ಕೈತಪ್ಪಿದ ಟಿಕೆಟ್, ತರೀಕೆರೆ ಕಾಂಗ್ರೆಸ್ ಶಾಸಕ ಜೆಡಿಎಡ್ ಗೆ ಸೇರ್ಪಡೆ
ಚಿಕ್ಕಮಗಳೂರು, ಏಪ್ರಿಲ್ 18: ಕಾಂಗ್ರೆಸ್ ಟಿಕೆಟ್ ಪಡೆಯಲು ವಿಫಲವಾಗಿದ್ದ ಹಾಲಿ ತರೀಕೆರೆ ಶಾಸಕ ಜಿ. ಎಚ್. ಶ್ರೀನಿವಾಸ್ ಪಕ್ಷದ ವಿರುದ್ಧ ಬಂಡಾಯವೆದ್ದಿದ್ದರು. ಅವರೀಗ ಜೆಡಿಎಸ್ ಪಕ್ಷ ಸೇರಿದ್ದಾರೆ. ಜಾತ್ಯಾತೀತ ಜನತಾ ದಳದಿಂದ ಅವರು ತರೀಕೆರೆ ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ.
ಇಂದು ಮಧ್ಯಾಹ್ನ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ಜಿ. ಎಚ್. ಶ್ರೀನಿವಾಸ್ ಜೆಡಿಎಸ್ ಸೇರಿದರು.
ತರೀಕೆರೆಯಲ್ಲಿ 2013ರ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಜಿ.ಎಚ್. ಶ್ರೀನಿವಾಸ ಗೆಲುವು ಸಾಧಿಸಿದ್ದರು. 35,817 ಮತಗಳನ್ನು ಪಡೆದಿದ್ದ ಅವರು 899 ಮತಗಳ ಅಲ್ಪ ಅಂತರದಿಂದ ಪ್ರಯಾಸದ ಜಯ ದಾಖಲಿಸಿದ್ದರು.
ಶ್ರೀನಿವಾಸ್ ಅವರಿಗೆ ಭಾರೀ ಪೈಪೋಟಿ ನೀಡಿದ್ದ ಕೆಜೆಪಿ ಅಭ್ಯರ್ಥಿ ಡಿ.ಎಸ್. ಸುರೇಶ್ 34,918 ಮತಗಳನ್ನು ಪಡೆದಿದ್ದರು. ಇಲ್ಲಿ ಇದೇ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಸ್ವತಂತ್ರ ಅಭ್ಯರ್ಥಿ ಎಚ್.ಎಂ.ಗೋಪಿಕೃಷ್ಣ 34,554 ಮತಗಳನ್ನು ಪಡೆದು ಇಬ್ಬರಿಗೂ ಭಾರೀ ಪೈಪೋಟಿ ನೀಡಿದ್ದರು.
ಇದೇ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ಎಸ್.ಎಂ. ನಾಗರಾಜು ಅವರಿಗೆ ಟಿಕೆಟ್ ನೀಡಿದೆ. ಬಹುಶಃ ಈ ಬಾರಿ ಶ್ರೀನಿವಾಸ ಸೋಲಬಹುದು ಎಂಬ ಭಯದಲ್ಲಿ ಕಾಂಗ್ರೆಸ್ ಟಿಕೆಟ್ ಬದಲಾಯಿಸಿರುವ ಸಾಧ್ಯತೆ ಇದೆ.
ಎಸ್.ಎಂ. ನಾಗರಾಜು ಇಲ್ಲಿ 1994ರಲ್ಲಿ ಸ್ವತಂತ್ರವಾಗಿ ನಿಂತು ಜಯ ಸಾಧಿಸಿ ಶಾಸಕರಾಗಿದ್ದರು. ಮುಂದೆ ಅವರು ಜೆಡಿಯುಗೆ ಪಕ್ಷಾಂತರ ಮಾಡಿದ್ದರು. ಅವರಿಗೆ ಈ ಬಾರಿ ಕಾಂಗ್ರೆಸ್ ಟಿಕೆಟ್ ಸಿಕ್ಕಿದೆ. ಇದರಿಂದ ಬಂಡಾಯವೆದ್ದು ಶ್ರೀನಿವಾಸ್ ಇದೀಗ ಜೆಡಿಎಸ್ ಮನೆ ಸೇರಿದ್ದಾರೆ.