ಮಾಧ್ಯಮಗೋಷ್ಠಿಗಾಗಿಯೇ ಎರಡು ದಿನ 'ಚಕ್ರತೀರ್ಥ ಪಠ್ಯ' ಓದಿ ತಯಾರಾಗಿದ್ದ ಅಶೋಕ್
ಬೆಂಗಳೂರು, ಜೂನ್ 23: ಪಠ್ಯಪುಸ್ತಕ ಮರುಪರಿಷ್ಕರಣೆಯ ವಿಚಾರದಲ್ಲಿ ಸಮರ್ಥನೆಗೂ ಮುನ್ನ ಕಂದಾಯ ಸಚಿವ ಸಾಮ್ರಾಟ್ ಅಶೋಕ್ ಎರಡು ದಿನ ಶ್ರಮ ಹಾಕಿದ್ದಾರೆ. ರೋಹಿತನ ಚಕ್ರದಲ್ಲಿ ಪಠ್ಯಪುಸ್ತಕ ಗಿರಕಿ ಹೊಡೆಯುತ್ತಿದೆ. ಈ ವೇಳೆ ತಿಳಿಯದೇ ಸಮರ್ಥನೆಗಿಳಿದರೇ ಪ್ರಶ್ನೆಗಳ ಬಾಣಕ್ಕೆ ತತ್ತರಿಸಬೇಕಾಗುತ್ತೆ ಎಂದು ಅಶೋಕ್ ಏನೆಲ್ಲಾ ಮಾಡಿದ್ದರು ಅನ್ನುವುದೇ ವಿಶೇಷ..
ರೋಹಿತ ಚಕ್ರತೀರ್ಥ ಮಾಡಿದ್ದ ಯಡವಟ್ಟು ಬಿಜೆಪಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಬಿಜೆಪಿ ಹೆಡಗೇವಾರ್ ವಿಚಾರದಲ್ಲಿ ಸಮರ್ಥಿಸಿಕೊಂಡಂತೆ ಬೇರೆಲ್ಲಾ ವಿಚಾರವನ್ನು ಸಮರ್ಥಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಭಾರತ. ಸಂಸ್ಕೃತಿ, ಭಾರತದ ಇತಿಹಾಸ. ಧರ್ಮ, ಭಾರತೀಯ ರಾಜರ ವೀರತೆಯನ್ನು ವಿಜೃಂಬಿಸುವ ಯತ್ನವು ಪಠ್ಯಪುಸ್ತಕದಲ್ಲಿ ನಡೆದಿದ್ದರು. ರೋಹಿತ್ ಚಕ್ರತೀರ್ಥನ ನಾಡಗೀತೆ , ಕುವೆಂಪು ಅವಮಾನ ವಿಚಾರದಲ್ಲಿ ಸಮರ್ಥನೆಯನ್ನು ದಿಟ್ಟ ರೀತಿಯಲ್ಲಿ ಮಾಡಲು ಸಾಧ್ಯವಾಗುತ್ತಿಲ್ಲ.
ಕುವೆಂಪು ವಿಶ್ವಮಾನವ, ಕುವೆಂಪುವನ್ನು ಜಾತಿ ಓರೆಗೆ ಹಚ್ಚುವ ಕೆಲಸವಾಗಬಾರದು. ಕುವೆಂಪುರವರ ಸಾಹಿತ್ಯ ಕೃಷಿ ಶಿಖರದೆತ್ತರದ್ದು. ಆದರೂ ಜಾತಿ ರಾಜಕೀಯದಲ್ಲಿ ಕುವೆಂಪು ಹೆಸರನ್ನು ತರಲಾಯ್ತು. ಅದಕ್ಕೇ ಕಾರಣವಾಗಿದ್ದೇ ರೋಹಿತ್ ಚಕ್ರತೀರ್ಥ. ಪಠ್ಯಪುಸ್ತಕ ಮರುಪರಿಷ್ಕರಣೆ ಎಂದರೇ ರೋಹಿತನ ಸಮರ್ಥನೆಯೇ ಆಗಿದ್ದರಿಂದ ಆರ್ ಅಶೋಕ್ ಸಾಕಷ್ಟು ತಯಾರಿಯನ್ನೇ ಮಾಡಬೇಕಾಗಿ ಬಂತು.
