ಟಿಪ್ಪು ಪಾಠ ತೆಗೆಯುವ ಕುರಿತು ಶಿಕ್ಷಣ ಸಚಿವರ ಸ್ಪಷ್ಟನೆ!
ಬೆಂಗಳೂರು, ಜುಲೈ 29: ಕೊರೊನಾ ವೈರಸ್ ಜನರ ಜೀವದೊಂದಿಗೆ ಮಾತ್ರ ಅಲ್ಲ, ಜನರ ಜೀವನದೊಂದಿಗೂ ಆಟವಾಡುತ್ತಿದೆ. ಕೊರೊನಾ ವೈರಸ್ನಿಂದ ಜನರ ಜೀವನಕ್ರಮವೂ ಬದಲಾಗಿದೆ. ಶಿಕ್ಷಣದ ಕ್ರಮವೂ ಬದಲಾಗುತ್ತಿದೆ. ಜೂನ್ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಶಾಲೆಗಳು ಇನ್ನೂ ಆರಂಭವಾಗಿಲ್ಲ. ಸದ್ಯಕ್ಕೆ ಆರಂಭವಾಗುವ ಲಕ್ಷಣಗಳೂ ಕಂಡು ಬರುತ್ತಿಲ್ಲ.
ಈ ಹೊತ್ತಲ್ಲದ ಹೊತ್ತಿನಲ್ಲಿ ಶಾಲಾ ಮಕ್ಕಳ ಪಠ್ಯಕ್ರಮಕ್ಕೆ ಸಂಬಂಧಿಸಿದಂತೆ ವಿವಾದವೊಂದು ಸೃಷ್ಟಿಯಾಗಿದೆ. ಟಿಪ್ಪು ಜಯಂತಿಯನ್ನು ರದ್ದು ಮಾಡಿದಂತೆಯೆ ಒಂದರಿಂದ ಹತ್ತನೇ ತರಗತಿಯವರೆಗಿನ ಪಠ್ಯದಲ್ಲಿರುವ ಟಿಪ್ಪು ಸುಲ್ತಾನ್, ಜೀಸಸ್, ಪ್ರವಾದಿ ಮಹಮ್ಮದ್ ಸೇರಿದಂತೆ ಹಲವು ಪಾಠಗಳನ್ನು ಕೈಬಿಡಲು ತೀರ್ಮಾನ ಮಾಡಲಾಗಿದೆ. ರಾಜ್ಯ ಶಿಕ್ಷಣ ಈ ತೀರ್ಮಾನವನ್ನು ಮಾಡಿದೆ ಎಂಬ ಸುದ್ದಿ ವಿವಾದಕ್ಕೆ ಕಾರಣವಾಗಿತ್ತು. ಜೊತೆಗೆ ಅದಕ್ಕೆ ವಿರೋಧವೂ ವ್ಯಕ್ತವಾಗಿತ್ತು. ಕೊರೊನಾವೈರಸ್ ಆತಂಕದಿಂದ ಶಾಲಾ-ಕಾಲೇಜುಗಳು ಇನ್ನು ಆರಂಭವಾಗಿಲ್ಲ. ಕೋವಿಡ್ ಕಡಿಮೆಯಾದ ಬಳಿಕ ಶಾಲೆಗಳು ಆರಂಭವಾದರೂ ಪಠ್ಯ ಕಡಿತ ಮಾಡಬೇಕಾದ ಅನಿವಾರ್ಯತೆ ಶಿಕ್ಷಣ ಇಲಾಖೆಗಿದೆ.
