ಪುನೀತ್ ವಿಧಿವಶ; ರಾಜ್ಯೋತ್ಸವ ಪ್ರಶಸ್ತಿ ನೀಡಲು ತಾಂತ್ರಿಕ ತೊಡಕು
ಬೆಂಗಳೂರು, ಅಕ್ಟೋಬರ್ 30; ಕನ್ನಡ ನಟ, ಅಭಿಮಾನಿಗಳ ಪಾಲಿನ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಶುಕ್ರವಾರ ವಿಧಿವಶರಾಗಿದ್ದಾರೆ. ಭಾನುವಾರ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಅಂತ್ಯಕ್ರಿಯೆ ನಡೆಸಲು ತೀರ್ಮಾನಿಸಲಾಗಿದೆ.
ಪುನೀತ್ ರಾಜ್ಕುಮಾರ್ ಪಾರ್ಥಿವ ಶರೀರದ ಅಂತಿಮ ದರ್ಶನ ಕಂಠೀರವ ಸ್ಟೇಡಿಯಂನಲ್ಲಿ ಶುಕ್ರವಾರ ಸಂಜೆಯಿಂದ ನಡೆಯುತ್ತಿದೆ. ಲಕ್ಷಾಂತರ ಅಭಿಮಾನಿಗಳು, ರಾಜಕೀಯ ಮತ್ತು ಸಿನಿಮಾ ರಂಗದ ಗಣ್ಯರು ಅಂತಿಮ ದರ್ಶನ ಪಡೆಯುತ್ತಿದ್ದಾರೆ.
Breaking: ಪುನೀತ್ ರಾಜ್ ಕುಮಾರ್ ಅಂತ್ಯಕ್ರಿಯೆ ಭಾನುವಾರಕ್ಕೆ ಮುಂದೂಡಿಕೆ
ನಟ ಜಗ್ಗೇಶ್ ಅಕ್ಟೋಬರ್ 29ರಂದು ಒಂದು ಟ್ವೀಟ್ ಮಾಡಿದ್ದರು. 'ಕನ್ನಡ ನಾಡು ನುಡಿಗಾಗಿ ಸಾಧಕರಿಗೆ ನೀಡುವ ರಾಜ್ಯೋತ್ಸವ ಪ್ರಶಸ್ತಿ ನಮ್ಮ ಪುನೀತನಿಗೆ ಮರಣೋತ್ತರ ಪ್ರಶಸ್ತಿ ಎಂದು ನೀಡಿ ಮಾನ್ಯ ಮುಖ್ಯಮಂತ್ರಿಗಳೇ ಕನ್ನಡಿಗರ ಪ್ರೀತಿಗೆದ್ದ ರಾಜಣ್ಣನ ಮಗನ ಆತ್ಮಕ್ಕೆ ಗೌರವಿಸಿದಂತೆ ಆಗುವುದು ಎಂದು ನನ್ನ ವಿನಂತಿ' ಎಂದು ಮನವಿ ಮಾಡಿದ್ದರು.
ನೆನಪು; ಚಿಕ್ಕಮಗಳೂರಿನ ಜೊತೆ ಪುನೀತ್ ರಾಜ್ಕುಮಾರ್ ನಂಟು
ಬಳಿಕ ಈ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪುನೀತ್ ಲಕ್ಷಾಂತರ ಅಭಿಮಾನಿಗಳು ರಾಜ್ಯೋತ್ಸವ ಪ್ರಶಸ್ತಿ ನೀಡುವಂತೆ ಸರ್ಕಾರವನ್ನು ಆಗ್ರಹಿಸುತ್ತಿದ್ದಾರೆ. 2021ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿ ಇನ್ನೂ ಬಿಡುಗಡೆಗೊಂಡಿಲ್ಲ.
ಪುನೀತ್ ಅಂತಿಮ ದರ್ಶನ ವೇಳೆ ಅಭಿಮಾನಿಗಳ ನೂಕು ನುಗ್ಗಲು: ಲಘು ಲಾಠಿ ಪ್ರಹಾರ
ಪ್ರಶಸ್ತಿಗೆ ತಾಂತ್ರಿಕ ತೊಡಕು
ನಟ ದಿ. ಪುನೀತ್ ರಾಜ್ಕುಮಾರ್ಗೆ ಮರಣೋತ್ತರವಾಗಿ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕು ಎಂಬ ವಿಚಾರದ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ರಾಜ್ಯೋತ್ಸವ ಪ್ರಶಸ್ತಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ನೀಡಲಾಗುತ್ತದೆ. ಸಾಮಾಜಿಕ ಜಾಲತಾಣದಲ್ಲಿ ನಡೆದಿದ್ದ ಚರ್ಚೆ ಸರ್ಕಾರದ ಮಟ್ಟದಲ್ಲಿಯೂ ನಡೆಸಲಾಗಿದೆ. ಪುನೀತ್ ರಾಜ್ಕುಮಾರ್ಗೆ ಪ್ರಶಸ್ತಿ ನೀಡಬಹುದೇ ಎಂದು ಪರಿಶೀಲನೆ ನಡೆಸಿದೆ. ಆಗ ಇರುವ ತಾಂತ್ರಿಕ ತೊಡಕಿನ ಬಗ್ಗೆ ಮಾಹಿತಿ ಸಿಕ್ಕಿದೆ.
