ಜನಾ ರೆಡ್ಡಿಗೆ ಇಷ್ಟು ದುಡ್ಡು ಎಲ್ಲಿಂದ ಬಂತು?: ಟಪಾಲ್ ಪ್ರಶ್ನೆ
ಸಿಬಿಐ ಹೇಳಿಕೊಂಡ ಪ್ರಕಾರ, ಜನಾರ್ದನ ರೆಡ್ಡಿ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಹಾಗಾದರೆ ಈ ದುಡ್ಡು ಯಾವುದು? ಈ ಬಗ್ಗೆ ಸಿಬಿಐ ಆಗಲಿ, ಆದಾಯ ತೆರಿಗೆ ಇಲಾಖೆಯಾಗಲಿ, ಕೇಂದ್ರ-ರಾಜ್ಯ ಸರಕಾರವಾಗಲಿ ಚಕಾರ ಎತ್ತಿಲ್ಲ ಏಕೆ: ಟಪಾಲ್ ಗಣೇಶ್
ಬಳ್ಳಾರಿ, ಅಕ್ಟೋಬರ್ 21: ಮಾಜಿ ಸಚಿವ ಜನಾರ್ದನ ರೆಡ್ಡಿ ಮಗಳು ಬ್ರಹ್ಮಿಣಿ ಮದುವೆಯ ಆಹ್ವಾನ ಪತ್ರಿಕೆ ವಿಡಿಯೋ ಮತ್ತಿತರ ಮಾಹಿತಿ ಹೊರಬೀಳುತ್ತಿದ್ದಂತೆ ಹಲವು ಆರೋಪಗಳು, ತನಿಖೆಗಾಗಿ ಆಗ್ರಹ ಕೇಳಿಬಂದಿವೆ. ಇಂಥ ಅದ್ಧೂರಿ ಮದುವೆಗೆ ಹೇಗೆ ದುಡ್ಡು ಬಂತು, ಅದರ ಮೂಲ ಯಾವುದು ಎಂದು ತನಿಖೆಗೆ ಬಳ್ಳಾರಿಯ ಟಪಾಲ್ ಗಣೇಶ್ ಆಗ್ರಹಿಸಿದ್ದಾರೆ.
ಜನಾರ್ದನ ರೆಡ್ಡಿ ಜೈಲಿಗೆ ಹೋದ ನಂತರ ಅವರಿಗೆ ಆದಾಯವೇ ಇಲ್ಲ. ಅಂಥದರಲ್ಲಿ ಇಷ್ಟು ಅದ್ಧೂರಿ ಮದುವೆಗೆ ದುಡ್ಡೆಲ್ಲಿಯದು? ಮಾಧ್ಯಮಗಳು ವರದಿ ಮಾಡಿರುವಂತೆ ಆಹ್ವಾನಕ್ಕೆ 5 ಕೋಟಿ ಖರ್ಚು ಮಾಡಲಾಗಿದೆಯಂತೆ. ಇನ್ನು ಮದುವೆಗೆ ಅದಿನ್ನೆಷ್ಟು ಖರ್ಚಾಗಬಹುದು ಎಂದು ಪ್ರಶ್ನಿಸಿದ್ದಾರೆ.[ಗಾಲಿ ಜನಾರ್ದನ ರೆಡ್ಡಿ ಪುತ್ರಿ ಬ್ರಹ್ಮಣಿ ವಿವಾಹಕ್ಕೆ ಬನ್ನಿ, ಬನ್ನಿ!]
ನಾನು ಈ ಮದುವೆಯನ್ನು ವಿರೋಧಿಸುತ್ತಿಲ್ಲ. ನನಗೆ ಪ್ರಶ್ನೆ ಇರೋದು ಆದಾಯ ಮೂಲದಲ್ಲಿ. ಸಿಬಿಐ ಹೇಳಿಕೊಂಡ ಪ್ರಕಾರ, ಜನಾರ್ದನ ರೆಡ್ಡಿ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಹಾಗಾದರೆ ಈ ದುಡ್ಡು ಯಾವುದು? ಈ ಬಗ್ಗೆ ಸಿಬಿಐ ಆಗಲಿ, ಆದಾಯ ತೆರಿಗೆ ಇಲಾಖೆಯಾಗಲಿ, ಕೇಂದ್ರ-ರಾಜ್ಯ ಸರಕಾರವಾಗಲಿ ಚಕಾರ ಎತ್ತಿಲ್ಲ ಏಕೆ ಎಂದು ಗಣೇಶ್ ಕೇಳಿದ್ದಾರೆ.
ಮುಖ್ಯಮಂತ್ರಿ ಯಾಕೆ ಸುಮ್ಮನಿದ್ದಾರೆ?
