ಸರ್ಕಾರ ಕುರಿ ಕಾಯಲು ತೋಳವನ್ನು ಬಿಟ್ಟಂತೆ ಆಗಿದೆ
ಬೆಂಗಳೂರು, ಫೆಬ್ರವರಿ 24 : "ಬಿಜೆಪಿ ಸರ್ಕಾರ ಕಥೆಗಳನ್ನು, ಕಾರಣಗಳನ್ನು ಹೇಳುವುದನ್ನು ಬಿಟ್ಟು ಆನಂದ್ ಸಿಂಗ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು" ಎಂದು ಮಾಜಿ ಸಂಸದ, ಕಾಂಗ್ರೆಸ್ ನಾಯಕ ವಿ. ಎಸ್. ಉಗ್ರಪ್ಪ ಒತ್ತಾಯಿಸಿದರು.
ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ವಿ. ಎಸ್. ಉಗ್ರಪ್ಪ ಪತ್ರಿಕಾಗೋಷ್ಠಿ ನಡೆಸಿದರು. ಅರಣ್ಯ ಸಂಪತ್ತು ದೋಚುವುದು ಸೇರಿದಂತೆ ವಿವಿಧ ಆರೋಪಗಳಿರುವ ಅರಣ್ಯ ಸಚಿವ ಆನಂದ್ ಸಿಂಗ್ ಅವರ ವಿರುದ್ಧದ ಪ್ರಕರಣಗಳು, ಅವರ ವಿರುದ್ಧ ಸಲ್ಲಿಸಲಾದ ಆರೋಪ ಪಟ್ಟಿಗಳ ದಾಖಲೆಗಳನ್ನು ಬಿಡುಗಡೆ ಮಾಡಿದರು.
ಖಾತೆ ಹಂಚಿಕೆ ಕಗ್ಗಂಟು; ವರದಿ ಕೇಳಿದ ಬಿಜೆಪಿ ಹೈಕಮಾಂಡ್!
"ಅರಣ್ಯ ಸಚಿವ ಆನಂದ್ ಸಿಂಗ್ ವಿರುದ್ಧ 14 ಪ್ರಕರಣಗಳು ದಾಖಲಾಗಿದ್ದು, ಇವುಗಳಲ್ಲಿ 7 ಪ್ರಕರಣದಲ್ಲಿ ಪೊಲೀಸರು ಆರೋಪ ಪಟ್ಟಿ ಸಲ್ಲಿಸಿದ್ದಾರೆ. ಎಲ್ಲಾ ಪ್ರಕರಣಗಳು ಅರಣ್ಯ ಇಲಾಖೆಗೆ ಸಂಬಂಧಿಸಿದ್ದರೂ ಅವರಿಗೆ ಅರಣ್ಯ ಇಲಾಖೆ ನೀಡುವ ಮೂಲಕ ಯಡಿಯೂರಪ್ಪ ಸರ್ಕಾರ ತೋಳವನ್ನೇ ಕುರಿ ಕಾಯಲು ಬಿಟ್ಟಂತೆ ಆಗಿದೆ" ಎಂದು ದೂರಿದರು.
ಕುರಿ ಕಾಯೋ ತೋಳ ಅಂದ್ರೆ ಸಂಬಳ ಬೇಡ ಅಂತು: ಸಿದ್ದರಾಮಯ್ಯ
"ಭ್ರಷ್ಟಾಚಾರ ರಹಿತ, ಪಾರದರ್ಶಕ ಆಡಳಿತದ ಭರವಸೆ ನೀಡುವ ಪ್ರಧಾನಿ ನರೇಂದ್ರ ಮೋದಿ ಅವರು, ಈ ಕೂಡಲೇ ಆನಂದ್ ಸಿಂಗ್ ವಿರುದ್ಧ ಕ್ರಮಕೈಗೊಳ್ಳುವಂತೆ ಯಡಿಯೂರಪ್ಪ ಸರ್ಕಾರಕ್ಕೆ ನಿರ್ದೇಶನ ನೀಡಬೇಕು" ಎಂದು ಒತ್ತಾಯಿಸಿದರು.
