ನಿತ್ಯಾನಂದ ಸ್ವಾಮಿ ಅಧ್ಯಾತ್ಮ ಪ್ರವಾಸದಲ್ಲಿದ್ದಾರೆ ಎಂದ ಪೊಲೀಸರು
Recommended Video
ಬೆಂಗಳೂರು, ಫೆಬ್ರವರಿ 3: ಅತ್ಯಾಚಾರ ಮತ್ತು ಅಪಹರಣ ಪ್ರಕರಣಗಳಲ್ಲಿ ಸಿಲುಕಿರುವ ಬಿಡದಿ ಧ್ಯಾನಪೀಠದ ಸ್ವಯಂಘೋಷಿತ ಸ್ವಾಮಿ ನಿತ್ಯಾನಂದ, ನಕಲಿ ಪಾಸ್ ಪೋರ್ಟ್ ಬಳಸಿ ಪರಾರಿಯಾಗಿ ಈಕ್ವೆಡಾರ್ನಲ್ಲಿ ದ್ವೀಪ ಖರೀದಿಸಿ ತಮ್ಮದೇ 'ಕೈಲಾಸ' ದೇಶ ಸ್ಥಾಪಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಪೊಲೀಸರ ಪ್ರಕಾರ ನಿತ್ಯಾನಂದ 'ಅಧ್ಯಾತ್ಮ ಪ್ರವಾಸ'ದಲ್ಲಿದ್ದಾರೆ.
ನಿತ್ಯಾನಂದಗೆ ನೀಡಲಾಗಿದ್ದ ಜಾಮೀನು ರದ್ದು ಮಾಡುವಂತೆ ಕೋರಿ ದೂರುದಾರ ಲೆನಿನ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ಹೈಕೋರ್ಟ್, ನಿತ್ಯಾನಂದ ಮತ್ತು ಸಿಐಡಿಗೆ ನೋಟಿಸ್ ಜಾರಿ ಮಾಡಿತ್ತು. ಸಿಐಡಿ ತನಿಖಾಧಿಕಾರಿ ಫೆ. 3ರ ಒಳಗೆ ಖುದ್ದಾಗಿ ನಿತ್ಯಾನಂದಗೆ ನೋಟಿಸ್ ಜಾರಿ ಮಾಡಬೇಕು. ಅದರ ಕುರಿತು ಫೆ. 3ರಂದು ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು ಎಂದು ಹೈಕೋರ್ಟ್ ಕಳೆದ ಶುಕ್ರವಾರ ಸೂಚನೆ ನೀಡಿತ್ತು.
ನಿತ್ಯಾನಂದ ಸ್ವಾಮಿಗೆ ಸಂಕಷ್ಟ; ಜಾಮೀನು ರದ್ದು ಮಾಡಲು ಅರ್ಜಿ
ಆದರೆ ನೋಟಿಸ್ ನೀಡಲು ಹೋದಾಗ ನಿತ್ಯಾನಂದ ಲಭ್ಯವಾಗಿಲ್ಲ. ನಿತ್ಯಾನಂದ ಆಧ್ಯಾತ್ಮಿಕ ಪ್ರವಾಸದಲ್ಲಿದ್ದಾರೆ. ಹೀಗಾಗಿ ಅದನ್ನು ಅವರ ಮಹಿಳಾ ಸಹವರ್ತಿಯೊಬ್ಬರಿಗೆ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹಾಗೆಯೇ ನಿತ್ಯಾನಂದ ಅವರನ್ನು ತಕ್ಷಣವೇ ಖುದ್ದು ಹಾಜರುಪಡಿಸುವ ಅವಶ್ಯಕತೆ ಇಲ್ಲ ಎಂದು ರಾಜ್ಯ ಸರ್ಕಾರ ಹೇಳಿದೆ.
ನಿತ್ಯಾನಂದ ಆಧ್ಯಾತ್ಮಿಕ ಪ್ರವಾಸದಲ್ಲಿದ್ದಾರೆ
ಕೋರ್ಟ್ ನೀಡಿದ ನೋಟಿಸ್ ಅನ್ನು ಅವರಿಗೆ ನೀಡಲು ಸಾಧ್ಯವಾಗಿಲ್ಲ. ಆದರೆ ಅದನ್ನು ಅವರ ಸಹವರ್ತಿ ಕುಮಾರಿ ಅರ್ಚನಾನಂದ ಅವರಿಗೆ ನೀಡಲಾಗಿದೆ. ನಿತ್ಯಾನಂದ ಬಿಡದಿ ಆಶ್ರಮದಲ್ಲಿ ಲಭ್ಯವಿಲ್ಲ. ಅವರು ಅಧ್ಯಾತ್ಮ ಪ್ರವಾಸದಲ್ಲಿದ್ದಾರೆ ಎಂದು ಪ್ರಕರಣದ ತನಿಖೆ ನಡೆಸಿರುವ ಉಪ ಪೊಲೀಸ್ ವರಿಷ್ಠಾಧಿಕಾರಿ ಬಾಲರಾಜ್ ಬಿ. ಹೈಕೋರ್ಟ್ಗೆ ವರದಿಯಲ್ಲಿ ತಿಳಿಸಿದ್ದಾರೆ.
