ಮುಂದಿನ ಸಿಎಂ: ಜಮೀರ್ ಅಹ್ಮದ್, ಸೌಮ್ಯ ರೆಡ್ಡಿಗೆ ಶುರುವಾಯ್ತು ಸಂಕಷ್ಟ!
ಬೆಂಗಳೂರು, ಅ. 25: ಮುಂದಿನ ಮುಖ್ಯಮಂತ್ರಿ ವಿಚಾರ ಕುರಿತಂತೆ ಹೇಳಿಕೆ ಕೊಟ್ಟಿದ್ದ ಕಾಂಗ್ರೆಸ್ 'ಛೋಟಾ ನಾಯಕ'ರಿಗೆ ಇದೀಗ ಸಂಕಷ್ಟ ಶುರುವಾಗಿದೆ. ಬಾದಾಮಿಯಲ್ಲಿ ಮಾತನಾಡಿದ್ದ ಕಾಂಗ್ರೆಸ್ ಶಾಸಕ, ಚಾಮರಾಜಪೇಟೆ ಶಾಸಕ ಜಮೀರ್ ಅಹಮ್ಮದ್ ಖಾನ್ ಅವರು ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿ ಎಂದಿದ್ದರು. ಬೆಂಗಳೂರಿನ ಆರ್ ಆರ್ ನಗರದಲ್ಲಿ ಮಾತನಾಡಿದ್ದ ಜಯನಗರ ಶಾಸಕಿ ಸೌಮ್ಯಾ ರೆಡ್ಡಿ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಮುಂದಿನ ಮುಖ್ಯಮಂತ್ರಿ ಎಂದಿದ್ದರು. ಇದೀಗ ಇಬ್ಬರಿಗೂ ಸಂಕಷ್ಟ ಶುರುವಾಗಿದೆ.
ಇವರಿಬ್ಬರೂ ಸೇರಿದಂತೆ ಮುಂದಿನ ಮುಖ್ಯಮಂತ್ರಿ ಕುರಿರು ಹೇಳಿಕೆ ಕೊಟ್ಟಿರುವ ಎಲ್ಲರಿಗೂ ಸಂಕಷ್ಟ ಶುರುವಾಗಲಿದೆ. ಕಾಂಗ್ರೆಸ್ ಸಂಸ್ಕೃತಿಗೆ ವಿರುದ್ಧವಾಗಿ ಮಾತನಾಡಿರುವ ಆರೋಪವನ್ನು ಮುಂದಿನ ಸಿಎಂ ಕುರಿತು ಮಾತನಾಡಿದ ಎಲ್ಲರೂ ಎದುರಿಸುತ್ತಿದ್ದಾರೆ. ಅಷ್ಟಕ್ಕೂ ಅವರಿಗೆ ಕಾದಿರುವ ಸಂಕಷ್ಟವಾದರೂ ಏನು? ಮುಂದಿದೆ ಓದಿ.
ಕಾಂಗ್ರೆಸ್ ಸಂಸ್ಕೃತಿ ಅಲ್ಲ!
ಮುಂದಿನ ಸಿಎಂ ಅನ್ನೋದು ಕಾಂಗ್ರೆಸ್ ಸಂಸ್ಕೃತಿಯಲ್ಲ ಎಂದು ಮಾಜಿ ಸ್ಪೀಕರ್ ಕೆ.ಬಿ. ಕೋಳಿವಾಡ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ಚುನಾವಣೆ ಫಲಿತಾಂಶ ಬಂದ ಬಳಿಕ ಸಿಎಂ ಅಭ್ಯರ್ಥಿ ಯಾರು ಅನ್ನೋದನ್ನ ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಶಾಸಕಾಂಗ ಪಕ್ಷದ ಸಭೆಯಲ್ಲಿ ಚರ್ಚೆ ಮಾಡಿ ಅದರ ಅಭಿಪ್ರಾಯದಂತೆ ಹೈಕಮಾಂಡ್ ಮುಖ್ಯಮಂತ್ರಿ ಯಾರು ಅನ್ನೋದನ್ನು ನಿರ್ಧಾರ ಮಾಡುತ್ತದೆ. ಮೊದಲು ಪಕ್ಷ ಬಹುಮತ ಬರಲು ಪ್ರಯತ್ನ ಮಾಡಿ, ಆ ಮೇಲೆ ಸಿಎಂ ವಿಚಾರ ಎಂದಿದ್ದಾರೆ.
