ಮಾಗಡಿ : ಕಿತ್ತಾಡಿಕೊಂಡ ಅರ್ಚಕರಿಗೆ ಅಮಾನತು ಭೀತಿ
ರಾಮನಗರ, ನ. 18 : ಮಾಗಡಿ ತಾಲೂಕಿನ ಮಾಂಡವ್ಯ ಕುಟಿ ತಿರುಮಲ ಶ್ರೀರಂಗನಾಥಸ್ವಾಮಿ ದೇವಾಲಯದ ಅರ್ಚಕರ ಬಡಿದಾಟಕ್ಕೆ ಸಂಬಂಧಿಸಿದಂತೆ ತಹಶೀಲ್ದಾರ್ ಶಿವಕುಮಾರ್ ಕಠಿಣ ಕ್ರಮ ಕೈಗೊಂಡಿದ್ದಾರೆ. ದೇವಾಲಯದ ಅರ್ಚಕರಿಗೆ ನೋಟಿಸ್ ಜಾರಿಗೊಳಿಸಿರುವ ಅವರು, ಉತ್ತರ ನೀಡದಿದ್ದರೆ ಶಿಸ್ತುಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ರಾಮನಗರ ಜಿಲ್ಲೆಯ ಅತೀ ಶ್ರೀಮಂತ ದೇವಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ತಿರುಮಲ ಶ್ರೀರಂಗನಾಥಸ್ವಾಮಿ ದೇವಾಲಯದಲ್ಲಿ ಶುಕ್ರವಾರ ಅರ್ಚಕರು ಬಡಿದಾಡಿಕೊಂಡಿದ್ದರು. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದ ತಹಶೀಲ್ದಾರ್ ಶಿವಕುಮಾರ್, ಸೋಮವಾರ ಅರ್ಚಕರಿಗೆ ನೋಟಿಸ್ ಜಾರಿಗೊಳಿಸಿ ಘಟನೆಯ ಕುರಿತು ವಿವರಣೆ ಕೇಳಿದ್ದಾರೆ. ( ಮಾಗಡಿ ರಂಗನಾಥಸ್ವಾಮಿ ಮುಂದೆ ಅರ್ಚಕರ ಕಿತ್ತಾಟ!)
ದೇವಾಲಯದ ಪೂಜೆಗೆಂದು ಸರ್ಕಾರದಿಂದ ನೇಮಕವಾಗಿರುವ ಕೃಷ್ಣ ಅಯ್ಯಂಗಾರ್ ಅವರ ತಂದೆ ಗೋವಿಂದ ರಾಜನ್ ಮತ್ತು ವಂಶಪಾರಂಪರ್ಯವಾಗಿ ಪೂಜೆ ಸಲ್ಲಿಸುತ್ತಿರುವ ಅಯ್ಯಂಗಾರ್ ಅವರಿಗೆ ತಹಶೀಲ್ದಾರ್ ನೋಟಿಸ್ ಜಾರಿಗೊಳಿಸಿದ್ದಾರೆ. ಭಕ್ತರ ಮುಂದೆ ಬಡಿದಾಡಿಕೊಂಡ ನಿಮ್ಮನ್ನು ಏಕೆ ಅಮಾನತು ಮಾಡಬಾರದು? ಎಂದು ಪ್ರಶ್ನಿಸಿದ್ದಾರೆ. (ನೋಟಿಸ್ ಪ್ರಮುಖ ಅಂಶಗಳು)
ಏಕೆ ಅಮಾನತು ಮಾಡಬಾರದು
ಮೂಲ ದೇವಾಲಯದ ಅರ್ಚಕರಾದ ಕೃಷ್ಣ ಅಯ್ಯಂಗಾರ್ ಅವರಿಗೆ ನೀಡಿರುವ ನೋಟಿಸ್ ನಲ್ಲಿ ತಹಶೀಲ್ದಾರ್ ಭಕ್ತರ ಎದುರು ಅವ್ಯಾವ್ಯ ಶಬ್ದಗಳಿಂದ ನಿಂದಿಸಿ ಅರ್ಚಕರು ಬಡಿದಾಡಿಕೊಂಡಿದ್ದೀರಿ?, ಭಕ್ತರಿಂದ ಸೇವೆಗಳಿಗೆ ಹೆಚ್ಚಿನ ಹಣ ವಸೂಲಿ ಮಾಡಿದ್ದೀರಿ ಎಂಬ ಆರೋಪಗಳಿವೆ. ನಿಮ್ಮ ಘನತೆಗೆ ಧಕ್ಕೆ ತರುವಂತಹ ಕೃತ್ಯ ಮಾಡಿದ್ದೀರಿ. ನಿಮ್ಮನ್ನು ಏಕೆ ಅಮಾನತುಗೊಳಿಸಬಾರದು ಎಂದು ಪ್ರಶ್ನಿಸಲಾಗಿದೆ.