ಶಿಕ್ಷಣ ಸಚಿವರಿಂದಲೂ ತಿದ್ದುಪಡಿ ಬಗ್ಗೆ ಮಾಹಿತಿ
ಮರು ಪರಿಷ್ಕರಣೆಯಾಗಿರುವುದು ಕನ್ನಡ ಭಾಷೆ ಮತ್ತು ಸಮಾಜ ವಿಜ್ಞಾನದಲ್ಲಿ ಪಠ್ಯಪುಸ್ತಕಗಳಲ್ಲಿ. ಯಾವೆಲ್ಲಾ ಅಂಶವನ್ನು ಸೇರಿಸಿದ್ದಾರೆ. ಯಾವ ವಿಚಾರವನ್ನು ಬಿಟ್ಟಿದ್ದಾರೆ. ಬರಗೂರು ರಾಮಚಂದ್ರಪ್ಪ ಸಮಿತಿ ಮಾಡಿದ್ದೇನು. ರೋಹಿತ್ ಚಕ್ರತೀರ್ಥ ಸಮಿತಿ ಬಿಟ್ಟುದ್ದೇನು ಎಂಬುದನ್ನು ಸಂಪೂರ್ಣವಾಗಿ ತಿಳಿಯಬೇಕಿತ್ತು. ಇದಕ್ಕಾಗಿ ಆರ್.ಅಶೋಕ್ ಶಿಕ್ಷಣ ಇಲಾಖೆಯ ಅಧಿಕಾರಿಗಳ ಸಭೆಯನ್ನು ನಡೆಸಿದ್ದರು. ಸ್ವತಃ ಶಿಕ್ಷಣ ಸಚಿವರು ಅಧಿಕಾರಿಗಳ ಜೊತೆ ಸೇರಿಕೊಂಡು ಈ ಬಗ್ಗೆ ಆರ್ ಅಶೋಕ್ರವರಿಗೆ ಸಂಪೂರ್ಣವಾದ ಮಾಹಿತಿಯನ್ನು ಎರಡು ದಿನ ತಿಳಿಸಿದ್ದಾರೆ.
ಏನಿತ್ತು.. ಏನಾಯ್ತು.. ಯಾಕಾಯ್ತು..
ಪಠ್ಯಪುಸ್ತಕವನ್ನು ಸರ್ವೆ ಸಾಮಾನ್ಯವಾಗಿ ಹತ್ತು ವರ್ಷಕ್ಕೊಮ್ಮೆ ಮರು ಪರಿಶೀಲನೆಯೋ, ಹೊಸ ಪುಸ್ತಕವನ್ನು ರಚನೆ ಮಾಡಲಾಗುತ್ತದೆ. ಪಠ್ಯಪುಸ್ತಕ
2014-15ರಲ್ಲಿ ಹೊಸದಾಗಿ ರಚನೆಯಾಗಿತ್ತು. ಈ ಪಠ್ಯ ಪುಸ್ತಕವನ್ನು ಸಿದ್ದರಾಮಯ್ಯ ಅಧಿಕಾರವಧಿಯಲ್ಲಿ ಬರಗೂರು ರಾಮಚಂದ್ರಪ್ಪ ಸಮತಿ 2017-18ರಲ್ಲಿ ಪರಿಷ್ಕರಣೆಯನ್ನು ಮಾಡಿತ್ತು. ಮತ್ತೆ ರೋಹಿತ್ ಚಕ್ರತೀರ್ಥ ಸಮಿತಿ 2022-23ನೇ ಸಾಲಿಗೆ ಮರುಪರಿಷ್ಕರಣೆಯಾಗಿದೆ. ಈ ಮೂರು ಹಂತದಲ್ಲಿ ಮೊದಲು ಅಂದರೆ 2014-15 ಏನಿತ್ತು. ಬರಗೂರು ರಾಮಚಂದ್ರಪ್ಪ ಸಮಿತಿ ಬದಲಾಯಿಸಿದ್ದೇನು. ರೋಹಿತ್ ಚಕ್ರತೀರ್ಥ ಸಮಿತಿ ಮಾಡಿದ್ದ ಬದಲಾವಣೆ ಏನು? ಈ ಬದಲಾವಣೆಯನ್ನು ಮಾಡಲು ಕಾರಣವೇನು ಎಂಬುದನ್ನು ತಿಳಿದುಕೊಂಡಿದ್ದಾರೆ. ಈ ಸಮರ್ಥನೆಗೆ ವಿವರವಾದ ನೋಟ್ ಮಾಡಿ ಮೂರು ವಿಭಾಗ ಮಾಡಿ ಅನುಬಂಧಗಳ ಆಧಾರದಲ್ಲಿ ಜೋಡಿಸಿಟ್ಟುಕೊಂಡಿದ್ದಾರೆ.
