ಒಕ್ಕಲಿಗರ ಮಠದ ಶ್ರೀ ನಿರ್ಮಲಾನಂದ ಸ್ವಾಮೀಜಿ ಮೌನದ ಬಗ್ಗೆ ಚಳಿ ಬಿಡಿಸಿದ ಯುವಕ!
ಬೆಂಗಳೂರು, ಜೂ. 19: ವಿಶ್ವ ಮಾನವ ಕುವೆಂಪು ಅವರ ಬಗ್ಗೆ ಅವಮಾನ ಮಾಡಿದ ಬಗ್ಗೆ ಚಕಾರ ಎತ್ತದ ಒಕ್ಕಲಿಗರ ಸಂಘ ಹಾಗೂ ಒಕ್ಕಲಿಗರ ಮಠದ ನಿರ್ಮಲಾನಂದ ಸ್ವಾಮೀಜಿ ಮೌನದ ಬಗ್ಗೆ ಯುವಕ ಪ್ರಶ್ನಿಸಿರುವ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ.
ಸಾಮಾಜಿಕ ಜಾಲತಾಣದಲ್ಲಿ ರಾಷ್ಟ್ರಕವಿ ಕುವೆಂಪು ಅವರಿಗೆ ಅವಮಾನ ಮಾಡಿದ್ರೂ ಮೌನ ಮುರಿಯದ ಒಕ್ಕಲಿಗರ ಸಂಘ ಹಾಗೂ ಒಕ್ಕಲಿಗರ ಮಠದ ಮೌನದ ಬಗ್ಗೆ ದೀಪುಗೌಡ ಎಂಬುವರು ನಾನಾ ಪ್ರಶ್ನೆಗಳನ್ನು ಎತ್ತಿ ಚಳಿ ಬಿಡಿಸಿದ್ದಾರೆ. ದೀಪುಗೌಡ ಅವರ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ಭಾರೀ ಸುದ್ದು ಮಾಡುತ್ತಿದೆ.
ಬಸವಣ್ಣ, ಕುವೆಂಪು ಬಗ್ಗೆ ಅಪಮಾನಿಸಿದವರು ಈ ನೆಲದಲ್ಲಿ ಬದುಕಲು ಯೋಗ್ಯರಲ್ಲ: ಸ್ವಾಮೀಜಿಗಳ ಆಕ್ರೋಶ
ಕುವೆಂಪು ನಾಡಿನ ಅಸ್ಮಿತೆ. ರಾಷ್ಟ್ರಕವಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕವಿ. ವಿಶ್ವ ಮಾನವ ಧರ್ಮವನ್ನು ಪರಿಚಯಿಸಿದ ಚೇತನ. ಕುವೆಂಪು ಶೂದ್ರ ವರ್ಗಕ್ಕೆ ಸೇರಿದವರು ಎಂಬ ಕಾರಣಕ್ಕೆ ನಿರಂತರವಾಗಿ ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯುವ, ಇತಿಹಾಸದಿಂದ ಅಳಿಸಿ ಹಾಕುವ ಪ್ರಯತ್ನಗಳು ನಡೆಯುತ್ತಿವೆ. ಕುವೆಂಪು ಅವರಿಗೆ ಅವಮಾನ ಮಾಡಿದ್ರೂ ಒಕ್ಕಲಿಗರ ಮಹಾ ಸಂಸ್ಥಾನದ ಸ್ವಾಮೀಜಿ ಈವರೆಗೂ ಒಂದು ಪ್ರಶ್ನೆ ಮಾಡಿಲ್ಲ. ಕೇವಲ ಮೆಡಿಕಲ್ ಸೀಟು ಕಾಲೇಜು ಹೆಸರಿನಲ್ಲಿ ಒಕ್ಕಲಿಗರ ಸಂಘ ಮುಳಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರಕವಿ ಕುವೆಂಪು ಅವರ ನಾಡಗೀತೆಗೆ ಸಾರಾಯಿ ಪದ್ಯ ಬೆರೆಸಿದ ರೋಹಿತ್ ಚಕ್ರತೀರ್ಥ ಒಬ್ಬ ಗಂಜಿ ಗಿರಾಕಿ. ಕುವೆಂಪು ಬಗ್ಗೆ ಪಠ್ಯ ಪುಸ್ತಕಗಳಲ್ಲಿ ಪರಿಚಯಿಸುವಾಗ "ಹಲವು ಕವಿಗಳ ಬೆಂಬಲದಿಂದ ಕುವೆಂಪು ಎತ್ತರಕ್ಕೆ ಬೆಳೆದರು ಎಂದ ಇತಿಹಾಸ ತಿರುಚಲಾಗಿದೆ. ಕುವೆಂಪು ಅವರನ್ನು ಇತಿಹಾಸದ ಪುಟಗಳಿಂದ ಅಳಿಸಿ ಹಾಕುವ ಮನುವಾದದ ಹುನ್ನಾರವಿದು ಎಂದು ದೀಪುಗೌಡ ವಿಶ್ಲೇಷಿಸಿದ್ದಾರೆ.
