ದಾಖಲಾತಿ ಕಡಿಮೆ ಆದರೆ ಶಿಕ್ಷಕರಿಗೆ ಶಿಕ್ಷೆ: ಶಿಕ್ಷಣ ಇಲಾಖೆ ಎಚ್ಚರಿಕೆ
ಬೆಂಗಳೂರು, ಜೂನ್ 06: ಎತ್ತಿಗೆ ಬಂದ ಜ್ವರಕ್ಕೆ ಎಮ್ಮೆಗೆ ಬರೆ ಎಳೆಯುವ ಕ್ರಮಕ್ಕೆ ರಾಜ್ಯ ಶಿಕ್ಷಣ ಇಲಾಖೆ ಮುಂದಾದಂತಿದೆ. ಸರ್ಕಾರಿ ಶಾಲೆಗಳಲ್ಲಿ ಹಾಜರಾತಿ ಕಡಿಮೆ ಆದರೆ ಅದಕ್ಕೆ ಶಿಕ್ಷಕರನ್ನೇ ಹೊಣೆ ಮಾಡಲಾಗುತ್ತದೆ ಎಂದು ಶಿಕ್ಷಣ ಇಲಾಖೆ ಎಚ್ಚರಿಸಿದೆ.
ಈಗಾಗಲೇ ಪಾಠ ಪ್ರವಚನಗಳ ಜೊತೆ-ಜೊತೆಗೆ ಸಮುದಾಯದ ಕಾರ್ಯಗಳನ್ನೂ ಮಾಡುತ್ತಲಿರುವ ಶಿಕ್ಷಕರಿಗೆ ಇದೊಂದು ಹೊಸ ತೂಗುಕತ್ತಿಯಾಗಿ ಪರಿಣಮಿಸಿದೆ.
9ನೇ ತರಗತಿಯಲ್ಲಿ ವಿವಾದಾತ್ಮಕ ಪಠ್ಯ, ಹಿಂದೂ ಸಂಘಟನೆಗಳ ಆಕ್ರೋಶ
ಯಾವ ಶಾಲೆಯಲ್ಲಿ ದಾಖಲಾತಿಗಳು ಕಡಿಮೆ ಆಗುತ್ತವೆಯೋ ಆ ಶಾಲೆಯ ಶಿಕ್ಷರು ವರ್ಗಾವಣೆಯ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಪತ್ರದ ಮೂಲಕ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಪತ್ರ ಮುಖೇನ ತಿಳಿಸಿದ್ದಾರೆ.
50 ಮಕ್ಕಳಿಗಿಂತ ಕಡಿಮೆ ದಾಖಲಾತಿ ಇದ್ದರೆ ಅದನ್ನು ಹೆಚ್ಚಿಸುವ ಜವಾಬ್ದಾರಿ ಮುಖ್ಯಶಿಕ್ಷಕರು ಮತ್ತು ಸಹ ಶಿಕ್ಷಕರದ್ದಾಗಿರುತ್ತದೆ. ಶೂನ್ಯ ದಾಖಲಾತಿ ಇರುವ ಪ್ರಾಥಮಿಕ ಶಾಲೆಗಳು 25 ಹಾಗೂ ಪ್ರೌಢ ಶಾಲಾ ಶಿಕ್ಷಕರು 50 ಮಕ್ಕಳನ್ನು ಶಾಲೆಗೆ ಸೇರಿಸದಿದ್ದರೆ, ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಅಲ್ಲಿನ ಶಿಕ್ಷಕರನ್ನು ಬೇರೆ ಶಾಲೆಗಳಿಗೆ ಮರು ನಿಯೋಜನೆ ಮಾಡಬೇಕು' ಎಂದು ಸೂಚಿಸಿದ್ದಾರೆ.
ಆದರೆ ಶೂನ್ಯ ದಾಖಲಾತಿ ಇರುವ ಶಾಲೆಗಳನ್ನು ಮುಚ್ಚುವ ಬಗ್ಗೆ ಚಿಂತನೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿರುವ ಅವರು, ಶೂನ್ಯ ದಾಖಲಾತಿ ಇರುವ ಶಾಲೆಗಳಲ್ಲಿ ಕೇವಲ ಒಬ್ಬ ಶಿಕ್ಷಕರನ್ನು ಮಾತ್ರವೇ ನಿಯೋಜಿಸಿ ಉಳಿದವರನ್ನು ಹೆಚ್ಚು ದಾಖಲಾತಿ ಇರುವ ಶಾಲೆಗೆ ನಿಯೋಜಿಸಲಾಗುವುದು ಎಂದಿದ್ದಾರೆ.
ಈ ವರ್ಷ 261 ಶಾಲೆಗಳಲ್ಲಿ ಶೂನ್ಯ ದಾಖಲಾತಿ ಇದೆ ಎಂದು ಶಾಲಿನಿ ರಜನೀಶ್ ಮಾಹಿತಿ ನೀಡಿದ್ದಾರೆ. ಇಂತಹಾ ಶಾಲೆಗಳಲ್ಲಿ ಒಟ್ಟು 231 ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದು, ಅವರು ಪಾಠವೇ ಮಾಡದೆ ಸಂಬಳ ಪಡೆಯುತಿದ್ದಾರೆ. 57 ಪ್ರೌಢಶಾಲೆಗಳಲ್ಲಿಯೂ ಸಹ 137 ಶಿಕ್ಷಕರು ಕೆಲಸವೇ ಇಲ್ಲದೆ ವೇತನ ಪಡೆಯುತಿದ್ದಾರೆ ಎಂದು ಮಾಹಿತಿ ನೀಡಿದರು.