ಜಡ್ಜ್ ಗಳು ಸರ್ವಜ್ಞರಲ್ಲ ಎಂದ ಸಿಟಿ ರವಿ ವಿರುದ್ಧ ಹೈಕೋರ್ಟ್ಗೆ ವಕೀಲರಿಂದ ದೂರು
ಬೆಂಗಳೂರು, ಮೇ 14: "ನಿಮ್ಮ ಸಚಿವರು ಮತ್ತು ಇತರರರು ಜನರಿಗೆ ಸತ್ಯವನ್ನು ಹೇಳಬೇಕು. ಸಾರ್ವಜನಿಕರಿಗೆ ಸತ್ಯವನ್ನು ಹೇಳಿ. ಲಸಿಕೆ ಲಭ್ಯತೆ ವಿಚಾರದಲ್ಲಿ ಜನರಿಗೆ ನೈಜ ಮಾಹಿತಿ ನೀಡಿ. ಆರು ಕೋಟಿಗೂ ಅಧಿಕ ಇರುವ ರಾಜ್ಯದಲ್ಲಿ ಕೇವಲ ಒಂದು ಪರ್ಸೆಂಟ್ ನಷ್ಟು ಮಂದಿಗೆ ಎರಡನೇ ಡೋಸ್ ನೀಡಿಲ್ಲ. ಕಾಲ ಮಿತಿಯಲ್ಲಿ ಎರಡನೇ ಡೋಸ್ ಪಡೆಯದಿದ್ದರೆ ಮೊದಲ ಡೋಸ್ ಲಸಿಕೆ ನ್ಯಾಷನಲ್ ವೇಸ್ಟ್"
ಕೊರೊನಾ ನಿರ್ವಹಣೆ ಮತ್ತು ಸಾರ್ವಜನಿಕರಿಗೆ ಲಸಿಕೆ ನೀಡುವಲ್ಲಿ ವಿಫಲವಾಗಿರುವ ರಾಜ್ಯ ಸರ್ಕಾರದ ವಿರುದ್ಧ ಹೈಕೋರ್ಟ್ ತೆಗೆದುಕೊಂಡ ತರಾಟೆಯ ಪರಿಯಿದು. ಕೊರೊನಾ ಎರಡನೇ ಅಲೆ ನಿಯಂತ್ರಣ ಮಾಡುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಇತ್ತೀಚೆಗಷ್ಟೇ ಆಕ್ಸಿಜನ್ ಪೂರೈಕೆ ಕುರಿತು ಕೇಂದ್ರ ಸರ್ಕಾರಕ್ಕೆ ಚಾಟಿ ಬೀಸಿದ್ದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯಮೂರ್ತಿ ಅರವಿಂದ ಕುಮಾರ್, ಲಸಿಕೆ ವಿಚಾರದಲ್ಲೂ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ತರಾಟೆಗೆ ತೆಗೆದುಕೊಂಡರು.
ರಾಜ್ಯದಲ್ಲಿ ಲಸಿಕೆ ಅಭಿಯಾನ ಸಮಪರ್ಕವಾಗಿಲ್ಲ. ಮೊದಲ ಡೋಸ್ ಪಡೆದವರಿಗೆ ಎರಡನೇ ಡೋಸ್ ಲಭ್ಯವಾಗುತ್ತಿಲ್ಲ. ಲಭ್ಯ ಇರುವ ಲಸಿಕೆ ಬಗ್ಗೆ ಸಾರ್ವಜನಿಕರಿಗೆ ನಿಜವಾದ ಮಾಹಿತಿ ತಿಳಿಸಬೇಕು. ಸಾರ್ವಜನಿಕರಿಗೆ ಸರಿಯಾದ ಮಾಹಿತಿ ಒದಗಿಸಬೇಕು. ಸತ್ಯವನ್ನು ಜನರಿಗೆ ಹೇಳಿ. ಲಸಿಕಾ ಕೇಂದ್ರಗಳಿಗೆ ತೆರಳಿ ಲಸಿಕೆ ಇಲ್ಲದೇ ವಾಪಸು ಆಗುತ್ತಿದ್ದಾರೆ. ಈಗ ಯಾರಿಗೆ ಲಸಿಕೆ ನೀಡಲಾಗುತ್ತಿದೆ ಎಂಬ ವಿಚಾರವನ್ನು ತಿಳಿಸಬೇಕು. ನಿಮ್ಮ ಸಚಿವರು ಮತ್ತು ಇತರರು ಜನರಿಗೆ ಸತ್ಯವನ್ನು ತಿಳಿಸಬೇಕು ಎಂದು ಮುಖ್ಯ ನ್ಯಾಯಮೂರ್ತಿ ಅವರನ್ನು ಒಳಗೊಂಡ ವಿಭಾಗೀಯ ಪೀಠ ತೀವ್ರ ತರಾಟೆಗೆ ತೆಗೆದುಕೊಂಡಿತು.