ನಿರ್ಮಲಾನಂದ ಸ್ವಾಮೀಜಿಗೂ ಐಟಿ, ಇಡಿ ಭಯ?
ಮಹಾತ್ಮ ಗಾಂಧಿಯನ್ನು ಕೊಂದ ನಾಥುರಾಮ್ ಗೂಡ್ಸೆ ಅವರ ಬಗ್ಗೆ ಬೆದಿರುವ ಪುಸ್ತಕ ಬಿಡುಗಡೆ ಮಾಡೋಕೆ ಒಕ್ಕಲಿಗರ ಮಠದ ನಿರ್ಮಲಾನಂದ ಸ್ವಾಮೀಜಿ ಹೋಗುತ್ತಾರೆ. ಅದೇ ತಮ್ಮದೇ ಸಮುದಾಯದ ಒಕ್ಕಲಿಗರ ಅಸ್ಮಿತೆ ಕುವೆಂಪು ಅವರಿಗೆ ಅವಮಾನ ಮಾಡಿರುವ ಬಗ್ಗೆ ಈವರೆಗೂ ಒಂದು ಮಾತು ಎತ್ತಿಲ್ಲ. ಈ ಹಿಂದಿನ ಸ್ವಾಮೀಜಿ ತುಂಬಾ ಕಷ್ಟ ಪಟ್ಟು ಮಠ ಕಟ್ಟಿದ್ದಾರೆ. ನಿರ್ಮಲಾನಂದ ಸ್ವಾಮೀಜಿಗೂ ಐಟಿ, ಇಡಿ ಭಯ ಇರಬಹುದೇ ? ಸ್ವಾಮೀಜಿ ಧೈರ್ಯವಾಗಿ ಪ್ರಶ್ನೆ ಮಾಡಿ. ಅಂತಹ ಸಂದರ್ಭ ಬಂದ್ರೆ ನಾವು ನಿಮ್ಮ ಬೆಂಬಲಕ್ಕೆ ನಿಲ್ಲುತ್ತೇವೆ ಎಂದು ಪ್ರಶ್ನಿಸಿದ್ದಾರೆ.
ಸೀಟುಗಳ ಡೀಲಿಂಗ್ ಅಲ್ಲ
ಒಕ್ಕಲಿಗರ ಸಂಘ ಕೇವಲ ಆಸ್ತಿ, ಮೆಡಿಕಲ್ ಕಾಲೇಜು ಸೀಟಿನಲ್ಲಿ ಮುಳಗಿದೆ. ಒಕ್ಕಲಿಗರ ಮಠ ಇರುವುದು ಕೇವಲ ಮೆಡಿಕಲ್ ಕಾಲೇಜಿನ ಸೀಟುಗಳ ಡೀಲಿಂಗ್ ಗೆ ಅಲ್ಲ. ನಮ್ಮ ಸಮುದಾಯದ ವ್ಯಕ್ತಿತ್ವ, ನಾಡು, ನುಡಿ, ಕಲೆ ರಕ್ಷಣೆಗೆ ನಿಲ್ಲಬೇಕು. ಕುವೆಂಪು ವ್ಯಕ್ತಿತ್ವಕ್ಕೆ ಮಸಿ ಬಳಿಯುವ ನಿರಂತರ ದಾಳಿಗಳು ನಡೆಯುತ್ತಿದ್ದರೂ ಒಕ್ಕಲಿಗರ ಮಠ ಇಲ್ಲಿಯವರೆಗೂ ಚಕಾರ ಎತ್ತಿಲ್ಲ ಎಂದು ಮಠದ ಪದಾಧಿಕಾರಿಗಳ ನಡೆ ಬಗ್ಗೆ ದೀಪುಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿ.ಟಿ ರವಿ ಅಗ್ರಹಾರ ಗೇಟ್ ಕೀಪರ್ :
