ಪಠ್ಯ ಪುಸ್ತಕ ವಿವಾದ: ಆಗಸ್ಟ್ ಕಳೆದರೂ ಪಠ್ಯಪುಸ್ತಕ ಸಿಗುವುದು ಡೌಟು
ಬೆಂಗಳೂರು, ಮೇ27: ಮಕ್ಕಳು ಶಾಲೆಯಿಂದ ವಂಚಿತರಾಗಬಾರದು ಎಂಬ ಧ್ಯೆಯ ಸರ್ಕಾರದ್ದು. ಶಿಕ್ಷಣ ಮಕ್ಕಳ ಹಕ್ಕು. ಶಿಕ್ಷಣ ವ್ಯವಸ್ಥೆಯಲ್ಲಿ ಎಲ್ಲವೂ ಸರಿಯಾಗಿ ಹೋಗಬೇಕಾದರೇ ಮಕ್ಕಳ ಶಾಲೆಯ ಆರಂಭ , ಸಮವಸ್ತ್ರ ವಿತರಣೆ, ಪಠ್ಯಪುಸ್ತಕ ವಿತರಣೆ , ಬಿಸಿಯೂಟ ಯೋಜನೆ ಎಲ್ಲವೂ ಸರಿಯಾಗಿ ಸಾಗಲೇಬೇಕು. ಮಕ್ಕಳು ಕಲಿಕೆಯಲ್ಲಿ ಹಿಂದುಳಿದಿದ್ದಾರೆ ಕಲಿಕಾ ಚೇತರಿಕೆ ಕಾರ್ಯಕ್ರಮವನ್ನು ಮಾಡುತ್ತೇವೆ ಎಂಬ ನೆಪವನ್ನು ಹೇಳುತ್ತಾ ಶಿಕ್ಷಣ ಇಲಾಖೆ ಪಠ್ಯಪುಸ್ತಕವನ್ನು ಸರಿಯಾಗಿ ವಿತರಿಸದೇ ಕಳ್ಳಾಟವಾಡುತ್ತಿದೆ.
ಮಕ್ಕಳನ್ನು ಸರ್ಕಾರಿ, ಅನುದಾನಿತ , ಖಾಸಗಿ ಯಾವುದೇ ಶಾಲೆಗೆ ಸೇರಿಸಿರಲಿ ಮಕ್ಕಳ ಕಲಿಕೆಗೆ ಮೊದಲ ಆದ್ಯತೆಯಂತೆ ಪಠ್ಯಪುಸ್ತವನ್ನು ವಿತರಿಸಬೇಕು. ಆದರೆ, ಪುಸ್ತಕ ಮರು ಪರಿಷ್ಕರಣೆಯ ನೆಪದಲ್ಲಿ ಕೆಲವು ಪಠ್ಯವನ್ನು ತೆಗೆಯುವುದು ಮತ್ತೆ ಸೇರಿಸುವ ಕುರುಡು ಜಾಣ ನಡೆಯಿಂದಾಗಿ ಗೊಂದಲಗಳು ಉಂಟಾಗಿದೆ. 2022-23ರ ಶೈಕ್ಷಣಿಕ ವರ್ಷವನ್ನು ಮೇ 16ರಿಂದಲೇ ಪ್ರಾರಂಭಿಸಲಾಗಿದೆ. ಕೋವಿಡ್ ನಿಂದ ಶಿಕ್ಷಣದ ಕೊರತೆಯನ್ನು ನೀಗಲು ಕಲಿಕಾ ಚೇತರಿಕೆಯನ್ನು ಸರ್ಕಾರದ ನಿರ್ದೇಶನದಂತೆ ಶಾಲೆಗಳು ನಡೆಸುತ್ತಿವೆ. ಆದರೆ ಈ ವೇಳೆಯಲ್ಲಿಯೇ ಶಾಲೆಗಳಿಗೆ ಪೂರ್ಣ ಪ್ರಮಾಣದ ಪಠ್ಯ ಪುಸ್ತಕವನ್ನು ವಿತರಿಸಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಪರಿಷ್ಕರಣೆಗೆ ಒಳಗಾಗಿರುವ ಪುಸ್ತಕವಿನ್ನು ಮುದ್ರಣವಾಗುತ್ತಿರುವುದು ಹಿನ್ನೆಲೆಯಲ್ಲಿ ಪಠ್ಯಪುಸ್ತರ ವಿತರಣೆಗೆ ಗೊಂದಲ ಉಂಟಾಗುತ್ತಿದೆ.
ಖಾಸಗಿ ಶಾಲೆಯವರು ಹಣ ಕಟ್ಟಿದ್ದರು ಸಿಕ್ತಿಲ್ಲ ಪುಸ್ತಕ.