ಬಲವಂತವಾಗಿ ನೋಟಿಸ್
ನಿತ್ಯಾನಂದ ಪ್ರಸ್ತುತ ಎಲ್ಲಿದ್ದಾರೆ ಎನ್ನುವುದು ತಮಗೆ ತಿಳಿದಿಲ್ಲ. ಹೀಗಾಗಿ ನಿತ್ಯಾನಂದ ಅವರಿಗೆ ನೋಟಿಸ್ ತಲುಪಿಸಲು ಸಾಧ್ಯವಿಲ್ಲ ಎಂದು ಮಾಹಿತಿ ನೀಡಿದ ಬಳಿಕವೂ, ನೋಟಿಸ್ಅನ್ನು ಸ್ವೀಕರಿಸುವಂತೆ ಬಲವಂತ ಮಾಡಿದ್ದಾರೆ ಎಂದು ಕುಮಾರಿ ಅರ್ಚನಾನಂದ ಹೈಕೋರ್ಟ್ಗೆ ಸಲ್ಲಿಸಿರುವ ಅಫಿಡವಿಟ್ನಲ್ಲಿ ದೂರಿದ್ದಾರೆ.
ನಿತ್ಯಾನಂದ ಸ್ವಾಮೀಜಿ ವಿರುದ್ಧದ ವಿಚಾರಣೆಗೆ ಹೈಕೋರ್ಟ್ ತಡೆ
ಆಟವಾಡುತ್ತಿದ್ದೀರಿ- ನ್ಯಾಯಮೂರ್ತಿ ಕಿಡಿ
ಈ ವೇಳೆ ನ್ಯಾ. ಜಾನ್ ಮೈಕಲ್ ಕುನ್ಹಾ ಪೊಲೀಸರ ವಿರುದ್ಧ ಅಸಮಾಧಾನ ಹೊರಹಾಕಿದರು. 'ನ್ಯಾಯಾಲಯದ ಸಮನ್ಸ್ಅನ್ನು ನೀವು ತಲುಪಿಸುತ್ತಿರುವುದು ಇದು ಮೊದಲನೇ ಸಲವೇ? ಇದು ಸೇವೆ ಮೇಲೆ ಪರಿಣಾಮ ಬೀರುತ್ತದೆ ಮತ್ತು ನ್ಯಾಯಾಲಯದ ನಿರ್ದೇಶನಕ್ಕೆ ಅನುಸಾರವಾಗಿದೆ ಎಂದು ನೀವು ಹೇಗೆ ಹೇಳುತ್ತೀರಿ? ಆಕೆ ನ್ಯಾಯಾಲಯಕ್ಕೆ ಬರುವಂತೆ ನೀವು ಒತ್ತಡ ಹೇರಿದ್ದೀರಿ. ನೀವಿಲ್ಲಿ ಆಟವಾಡುತ್ತಿದ್ದೀರಿ' ಎಂದು ಕಿಡಿಕಾರಿದರು.
ನ್ಯಾಯಮೂರ್ತಿಗಳು ಕೋಪಗೊಂಡ ಕೂಡಲೇ ತನಿಖಾಧಿಕಾರಿ ಕ್ಷಮೆ ಕೋರಿದರು. ಆದರೆ ಅವರ ವರ್ತನೆಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಯಾವುದೇ ನಿರ್ದಿಷ್ಟ ಆದೇಶ ನೀಡಲಿಲ್ಲ.
ವಿಚಾರಣೆಗೆ ಹಾಜರಾಗದ ನಿತ್ಯಾನಂದ
ನಿತ್ಯಾನಂದ ಸ್ವಾಮಿಗೆ 2010ರಲ್ಲಿ ನೀಡಿರುವ ಜಾಮೀನು ರದ್ದುಗೊಳಿಸಲು ದೂರುದಾರ ಲೆನಿನ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಜಾನ್ ಮೈಕಲ್ ಕುನ್ಹಾ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸುತ್ತಿದೆ. ನಿತ್ಯಾನಂದ ಸುಮಾರು ಒಂದೂವರೆ ವರ್ಷದಿಂದ ವಿಚಾರಣಾ ನ್ಯಾಯಾಲಯಕ್ಕೆ ಹಾಜರಾಗದ ಬಗ್ಗೆ ವಿವರಣೆ ನೀಡುವಂತೆ ಹೈಕೋರ್ಟ್, ರಾಮನಗರದ ಮೂರನೇ ಹೆಚ್ಚುವರಿ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಧೀಶರಿಗೆ ಶುಕ್ರವಾರ ಸೂಚನೆ ನೀಡಿತ್ತು.
