ಕರ್ನಾಟಕದ ಕಾಂಗ್ರೆಸ್ ನಾಯಕರಿಗೆ ರೋಷನ್ ಬೇಗ್ ಪ್ರಶ್ನೆಗಳು
Recommended Video
ಬೆಂಗಳೂರು, ಜೂನ್ 19 : 'ನಾನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಲ್ಲಿದ್ದೇನೆ. ಸಿದ್ದರಾಮಯ್ಯ ಕಾಂಗ್ರೆಸ್ನಲ್ಲಿ ಅಲ್ಲ' ಎಂದು ಶಿವಾಜಿನಗರ ಶಾಸಕ, ಮಾಜಿ ಸಚಿವ ರೋಷನ್ ಬೇಗ್ ಕರ್ನಾಟಕದ ಕಾಂಗ್ರೆಸ್ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಲವು ಪ್ರಶ್ನೆಗಳನ್ನು ನಾಯಕರ ಮುಂದಿಟ್ಟಿದ್ದಾರೆ.
ಬುಧವಾರ ಫ್ರೇಜರ್ ಟೌನ್ ನಿವಾಸದಲ್ಲಿ ಮಾಜಿ ಸಚಿವ ರೋಷನ್ ಬೇಗ್ ಪತ್ರಿಕಾಗೋಷ್ಠಿ ನಡೆಸಿದರು. ಮಂಗಳವಾರ ರಾತ್ರಿ ಕರ್ನಾಟಕ ಕಾಂಗ್ರೆಸ್ ರೋಷನ್ ಬೇಗ್ ಅವರನ್ನು ಪಕ್ಷದಿಂದ ಅಮಾನತು ಮಾಡಿತ್ತು. ಈ ಕುರಿತು ಇಂದು ರೋಷನ್ ಬೇಗ್ ಮಾತನಾಡಿದರು.
ರೋಷನ್ ಬೇಗ್ ಅಮಾನತು, ತಕ್ಕ ಶಾಸ್ತಿ ಎಂದ ಹ್ಯಾರಿಸ್
'ನಾನು ಕಾಂಗ್ರೆಸ್ ನಾಯಕರ ಬಗ್ಗೆ ಮಾತನಾಡಿದ್ದು ಕೇವಲ ನನ್ನ ಮಾತಲ್ಲ. ರಾಜ್ಯದ ಮೂಲೆ ಮೂಲೆಯಲ್ಲಿರುವ ಸಾವಿರಾರು ಕಾರ್ಯಕರ್ತರ ಮಾತು. ಹಲವು ಕಾರ್ಯಕರ್ತರು ನನ್ನನ್ನು ಸಂಪರ್ಕಿಸಿ ನಮ್ಮ ಮನಸ್ಸಿನಲ್ಲಿ ಇದ್ದದ್ದನ್ನು ನೀವು ಹೇಳಿದಿರಿ ಎಂದು ಹೇಳಿದ್ದಾರೆ' ಎಂದು ರೋಷನ್ ಬೇಗ್ ಹೇಳಿದರು.
ಪಕ್ಷ ವಿರೋಧಿ ಚಟುವಟಿಕೆ: ಕಾಂಗ್ರೆಸ್ನಿಂದ ರೋಷನ್ ಬೇಗ್ ಅಮಾನತು
'ನಾನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಶಿಸ್ತಿನಿ ಸಿಪಾಯಿ. ನನ್ನ ಮಿತ್ರರು, ಪಕ್ಷದ ಹಿರಿಯ ನಾಯಕರು, ಕಾರ್ಯಕರ್ತರು, ಹಿತೈಷಿಗಳ ಜೊತೆ ಚರ್ಚೆ ನಡೆಸಿ ನಾನು ಮುಂದಿನ ತೀರ್ಮಾನವನ್ನು ತೆಗೆದುಕೊಳ್ಳುತ್ತೇನೆ' ಎಂದು ರೋಷನ್ ಬೇಗ್ ಸ್ಪಷ್ಟಪಡಿಸಿದರು.