ಶಿಕ್ಷಣ ಇಲಾಖೆ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ ಪಠ್ಯಪುಸ್ತಕವನ್ನು ಪೂರೈಸಬೇಕು. ಅದು ಉಚಿತವಾಗಿ ಪಠ್ಯಪುಸ್ತಕವನ್ನು ವಿತರಿಸಬೇಕು. ಇನ್ನು ಅನುದಾನರಹಿತ ಖಾಸಗಿ ಶಾಲೆಗಳು ಪುಸ್ತಕಕ್ಕೆ ಹಣವನ್ನು ಪಾವತಿಸಿ ಪುಸ್ತಕವನ್ನು ಖರೀದಿಸಬೇಕು. ಶಾಲೆಗಳಿಗೆ ಪೂರ್ಣ ಪ್ರಮಾಣದಲ್ಲಿ ಪುಸ್ತಕವನ್ನು ವಿತರಿಸುತ್ತಿಲ್ಲ. ಒಂದೊಂದು ತರಗತಿಗೆ ಬೇರೆ ಬೇರೆ ಪುಸ್ತಕಗಳ ಕೊರತೆಯಿದೆ. ಪಠ್ಯಪುಸ್ತಕವನ್ನು ಶಾಲೆಗಳಿಗೆ ಸಂಪೂರ್ಣ ಹೊಸ ಪುಸ್ತಕವನ್ನು ಮುದ್ರಿಸಿ ನೀಡುತ್ತಾರೆಯೇ ಅಥವಾ ಹೊಸದಾಗಿ ಮತ್ತು ಪರಿಷ್ಕರಣೆ ಮಾಡಿರುವ ಪಾಠವನ್ನು ಪ್ರತ್ಯೇಕವಾಗಿ ಮುದ್ರಿಸಿ ನೀಡುತ್ತಾರೆಯೇ ಎಂಬುದರ ಬಗ್ಗೆ ಸಾಕಷ್ಟು ಗೊಂದಲಗಳಿವೆ. ಇನ್ನು ಖಾಸಗಿ ಶಾಲೆಗಳು ಹಣವನ್ನು ಪಾವತಿ ಮಾಡಲು ಇಲಾಖೆಯಿಂದ ಒತ್ತಡ ಬರ್ತಿವೆ. ಹಣ ಪಾವತಿ ಮಾಡಿದ್ದರು ಸಹ ಪೂರ್ಣಪ್ರಮಾಣದ ಪುಸ್ತಕವನ್ನು ಶಾಲೆಗಳಿಗೆ ಪೂರೈಸುತ್ತಿಲ್ಲ ಎಂದು ಖಾಸಗಿ ಶಾಲೆಯವರು ಅಳಲನ್ನು ತೊಡಿಕೊಂಡಿದ್ದಾರೆ.
ಗೊಂದಲವಿಲ್ಲದ ಪಾಠವನ್ನು ಮೊದಲು ಮಾಡಿ
ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯ ಪಠ್ಯಪುಸ್ತಕ ಮರು ಪರಿಷ್ಕರಣ ಸಮಿತಿಯು ಪರಿಷ್ಕರಣೆ ಮಾಡಿರುವ ಹೆಡಗೆವಾರ್ ಪಾಠ, ಚಕ್ರವರ್ತಿ ಸೂಲಿಬೆಲೆಯವರ ಪಾಠ, ಕುವೆಂಪುರವರ ಪಾಠ ಸೇರಿದಂತೆ ಗೊಂದಲಗಳು ಏರ್ಪಟ್ಟಿವೆ. ಶಿಕ್ಷಕ ವರ್ಗಕ್ಕೆ ಪಾಠವನ್ನು ಮಾಡುವ ಅಥವಾ ಬಿಡುವುದರ ಬಗ್ಗೆ ಗೊಂದಲಗಳು ಉಂಟಾಗಿವೆ. ಇದರಿಂದಾಗಿ ಗೊಂದಲಗಳಿಗೆ ಸ್ಪಷ್ಟನೆ ಸಿಗುವವರೆಗೂ ಗೊಂದಲವಿಲ್ಲದ ಕೆಲವು ಪಾಠಗಳನ್ನು ಮೊದಲ ಆಯ್ಕೆಯಾಗಿ ಬೋಧಿಸಲು ಶಿಕ್ಷಕ ವರ್ಗ ತೀರ್ಮಾನಿಸಿದೆ. ಇನ್ನು ಗೊಂದಲಗಳಿಗೆ ತಿಲಾಂಜಲಿ ಹಿಡಲು ಖಾಸಗಿ ಶಾಲೆಗಳ ಒಕ್ಕೂಟವೂ ಆಗ್ರಹಿಸಿದೆ.
