ಸರ್ಕಾರ ಉಳಿಸಿಕೊಳ್ಳಲು ಕಾಂಗ್ರೆಸ್ನಿಂದ ತಮಿಳುನಾಡು ಮಾದರಿ ಅಸ್ತ್ರ?
Recommended Video
ಬೆಂಗಳೂರು, ಜುಲೈ 07: ಮೈತ್ರಿ ಸರ್ಕಾರವನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ನಾಯಕರು ಹಲವು ಯತ್ನಗಳನ್ನು ಮಾಡುತ್ತಿದ್ದಾರೆ. ಈಗಾಗಲೇ 13 ಶಾಸಕರು ರಾಜೀನಾಮೆ ನೀಡಿದ್ದು, ಇನ್ನೂ ಕೆಲವು ಶಾಸಕರು ಕೈಕೊಡುವ ಆತಂಕ ಇದೆ.
ದೊಡ್ಡ ಮಟ್ಟದಲ್ಲಿ ಶಾಸಕರು ಮೈತ್ರಿ ಸರ್ಕಾರಕ್ಕೆ ಬೆನ್ನು ತೋರಿಸುತ್ತಿರುವ ಕಾರಣ ಸರ್ಕಾರವನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ನಾಯಕರು ಕಠಿಣವಾದ ಹಾದಿ ಹಿಡಿಯುವ ಯೋಚನೆಯಲ್ಲಿದ್ದಾರೆ.
ಕರ್ನಾಟಕದಲ್ಲಿ ಮೈತ್ರಿ ಸರ್ಕಾರ ಉಳಿಸಿಕೊಳ್ಳಲು ತಮಿಳುನಾಡು ಮಾದರಿಯನ್ನು ಪ್ರಯೋಗಿಸಲು ಕಾಂಗ್ರೆಸ್ ಯೋಚನೆ ಮಾಡುತ್ತಿದೆ. ತಮಿಳುನಾಡು ಮಾದರಿಯನ್ನು ರಾಜ್ಯದಲ್ಲಿ ಪ್ರಯೋಗಿಸಲು ಕಾಂಗ್ರೆಸ್ ಚಿಂತಿಸಿದೆ.
ಕೆಲವು ತಿಂಗಳ ಹಿಂದಷ್ಟೆ ತಮಿಳುನಾಡಿನ ಆಡಳಿತಾರೂಢ ಎಐಎಡಿಎಂಕೆ ಪಕ್ಷದ 18 ಮಂದಿ ಶಾಸಕರು ದಿನಕರನ್ ನೇತೃತ್ವದಲ್ಲಿ ಸರ್ಕಾರದಿಂದ ಹೊರಗೆ ಬಂದು ಸಾಮೂಹಿಕವಾಗಿ ರಾಜೀನಾಮೆ ನೀಡಿದರು.
18 ಶಾಸಕರ ಸ್ಥಾನವನ್ನೇ ರದ್ದು ಮಾಡಿದ್ದರು
ಆದರೆ ಸ್ಪೀಕರ್ ಅವರು ಯಾವ ರಾಜೀನಾಮೆಯನ್ನೂ ಅಂಗೀಕಾರ ಮಾಡಲಿಲ್ಲ ಬದಲಾಗಿ ಅವರ ಮೇಲೆಲ್ಲಾ ಪಕ್ಷಾಂತರ ನಿಷೇಧ ಕಾಯ್ದೆ ಜಾರಿ ಮಾಡಿ, ಅವರಷ್ಟೂ ಜನರ ಶಾಸಕ ಸ್ಥಾನವನ್ನು ರದ್ದು ಮಾಡಿದರು. ಶಾಸಕರು ನ್ಯಾಯಾಲಯಕ್ಕೆ ಹೋದರೂ, ಸ್ಪೀಕರ್ ಅಧಿಕಾರದಲ್ಲಿ ಹಸ್ತಾಂತರ ಮಾಡುವುದಿಲ್ಲವೆಂದು ನ್ಯಾಯಾಲಯ ಹೇಳಿತು.
18 ರಲ್ಲಿ 17 ಶಾಸಕರು ಉಪಚುನಾವಣೆಯಲ್ಲಿ ಸೋತರು
ಅಧಿವೇಶನದಲ್ಲಿ ನಡೆದ ವಿಶ್ವಾಸಮತದಲ್ಲಿ ಅಲ್ಪ ಬಹುಮತದ ಸರ್ಕಾರವಾಗಿ ಎಐಡಿಎಂಕೆ ಸರ್ಕಾರ ಉಳಿದುಕೊಂಡಿತು. ಆ ನಂತರ ನಡೆದ ಉಪಚುನಾವಣೆಯಲ್ಲಿ ರಾಜೀನಾಮೆ ನೀಡಿದ್ದ 18 ರಲ್ಲಿ 17 ಶಾಸಕರು ಸೋತರು.
ಹದಿಮೂರು ಶಾಸಕರ ರಾಜೀನಾಮೆ ನಿರಾಕರಣೆ?
ಇದೇ ಮಾದರಿಯಲ್ಲಿ ಕಾಂಗ್ರೆಸ್ ಸಹ ಚಿಂತನೆ ಮಾಡುತ್ತಿದೆ ಎನ್ನಲಾಗುತ್ತಿದೆ. ಈಗ ರಾಜೀನಾಮೆ ನೀಡಿರುವ ಹದಿಮೂರು ಶಾಸಕರ ರಾಜೀನಾಮೆಯನ್ನು ಅಂಗೀಕಾರ ಮಾಡದಂತೆ ಮಾಡಿ ಅವರ ಮೇಲೆ ಪಕ್ಷಾಂತರ ನಿಷೇಧ ಕಾಯ್ದೆ ಹೇರುವಂತೆ ಮಾಡಲು ತಯಾರಿ ನಡೆಸಿದೆ ಎನ್ನಲಾಗಿದೆ.
ಶಾಸಕರ ಮೇಲೆ ಪಕ್ಷಾಂತರ ನಿಷೇಧ ಕಾಯ್ದೆ?
ಈಗ ರಾಜೀನಾಮೆ ನೀಡಿರುವ ಶಾಸಕರ ಮೇಲೆ ಪಕ್ಷಾಂತರ ನಿಷೇಧ ಕಾಯ್ದಿ ಜಾರಿಗೊಳಿಸಿ, ಅಲ್ಪ ಬಹುಮತದ ಸರ್ಕಾರ ಮಾಡಿ, ವಿಶ್ವಾಸಮತ ಯಾಚನೆಯಲ್ಲಿ ಅಲ್ಪ ಬಹುಮತ ಸಾಬೀತು ಪಡಿಸುವ ಯೋಚನೆಯನ್ನು ಮಾಡಿದೆ. ಇದರಿಂದ ಅತೃಪ್ತರಿಗೆ ಸೂಕ್ತ ಬುದ್ಧಿ ಕಲಿಸದಂತಾಗುತ್ತದೆ ಎನ್ನುವ ಲೆಕ್ಕಾಚಾರವನ್ನೂ ಹಾಕಿಕೊಂಡಿದೆ.