ರೋಷನ್ ಬೇಗ್ ವಿರುದ್ಧ ಹೈಕಮಾಂಡಿಗೆ ದೂರು ಸಲ್ಲಿಸಿದ ಕೆಪಿಸಿಸಿ
ಹಿರಿಯ ನಾಯಕರನ್ನು ಭೇಟಿ ಮಾಡುವೆ
'ನಾನು ಪಕ್ಷದ ಹಿರಿಯ ನಾಯಕರಾದ ಎಚ್.ಕೆ.ಪಾಟೀಲ್, ರಾಮಲಿಂಗಾ ರೆಡ್ಡಿ, ಕೆ.ಎಚ್.ಮುನಿಯಪ್ಪ, ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡುತ್ತೇನೆ. ಬಳಿಕ ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರನ್ನು ಭೇಟಿಯಾಗುವ ಕುರಿತು ತೀರ್ಮಾನ ಮಾಡುತ್ತೇನೆ' ಎಂದು ರೋಷನ್ ಬೇಗ್ ಹೇಳಿದರು.
ಒಂದು ಸೀಟು ಬಂತಲ್ಲಾ ಏನು ಹೇಳುವಿರಿ?
'ಕರ್ನಾಟಕ ಕಾಂಗ್ರೆಸ್ನಲ್ಲಿ ಸತ್ಯ ಹೇಳುವುದೆ ಅಪರಾಧವೇ?. ಲೋಕಸಭಾ ಚುನಾವಣೆ ಫಲಿತಾಂಶ ನೋಡಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ರಾಜೀನಾಮೆ ನೀಡಲು ಮುಂದಾಗಿಲ್ಲವೇ?, ರಾಜ್ಯದಲ್ಲಿ ಕೇವಲ ಒಂದು ಸೀಟು ಬಂತಲ್ಲ ಈ ಬಗ್ಗೆ ನೀವು ಏನು ಹೇಳುವಿರಿ?' ಎಂದು ರೋಷನ್ ಬೇಗ್ ರಾಜ್ಯ ನಾಯಕರನ್ನು ಪ್ರಶ್ನೆ ಮಾಡಿದರು.
ಏಕೆ ಕ್ರಮ ಕೈಗೊಂಡಿಲ್ಲ ಹೇಳಿ?
'ನಮ್ಮ ಪಕ್ಷದ ದಲಿತ ನಾಯಕರಾದ ಕೆ.ಎಚ್.ಮುನಿಯಪ್ಪ ಅವರನ್ನು ಸೋಲಿಸುತ್ತೇವೆ ಎಂದು ಕೆಲವರು ಬಹಿರಂಗ ಹೇಳಿಕೆ ಕೊಟ್ಟರು. ಮಂಡ್ಯದಲ್ಲಿ ನಮ್ಮ ಪಕ್ಷದ ನಾಯಕರು ಸುಮಲತಾ ಅವರನ್ನು ಭೇಟಿ ಮಾಡಿದರು, ಅವರ ಪರವಾಗಿ ಪ್ರಚಾರ ಮಾಡಿದರು. ಆದರೆ, ಏಕೆ ಕ್ರಮ ಕೈಗೊಂಡಿಲ್ಲ. ಸತ್ಯ ಹೇಳಿದ್ದಕ್ಕೆ ನನ್ನ ವಿರುದ್ಧ ಕ್ರಮ ತೆಗೆದುಕೊಳ್ಳಲಾಯಿತೇ?' ಎಂದು ರೋಷನ್ ಬೇಗ್ ಪ್ರಶ್ನಿಸಿದರು.
ನಿಮಗೆ ಎಷ್ಟು ಲೀಡ್ ಬಂದಿದೆ ಹೇಳಿ?
'ನನ್ನ ಶಿವಾಜಿನಗರ ಕ್ಷೇತ್ರದಲ್ಲಿ ಚುನಾವಣೆಯಲ್ಲಿ ನಾನು 14 ಸಾವಿರಕ್ಕೂ ಅಧಿಕ ಲೀಡ್ ತೆಗೆದುಕೊಂಡಿದ್ದೇನೆ. ನಮ್ಮ ಪಕ್ಷದ ರಾಜ್ಯಾಧ್ಯಕ್ಷರು ಅವರ ಕ್ಷೇತ್ರದಲ್ಲಿ ಎಷ್ಟು ಲೀಡ್ ಪಡೆದರು, ಸಿದ್ದರಾಮಯ್ಯ ಹಳೇ ಕ್ಷೇತ್ರದಲ್ಲಿ ಕಾಂಗ್ರೆಸ್ಗೆ ಎಷ್ಟು ಲೀಡ್ ಬಂತು, ಬಾದಾಮಿಯಲ್ಲಿ ಕಾಂಗ್ರೆಸ್ಗೆ ಎಷ್ಟು ಲೀಡ್ ಸಿಕ್ಕಿತ್ತು?' ಎಂದು ರೋಷನ್ ಬೇಗ್ ಅವರು ದಿನೇಶ್ ಗುಂಡೂರಾವ್ ಮತ್ತು ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದರು.