ಅನಧಿಕೃತ ಅರ್ಚಕರು
ಕೃಷ್ಣ ಅಯ್ಯಂಗಾರ್ ಅವರ ತಂದೆ ಗೋವಿಂದ ರಾಜನ್ ಅವರಿಗೆ ಬಂದಿರುವ ನೋಟಿಸ್ ನಲ್ಲಿ ನಿಮ್ಮ ಮಗನನ್ನು ಮಾತ್ರ ಅರ್ಚಕರಾಗಿ ನೇಮಿಸಲಾಗಿದೆ. ನೀವು ಅನಧಿಕೃತವಾಗಿ ಅರ್ಚಕವೃತ್ತಿಯಲ್ಲಿ ತೊಡಗಿಕೊಂಡಿದ್ದೀರಿ. ಬಡಿದಾಟದಲ್ಲಿ ನಿಮ್ಮ ಪಾತ್ರವೇ ಮುಖ್ಯವಾಗಿದೆ. ಇಂತಹ ಘಟನೆ ಮರುಕಳಿಸಿದರೆ ನಿಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.
ಕಾರಣ ತಿಳಿಸಿ
ವೆಂಕಟೇಶ ಅಯ್ಯಂಗಾರ್ ಅವರಿಗೆ ನೀಡಿರುವ ನೋಟಿಸ್ ನಲ್ಲಿ ವಂಶಪಾರಂಪರ್ಯವಾಗಿ ನೀವು ದೇವಾಲಯದಲ್ಲಿ ಪೂಜೆ ಸಲ್ಲಿಸುತ್ತಿದ್ದೀರಿ. ಭಕ್ತರ ಎದುರಿನಲ್ಲಿ ಹೀಗೆ ಬಡಿದಾಡಿಕೊಳ್ಳುವುದು ನಿಮ್ಮ ಘನತೆಗೆ ಧಕ್ಕೆ ತರುವ ವಿಚಾರ ಎಂಬುದು ನಿಮಗೆ ತಿಳಿದಿಲ್ಲವೇ?. ಘಟನೆಗೆ ಕಾರಣ ಏನೆಂದು ವಿವರಣೆ ನೀಡಿ ತಿಳಿಸಲಾಗಿದೆ.
ತಹಶೀಲ್ದಾರ್ ಹೇಳಿದ್ದೇನು?
ಘಟನೆಯ ಕುರಿತು ಪ್ರತಿಕ್ರಿಯೆ ನೀಡಿರುವ ತಹಶೀಲ್ದಾರ್ ಶಿವಕುಮಾರ್ ಈಗಾಗಲೇ ಸ್ಥಳಕ್ಕೆ ಭೇಟಿ ನೀಡಿ ಭಕ್ತರಿಂದ ಮಾಹಿತಿ ಪಡೆದಿದ್ದೇನೆ. ದೇವಾಲಯದಲ್ಲಿ ಕೆಲವರು ಅನಧಿಕೃತವಾಗಿ ಅರ್ಚಕ ವೃತ್ತಿ ನಡೆಸುತ್ತಿದ್ದಾರೆ. ಈ ಬಗ್ಗೆ ನೋಟಿಸ್ ಜಾರಿ ಮಾಡಲಾಗಿದ್ದು, ಉತ್ತರ ಬಂದ ನಂತರ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.
ಶಾಸಕರ ಪ್ರತಿಕ್ರಿಯೆ
ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸ್ಥಳೀಯ ಶಾಸಕ ಎಚ್.ಸಿ.ಬಾಲಕೃಷ್ಣ ದೇವಾಲಯದಲ್ಲಿ ಧರ್ಮದರ್ಶಿ ಸಮಿತಿ ರಚನೆ ಮಾಡಲಾಗುವುದು. ಘಟನೆಯ ಕುರಿತು ವರದಿ ಬಂದ ನಂತರ ಅರ್ಚಕರ ವಿರುದ್ಧ ಕ್ರಮ ಕೈಗೊಳ್ಳುವ ಕುರಿತು ತೀರ್ಮಾನ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.