ಬ್ರಹ್ಮಚಾರಿ ಮುಂದಿನ ಪ್ರಧಾನಿ : ಕೊಪ್ಪಳ ಶ್ರೀ ಭವಿಷ್ಯವಾಣಿ
ಹಿಂದೂ ಸಂಪ್ರದಾಯದ ಹದಿನೆಂಟು ಪುರಾಣಗಳಲ್ಲಿ ಭವಿಷ್ಯ ಪುರಾಣ ಕೂಡಾ ಒಂದು ಎನ್ನುವುದು ಪ್ರತೀತಿ. ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ ಎನ್ನುವ ಮಾತಿದ್ದರೂ ಜ್ಯೋತಿಷ್ಯ, ಭವಿಷ್ಯ, ನುಡಿಗಟ್ಟುಗಳನ್ನು ಆಲಿಸುವವರು ಮತ್ತು ಪಾಲಿಸುವರಿಗೇನೂ ಕೊರತೆಯಿಲ್ಲ.
ರಾಜಕೀಯ ಮತ್ತು ಭೌಗೋಳಿಕ ವಿಚಾರದಲ್ಲಿ ಕೋಡಿಮಠದ ಶ್ರೀಗಳು ನುಡಿಯುವ ಭವಿಷ್ಯಕ್ಕೆ ಒಸಿ ತೂಕ ಜಾಸ್ತಿ. ಕೋಡಿಶ್ರೀಗಳು ನುಡಿಯುವ ಭವಿಷ್ಯದ ಸತ್ಯಾಸತ್ಯತೆಯಲ್ಲಿ ಪರ, ವಿರೋಧ ನಿಲುವು ಇದ್ದರೂ 'ಶ್ರೀಗಳು ಏನು ಭವಿಷ್ಯ ನುಡಿದಿದ್ದಾರೆ' ಎಂದು ಕುತೂಹಲಕ್ಕಾಗಿ ಬರುವವರ ಸಂಖ್ಯೆ ಹೆಚ್ಚೇ ಇರುತ್ತದೆ.
ಇತ್ತೀಚೆಗೆ ನಡೆದ ಐತಿಹಾಸಿಕ ಮೈಲಾರ ಲಿಂಗೇಶ್ವರನ ಜಾತ್ರೆಯಲ್ಲಿ 'ತುಂಬಿದ ಕೊಡ ಮೂರು ಭಾಗವಾಗೀತಲೇ ಪರಾಕ್' ಎನ್ನುವ ಭವಿಷ್ಯವಾಣಿ ಹೊರಬಿದ್ದಿತ್ತು. ಈ ಭವಿಷ್ಯವಾಣಿಯನ್ನು ರಾಜಕೀಯ ಮುಖಂಡರು ತಮಗೆ ಅನುಕೂಲವಾಗುವಂತೆ ಅರ್ಥೈಸಿಕೊಂಡಿದ್ದರು. (ಗೊರವಯ್ಯ ನುಡಿದ ಭವಿಷ್ಯ)
ಇದಕ್ಕೂ ಮೊದಲು ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ಕೋಡಿಮಠದ ಶ್ರೀಗಳು ಭವಿಷ್ಯ ನುಡಿದು ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಸಾಧ್ಯತೆ ಇದ್ದರೂ ಅದಕ್ಕೆ ಫುಲ್ ಮೆಜಾರಿಟಿ ಸಿಗುವುದಿಲ್ಲ ಎಂದು ಹೇಳಿದ್ದರು.
ಈ ನಡುವೆ ಕೊಪ್ಪಳದ ಶರಣರೊಬ್ಬರು ಮುಂದಿನ ಸಾರ್ವತ್ರಿಕ ಚುನಾವಣೆಯ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಅವರು ಏನು ಹೇಳಿದ್ದಾರೆ, ಮುಂದೆ ಓದಿ..
ಕೊಪ್ಪಳದ ಟಣಕನಕಲ್
ಭವಿಷ್ಯವಾಣಿ ನುಡಿಯುವುದರಲ್ಲಿ ಕೊಪ್ಪಳದ ಟಣಕನಕಲ್ ಮಠದ ಶರಣರೂ ಹೆಸರುವಾಸಿ. ಪ್ರಮುಖವಾಗಿ ಉತ್ತರ ಕರ್ನಾಟಕದ ಭಾಗದಲ್ಲಿ ಇವರ ಭವಿಷ್ಯವಾಣಿಗೆ ಜನತೆ ಪ್ರಾಮುಖ್ಯತೆಯನ್ನು ನೀಡುತ್ತಾರೆ. ಈ ಬಾರಿ ಮುಂದಿನ ಲೋಕಸಭಾ ಚುನಾವಣೆಯ ಬಗ್ಗೆ ಭವಿಷ್ಯ ನುಡಿದಿದ್ದಾರೆ.
