ಧಾರ್ಮಿಕ ಸ್ಥಳಗಳ ನೆಲಸಮ: ಬೆಚ್ಚಿಬೀಳಿಸುವ ರಾಜ್ಯ ಸರಕಾರದ ಸುತ್ತೋಲೆ
ನಂಜನಗೂಡಿನ ದೇವಸ್ಥಾನ ನೆಲಸಮದ ವಿಚಾರ ಹಿಂದೂ ಧಾರ್ಮಿಕರ ಭಾವನೆಯನ್ನು ಬಡಿದೆಬ್ಬಿಸಿದ್ದು ಒಂದು ಕಡೆಯಾದರೆ, ಕಳೆದ ಸುಮಾರು ಎರಡು ತಿಂಗಳಿನಿಂದ ಧಾರ್ಮಿಕ ಸ್ಥಳಗಳು ಧ್ವಂಸಗೊಂಡಿರುವ ಸಂಖ್ಯೆಯ ಪ್ರಮಾಣ ಇನ್ನಷ್ಟು ಬೆಚ್ಚಿಬೀಳಿಸುವಂತಿದೆ. ಹೌದು..
ಯಾಕೆ ಹಿಂದು ಮತಬ್ಯಾಂಕ್ ಅನ್ನೇ ಪ್ರಮುಖವಾಗಿ ಅಸ್ತ್ರವಾಗಿ ಬಳಸಿಕೊಳ್ಳುತ್ತಿರುವ ಬಿಜೆಪಿ ಸರಕಾರದಿಂದಲೇ ಹಿಂದೂ ವಿರೋಧಿ ನೀತಿನಾ? ಎನ್ನುವ ಸಹಜವಾಗಿ ಕಾಡುವ ಪ್ರಶ್ನೆಗೆ, ಸರ್ವೋಚ್ಚ ನ್ಯಾಯಾಯಲದ ಆದೇಶ ಉತ್ತರ ಕೊಡಬಲ್ಲದು.
ದೇವಾಲಯ ನೆಲಸಮಗೊಳ್ಳುವ ಪಟ್ಟಿಯಲ್ಲಿ ಈ ಜಿಲ್ಲೆ ನಂಬರ್ ಒನ್
ಸುಪ್ರೀಂಕೋರ್ಟ್ ಆಗಲಿ, ಹೈಕೋರ್ಟ್ ಆಗಲಿ ಅಥವಾ ರಾಜ್ಯ ಸರಕಾರವಾಗಲಿ, ಅನಧಿಕೃತ ದೇವಾಲಯಗಳನ್ನು ನೆಲಸಮ ಮಾಡಬೇಕು ಎನ್ನುವ ಆದೇಶವನ್ನು ನೀಡಿದೆಯಾ ಎನ್ನುವ ಪ್ರಶ್ನೆಗೆ ಉತ್ತರ ಕೋರ್ಟ್ ಕಾಪಿ ನೀಡಬಲ್ಲದು. ಕೋರ್ಟ್ ಹೇಳಿರುವುದು ಸಾರ್ವಜನಿಕ ಆಸ್ತಿಯ ಪ್ರದೇಶಗಳಲ್ಲಿ, ದೇವರು/ದೈವಗಳಿಗಿಂತ ಜಾಸ್ತಿ, ವ್ಯಾಪಾರೀಕರಣದ ದೃಷ್ಟಿಯಿಂದ ಆರಂಭಿಸಲಾಗಿರುವ ಪೂಜಾ ಮಂದಿರಗಳು ಯಾಕೆ ನೆಲಸಮ ಆಗಬಾರದು ಎನ್ನುವುದು.
ಸುಪ್ರೀಂಕೋರ್ಟ್ ಆದೇಶದ ಅನ್ವಯ ರಾಜ್ಯದ ಚೀಫ್ ಸೆಕ್ರೆಟರಿಯಾದ ರವಿಕುಮಾರ್ ನೀಡಿರುವ ಆದೇಶದಲ್ಲಿ ಏನು ಹೇಳಲಾಗಿದೆಯೆಂದರೆ, 'ಸಾರ್ವಜನಿಕ ರಸ್ತೆಗಳನ್ನು, ಸಾರ್ವಜನಿಕ ಉದ್ಯಾನವನಗಳನ್ನು, ಒಳಚರಂಡಿ ಹಾದು ಹೋಗುವ ಜಾಗ ಅಥವಾ ಸಾರ್ವಜನಿಕ ಸ್ಥಳಗಳನ್ನು ಅತಿಕ್ರಮಿಸಿ, ಸ್ಪರ್ಧಾತ್ಮಕ ರೀತಿಯಲ್ಲಿ ತಲೆ ಎತ್ತಿರುವ ಧಾರ್ಮಿಕ ಕಟ್ಟಡಗಳನ್ನು ನೆಲಸಮಗೊಳಿಸುವುದು'. ಇದು ಮುಖ್ಯ ಕಾರ್ಯದರ್ಶಿಗಳು ಹೊರಡಿಸಿರುವ ಸುತ್ತೋಲೆ. ಆದರೆ..