ರಾಜ್ಯದಲ್ಲಿ ಆರು ಕೋಟಿ ಗೂ. ಅಧಿಕ ಮಂದಿ ಇದ್ದಾರೆ. ಕೇವಲ 22 ಲಕ್ಷ ಮಂದಿಗೆ ಮಾತ್ರ ಎರಡನೇ ಡೋಸ್ ಲಸಿಕೆ ಸಿಕ್ಕಿದೆ. ಲಸಿಕೆ ಅಭಿಯಾನದ ಸಂಪೂರ್ಣ ವಿಫಲ ಎಂದು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿತು. ಈ ವೇಳೆ ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ, ಕೇಂದ್ರ ಸರ್ಕಾರ ಪೂರೈಸಿದ ಲಸಿಕೆಯಲ್ಲಿ ಶೇ. 70 ರಷ್ಟು ಡೋಸ್ ನನ್ನು 45 ವರ್ಷ್ ಮೇಲ್ಪಟ್ಟ ಎರಡನೇ ಡೋಸ್ ಗೆ ಮೀಸಲಿಡುವಂತೆ ಕೇಂದ್ರ ಸರ್ಕಾರ ಸೂಚಿಸಿತ್ತು. ಈ ಕುರಿತು ಮೂರು ಬಾರಿ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿತ್ತು. ಆದರೆ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ನಿಯಮ ಪಾಲಿಸದೇ ಉಲ್ಲಂಘನೆ ಮಾಡಿದೆ ಎಂದು ಹೇಳಿದರು.
ಇದಕ್ಕೆ ಕೆಂಡಾಮಂಡಲವಾದ ಹೈಕೋರ್ಟ್ ನ್ಯಾಯಪೀಠ, ರಾಜ್ಯ ಸರ್ಕಾರ ಎಲ್ಲಾ ಮಾರ್ಗ ಸೂಚಿಗಳನ್ನು ಉಲ್ಲಂಘನೆ ಮಾಡಿದೆಯೇ ? ರಾಜ್ಯ ಸರ್ಕಾರದಿಂದ ಗಂಭೀರ ಲೋಪವಾಗಿದೆ. ಕೇಂದ್ರ ಸರ್ಕಾರ ಹೇಳಿದರೂ ಯಾಕೆ ರಾಜ್ಯ ಸರ್ಕಾರ ಶೇ. 70 ರಷ್ಟು ಲಸಿಕೆಯನ್ನು ಮೀಸಲಿಟ್ಟಿಲ್ಲ. ನೀವು ಸರಿಯಾಗಿ ಕೆಲಸ ಮಾಡಿದ್ದಾರೆ ಇಂದು ನಮಗೆ ಈ ಸಮಸ್ಯೆ ಎದುರಾಗುತ್ತಿರಲಿಲ್ಲ ಎಂದು ರಾಜ್ಯ ಸರ್ಕಾರಕ್ಕೂ ಹೈಕೋರ್ಟ್ ನ್ಯಾಯಮೂರ್ತಿಗಳು ಚಳಿ ಬಿಡಿಸಿದರು.
ಕೇಂದ್ರ ಸರ್ಕಾರದ ಲಸಿಕಾ ನೀತಿಯ ಬಗ್ಗೆ ಕೆಂಡಾಮಂಡಲವಾದ ನ್ಯಾಯಾಲಯ, ಎಷ್ಟು ಕಾಲಾವಧಿಯಲ್ಲಿ ಎರಡನೇ ಡೋಸ್ ಲಸಿಕೆ ನೀಡಬೇಕು. ಸರಿಯಾದ ಸಮಯಕ್ಕೆ ಎರಡನೇ ಡೋಸ್ ಪಡೆಯದಿದ್ದರೆ, ಮೊದಲನೇ ಡೋಸ್ ಕೂಡ ನ್ಯಾಷನಲ್ ವೇಸ್ಟ್ ಆಗಲಿದೆ. ಸರಿಯಾದ ಸಮಯಕ್ಕೆ ಎರಡನೇ ಡೋಸ್ ಲಸಿಕೆ ಪಡೆಯುವುದು ಪ್ರಜೆಗಳ ಸಂವಿಧಾನ ಬದ್ಧ ಹಕ್ಕು. ಲಸಿಕೆ ಪೂರೈಕೆ ಮಾಡದಿದ್ದರೆ ಸಂವಿಧಾನದ ಉಲ್ಲಂಘನೆಯಾಗುವುದಿಲ್ಲವೇ ಎಂದು ನ್ಯಾಯಾಲಯ ಪ್ರಶ್ನಿಸಿತು.