ಈ ಹಿಂದೆ ಅಕ್ರಮ ಗಣಿಗಾರಿಕೆಯಲ್ಲಿ ರಾಜ್ಯ ಸರಕಾರಕ್ಕೆ ಆದ ನಷ್ಟವನ್ನು ವಸೂಲಿ ಮಾಡುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಏಕೆ ಮುಂದಾಗಿಲ್ಲ? ಆಗಸ್ಟ್ 2010ರಲ್ಲಿ ಬೆಂಗಳೂರಿನಿಂದ ಬಳ್ಳಾರಿಗೆ ಪಾದಯಾತ್ರೆ ಕೈಗೊಂಡ ವೇಳೆ ಅವರೇ ಹೇಳಿದ ಮಾತನ್ನು ಯಾಕೆ ಪಾಲಿಸುತ್ತಿಲ್ಲ ಎಂದು ಟಪಾಲ್ ಗಣೇಶ್ ಪ್ರಶ್ನಿಸಿದ್ದಾರೆ.
ನ್ಯಾಯಮೂರ್ತಿಗಳಿಗೆ ಪತ್ರ
ಇವೆಲ್ಲ ನೋಡುತ್ತಿದ್ದರೆ ಜನಾರ್ದನ ರೆಡ್ಡಿ ವಿರುದ್ಧದ ಪ್ರಕರಣಗಳೆಲ್ಲ ಖುಲಾಸೆಯಾಗಿ 'ಕ್ಲೀನ್ ಚಿಟ್' ದೊರೆಯುವ ಲಕ್ಷಣಗಳು ಗೋಚರಿಸುತ್ತಿವೆ. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಿಗೆ ಪತ್ರ ಬರೆಯುತ್ತೇನೆ. ಸಿಬಿಐ ಕೂಡ ಈ ಬಗ್ಗೆ ಗಂಭೀರ ಕ್ರಮ ಕೈಗೊಳ್ಳಬೇಕು, ತನಿಖೆ ನಡೆಸಬೇಕು ಎಂದು ಅವರು ಹೇಳಿದ್ದಾರೆ.
ಮಧ್ಯಮ ವರ್ಗದ ಮದುವೆ
ಜನಾರ್ದನ ರೆಡ್ಡಿ ಅವರ ಮಗಳ ಮದುವೆ ಮಧ್ಯಮ ವರ್ಗದವರ ರೀತಿಯಲ್ಲೇ ನಡೆಯಲಿದೆ ಎಂದುಕೊಳ್ಳುತ್ತೇನೆ ಎಂದು ಶ್ರೀರಾಮುಲು ಅಭಿಮಾನಿ ಬಳಗ ಗುರುವಾರ ಆಯೋಜಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಸಂಸದ ಬಿ.ಶ್ರೀರಾಮುಲು ಅವರು ಹೇಳಿದ್ದಾರೆ.
ಕುಟುಂಬದ ಮಗಳು ಬ್ರಹ್ಮಿಣಿ
ನನ್ನ ಸ್ನೇಹಿತ ಜನಾರ್ದನರೆಡ್ಡಿ ಬಡ ಕುಟುಂಬದಿಂದ ಬಂದವರು. ಅವರ ಮಗಳ ಮದುವೆ ಅತ್ಯಂತ ಬಡವರು ಅಥವಾ ಶ್ರೀಮಂತರ ಮನೆಯಂತೆ ಅಲ್ಲದೆ, ಮಧ್ಯಮವರ್ಗದವರ ಮಾದರಿಯಲ್ಲಿ ನಡೆಯಲಿದೆ. ಬ್ರಹ್ಮಿಣಿ ನಮ್ಮ ಕುಟುಂಬದ ಮಗಳು. ಹೀಗಾಗಿ, ಜನಾರ್ದನರೆಡ್ಡಿ ಅನುಭವಿಸಿದ ಕಷ್ಟದದಿನಗಳನ್ನು ಮರೆತು, ಸಂತಸ ಮೂಡಿಸಬೇಕು ಎಂಬ ಉದ್ದೇಶದಿಂದ ಈ ರೀತಿ ಮದುವೆ ಆಚರಣೆಗೆ ಮುಂದಾಗಿದ್ದೇವೆ ಎಂದು ತಿಳಿಸಿದರು.
ಮದುವೆಗೆ ಎಷ್ಟು ಖರ್ಚು?
ಇದೇ ವೇಳೆ ನಿವೃತ್ತ ಲೋಕಾಯುಕ್ತ ನ್ಯಾ.ಸಂತೋಷ್ ಹೆಗ್ಡೆ ಕೂಡ ಮಾತನಾಡಿ, ಆಮಂತ್ರಣ ಪತ್ರಿಕೆಗೆ ಕೋಟ್ಯಂತರ ರುಪಾಯಿ ಖರ್ಚು ಮಾಡಿರುವುದನ್ನು ಪ್ರಸ್ತಾವಿಸಿ, ಮದುವೆ ಖರ್ಚು ಇನ್ನ್ಯಾವ ಪ್ರಮಾಣದಲ್ಲಿ ಆಗುತ್ತದೆ ಎಂದು ಪ್ರಶ್ನಿಸಿದ್ದಾರೆ.