ಹಿಂದೂ ದೇವಾಲಯಗಳ ಧ್ವಂಸದ ಹಿಂದೆ ಬಿಜೆಪಿಯ ಹಿಡನ್ ಅಜೆಂಡಾ?
ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿರುವ ಪ್ರಶ್ನೆಗೆ ಬೊಮ್ಮಾಯಿ ಸರಕಾರ ಉತ್ತರ ನೀಡಬೇಕಿದೆ
ಸರಕಾರದ ನಿರ್ದೇಶನವನ್ನು ಜಿಲ್ಲಾಡಳಿತ ಚಾಚೂತಪ್ಪದೇ ಪಾಲಿಸುತ್ತಿದೆಯಾ ಅಥವಾ ನೆಲಸಮ, ಅತಿಕ್ರಮಣ ಎನ್ನುವುದು ಬರೀ ಹಿಂದೂ ದೇವಾಲಯಗಳಿಗಾ, ಇತರ ಧರ್ಮೀಯರ ಪೂಜಾ ಸ್ಥಳಕ್ಕೆ ಇಲ್ಲವಾ ಎನ್ನುವ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿರುವ ಪ್ರಶ್ನೆಗೆ ಬೊಮ್ಮಾಯಿ ಸರಕಾರ ಉತ್ತರ ನೀಡಬೇಕಿದೆ. 05.07.2018ರಲ್ಲಿ ಅಂದಿನ ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿಯಾಗಿದ್ದಂತಹ ಜಿ. ಎಸ್.ನಾಗರತ್ನಮ್ಮ ಅವರು ಹೊರಡಿಸಿದ ಸುತ್ತೋಲೆಯ ಪ್ರಕಾರ, ಅನಧಿಕೃತ ಧಾರ್ಮಿಕ ಕಟ್ಟಡಗಳನ್ನು ಯಾವುದೇ ಮುಲಾಜಿಲ್ಲದೇ ನೆಲಸಮಗೊಳಿಸಬೇಕೆಂದು.
ಅಂದಿನ ಸಿಎಸ್ ಆಗಿದ್ದಂತಹ ಎಸ್.ವಿ.ರಂಗನಾಥ್ ಅವರು ಸಹಿ ಮಾಡಿರುವ ಸುತ್ತೋಲೆ
ಪರಿಸ್ಕೃತ ಸರ್ಕ್ಯೂಲರ್ ನಲ್ಲಿ ನಮೂದಿಸಲಾಗಿರುವ ಇನ್ನೊಂದು ಅಂಶವೇನಂದರೆ, ದಿನಾಂಕ. 07.12.2009ರ ನಂತರದ ಅವಧಿಯಲ್ಲಿ ತಲೆ ಎತ್ತಿರುವ ಧಾರ್ಮಿಕ ಸ್ಥಳಗಳನ್ನು ನೆಲಸಮಗೊಳಿಸುವ ಜವಾಬ್ದಾರಿ ಆಯಾಯ ಜಿಲ್ಲಾಧಿಕಾರಿಗಳ ಹೊಣೆಗೆ ಬಿಟ್ಟಿದ್ದು. ಕೊಟ್ಟ ಗಡುವಿನಲ್ಲಿ ಕೆಲಸ ಮುಗಿಯದಿದ್ದರೆ, ಡಿಸಿಗಳೇ ಹೊಣೆಗಾರರು ಮತ್ತು ಶಿಸ್ತು ಕ್ರಮಕ್ಕೆ ಅವರು ಅರ್ಹರು. ಈ ಆದೇಶವನ್ನು ಅಂದಿನ ಸಿಎಸ್ ಆಗಿದ್ದಂತಹ ಎಸ್.ವಿ.ರಂಗನಾಥ್ ಅವರು ಸಹಿ ಮಾಡಿದ್ದಾರೆ. ಇದು ಒಂದು ಕಡೆ..