ಬ್ರಹ್ಮಚಾರಿ ಆಗುತ್ತಾರೆ ದೇಶದ ಪ್ರಧಾನಿ
ಈ ವರ್ಷ ನಡೆಯುವ ಚುನಾವಣೆಯಲ್ಲಿ ಬ್ರಹ್ಮಚಾರಿಯೊಬ್ಬರು ದೇಶದ ಪ್ರಧಾನಿ ಆಗುತ್ತಾರೆಂದು ಕೊಪ್ಪಳದ ಟಣಕನಕಲ್ ಮಠದ ಶರಣಬಸವಸ್ವಾಮಿ ಶರಣರು ಭವಿಷ್ಯವಾಣಿ ನುಡಿದಿದ್ದಾರೆ. ಕಳೆದ ವರ್ಷವೇ ಇದನ್ನು ಹೇಳಿದ್ದೆ. ಈ ಬಾರಿ ಮತ್ತೆ ಅದೇ ಭವಿಷ್ಯವಾಣಿಯನ್ನು ನುಡಿಯುತ್ತಿದ್ದೇನೆಂದು ಶರಣರು ಹೇಳಿದ್ದಾರೆ.
ಕಾಲಜ್ಞಾನದಲ್ಲಿ ಮಂಡಿಸಿದ ಶರಣರು
ಸುರಪುರದಲ್ಲಿ ನಡೆದ 2014ರ ಧರ್ಮಸಭೆಯಲ್ಲಿ ಕಾಲಜ್ಞಾನವನ್ನು ಮಂಡಿಸಿ ಮಾತನಾಡುತ್ತಿದ್ದ ಶರಣರು, ದೇಶದ ಎಲ್ಲಾ ಜನರ ಮನಸ್ಸಿನಲ್ಲಿ ಬ್ರಹ್ಮಚಾರಿಯೊಬ್ಬರು ದೇಶದ ಚುಕ್ಕಾಣಿ ಹಿಡಿಯ ಬೇಕೆನ್ನುವ ಒಲವಿದೆ. ಹೀಗಾಗಿ ಅವರೇ ಭಾರತದ ಮುಂದಿನ ಪ್ರಧಾನಿ ಎಂದಿದ್ದಾರೆ. (ಚಿತ್ರದಲ್ಲಿ ಮೈಲಾರ ಜಾತ್ರೆಯಲ್ಲಿ ಗೊರವಯ್ಯ)
ಕೋಡಿಶ್ರೀಗಳು ಏನಂದಿದ್ದರು?
ಭಾರತೀಯ ಜನತಾ ಪಕ್ಷವು ತನ್ನದೇ ಸಾಮರ್ಥ್ಯದಿಂದ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರುವುದಿಲ್ಲವಾದರೂ ಇತರ ಪಕ್ಷಗಳ ನೆರವಿನೊಂದಿಗೆ ಕೇಂದ್ರದಲ್ಲಿ ನೂತನ ಸರಕಾರ ಸ್ಥಾಪಿಸಲಿದೆ. ಉತ್ತರ ಭಾರತದಲ್ಲಿ ನದಿ, ಸಮುದ್ರಗಳು ಉಕ್ಕಿ ಹರಿದು ಭಾರಿ ಪ್ರಮಾಣದಲ್ಲಿ ಭೂಮಿ ಮುಳುಗಡೆಯಾಗಲಿದೆ.
ಜಲಪ್ರಳಯದ ಭವಿಷ್ಯ ನುಡಿದ ಕೋಡಿಶ್ರೀಗಳು
ನೈಸರ್ಗಿಕ ವಿಕೋಪದ ಬಗ್ಗೆ ಮಾತನಾಡಿರುವ ಕೋಡಿಮಠ ಶ್ರೀಗಳು ಉತ್ತರಾಕಂಡದಲ್ಲಿ ಕಳೆದ ವರ್ಷ ಕಂಡುಬಂದಂತಹ ಭೀಕರ ಜಲಪ್ರಳಯ ಈ ಬಾರಿಯೂ ಕಾಡಲಿದೆ ಎಂದು ಮುನ್ಸೂಚನೆ ನೀಡಿದ್ದಾರೆ. ಭೂಮಿಯಿಂದ ಪ್ರಾಣಿ ಸಂಕುಲವೇ ಮೇಲೆ ಬರುತ್ತದೆ. ವಿಚಿತ್ರವಾದ ಹಾವು, ಚೇಳುಗಳು, ಕಪ್ಪೆಗಳನ್ನು ನೋಡಬೇಕಾಗುತ್ತದೆ. ಅವುಗಳು ವಿಕಾರ ರೂಪದಲ್ಲಿ ಭೂಮಿಯಿಂದ ಹೊರಬಂದು ಜನಸಾಮಾನ್ಯರಿಗೆ ತೊಂದರೆಯನ್ನುಂಟುಮಾಡುತ್ತದೆ. ಸಾವು ನೋವು ಕೂಡ ಸಂಭವಿಸಲಿದೆ.