ಸರವಣಗೆ ಕಿರಿಕಿರಿ ತಂದ ಕೊರೊನಾ ವೈರಸ್ ಕಾಲರ್ ಟ್ಯೂನ್!
ಬೆಂಗಳೂರು, ಮಾರ್ಚ್ 10: ಡೆಡ್ಲಿ ಕೊರೊನಾ ವೈರಸ್ ಸೋಂಕು ಭಾರತಕ್ಕೂ ಹಬ್ಬಿರುವ ಕಾರಣ ಮೊಬೈಲ್ ಕಾಲರ್ ಟ್ಯೂನ್ ಗಳ ಮುಖಾಂತರ ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ.
ಕೊರೊನಾ ವೈರಸ್ ಕಾಲರ್ ಟ್ಯೂನ್ ಗಳನ್ನು ಬಹುತೇಕ ಎಲ್ಲಾ ನೆಟ್ ವರ್ಕ್ ಗಳು ಜಾರಿಗೆ ತಂದಿವೆ. ಯಾರಿಗೆ ಫೋನ್ ಮಾಡಿದರೂ, ಮೊದಲು 'ಕೆಮ್ಮು' ಬಂದು.. ಬಳಿಕ ಕೊರೊನಾ ವೈರಸ್ ಕುರಿತು ಮಾಹಿತಿ ನೀಡಲಾಗುತ್ತಿದೆ.
ಎಮ್ಮೆಗೆ ಜ್ವರ ಬಂದ್ರೆ ಎತ್ತಿಗೆ ಬರೆ: ಕೊರೊನಾ ಕಾಲರ್ ಟ್ಯೂನ್ ಬಗ್ಗೆ ಡಿಕೆಶಿ ವ್ಯಂಗ್ಯ!
ಆದ್ರೆ, ಈ ಕೊರೊನಾ ವೈರಸ್ ಕಾಲರ್ ಟ್ಯೂನ್ ಗಳು ಹಲವರಿಗೆ ಕಿರಿಕಿರಿ ತಂದಿದೆ. ಕೊರೊನಾ ಕಾಲರ್ ಟ್ಯೂನ್ ಗಳ ಬಗ್ಗೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಇಂದು ಬೆಳಗ್ಗೆಯಷ್ಟೇ ವ್ಯಂಗ್ಯವಾಡಿದ್ದರು.
ಇದೀಗ, ಏನಾದರೂ ಮಾಡಿ ಕೊರೊನಾ ಕಾಲರ್ ಟ್ಯೂನ್ ನ ನಿಲ್ಲಿಸಿ ಎಂದು ವಿಧಾನ ಪರಿಷತ್ ಸದಸ್ಯ ಸರವಣ ಇಂದು ಮನವಿ ಮಾಡಿದರು.
ವಿಧಾನ ಪರಿಷತ್ ಕಲಾಪದಲ್ಲಿ ಪಾಲ್ಗೊಂಡ ಸರವಣ, ''ಯಾರಿಗಾದರೂ ಅರ್ಜೆಂಟ್ ಆಗಿ ಫೋನ್ ಮಾಡಬೇಕಾದರೆ, ಕೆಮ್ಮುತ್ತಿರುವ ರೆಕಾರ್ಡ್ ಮೆಸೇಜ್ ಬರುತ್ತೆ. ಎಮರ್ಜೆನ್ಸಿ ಕಾಲ್ ಮಾಡಬೇಕಾದರೂ ಸಾಧ್ಯ ಆಗುತ್ತಿಲ್ಲ. ಕೆಮ್ಮುವುದನ್ನು ಕೇಳಿಸಿಕೊಂಡು ಕಿರಿಕಿರಿ ಆಗುತ್ತಿದೆ. ಅದಕ್ಕೆ ಏನಾದರೂ ವ್ಯವಸ್ಥೆ ಮಾಡಿ'' ಎಂದು ಕೇಳಿಕೊಂಡರು.
'ಹ್ಯಾಶ್ ಕೀ ಒತ್ತಿದರೆ ಕಾಲರ್ ಟ್ಯೂನ್ ಡೀ-ಆಕ್ಟಿವೇಟ್ ಆಗುತ್ತದೆ' ಎಂದು ಕೆಲವರು ಸರವಣಗೆ ಹೇಳಿದರು. ಆದ್ರೆ, ಕೆಲವು ನೆಟ್ ವರ್ಕ್ ಗಳಲ್ಲಿ ಹ್ಯಾಶ್ ಕೀ ಒತ್ತಿದ್ದರೂ, ಕೊರೊನಾ ಕಾಲರ್ ಟ್ಯೂನ್ ಡೀ-ಆಕ್ಟಿವೇಟ್ ಆಗುತ್ತಿಲ್ಲ.