ಕುವೆಂಪು ಅವರಿಗೆ ಅವಮಾನ ಮಾಡಿದ ಬಗ್ಗೆ ಒಕ್ಕಲಿಗ ಸಮುದಾಯದ ನಾಯಕರು ಚಕಾರ ಎತ್ತಿಲ್ಲ. ಸಿ.ಟಿ. ರವಿ, ಅಶ್ವತ್ಥ್ ನಾರಾಯಣ, ಆರ್. ಅಶೋಕ್ ಇದೇ ವರ್ಗಕ್ಕೆ ಸೇರಿದ್ರು ಅಗ್ರಹಾರ ಕಾಯುವ ಗೇಟ್ ಕೀಪರ್ ಗಳಾಗಿದ್ದಾರೆ. ಚೌಕಿದಾರ್ ಅಂದ್ರೆ ಅದೇನೆ. ರೋಹಿತ್ ಚಕ್ರತೀರ್ಥ ಎಂಬ ಗಿರಾಕಿ ಮಾತ್ರ ಕುವೆಂಪು ಅವರಿಗೆ ಅವಮಾನ ಮಾಡಿಲ್ಲ. ಈ ಹಿಂದೆ ಮನುವಾದಿಗಳು ಕುವೆಂಪು ಅವರ ರಾಮಾಯಣ ದರ್ಶನಂನ್ನೇ ಪ್ರಶ್ನೆ ಮಾಡಿದ ಉದಾಹರಣೆಗಳಿವೆ. ಮನುವಾದಿಗಳ ಈ ದಬ್ಬಾಳಿಕೆ ವಿರುದ್ಧ ಒಕ್ಕಲಿಗ ಸಮುದಾಯ ಸಿಡಿದೇಳಬೇಕಿದೆ ಎಂದು ದೀಪುಗೌಡ ಕಿರಿ ಕಾರಿದ್ದಾರೆ.
ಇಷ್ಟಾಗಿಯೂ ಯಾಕೆ ಈ ಮೌನ ?
ಎಂಟು ತಿಂಗಳ ಹಿಂದೆ ದಲಿತ ಮತ್ತು ಬಲಿತ ಎಂಬುದರ ಬಗ್ಗೆ ಸಂಗೀತ ನಿರ್ದೇಶಕ ಹಂಸಲೇಖ ನೀಡಿದ ಹೇಳಿಕೆ ವಾಸ್ತವ. ಅದಕ್ಕಾಗಿ ಅವರನ್ನು ಕ್ಷಮೆ ಕೇಳುವ ಹಂತಕ್ಕೆ ಹೋಯಿತು. ಅವರ ವಿರುದ್ಧ ಕೇಸು ದಾಖಲಾಯಿತು. ಅದೇ ಹಿಂದೂ ಧರ್ಮದ ವಿಚಾರದ ಹೆಸರಿನಲ್ಲಿ ಮನುವಾದಿಗಳು ತಮ್ಮ ಜಾತಿ ಯಾವ ರೀತಿ ರಕ್ಷಣೆ ಮಾಡಿಕೊಳ್ಳುತ್ತಿದ್ದಾರೆ. ಏನು ಒಗ್ಗಟ್ಟು ಪ್ರದರ್ಶಿಸುತ್ತಿದ್ದಾರೋ ನೋಡಿ ? ನಾಡಿನ ಅಸ್ಮಿತೆಗಳಾದ ಕುವೆಂಪು, ಸಂಗೊಳ್ಳಿ ರಾಯಣ್ಣ ಬಗ್ಗೆ ಅವಹೇಳನ ಮಾಡಲಾಗುತ್ತಿದೆ. ಅವರ ಚರಿತ್ರೆಯನ್ನು ತಿರುಚಿ ಇತಿಹಾಸದಿಂದ ಅಳಿಸಿ ಹಾಕುವ ಪ್ರಯತ್ನಗಳು ನಡೆಯುತ್ತಿವೆ. ಇಷ್ಟಾಗಿಯೂ ಯಾಕೆ ಈ ಮೌನ ? ಎಂದು ಪ್ರಶ್ನೆ ಮಾಡಿ ದೀಪುಗೌಡ್ರು ಬಿಡುಗಡೆ ಮಾಡಿರುವ ವಿಡಿಯೋ ರಾಜ್ಯದೆಲ್ಲೆಡೆ ಸದ್ದು ಮಾಡುತ್ತಿದೆ.