ತಿಳಿಯದೇ ಹೋಗುವಂತಿಲ್ಲ ತಿಳಿಯಲು ಓದಲೇ ಬೇಕು..!
ಕಂದಾಯ ಸಚಿವ ಆರ್. ಅಶೋಕ್ ಶಾಲಾ ಕಾಲೇಜಿಗೆ ಹೋಗುವಾಗಲೂ ಎರಡು ದಿನದಲ್ಲಿ ಇಷ್ಟು ವಿಚಾರ ಓದಿದ್ದಲೋ ಇಲ್ಲವೋ ತಿಳಿದಲ್ಲ. ಆದರೆ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಯ ಬಾಣದಿಂದ ತಪ್ಪಿಸಿಕೊಳ್ಳಲು ಓದಲೇ ಬೇಕಿತ್ತು. ಕಾರಿನಲ್ಲಿ ತಾವು ಹೇಳಿ ತಯಾರಿಸಿದ್ದ ಕಾಪಿಯನ್ನಿಟ್ಟುಕೊಂಡು ಎತ್ತ ಹೋದರು ಪಠ್ಯಪುಸ್ತಕದಲ್ಲೇನಾಯ್ತು ಅನ್ನೋದನ್ನು ವಿವರವಾಗಿ ತಿಳಿದುಕೊಂಡಿದ್ದಾರೆ. ಸಚಿವ ಸಹೋದ್ಯೋಗಿಗಳ ಜೊತೆ ಸುದ್ದಿಗೋಷ್ಠಿಯಲ್ಲಿ ಪಠ್ಯಮರುಪರಿಷ್ಕರಣೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಹಿಂದೂ ಅಜೆಂಡಾ ಒಪ್ಪಿಕೊಂಡ ಅಶೋಕ..
ರೋಹಿತ್ ಚಕ್ರತೀರ್ಥನ ಬಗ್ಗೆ ಕೇಳಿದ ಪ್ರಶ್ನೆಗೆ ಕಾಂಗ್ರೆಸ್ ನತ್ತ ಬೆಟ್ಟು ಮಾಡಿ ತೋರಿಸಿದ್ದರೆ. ನಾಡಗೀತೆಯನ್ನು ತಿರುಚಿದ್ದ ನಿಜವಾದ ವ್ಯಕ್ತಿಯನ್ನು ಕಂಡು ಹಿಡಿಯಲು ಪ್ರಯತ್ನಿಸುತ್ತಿರುವುದಾಗಿ ಹೇಳಿದ್ದಾರೆ. ರೋಹಿತ್ ಚಕ್ರತೀರ್ಥಗೆ ಬಿ ರಿಪೋರ್ಟ್ ಕೊಟ್ಟಿದ್ದು ಕಾಂಗ್ರೆಸ್ ಸರ್ಕಾರವಿದ್ದಾಗ ಎಂದಿದ್ದಾರೆ. ಆದರೂ ರೋಹಿತ್ ವೈಯಕ್ತಿಕ ವಿಚಾರವೇ ಪಠ್ಯದ ವಿವಾದಕ್ಕೆ ಕಾರಣವಾಗಿದ್ದು ಎಂಬುದನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ. ಇನ್ನು ಸೂಲಿಬೆಲೆ ಚಕ್ರತೀರ್ಥರ ಬಗ್ಗೆ ಕೇಳಿದ ಪ್ರಶ್ನೆಗೆ ಯಾವುದೇ ಉತ್ತರವನ್ನು ನೀಡದೆ ಜಾಣ ಮೌನತನವನ್ನು ಆರ್ ಅಶೋಕ್ ಪ್ರದರ್ಶಿಸಿದ್ದಾರೆ. ಪಠ್ಯಪುಸ್ತಕ ಮರು ಪರಿಷ್ಕರಣೆ ಬಿಜೆಪಿಯ ಹಿಂದೂ ಅಜೆಂಡಾ ಅನ್ನೋದನ್ನು ಆರ್ ಅಶೋಕ್ ಒಪ್ಪಿಕೊಂಡಿದ್ದಾರೆ.
Recommended Video