ಅರಣ್ಯ ಸಚಿವ ಆನಂದ್ ಸಿಂಗ್ ವಿರುದ್ಧ ಹೈಕೋರ್ಟಿನಲ್ಲಿ PIL
ಸಿದ್ದರಾಮಯ್ಯ ಸಹ ಒತ್ತಾಯ ಮಾಡಿದ್ದರು
ಆನಂದ್ ಸಿಂಗ್ಗೆ ಅರಣ್ಯ ಖಾತೆ ನೀಡಿದ ಬಗ್ಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸಹ ಆಕ್ಷೇಪ ವ್ಯಕ್ತಪಡಿಸಿದ್ದರು. "ಅವರು ಎಲ್ಲಿ ಪ್ರಕರಣ ಎದುರಿಸುತ್ತಿದ್ದಾರೆ ಅಂತಹವರಿಗೆ ಅದೇ ಖಾತೆಯನ್ನು ಈ ಸರ್ಕಾರ ನೀಡಿದೆ. ಇದು ಭ್ರಷ್ಟಾಚಾರ ಪೋಷಕ ಸರ್ಕಾರವಾಗುತ್ತದೆ" ಎಂದು ಹೇಳಿದ್ದರು.
ಖಾತೆ ಬದಲಾವಣೆ ಮಾಡಿದ್ದ ಸಿಎಂ
ಸಂಪುಟ ವಿಸ್ತರಣೆ ಮಾಡಿದಾಗ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಆನಂದ್ ಸಿಂಗ್ಗೆ ಆಹಾರ ಮತ್ತು ನಾಗರಿಕ ಸರಬರಾಜು ಖಾತೆಯನ್ನು ನೀಡಿದ್ದರು. ಅರಣ್ಯ ಖಾತೆ ಹೊಣೆಯನ್ನು ಬಿ. ಸಿ. ಪಾಟೀಲ್ಗೆ ನೀಡಲಾಗಿತ್ತು. ಬಳಿಕ ಖಾತೆ ಬದಲಾವಣೆ ಮಾಡಿ ಆನಂದ್ ಸಿಂಗ್ಗೆ ಅರಣ್ಯ ಖಾತೆ ನೀಡಿ, ಬಿ. ಸಿ. ಪಾಟೀಲ್ಗೆ ಕೃಷಿ ಖಾತೆ ಹೊಣೆ ನೀಡಲಾಗಿತ್ತು.
ಆನಂದ್ ಸಿಂಗ್ ಹೇಳುವುದೇನು?
ಖಾತೆ ವಿವಾದದ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಸಚಿವ ಆನಂದ್ ಸಿಂಗ್, "ನಮ್ಮದು ಗಣಿ ಕುಟುಂಬ. ಗಣಿ ಅಂದ ಮೇಲೆ ಅರಣ್ಯ ಉಲ್ಲಂಘನೆ ಪ್ರಕರಗಳು ಸಹಜ. ವಾಹನ ಇದ್ದ ಮೇಲೆ ಸಂಚಾರ ನಿಯಮ ಉಲ್ಲಂಘನೆ ಪ್ರಕರಣ ಇದ್ದಂತೆ, ನಮ್ಮ ಗಣಿ ಕಂಪನಿ ವಿರುದ್ಧ ಕೇಸ್ ದಾಖಲಾಗಿದೆ" ಎಂದು ಹೇಳಿದ್ದರು.
ವರದಿ ಕೇಳಿದ್ದ ಹೈಕಮಾಂಡ್
ಆನಂದ್ ಸಿಂಗ್ ಖಾತೆ ಬಗ್ಗೆ ವಿವಾದ ಉಂಟಾಗುತ್ತಿದ್ದಂತೆ ಬಿಜೆಪಿ ಹೈಕಮಾಂಡ್ ವರದಿ ಕೇಳಿತ್ತು. ಪ್ರತಿಪಕ್ಷಗಳು ಅರಣ್ಯ ಖಾತೆಯನ್ನು ಬದಲಾವಣೆ ಮಾಡಬೇಕು ಎಂದು ಪಟ್ಟು ಹಿಡಿದಿವೆ.