ಲಸಿಕೆ ಲಭ್ಯತೆ ಹಾಗೂ ಅಗತ್ಯ ನಡುವಿನ ಅಂತರವನ್ನು ಹೇಗೆ ಕಡಿಮೆ ಮಾಡುವಿರಿ ತಿಳಿಸಿ. ಹೆಚ್ಚಿನ ಜನರಿಗೆ ರೋಗ ನಿರೋಧಕ ಶಕ್ತಿ ಲಭ್ಯವಾಗುವುದು ಅವಶ್ಯವಲ್ಲವೇ ಎಂದು ನ್ಯಾಯಪೀಠ ಕೇಳಿದಾಗ, ಸೂಕ್ತ ಸಮಯದಲ್ಲಿ ಜನರಿಗೆ ಎರಡನೇ ಡೋಸ್ ಲಸಿಕೆ ನೀಡುವ ಬಗ್ಗೆ ಸರ್ಕಾರ ಎಲ್ಲಾ ಪ್ರಯತ್ನ ಮಾಡುತ್ತಿದೆ. ಮೊದಲ ಡೋಸ್ ನಷ್ಟವಾಗದಂತೆ ಲಸಿಕೆ ನೀಡುವುದು ನಮ್ಮ ಕರ್ತವ್ಯ. ಸರ್ಕಾರ ಅದನ್ನು ಮಾಡುತ್ತಿದೆ ಎಂದು ಎಎಸ್ ಜಿ ನ್ಯಾಯಪೀಠಕ್ಕೆ ತಿಳಿಸಿದರು.
ಇದೇ ವೇಳೆ ರಾಜ್ಯ ಸರ್ಕಾರದ ಪರವಾಗಿ ವಾದ ಮಂಡಿಸಿದ ಅಡ್ವೋಕೇಟ್ ಜನರಲ್ ಅರವಿಂದ ನಾವಡಗಿ, ರಾಜ್ಯ ಸರ್ಕಾರ ರಾಜ್ಯದ ಜನರಿಗೆ ಸೂಕ್ತ ಸಮಯದಲ್ಲಿ ಲಸಿಕೆ ನೀಡಲು ಎಲ್ಲಾ ರೀತಿಯಲ್ಲೂ ಪ್ರಯತ್ನಿಸುತ್ತಿದೆ. ಮೂರು ಕೋಟ ಡೋಸ್ ಲಸಿಕೆ ಖರೀದಿಸಲು ಜಾಗತಿಕ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಸದ್ಯ ರಾಜ್ಯದಲ್ಲಿ ಮೊದಲನೇ ಡೋಸ್ ಪಡೆದವರಿಗೆ ಮೊದಲ ಆದ್ಯತೆ ನೀಡಿ ಎರಡನೇ ಡೋಸ್ ನೀಡಲಾಗುತ್ತಿದೆ ಎಂದು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟರು.
ವಿವಾದ ಮೈ ಮೇಲೆ ಎಳೆದುಕೊಂಡ ಸಿಟಿ ರವಿ: ಲಸಿಕೆ ಅಭಿಯಾನ ವಿಚಾರದಲ್ಲಿ ರಾಜ್ಯ ಸರ್ಕಾರದ ವಿಫಲತೆಯ ವಿರುದ್ಧ ಕೆಂಡಾಮಂಡಲವಾದ ಮುಖ್ಯ ನ್ಯಾಯಮೂರ್ತಿಗಳ ಬಗ್ಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ನ್ಯಾಯಾಧೀಶರು ಸರ್ವಜ್ಞರಲ್ಲ ಎಂದು ಪ್ರತಿಕ್ರಿಯೆ ನೀಡಿದ ಸಿ.ಟಿ. ರವಿ ವಿರುದ್ಧ ವಕೀಲ ಜಿ.ಆರ್. ಮೋಹನ್ ಅವರು ಹೈಕೋರ್ಟ್ ರಿಜಿಸ್ಟ್ರಾರ್ ಅವರಿಗೆ ದೂರು ನೀಡಿದ್ದಾರೆ.
Recommended Video
ಹೈಕೋರ್ಟ್ ತೀರ್ಪು ನೀಡಿದ ಕೂಡಲೇ ಲಸಿಕೆ ಉತ್ಪಾದನೆ ಇಲ್ಲದೇ ನಾವು ನೇಣು ಹಾಕಿಕೊಳ್ಳುವುದಾ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಕುರಿತು ಇಬ್ಬರ ವಿಡಿಯೋ ತುಣುಕು ಆಧರಿಸಿ ದೂರು ನೀಡಿರುವ ವಕೀಲ ಜಿ.ಆರ್. ಮೋಹನ್ ಸ್ವಯಂ ಪ್ರೇರಿತ ಕೇಸು ದಾಖಲಿಸಿಕೊಂಡು ತನಿಖೆ ನಡೆಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.