ತಾಂತ್ರಿಕ ತೊಡಕು ಏನಿದೆ?
ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅಧ್ಯಕ್ಷತೆಯ ಸಮಿತಿ ರಾಜ್ಯೋತ್ಸವ ಪ್ರಶಸ್ತಿ ನೀಡಲು ಹಲವು ಶಿಫಾರಸುಗಳನ್ನು ಮಾಡಿದೆ. ಅದರ ಪ್ರಕಾರ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರನ್ನು ಮರಣೋತ್ತರವಾಗಿ ಆಯ್ಕೆ ಮಾಡುವಂತಿಲ್ಲ. ಆದ್ದರಿಂದ ಪುನೀತ್ ರಾಜ್ಕುಮಾರ್ ಅಭಿಯಾನಿಗಳ ಆಗ್ರಹದಂತೆ ಮರಣೋತ್ತರವಾಗಿ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಲು ಸಾಧ್ಯವಿಲ್ಲ.
ಕರ್ನಾಟಕದ ಮಟ್ಟಿಗೆ ರಾಜ್ಯೋತ್ಸವ ಪ್ರಶಸ್ತಿ ರಾಜ್ಯದ ಅತ್ಯುನ್ನತ ಪ್ರಶಸ್ತಿಯಾಗಿದೆ. ಹಲವಾರು ಬಾರಿ ಸಾಧಕರ ಆಯ್ಕೆ ಬಗ್ಗೆ ಆಕ್ಷೇಪಗಳು ವ್ಯಕ್ತವಾಗಿವೆ. ಈ ಕುರಿತು ವಿವಾದ ಹೈಕೋರ್ಟ್ ಮೆಟ್ಟಿಲನ್ನು ಸಹ ಏರಿತ್ತು. ಆಗ ಸಮಿತಿ ರಚನೆ ಮಾಡಲಾಗಿತ್ತು.
ಮಾನದಂಡ ರೂಪಿಸುವಂತೆ ಒತ್ತಾಯ
ರಾಜ್ಯೋತ್ಸವ ಪ್ರಶಸ್ತಿಗೆ ಸಾಧಕರನ್ನು ಆಯ್ಕೆ ಮಾಡಲು ಸೂಕ್ತ ಮಾನದಂಡ ರೂಪಿಸುವಂತೆ ಕೋರಿ ಸಾಹಿತಿ ಬಿ. ವಿ. ಸತ್ಯನಾರಾಯಣ ಕರ್ನಾಟಕ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಅಬ್ದುಲ್ ನಜೀರ್ ಅವರಿದ್ದ ಏಕದಸ್ಯ ಪೀಠ ಸಮಿತಿ ರಚನೆ ಮಾಡುವಂತೆ ಸೂಚನೆ ನೀಡಿತ್ತು. ಇದರ ಅನ್ವಯ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅಧ್ಯಕ್ಷತೆಯ ಸಮಿತಿ ರಚಿಸಲಾಗಿದ್ದು, ಸಮಿತಿ ಶಿಫಾರಸುಗಳ ಅನ್ವಯ ಸಾಧಕರನ್ನು ಆಯ್ಕೆ ಮಾಡಲಾಗುತ್ತದೆ.
|
ನಟ ಜಗ್ಗೇಶ್ ಟ್ವೀಟ್
46 ವರ್ಷದ ಪುನೀತ್ ರಾಜ್ಕುಮಾರ್ 47ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡ ನಾಡು, ನುಡಿಗಾಗಿ ಅಪಾರ ಸೇವೆ ಸಲ್ಲಿಸಿದ್ದಾರೆ. ಆದ್ದರಿಂದ ಮರಣೋತ್ತರವಾಗಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕು ಎಂದು ಅಭಿಮಾನಿಗಳು ಆಗ್ರಹಿಸುತ್ತಿದ್ದಾರೆ.
Recommended Video
ಭಾನುವಾರ ಅಂತ್ಯಕ್ರಿಯೆ
ಪುನೀತ್ ರಾಜ್ಕುಮಾರ್ ಅಂತ್ಯಕ್ರಿಯೆ ಭಾನುವಾರ ಬೆಳಗ್ಗೆ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ನಡೆಯಲಿದೆ. ಬೆಳಗ್ಗೆ 6 ಗಂಟೆಗೆ ಕಂಠೀರವ ಸ್ಟೇಡಿಯಂನಿಂದ ಪಾರ್ಥಿವ ಶರೀರದ ಮೆರವಣಿಗೆ ಆರಂಭವಾಗಲಿದೆ. ಬೆಳಗ್ಗೆ 10.30ರೊಳಗೆ ಅಂತ್ಯಕ್ರಿಯೆ ವಿಧಿವಿಧಾನಗಳು ಪೂರ್ಣಗೊಳ್ಳಲಿವೆ. ಮೆರವಣಿಗೆ ಸಾಗುವ ಮಾರ್ಗವನ್ನು ಪೊಲೀಸರು ಅಂತಿಮಗೊಳಿಸಿದ್ದಾರೆ.