿ ಹಾಜರಿರುವುದನ್ನು ಖಾತ್ರಿಪಡಿಸಿಕೊಳ್ಳಿ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಸಭಾಪತಿ ಬಸವರಾಜ ಹೊರಟ್ಟಿ ಸೂಚಿಸಿದ್ದಾರೆ.