ಬಿಇಓಗಳು ಕ್ರಮವನ್ನು ವಹಿಸಿ ಶಾಲೆಗಳಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು
ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳು sats(student achievement tracking system)ನಲ್ಲಿ ಶಾಲೆಯ ಲಾಗಿನ್ ಬಳಸಿಕೊಂಡು Textbook managment ನಲ್ಲಿ ಕಳೆದ ಶೈಕ್ಷಣಿಕ ವರ್ಷದ ಸೆಪ್ಟೆಂಬರ್ ನಲ್ಲಿಯೇ ಪಠ್ಯಪುಸ್ತಕದ ಇಂಡೆಟ್ ಹಾಕಲಾಗಿತ್ತು. "ಶಾಲೆಗಳು ತಮ್ಮ ಬಳಿಯಲ್ಲಿರುವ ಹಳೇಯ ಸ್ಟಾಕ್ ಅನ್ನು ಗಮನದಲ್ಲಿಟ್ಟುಕೊಂಡು ಈ ಶೈಕ್ಷಣಿಕ ವರ್ಷಕ್ಕೆ ಬೇಕಾದಷ್ಟು ಪುಸ್ತಕವನ್ನು ನಮೂದಿಸಿದ್ದರು. ಇದೀಗ ಏಕಾಏಕಿ ಪುಸ್ತಕ ಪರಿಷ್ಕರಣೆ ಮಾಡಿರುವುದರಿಂದ ಹಳೇಯ ಪುಸ್ತಕಗಳು ನಿರುಪಯುಕ್ತವಾಗಲಿದೆ. ಪುಸ್ತಕವನ್ನು ಪರಿಷ್ಕರಣೆ ತಪ್ಪಲ್ಲ. ಆದರೆ ಪುಸ್ತಕವನ್ನು ಪರಿಷ್ಕರಿಸಿ ಸೂಕ್ತ ಸಮಯದಲ್ಲಿ ಪಠ್ಯಪುಸ್ತಕವನ್ನು ಪೂರೈಸಬೇಕು. ಪುಸ್ತಕವನ್ನು ಪೂರೈಕೆಯಲ್ಲಿ ಗೊಂದಲಗಳು ನಿವಾರಣೆಯಾಗಿ ಮಕ್ಕಳ ಶೈಕ್ಷಣಿಕ ದೃಷ್ಟಿಕೊನದಿಂದ ಪುಸ್ತಕವನ್ನು ಶೀಘ್ರದಲ್ಲೇ ಪೂರೈಸಬೇಕು. ಈ ಬಗ್ಗೆ ಬಿಇಓಗಳು ಕ್ರಮವನ್ನು ವಹಿಸಿ ಶಾಲೆಗಳಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು'' ಎಂದು ಶಿಕ್ಷಣ ತಜ್ಞ , ಮುಖ್ಯೋಪಾದ್ಯಾಯರಾದ ಆರ್. ರವೀಂದ್ರರವರು ಸ್ಪಷ್ಟಪಡಿಸಿದ್ದಾರೆ.
ಆಗಸ್ಟ್, ಸೆಪ್ಟೆಂಬರ್ ವರೆಗೂ ಪಠ್ಯ ಪುಸ್ತ ಸಿಗೋದು ಡೌಟು
ಇನ್ನು ಸರ್ಕಾರಿ ಶಾಲೆಗಳಿಗೂ ಅರ್ಧಂಬರ್ಧ ಪುಸ್ತಕ ವಿತರಣೆಯಾಗಿದೆ "ನಾವು ಕಲಿಕಾ ಚೇತರಿಕೆ ಕಾರ್ಯಕ್ರಮವನ್ನು ಇನ್ನು ಹದಿನೈದು ದಿನಗಳ ಕಾಲ ಮುಂದುವರೆಸಿದ್ದೇವೆ. ಈಗಾಗಲೇ ಕೆಲವು ಪುಸ್ತಕಗಳು ಬಂದಿವೆ. ಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ವಿತರಣೆಯನ್ನು ಮಾಡಿದ್ದೇವೆ. ಕಲಿಕಾ ಚೇತರಿಕೆ ಕಾರ್ಯಕ್ರಮ ಮುಗಿಯವ ವೇಳೆಗೆ ಸರ್ಕಾರ ಎಲ್ಲಾ ಪಠ್ಯ ಪುಸ್ತಕ ಪೂರೈಕೆ ಮಾಡುವ ನಿರೀಕ್ಷೆಯಿದೆ'' ಎಂದು ಬ್ಯಾಟರಾಯನಪುರ ಸರ್ಕಾರಿ ಶಾಲೆಯ ಮುಖ್ಯೋಪಾದ್ಯಯ ವಿಜಯ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ಇನ್ನ ಶಿಕ್ಷಣ ಇಲಾಖೆಯ ಮೂಲಗಳಿಂದಲೇ ಪಠ್ಯಪುಸ್ತಕ ಮುದ್ರಣಕ್ಕೆ ಕಾಗದದ ಕೊರೆತೆಯಿದೆ. ಈ ಶೈಕ್ಷಣಿಕ ವರ್ಷಕ್ಕೆ ಪಠ್ಯಪುಸ್ತಕ ಮುದ್ರಣಕ್ಕೆ ಆಗಸ್ಟ್ ಅಥವಾ ಸೆಪ್ಟಂಬರ್ ಆಗಬಹುದು ಎನ್ನಲಾಗುತ್ತಿದೆ.
Recommended Video