ಸುಮೋಟೋ ಪ್ರಕರಣ ದಾಖಲು
ಮಾಜಿ ಸಚಿವ, ಶಾಸಕ ಜಮೀರ್ ಅಹಮದ್ ಖಾನ್ ಅವರು ಸಿದ್ದರಾಮಯ್ಯ ಮುಂದಿನ ಸಿಎಂ ಎಂದು ಹೇಳಿದ್ದಾರೆ. ಶಾಸಕಿ ಸೌಮ್ಯ ರೆಡ್ಡಿ ಹಾಗೂ ಆರ್ ಆರ್ ನಗರ ಕಾಂಗ್ರೆಸ್ ಅಭ್ಯರ್ಥಿ ಎಚ್ ಕುಸುಮಾ ಅವರ ತಂದೆ ಹನುಮಂತರಾಯಪ್ಪ ಅವರು ಡಿ.ಕೆ. ಶಿವಕುಮಾರ್ ಮುಂದಿನ ಸಿಎಂ ಎಂದು ಹೇಳಿದ್ದಾರೆ. ಇದು ಪಕ್ಷದ ಶಿಸ್ತಿಗೆ ವಿರುದ್ಧ ಇಂಥವರ ವಿರುದ್ಧ ಸುಮೋಟೋ ಪ್ರಕರಣ ದಾಖಲು ಮಾಡಿಕೊಳ್ಳಬೇಕಾಗುತ್ತದೆ ಎಂದು ಕಾಂಗ್ರೆಸ್ ಶಿಸ್ತು ಕ್ರಮ ಸಮಿತಿಯ ಸದಸ್ಯರೂ ಆಗಿರುವ ಕೆ.ಬಿ. ಕೋಳಿವಾಡ್ ಎಚ್ಚರಿಕೆ ಕೊಟ್ಟಿದ್ದಾರೆ.
ಸಮಿತಿಯಿಂದ ನೋಟಿಸ್ ಕೊಡುತ್ತೇವೆ
ಪಕ್ಷದ ಹಿತಕ್ಕೆ ದಕ್ಕೆ ಬರುವ ಹೇಳಿಕೆ ಕೊಟ್ಟರೆ ನೋಟಿಸ್ ಕೊಡಬೇಕಾಗುತ್ತದೆ. ಛೋಟಾ ಛೋಟಾ ಲೀಡರ್ಸ್ ಸಿಎಂ ವಿಚಾರ ಕುರಿತು ಮಾತನಾಡುತ್ತಿದ್ದಾರೆ. ಇದು ಸರಿಯಲ್ಲ. ಶಿಸ್ತು ಕ್ರಮ ಸಮಿತಿಯಲ್ಲಿ ನಾನು ಇದ್ದೇನೆ. ಕ್ರಮ ತೆಗೆದು ಕೊಳ್ಳಬೇಕಾಗುತ್ತದೆ. ಯಾರ್ಯಾರು ಹೇಳಿಕೆ ಕೊಟ್ಟಿದ್ದಾರೊ ಅವರೆಲ್ಲರಿಗೂ ನೋಟಿಸ್ ಕೊಡುತ್ತೇವೆ. ಶಿಸ್ತು ಕ್ರಮ ಸಮಿತಿ ಅಧ್ಯಕ್ಷ ರೆಹಮಾನ್ ಖಾನ್ ಅವರೊಂದಿಗೆ ಈ ಬಗ್ಗೆ ಚರ್ಚೆ ಮಾಡಿದ್ದೇನೆ. ಕೂಡಲೇ ಸಭೆ ಕರೆದು ನೋಟಿಸ್ ಕೊಡುತ್ತೇವೆ. ಹೈಕಮಾಂಡ್ ಇದೆಲ್ಲವನ್ನೂ ಗಮನಿಸುತ್ತಿದೆ ಎಂದು ಕೆ.ಬಿ. ಕೋಳಿವಾಡ್ ಹೇಳಿದ್ದಾರೆ.
Recommended Video
ಬಿಜೆಪಿ ಮುಂದಿನ ಸಿಎಂ ಬಗ್ಗೆ ಹೇಳಿಕೆ
ತಮ್ಮ ಪಕ್ಷದ ಮುಂದಿನ ಸಿಎಂ ಕುರಿತು ಮಾತನಾಡುವವರಿಗೆ ಶಿಸ್ತು ಕ್ರಮದ ಎಚ್ಚರಿಕೆ ಕೊಟ್ಟಿರುವ ಮಾಜಿ ಸ್ಪೀಕರ್ ಕೆ.ಬಿ. ಕೋಳಿವಾಡ್ ಅವರು, ಬಿಜೆಪಿಯಲ್ಲಿನ ಮುಖ್ಯಮಂತ್ರಿ ಯಡಿಯೂರಪ್ಪ ಬದಲಾವಣೆ ಕುರಿತು ಇದೇ ಸಂದರ್ಭದಲ್ಲಿ ಮಾತನಾಡಿದ್ದಾರೆ.
ಮುಖ್ಯಮಂತ್ರಿ ಆಗುವ ಯೋಗ್ಯತೆ ಇರುವ ಬಿಜೆಪಿಯ ಹಲವು ನಾಯಕರು ಉತ್ತರ ಕರ್ನಾಟಕದಲ್ಲಿ ಇದ್ದಾರೆ. ಉತ್ತರ ಕರ್ನಾಟಕದ ಅಭಿವೃದ್ಧಿ ಕಡಿಮೆ ಆಗಿದೆ. ಎರಡುವರೆ ವರ್ಷಗಳ ಬಳಿಕ ಅವಕಾಶ ಸಿಕ್ಕರೆ ಉತ್ತರ ಕರ್ನಾಟಕದವರಿಗೆ ಅವಕಾಶ ಕೊಡಲಿ. ಆಗ ಆ ಭಾಗದ ಅಭಿವೃದ್ಧಿಗೆ ಪೂರಕ ಆಗುತ್ತದೆ ಎಂದು ಮಾಜಿ ಸ್ಪೀಕರ್ ಕೆ.ಬಿ. ಕೋಳಿವಾಡ್ ಹೇಳಿಕೆ ಕೊಟ್ಟಿದ್ದಾರೆ.