ಬೆಂಗಳೂರಿಗೆ ಬಂದು ಎಚ್ಡಿಕೆ ಹರಸಿದ ತೆಲಂಗಾಣ ಸಿಎಂ ಚಂದ್ರಶೇಖರ್ ರಾವ್
ಬೆಂಗಳೂರು, ಮೇ 22: ಚುನಾವಣೆಗೂ ಮೊದಲೇ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರ ನಿವಾಸದವರೆಗೆ ನಡೆದು ಬಂದಿದ್ದ ತೆಲಂಗಾಣ ಮುಖ್ಯಮಂತ್ರಿ ಕೆ.ಸಿ. ಚಂದ್ರಶೇಖರ್ ರಾವ್ ಇಂದು ಮತ್ತೆ ಬೆಂಗಳೂರಿಗೆ ಬಂದಿದ್ದರು.
ಬುಧವಾರ ನಡೆಯಲಿರುವ ಎಚ್.ಡಿ. ಕುಮಾರಸ್ವಾಮಿಯವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಕೆ.ಸಿ. ರಾವ್ ಗೈರಾಗಲಿದ್ದಾರೆ. ಈ ಹಿನ್ನೆಲೆಯಲ್ಲಿ ನಿಯೋಜಿತ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರನ್ನು ಭೇಟಿಯಾಗಿ ಶುಭ ಕೋರಲು ದೇವೇಗೌಡರ ಪದ್ಮನಾಭನಗರ ನಿವಾಸಕ್ಕೆ ಇಂದು ಸಂಜೆ ಆಗಮಿಸಿದ್ದರು.
ಭೇಟಿ ನಂತರ ಮಾತನಾಡಿದ ಅವರು, "ನಾನು ತುಂಬಾ ಖುಷಿಯಾಗಿದ್ದೇನೆ. ನಾನು ತುಂಬಾ ಸಂತೋಷಗೊಂಡಿದ್ದೇನೆ. ಕುಮಾರಸ್ವಾಮಿಯವರಿಗೆ ದೇವರು ಆಶೀರ್ವಾದ ಇರಲಿ, ಒಳ್ಳೆಯದಾಗಲಿ. ನಮ್ಮ ಮಾಜಿ ಪ್ರಧಾನಿಗಳ ಆಶೀರ್ವಾದದಿಂದ ಅವರು ಯಶಸ್ಸು ಕಾಣಲಿದ್ದಾರೆ. ಇದು ಆರಂಭ ಅಷ್ಟೇ. ಪ್ರಾದೇಶಿಕ ಪಕ್ಷಗಳ ಶಕ್ತಿ ಭವಿಷ್ಯದ ಸಾಧ್ಯತೆಗಳನ್ನು ತೋರಿಸುತ್ತಿದೆ," ಎಂದಿದ್ದಾರೆ.
"ನಾಳೆ ನನಗೆ ಹೈದರಾಬಾದ್ ನಲ್ಲಿ ಜಿಲ್ಲಾಧಿಕಾರಿಗಳ ಸಭೆ ಇದೆ. ಹಾಗಾಗಿ ನಾನು ಕುಮಾರಸ್ವಾಮಿಯವರನ್ನು ಭೇಟಿಯಾಗಿ ನನ್ನ ಶುಭಾಶಯ ಹೇಳಬೇಕು ಎಂದುಕೊಂಡಿದ್ದೆ. ಸ್ವಲ್ಪ ಸಮಯ ನಂತರ ನಾನು ಬರುತ್ತೇನೆ, ಆದರೆ ನಾಳೆ ನಾನು ಬರುತ್ತಿಲ್ಲ. ಕುಮಾರಸ್ವಾಮಿಯವರಿಗೆ ಒಳ್ಳೆಯದಾಗಲಿ, ಕರ್ನಾಟಕಕ್ಕೆ ಒಳ್ಳೆಯದಾಗಲಿ," ಎಂದು ಹರಸಿದರು.
ಭೇಟಿ ನಂತರ ಇವತ್ತು ರಾತ್ರಿಯೇ ಅವರು ಹೈದರಾಬಾದ್ ಗೆ ವಾಪಾಸಾಗಲಿದ್ದಾರೆ ಎಂದು ತೆಲಂಗಾಣದ ಮುಖ್ಯಮಂತ್ರಿ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.
ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿಯೇತರ ಮೈತ್ರಿಕೂಟ ರಚಿಸುವ ಸಂಬಂಧ ಕೆ.ಸಿ. ರಾವ್ ಮುಂಚೂಣಿಯಲ್ಲಿದ್ದರು. ಇದೇ ವೇಳೆಗೆ ಕರ್ನಾಟಕದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರ ಅಸ್ತಿತ್ವಕ್ಕೆ ಬರುತ್ತಿದ್ದು, ಬಿಜೆಪಿ ಹೊರತು ಪಡಿಸಿ ಎಲ್ಲಾ ಪ್ರಾದೇಶಿಕ ಮುಖ್ಯಪಕ್ಷಗಳು ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸುತ್ತಿವೆ.
ಒಂದು ರೀತಿಯಲ್ಲಿ ಕುಮಾರಸ್ವಾಮಿ ಪದಗ್ರಹಣ ಕಾರ್ಯಕ್ರಮವನ್ನು ಬಿಜೆಪಿಯೇತರ ಮೈತ್ರಿಕೂಟದ ಚಿಮ್ಮುಹಲಗೆ ಕಾರ್ಯಕ್ರಮ ಎಂದೇ ಬಿಂಬಿಸಲಾಗಿದೆ. ಆದರೆ ಅದರ ಮುಂದಾಳು ಕೆಸಿಆರ್ ಈ ಕಾರ್ಯಕ್ರಮಕ್ಕೇ ಗೈರಾಗಲಿದ್ದಾರೆ.