ರಾಷ್ಟ್ರಪತಿಗೆ 'ದಯಾಮರಣ' ಕೋರಿದ ಬೀದರ್ ಶಿಕ್ಷಕನ ಕುಟುಂಬ
ಔರಾದ್ (ಬೀದರ್), ಮೇ 4: ಸುಮಾರು ಹತ್ತು ವರ್ಷಗಳಿಂದ ತಮಗೆ ವೇತನ ಸಿಗದ ಕಾರಣಕ್ಕಾಗಿ ರಮೇಶ್ ರಕ್ಷಾಳೆ ಎಂಬ ಶಿಕ್ಷಕ ಹಾಗೂ ಅವರ ಕುಟುಂಬ ರಾಷ್ಟ್ರಪತಿಗಳಿಗೆ ದಯಾಮರಣ ಕೋರಿದೆ.
ಮೂಲಗಳ ಪ್ರಕಾರ, ಚೋಂಡಿ ಮುಖೇಡದವರಾದ ರಮೇಶ್ ರಕ್ಷಾಳೆ ಜಿಲ್ಲೆಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯೊಂದರಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು. ಆದರೆ, ಕಾಲೇಜಿನ ಆಡಳಿತ ಮಂಡಳಿಯಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರ ಅವರಲ್ಲಿ ತೀವ್ರ ಅಸಮಾಧಾನ ತಂದಿತ್ತು.
ಈ ಹಿನ್ನೆಲೆಯಲ್ಲಿ ಅವರು ಅಲ್ಲಿನ ಭ್ರಷ್ಟಾಚಾರವನ್ನು ಪ್ರಶ್ನೆ ಮಾಡಿದ್ದರು. ಇದರಿಂದ ಕುಪಿತಗೊಂಡ ಶಾಲಾ ಆಡಳಿತ ಮಂಡಳಿಯುವ ಅವರಿಗೆ 2006ರ ಮಾರ್ಚ್ ನಿಂದ ಈವರೆಗೆ ಸಂಬಳವನ್ನೇ ನೀಡಿಲ್ಲ ಎಂದು ರಮೇಶ್ ಆರೋಪಿಸಿದ್ದಾರೆ.
ಇದರಿಂದ ತೀವ್ರ ಮನನೊಂದಿರುವ ಕುಟುಂಬ, ತಾವು ಪಡುತ್ತಿರುವ ಕಷ್ಟಗಳೆನ್ನೆಲ್ಲಾ ಸವಿವರವಾಗಿ ಪತ್ರವೊಂದರಲ್ಲಿ ಬರೆದು ಅದನ್ನು ರಾಷ್ಟ್ರಪತಿಗೆ ಕಳುಹಿಸಿದ್ದು, ತಮಗೆ ಹಾಗೂ ತಮ್ಮ ಕುಟುಂಬ ದಯಾ ಮರಣ ಪಡೆಯಲು ಅನುಮತಿ ನೀಡಬೇಕೆಂದು ಕೋರಿದ್ದಾರೆ.
ರಮೇಶ್ ರಕ್ಷಾಳೆ ಜತೆಗೆ ಅವರ ಪತ್ನಿ ಇಂದೂಬಾಯಿ, ಮಕ್ಕಳಾದ ಮಣಿಶಾ, ಪ್ರಿಯಾಂಕಾ ಹಾಗೂ ವಿವೇಕಾನಂದ ಅವರು ಪತ್ರಕ್ಕೆ ಸಹಿ ಹಾಕಿದ್ದಾರೆ.
ತಮಗಾಗಿರುವ ಕಷ್ಟವನ್ನು ರಾಜ್ಯ ಸರ್ಕಾರದ ಶಿಕ್ಷಣ ಇಲಾಖೆಯ ಗಮನಕ್ಕೆ ತಂದಿದ್ದರೂ, ಪ್ರಯೋಜನವಾಗಿಲ್ಲ. ಇದರಿಂದ ನೊಂದಿದ್ದ ರಮೇಶ್ ರಕ್ಷಾಳೆ, ಇಲಾಖೆಯ ಮುಂದೆ ಉಪವಾಸ ಸತ್ಯಾಗ್ರಹ ನಡೆಸಿದ್ದರು. ಆದರೂ, ಇಲಾಖೆ ಅದಕ್ಕೆ ಕ್ಯಾರೇ ಅಂದಿಲ್ಲ. ಈ ಹಿನ್ನೆಲೆಯಲ್ಲಿ ದುಃಖಿತರಾಗಿರುವ ರಕ್ಷಾಳೆ ರಾಷ್ಟ್ರಪತಿಯವರಲ್ಲಿ ದಯಾ ಮರಣ ನೀಡಬೇಕೆಂದು ಮನವಿ ಸಲ್ಲಿಸಿದ್ದಾರೆ.