ಸಿದ್ದರಾಮಯ್ಯಗೆ ಮಹತ್ವದ ಜವಾಬ್ದಾರಿ ನೀಡಿದ ಕುಮಾರಸ್ವಾಮಿ!
Recommended Video
ಬೆಂಗಳೂರು, ಜುಲೈ 15 : ಕರ್ನಾಟಕದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಮೂರು ದಿನದ ಮಟ್ಟಿಗೆ ಭದ್ರವಾಗಿದೆ. ಗುರುವಾರ ಸದನದಲ್ಲಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ವಿಶ್ವಾಸಮತ ಯಾಚನೆ ಮಾಡಲಿದ್ದಾರೆ.
ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಜುಲೈ 18ರಂದು ವಿಶ್ವಾಸಮತಯಾಚನೆಗೆ ದಿನಾಂಕ ನಿಗದಿ ಮಾಡಲಾಗಿದೆ. ಗುರುವಾರದ ತನಕ ವಿಧಾನಸಭೆ ಕಲಾಪವನ್ನು ಸಹ ಮುಂದೂಡಲಾಗಿದೆ.
ಬಿಜೆಪಿ ಒತ್ತಡಕ್ಕೆ ಮಣಿದ ಸ್ಪೀಕರ್: ಗುರುವಾರಕ್ಕೆ ಕಲಾಪ ಮುಂದೂಡಿಕೆ
ಅತೃಪ್ತ ಶಾಸಕರು, ಸ್ಪೀಕರ್ ಸಲ್ಲಿಸಿರುವ ಅರ್ಜಿಗಳ ವಿಚಾರಣೆ ಮಂಗಳವಾರ ಸುಪ್ರೀಂಕೋರ್ಟ್ನಲ್ಲಿ ನಡೆಯಲಿದೆ. ನ್ಯಾಯಾಲಯ ಏನು ತೀರ್ಪು ನೀಡಲಿದೆ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಗುರುವಾರದ ತನಕ ಶಾಸಕರು ರೆಸಾರ್ಟ್ನಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ.
ಗುರುವಾರ ಸಿಎಂ ವಿಶ್ವಾಸಮತ ಯಾಚನೆ: ಸರ್ಕಾರದ ಭವಿಷ್ಯ ಅಂದೇ ನಿರ್ಧಾರ
ಜುಲೈ 18ರ ವಿಶ್ವಾಸಮತಯಾಚನೆ ಹಿನ್ನಲೆಯಲ್ಲಿ ಕಾಂಗ್ರೆಸ್ ಸಿಎಲ್ಪಿ ನಾಯಕ ಸಿದ್ದರಾಮಯ್ಯಗೆ ಎಚ್. ಡಿ. ಕುಮಾರಸ್ವಾಮಿ ಮಹತ್ವದ ಜವಾಬ್ದಾರಿಯನ್ನು ನೀಡಿದ್ದಾರೆ. ಮೈತ್ರಿ ಸರ್ಕಾರದ ಅಳಿವು-ಉಳಿವಿನ ಭವಿಷ್ಯ ಸಿದ್ದರಾಮಯ್ಯ ಅವರ ಮೇಲೆ ನಿಂತಿದೆ.....
ಅತೃಪ್ತರನ್ನು ಅನರ್ಹಗೊಳಿಸುವುದನ್ನೇ ಬಿಜೆಪಿ ಕಾಯುತ್ತಿದೆ: ಕಾಂಗ್ರೆಸ್ ಆರೋಪ
ಶಾಸಕರ ಮನವೊಲಿಸುವ ಹೊಣೆ
ರಾಜೀನಾಮೆ ನೀಡಿರುವ 13 ಕಾಂಗ್ರೆಸ್ ಶಾಸಕರ ಮನವೊಲಿಸುವ ಜವಾಬ್ದಾರಿಯನ್ನು ಎಚ್. ಡಿ. ಕುಮಾರಸ್ವಾಮಿ ಸಿದ್ದರಾಮಯ್ಯಗೆ ನೀಡಿದ್ದಾರೆ. ಕರ್ನಾಟಕದಲ್ಲಿ ಸರ್ಕಾರ ಉಳಿಯಬೇಕಿದ್ದರೆ ನೀವು ಮನವೊಲಿಸಲೇಬೇಕು. ಈ ಕಾರ್ಯ ನಿಮ್ಮಿಂದ ಮಾತ್ರ ಸಾಧ್ಯ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಮುಂಬೈನಲ್ಲಿರುವವರನ್ನು ಕರೆತನ್ನಿ
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈನ ಹೋಟೆಲ್ನಲ್ಲಿ ವಾಸ್ತವ್ಯ ಹೂಡಿರುವ ಶಾಸಕರನ್ನು ವಾಪಸ್ ಕರೆಸಿ, ಸರ್ಕಾರ ಉಳಿಯಬೇಕಾದರೆ ಅವರನ್ನು ವಾಪಸ್ ಕರೆಸುವುದು ಮುಖ್ಯವಾಗಿದೆ. ಈ ಕಾರ್ಯಯನ್ನು ನೀವು ಮಾಡಿದರೆ ಸರ್ಕಾರ ಉಳಿಯಲಿದೆ ಎಂದು ಎಚ್. ಡಿ. ಕುಮಾರಸ್ವಾಮಿ ಸಿದ್ದರಾಮಯ್ಯಗೆ ತಿಳಿಸಿದ್ದಾರೆ.
ವಿಶ್ವಾಸಮತಯಾಚನೆ
ಜುಲೈ 18ರಂದು ವಿಶ್ವಾಸಮತಯಾಚನೆ ನಡೆಯಲಿದೆ. ಅದಕ್ಕೂ ಮೊದಲು ನೀವು ಶಾಸಕರ ಮನವೊಲಿಸಬೇಕು. ನಿಮ್ಮ ಬೆಂಬಲಿಗರಾದ ಬೈರತಿ ಬಸವರಾಜ್, ಎಸ್.ಟಿ.ಸೋಮಶೇಖರ್, ಮುನಿರತ್ನ, ಎಂ. ಟಿ. ಬಿ. ನಾಗರಾಜ್ ಮನವೊಲಿಸಿ ನೀವು ಕರೆತರಬೇಕು ಉಳಿದ ಶಾಸಕರ ಜೊತೆ ನಾನು ಸಹ ಮಾತುಕತೆ ನಡೆಸುವೆ ಎಂದು ಕುಮಾರಸ್ವಾಮಿ ಸಿದ್ದರಾಮಯ್ಯ ಜೊತೆ ಚರ್ಚಿಸಿದ್ದಾರೆ.
ಮುಂಬೈಗೆ ಹೋಗುವ ಚಿಂತನೆ
ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಮತ್ತು ಜೆಡಿಎಸ್ ವರಿಷ್ಠ ಎಚ್. ಡಿ. ದೇವೇಗೌಡ ಅವರು ಇಂದು ಮುಂಬೈಗೆ ಹೋಗಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಆದರೆ, ಕೊನೆ ಕ್ಷಣದಲ್ಲಿ ಆ ಭೇಟಿ ರದ್ದಾಗಿದೆ. ವಿಶ್ವಾಸಮತಯಾಚನೆಗೆ ಇನ್ನೂ ಮೂರು ದಿನ ಬಾಕಿ ಇದೆ. ಸಿದ್ದರಾಮಯ್ಯ ತಮ್ಮ ಬೆಂಬಲಿಗರನ್ನು ಭೇಟಿಯಾಗಲು ಮುಂಬೈಗೆ ತೆರಳಿದ್ದಾರೆಯೇ? ಕಾದು ನೋಡಬೇಕು.