ಬಿಜೆಪಿ ಸರ್ಕಾರ ಟಿಪ್ಪು ಇತಿಹಾಸ ತಿರುಚಲು ಬಿಡಲ್ಲ: ಡಿ.ಕೆ ಶಿವಕುಮಾರ್
ಪಠ್ಯ ಕಡಿತ
ಕೋವಿಡ್-19 ಹಿನ್ನೆಲೆಯಲ್ಲಿ ಶಾಲೆಗಳು ಆರಂಭವಾಗಿಲ್ಲ. ಇವತ್ತು ಅನ್ಲಾಕ್ 3.0 ಮಾರ್ಗಸೂಚಿ ಪ್ರಕಟ ಮಾಡಿರುವ ಕೇಂದ್ರ ಸರ್ಕಾರವು ಆಗಸ್ಟ್ 31ರವರೆಗೆ ಶಾಲಾ-ಕಾಲೇಜುಗಳನ್ನು ತೆರೆಯದಂತೆ ಸೂಚಿಸಿದೆ. ಹೀಗಾಗಿ ರಾಜ್ಯ ಶಿಕ್ಷಣ ಇಲಾಖೆ ಒಂದರಿಂದ ಹತ್ತನೇ ತರಗತಿವರೆಗೆ ಎಲ್ಲ ವಿಷಯಗಳಲ್ಲಿಯೂ ವೈಜ್ಞಾನಿಕವಾಗಿ ಪಠ್ಯ ಕಡಿತಕ್ಕೆ ಮುಂದಾಗಿದೆ. ಕಡಿಮೆ ಆದ್ಯತೆಯುಳ್ಳ ಪಠ್ಯಗಳನ್ನು ಪಠ್ಯಕ್ರಮದಿಂದ (syllabus)ದಿಂದ ಕೈಬಿಡಲು ತೀರ್ಮಾನ ಮಾಡಲಾಗಿದೆ.
ಇದೇ ಸಂದರ್ಭದಲ್ಲಿ ಟಿಪ್ಪು ಪಾಠವನ್ನು ಪಠ್ಯಕ್ರಮದಿಂದ ಕೈಬಿಡಲಾಗುತ್ತದೆ ಎಂಬುದೂ ಸೇರಿದಂತೆ, ವಿವಾದಕ್ಕೆ ಕಾರಣವಾಗಿರುವ ಪಠ್ಯಕ್ರಮ ಕಡಿತಕ್ಕೆ ಸಂಬಂಧಿಸಿದಂತೆ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರು ಸ್ಪಷ್ಟನೆಯನ್ನು ಕೊಟ್ಟಿದ್ದಾರೆ.
ಬೋಧನಾ ಅವಧಿ
ಇನ್ನು ಶೈಕ್ಷಣಿಕ ವರ್ಷದ ಅವಧಿ ನಿಗದಿಯಾಗದ ಹಿನ್ನೆಲೆಯಲ್ಲಿ ಪಠ್ಯದಲ್ಲಿರಬೇಕಾದ ಅಂಶಗಳನ್ನು ಅಂತಿಮಗೊಳಿಸಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಟಿಪ್ಪು ಅಥವಾ ಇನ್ಯಾವುದೇ ಪಾಠಗಳನ್ನು ಇನ್ನೂ ಕೈಬಿಟ್ಟಿಲ್ಲ. ಈ ಕುರಿತು ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವರದಿಗಳನ್ನು ಗಮನಿಸಿದ್ದೇನೆ ಎಂದಿದ್ದಾರೆ.