ನೆಲಸಮಗೊಳಿಸಿರುವ ರಿಪೋರ್ಟ್ ಅನ್ನು ಮುಖ್ಯ ಕಾರ್ಯದರ್ಶಿಗಳಿಗೆ ಸಲ್ಲಿಸಬೇಕು
ಇದಾದ ನಂತರ 01.07.2021ರಂದು ಹಾಲೀ ಸಿಎಸ್ (ರವಿಕುಮಾರ್) ಹೊರಡಿಸಿರುವ ಸುತ್ತೋಲೆಯ ಪ್ರಕಾರ, ಜುಲೈ ಹದಿನೈದರಿಂದ ಆರಂಭವಾಗುವಂತೆ ಜಿಲ್ಲೆಯ ಪ್ರತೀ ತಾಲೂಕಿನಲ್ಲಿ ಕನಿಷ್ಟ ಒಂದು ಅನಧಿಕೃತ ಪೂಜಾ ಕೇಂದ್ರವನ್ನು ಒಂದು ವಾರದ ಅವಧಿಯಲ್ಲಿ ನೆಲಸಮಗೊಳಿಸಬೇಕು. ಜೊತೆಗೆ, ಪಂಚಾಯತಿ ಮಟ್ಟದಲ್ಲೂ ಈ ಕೆಲಸ ನಡೆಯಬೇಕು. ಎಷ್ಟು ದೇವಾಲಯ/ಮಸೀದಿ/ಚರ್ಚ್/ಗುರುದ್ವಾರ ಇತ್ಯಾದಿಗಳನ್ನು ನೆಲಸಮಗೊಳಿಸಿದ್ದೀರಿ ಎನ್ನುವ ರಿಪೋರ್ಟ್ ಅನ್ನು ಮುಖ್ಯ ಕಾರ್ಯದರ್ಶಿಗಳಿಗೆ ಸಲ್ಲಿಸಬೇಕು. ಇಲ್ಲಿ ಗಮನಿಸಬೇಕಾದ ಅಂಶವೇನಂದರೆ, ಈ ಆದೇಶ ಹೊರಬಿದ್ದ ವೇಳೆ ಯಡಿಯೂರಪ್ಪನವರು ಸಿಎಂ ಆಗಿದ್ದರು. ಇದುವರೆಗೆ ನೆಲಸಮವಾಗಿರುವ ಪೂಜಾ ಕೇಂದ್ರಗಳು ಎಷ್ಟು?
ಸರಕಾರ ಲೆಕ್ಕ ಹಾಕಿರುವ ಮಾಹಿತಿ ಮತ್ತು ಹೊರಡಿಸಿರುವ ಅಂಕಿಅಂಶದ ಸುತ್ತೋಲೆ ಹೀಗಿದೆ
ಸರಕಾರ ಲೆಕ್ಕ ಹಾಕಿರುವ ಮಾಹಿತಿ ಮತ್ತು ಹೊರಡಿಸಿರುವ ಅಂಕಿಅಂಶದ ಪ್ರಕಾರ, ರಾಜ್ಯದಲ್ಲಿ ಒಟ್ಟು ಇರುವ ಪೂಜಾ ಕೇಂದ್ರಗಳು 6,395. 29.09.2009ಕ್ಕೆ ಮುನ್ನ ಇರುವ ಸಂಖ್ಯೆ 5,688, ಇದರಲ್ಲಿ ಸ್ಥಳಾಂತರ/ನೆಲಸಮ/ಉಳಿದುಕೊಂಡಿರುವ ಸಂಖ್ಯೆ 2,887. 29.09.2009ರ ನಂತರ ತಲೆ ಎತ್ತಿರುವ ಪೂಜಾ ಕೇಂದ್ರಗಳು 1,242. ಸರಕಾರ ನೀಡಿರುವ ಕಟ್-ಆಫ್-ಡೇಟ್ ಒಳಗೆ ನೆಲಸಮಗೊಂಡಿರುವ ಪೂಜಾ ಕೇಂದ್ರಗಳು ಬರೋಬ್ಬರಿ 1,054. ಅಂದರೆ, ಸಾರ್ವಜನಿಕರ ಗಮನಕ್ಕೆ ಬಂದೋ, ಬರದೆಯೋ ಇಷ್ಟೊಂದು ಸಂಖ್ಯೆಯಲ್ಲಿ ಧಾರ್ಮಿಕ ಕೇಂದ್ರಗಳು ನೆಲಸಮಗೊಂಡಿದೆ.
Recommended Video