ಏಕೆ ಸಭೆಯನ್ನು ಕರೆಯಲಿಲ್ಲ?
'ನಾನು ಪಕ್ಷದ ನಾಯಕರ ವಿರುದ್ಧ ಮಾತನಾಡಿದಾಗ ಕೇವಲ ಎಕ್ಸಿಟ್ ಪೋಲ್ ಫಲಿತಾಂಶ ಬಂದಿತ್ತು. ಲೋಕಸಭಾ ಫಲಿತಾಂಶ ಬಂದ ಬಳಿಕ ಏಕೆ ಪಕ್ಷದ ಎಲ್ಲಾ ನಾಯಕರ ಸಭೆಯನ್ನು ಕರೆಯಲಿಲ್ಲ. ಫಲಿತಾಂಶ ಹೀಗಿದೆ ಮುಂದೆ ಪಕ್ಷವನ್ನು ಹೇಗೆ ಸಂಘಟನೆ ಮಾಡೋಣ ಎಂದು ಚರ್ಚೆ ಮಾಡಬಹುದಿತ್ತಲ್ಲವೇ?. ಪಕ್ಷದ ಕಚೇರಿಯಲ್ಲಿ ಸಭೆ ನಡೆಸಲು ಆಗುವುದಿಲ್ಲವೇ?' ಎಂದು ರೋಷನ್ ಬೇಗ್ ಪ್ರಶ್ನಿಸಿದರು.
ಟಿಕೆಟ್ ತಪ್ಪಿಸಿ ಸೋಲಿಸಿದಿರಿ
'ತುಮಕೂರು ಕ್ಷೇತ್ರದಲ್ಲಿ ಮುದ್ದಹನುಮೇಗೌಡರು ಯಾವ ತಪ್ಪು ಮಾಡಿದ್ದರು. ಅವರನ್ನು ಚುನಾವಣೆಯಲ್ಲಿ ಬಲಿಪಶುವನ್ನಾಗಿ ಮಾಡಲಾಯಿತು. ಯಾವುದೇ ತಪ್ಪು ಮಾಡದ ಅವರಿಗೆ ಮೋಸ ಮಾಡಿ ಮೈತ್ರಿ ಎಂದು ಹೇಳಿ ಟಿಕೆಟ್ ತಪ್ಪಿಸಿ ಸೋಲಿಸಿದಿರಿ. ದೇವೇಗೌಡರಿಗೆ ಟಿಕೆಟ್ ಕೊಟ್ಟು ಈಗ ಆಗಿದ್ದೇನು? ಎಂದು ಹೇಳಿ' ಎಂದು ರೋಷನ್ ಬೇಗ್ ಆಕ್ರೋಶ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ಕಾಂಗ್ರೆಸ್ನಲ್ಲಿ ನಾನಿಲ್ಲ
'ನಾನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನಲ್ಲಿದ್ದೇನೆ. ಸಿದ್ದರಾಮಯ್ಯ ಅವರ ಕಾಂಗ್ರೆಸ್ನಲ್ಲಿ ಇಲ್ಲ. ಸತ್ಯ ಹೇಳಿದ ಕಾರಣಕ್ಕೆ ನನ್ನ ವಿರುದ್ಧ ಕ್ರಮ ಕೈಗೊಂಡಿದ್ದೆ ಆದರೆ, ತುಮಕೂರು, ಕೋಲಾರ, ಮಂಡ್ಯ ಭಾಗದ ನಾಯಕರ ಮೇಲೆ ಏಕೆ ಕ್ರಮ ಕೈಗೊಂಡಿಲ್ಲ?' ಎಂದು ರೋಷನ್ ಬೇಗ್ ಪ್ರಶ್ನೆ ಮಾಡಿದರು.