ತುಮಕೂರಿನ ನಕ್ಸಲ್ ದಾಳಿ ಪ್ರಕರಣದಲ್ಲಿ ವರವರ ರಾವ್ ಬೆಂಗಳೂರು ಪೊಲೀಸ್ ವಶ
2005ರಲ್ಲಿ ತುಮಕೂರಿನಲ್ಲಿ ನಡೆದ ನಕ್ಸಲ್ ದಾಳಿಗೆ ಸಂಬಂಧಿಸಿದಂತೆ ತೆಲುಗು ಕವಿ ಹಾಗೂ ಸಾಮಾಜಿಕ ಕಾರ್ಯಕರ್ತ ವರವರ ರಾವ್ ಅವರನ್ನು ಜುಲೈ 3ರಂದು ಕರ್ನಾಟಕ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈಳ್ಗರ್ ಪರಿಷದ್ ಪ್ರಕರಣದಲ್ಲೂ ವರವರ ರಾವ್ ಅವರು ಆರೋಪಿ. ಸದ್ಯಕ್ಕೆ ಅವರು ಪುಣೆಯಲ್ಲಿ ನ್ಯಾಯಾಂಗ ಬಂಧನದಲ್ಲಿ ಇದ್ದರು.
ಬೆಂಗಳೂರು ಪೊಲೀಸರು ವರವರ ರಾವ್ ಅವರನ್ನು ವಶಕ್ಕೆ ಪಡೆದಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಫೆಬ್ರವರಿ ಆರನೇ ತಾರೀಕು, 2005ರಲ್ಲಿ ನಕ್ಸಲ್ ನಾಯಕ ಸಾಕೇತ್ ರಾಜನ್ ಅಲಿಯಾಸ್ ಪ್ರೇಮ್ ನನ್ನು ಎನ್ ಕೌಂಟರ್ ನಲ್ಲಿ ಚಿಕ್ಕಮಗಳೂರಲ್ಲಿ ಕೊಲ್ಲಲಾಗಿತ್ತು.
ಮೋದಿ ಹತ್ಯೆ ಸಂಚು : ವಿಚಾರವಾದಿ ವರವರರಾವ್ ಬಂಧನ
ಆ ಘಟನೆಯ ಐದು ದಿನಗಳ ನಂತರ, ಹತ್ಯೆಗೆ ಪ್ರತೀಕಾರವಾಗಿ ನಕ್ಸಲರು ಕರ್ನಾಟಕ ರಾಜ್ಯ ಮೀಸಲು ಪೊಲೀಸ್ (ಕೆಎಸ್ ಆರ್ ಪಿ) ಬೆಟಾಲಿಯನ್ ಮೇಲೆ ತುಮಕೂರು ಜಿಲ್ಲೆಯ ವೆಂಕಮ್ಮನಹಳ್ಳಿಯಲ್ಲಿ ದಾಳಿ ನಡೆಸಿದ್ದರು. ಆಗ ಕೆಎಸ್ ಆರ್ ಪಿಯ ಏಳು ಸಿಬ್ಬಂದಿ ಹಾಗೂ ನಾಗರಿಕರೊಬ್ಬರು ಸಾವನ್ನಪ್ಪಿದ್ದರು.
2003ರ ಆರಂಭದಲ್ಲಿ ರಾವ್ ಅವರು ಚಿಕ್ಕಮಗಳೂರಿನಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ್ದರು. ಇನ್ನು ಈಳ್ಗರ್ ಪರಿಷದ್ ಪ್ರಕರಣದಲ್ಲಿ ಸಾಮಾಜಿಕ ಕಾರ್ಯಕರ್ತರಾದ ಸುಧಾ ಭಾರದ್ವಾಜ್, ಅರುಣೆ ಫೆರೆರಿಯಾ, ವೆರ್ನಾನ್ ಗೋನ್ಸಾಲ್ವೆಸ್ ಹಾಗೂ ಗೌತಮ್ ನವಲಖ ಜತೆಗೆ ವರವರ ರಾವ್ ಅವರನ್ನೂ ಆಗಸ್ಟ್ 28, 2018ರಲ್ಲಿ ಬಂಧಿಸಲಾಗಿತ್ತು.
ಮಾವೋವಾದಿ ನಾಯಕರ ಜತೆಗೆ ನಂಟು, ಶಸ್ತ್ರಾಸ್ತ್ರಗಳ ಸಂಗ್ರಹ, ವಿದ್ಯಾರ್ಥಿಗಳ ನೇಮಕ ಹಾಗೂ ಮಾವೋವಾದಿ ಚಟುವಟಿಕೆಗಳಿಗೆ ಹಣಕಾಸಿನ ನೆರವು ಒದಗಿಸಿದ ಆರೋಪ ವರವರ ರಾವ್ ಅವರ ಮೇಲಿದೆ. ಡಿಸೆಂಬರ್ 31, 2017ರಲ್ಲಿ ಮಾವೋ ಬೆಂಬಲಿತ ಈಳ್ಗರ್ ಪರಿಷದ್ ಕಾರ್ಯಕ್ರಮದಲ್ಲಿ ನೀಡಿದ ಭಾಷಣದಿಂದ ಪ್ರಚೋದನೆಗೊಂಡು ಮರುದಿನ ಪುಣೆ ಜಿಲ್ಲೆಯ ಕೋರೆಗಾಂವ್- ಭೀಮ ಯುದ್ಧ ಸ್ಮಾರಕದಲ್ಲಿ ಹಿಂಸಾಚಾರ ಬುಗಿಲೇಳಲು ಕಾರಣ ಆಗಿತ್ತು.