ಈ ಶೈಕ್ಷಣಿಕ ವರ್ಷ ಇನ್ನೂ ಪ್ರಾರಂಭವಾಗಿಲ್ಲ. ಹೀಗಾಗಿ ಬೋಧನೆಗೆ ಎಷ್ಟು ದಿನಗಳು ಸಿಗುತ್ತವೆ ಎಂಬುದು ಇನ್ನೂ ಅಸ್ಪಷ್ಟವಾಗಿದೆ. ಆದ್ದರಿಂದ ಸಿಲೆಬಸ್ ಅನ್ನು ಅಂತಿಮಗೊಳಿಸಿಲ್ಲ. ಮುಂದಿನ ದಿನಗಳಲ್ಲಿ ಲಭ್ಯ ಅವಧಿಯ ಆಧಾರದ ಮೇಲೆ ಮಾಡಲಾಗುವ ಪಠ್ಯ ಕಡಿತವು ವೈಜ್ಞಾನಿಕವಾಗಿರಲಿದ್ದು, ಯಾವುದೇ ಪಠ್ಯವನ್ನು ಅನಗತ್ಯವಾಗಿ ಕಡಿತ ಮಾಡುವುದಿಲ್ಲ. ಹಾಗಾಗಿ ಯಾವುದೇ ಗೊಂದಲಗಳಿಗೆ ಆಸ್ಪದವಿಲ್ಲ ಎಂದು ಸುರೇಶ್ ಕುಮಾರ್ ಹೇಳಿದ್ದಾರೆ.
ಪಠ್ಯಪುಸ್ತಕದಿಂದ ಟಿಪ್ಪು ಸುಲ್ತಾನ್ ತೆಗೆದುಹಾಕಲು ಮುಂದಾದ ಬಿಜೆಪಿ ಸರ್ಕಾರ
ಪಠ್ಯಕ್ರಮ ಅಂತಿಮ
ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಲಭ್ಯವಾಗುವ ಬೋಧನಾ ಅವಧಿ, ಸಮೂಹ ಮಾಧ್ಯಮಗಳು ಅಥವಾ ತಂತ್ರಜ್ಞಾನ ಆಧಾರಿತ ಬೋಧನೆಯಲ್ಲಿ ಅಳವಡಿಸಿಕೊಳ್ಳಬಹುದಾದ ಪಠ್ಯಗಳನ್ನು ಗುರುತಿಸಲಾಗುವುದು. ಆನ್ಲೈನ್ ಸೇರಿದಂತೆ ಇಲಾಖೆಯ ತಂತ್ರಜ್ಞಾನ ಆಧರಿತ ಕಲಿಕಾ ನೀತಿಗೆ ಅನುಗುಣವಾಗಿ ಬೋಧನಾ ಮಾದರಿ ಸಿದ್ಧಪಡಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಈ ಎಲ್ಲವೂ ಇನ್ನೂ ಅಂತಿಮವಾಗಿಲ್ಲ. ಅದಕ್ಕಿಂತ ಮೊದಲೇ ಅಚಾತುರ್ಯದಿಂದ ಇಲಾಖೆಯ ವೆಬ್ಸೈಟ್ನಲ್ಲಿ ಇನ್ನೂ ಅಂತಿಮ ಮಾಡದ ಪಠ್ಯಕ್ರಮ ಪ್ರಕಟಿಸಲಾಗಿದೆ. ಇದನ್ನು ಕೂಡಲೇ ಹಿಂದಕ್ಕೆ ಪಡೆಯಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.
ಸಮಾಜ ಕಟ್ಟುವ ಕೆಲಸ
ಇತಿಹಾಸಕ್ಕೆ ಸಂಬಂಧಿಸಿದಂತೆ ಯಾವುದೇ ವ್ಯಕ್ತಿಯ, ದಾಖಲೆಯ, ಸಂಗತಿಯ ಐತಿಹ್ಯವನ್ನು ಮುಚ್ಚಿಡುವ ಪ್ರಶ್ನೆಯೇ ಇಲ್ಲ. ನಮ್ಮ ಸರ್ಕಾರವು ಸಮಾಜವನ್ನು ಕಟ್ಟುವ ಕೆಲಸ ಮಾಡುತ್ತದೆಯೇ ವಿನಾ ಕೆಡವುವ ಕೆಲಸವನ್ನು ಮಾಡುವುದಿಲ್ಲ. ಇದು ಅನವಶ್ಯಕ ರಾಜಕೀಯ ಗೊಂದಲಗಳಿಗೆ ಅವಕಾಶ ಕಲ್ಪಿಸಬೇಕಿಲ್ಲ ಎಂದು ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.