ನಿತ್ಯಾನಂದ ಸ್ವಾಮಿ ಪ್ರಕರಣ: ಯುವತಿಯಿಂದ ಸ್ಫೋಟಕ ವಿಡಿಯೋ ಬಹಿರಂಗ
ನಿತ್ಯಾನಂದ ಹಾಜರಿ ಅಗತ್ಯವಿಲ್ಲ
ಹೈಕೋರ್ಟ್ ನೀಡಿದ್ದ ಜಾಮೀನನ್ನು ರದ್ದುಗೊಳಿಸುವಂತೆ ಲೆನಿನ್ ಕರುಪ್ಪನ್ ಸಲ್ಲಿಸಿರುವ ಅರ್ಜಿಗೆ ಆಕ್ಷೇಪ ವ್ಯಕ್ತಪಡಿಸಿರುವ ರಾಜ್ಯ ಸರ್ಕಾರ, 'ಪ್ರಕರಣದ ಮೊದಲ ಆರೋಪಿ (ನಿತ್ಯಾನಂದ ಸ್ವಾಮಿ) ವಿಚಾರಣಾ ನ್ಯಾಯಾಲಯಕ್ಕೆ ತಕ್ಷಣವೇ ಹಾಜರಾಗುವ ಅಗತ್ಯವಿಲ್ಲ. ಏಕೆಂದರೆ ದೂರುದಾರನ ಅಸಹಕಾರದಿಂದ ಆತನ ವಿಚಾರಣೆ ಪ್ರಕ್ರಿಯೆ ನಡೆಯುತ್ತಿಲ್ಲ' ಎಂದು ತಿಳಿಸಿದೆ.
ಜಾಮೀನು ರದ್ದುಗೊಳಿಸಲು ಅಡ್ಡಿ
'ಆರೋಪಿ ನ್ಯಾಯಾಲಯಕ್ಕೆ ವಂಚಿಸುತ್ತಿದ್ದಾರೆ. ಆರೋಪಿಯು ವಿಚಾರಣೆ ಎದುರಿಸಲು ಲಭ್ಯವಿಲ್ಲ ಎಂದಾದಾಗ ಪ್ರಾಸಿಕ್ಯೂಷನ್ ಮೌನವಾಗಿ ಇರುತ್ತದೆಯೇ? ನ್ಯಾಯಾಲಯದ ನೋಟಿಸ್ ತಲುಪಿಸಲು ವಿಫಲವಾಗಿರುವುದು ಜಾಮೀನು ರದ್ದುಗೊಳಿಸಲು ಅಡ್ಡಿಯಾಗಿದೆ' ಎಂದು ಲೆನಿನ್ ಪರ ವಕೀಲರು ಆರೋಪಿಸಿದರು.
ಜಾಮೀನು ರದ್ದುಗೊಳಿಸಲು ಕೇಳಬಾರದು
'ಆರೋಪಿಯು ಜಾಮೀನಿನ ಯಾವುದೇ ಷರತ್ತನ್ನು ಉಲ್ಲಂಘಿಸಿಲ್ಲ. ವಿಚಾರಣಾ ನ್ಯಾಯಾಲಯ ನೀಡಿದ ಆದೇಶದಿಂದ ದೂರುದಾರರು ಅನ್ಯಾಯಕ್ಕೆ ಒಳಗಾಗಿದ್ದರೆ ಅವರು ಅದನ್ನು ಪ್ರಶ್ನಿಸಬೇಕೇ ವಿನಾ, ಜಾಮೀನು ರದ್ದುಗೊಳಿಸುವಂತೆ ಕೇಳುವಂತಿಲ್ಲ ಎಂದು ಸರ್ಕಾರದ ಪರ ವಕೀಲರು ಹೇಳಿದರು. ಬಳಿಕ ನ್ಯಾಯಾಲಯ ಜಾಮೀನು ರದ್ದುಗೊಳಿಸುವಂತೆ ಕೋರಿರುವ ಅರ್ಜಿಯ ಆದೇಶವನ್ನು ಕಾಯ್ದಿರಿಸಿತು.